ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ನಾನಾಗ ಸಣ್ಣ ಹುಡುಗ, ಪ್ರಾಯ ಹನ್ನೊಂದೋ ಹನ್ನೆರಡೋ; ನಮ್ಮ ಸೋದರತ್ತೆಯ ಮನೆಗೆ ಹೋಗಿದ್ದೆ. ಅವರ ಗಂಡ-ನನ್ನ ಮಾವ-ತಕ್ಕ ಮಟ್ಟಿನ ಹಣಗಾರ. ಹಣಗಾರಿಕೆಗಿಂತಲೂ ಕಾರಭಾರ ಹೆಚ್ಚು. ಊರ ಗದ್ದೆ ತೋಟಗಳಲ್ಲದೆ ಒಂದು ಕಾಫಿತೋಟ, ಇನ್ನೊಂದು ಏಲಕ್ಕಿ ಮಲೆ. ಅವರ ವಾಸ ಊರಲ್ಲಿ ಆರುತಿಂಗಳು, ಗಟ್ಟದಲ್ಲಿ ಆರು ತಿಂಗಳು- ವಿಕ್ರಮಾದಿತ್ಯನ ಹಾಗೆ. ಅವರಿಗೆ ನನ್ನ ಮೇಲೆ ತುಂಬಾ ಪ್ರೀತಿ; ನನಗೆ ಅವರಲ್ಲಿ ಬಹಳ ಸಲುಗೆ. ಸಲುಗೆ ಎಷ್ಟೆಂದರೆ ಒಮ್ಮೊಮ್ಮೆ ಅವರು ಕುಳಿತಿದ್ದರೆ ಬಳಿಗೆ ಹೋಗಿ ಒಂದು ಕೈಯನ್ನು ಅವರ ತೊಡೆಗೊತ್ತಿ, ಇನ್ನೊಂದು ಕೈಯಲ್ಲಿ ಅವರ ಕೊಂಬುಮೀಸೆಯನ್ನು ಹುರಿಮಾಡಿ ಸುರುಳುತ್ತಿದ್ದೆ. ಆ ಬಾರಿ ನಾನು ಅವರ ಮನೆಗೆ ಹೋಗಿ ಒಂದೆರಡು ದಿನಗಳಲ್ಲಿಯೇ ಅತ್ತೆ ಮಾವಂದಿರಿಬ್ಬರೂ ಗಟ್ಟಕ್ಕೆ ಹೊರಡಬೇಕಾಗಿತ್ತು. ಬಂದ ಮೂರು ದಿನಗಳಲ್ಲಿಯೇ ಹಿಂತಿರುಗಿ ಹೋಗಬೇಕಾಯಿತಲ್ಲ ಎಂದು ನನಗೆ ಭಾರಿ ಶೂನ್ಯ; ಅವರಿಗೂ ಬೇಸರ. ಆಗ ಮಾವ, “ಕೃಷ್ಣಾ, ನೀನು ಗಟ್ಟಕ್ಕೆ ಬರುತ್ತೀಯೋ” ಎಂದು ಕೇಳಿದರು. ಪಕ್ಕನೆ ನನ್ನ ಮನಸ್ಸಿನಲ್ಲಿ ಕಣ್ಣು ತೆರೆದಂತಾಯಿತು; ‘ಹುಂ’ ಎಂದೆ. ”ಅವನ ತಾಯಿ, ಅಜ್ಜ, ಎಲ್ಲ ಏನು ಹೇಳುತ್ತಾರೋ?” ಎಂದರು ಅತ್ತೆ. (ಬಾಲ್ಯದಲ್ಲಿಯೇ ನಾನು ತಂದೆಯನ್ನು ಕಳೆದುಕೊಂಡು ನಮ್ಮಜ್ಜನ ಮನೆಯಲ್ಲಿದ್ದೆ.) “ಛೇ! ನಾವು ಕರೆದುಕೊಂಡು ಹೋದರೆ ಏನೂ ಹೇಳಲಿಕ್ಕಿಲ್ಲ. ಬರಲಿ, ಪಾಪ! ನಾನು ಅವರ ಮನೆಗೆ ಹೇಳಿಕಳುಹಿಸುತ್ತೇನೆ” ಎಂದು ಮಾವ ಹೇಳಿದೊಡನೆ, ಅತ್ತೆಯ ಮಾತಿನಿಂದ ಒಸರತೊಡಗಿದ್ದ ಕಣ್ಣೀರು ಸುಖಜಲವಾಗಿ ಕಣ್ಣು ತುಂಬಿತು. ನಕ್ಕು ನಾಚಿಕೊಂಡು ಮುಖ ತಿರುಗಿಸಿ ಕುಣಿಯುತ್ತಾ ಹಾರುತ್ತಾ ತೋಟಕ್ಕೆ ಓಡಿಹೋದೆ.
ಅದೇ ದಿನ ರಾತ್ರಿ ಪ್ರಯಾಣ, ಬಿಳಿಯ ಜೋಡೆತ್ತಿನ ದೊಡ್ಡ ಗಾಡಿಯಲ್ಲಿ. ಮರುದಿನ ಹಗಲು ಉಪ್ಪಿನಂಗಡಿಯಲ್ಲಿ ಮಜಲು; ಬೈಗಿನಲ್ಲಿ ಪುನಃ ಪ್ರಯಾಣಾರಂಭ. ಮೂರನೆಯ ದಿನ ಶಿರಾಡಿಯಲ್ಲಿ ಕಳೆಯಿತು. ನಾಲ್ಕನೆಯ ದಿನ ಸಕಲೇಶಪುರದ ಬಳಿಯ ಕಾಫಿತೋಟಕ್ಕೆ ಗಾಡಿ ಮುಟ್ಟಿತು. ಹೋಗಿ ಎರಡು ದಿನ ನಾನು ಮಾವನ ಬಂಗಲೆ ಬಿಟ್ಟು ಹೊರಗೆ ಕಾಲೇ ಇಡಲಿಲ್ಲ; ನಿದ್ದೆ ಮಾಡುವುದೇ ಕೆಲಸ. ಅನಂತರ ಮೆಲ್ಲಗೆ ಕಾಫಿತೋಟದ ಅಂದಚೆಂದಗಳನ್ನು ನೋಡುತ್ತ ಸುತ್ತಮುತ್ತಲಿನ ಪ್ರಕೃತಿಯ ಪರಿಚಯ ಮಾಡಿಕೊಳ್ಳತೊಡಗಿದೆ. ಗಟ್ಟಕ್ಕೆ ಬಂದುದು ನನಗೆ ಅತ್ಯಂತ ಸಂತೋಷಕರವಾಯಿತೆಂದು ಬೇರೆ ಹೇಳುವುದು ಬೇಡ. ಆ ಹೂಬಿಸಿಲಿನ- ಅಲ್ಲ, ಹೂನೆಳಲಿನ- ಕಾಫಿತೋಟ! ತೊಳೆದು ‘ಮಾಲೀಸು’ ಮಾಡಿದ ಹಸುರು ಬಣ್ಣದ ಕುರಿಮಂದೆಯಂತಿದ್ದ ಮುದ್ದು ಮುದ್ದು ಕಾಫಿ ಗಿಡಗಳು. ಒಂದೆಡೆ ಕಿತ್ತಳೆಯ ರಾಜ್ಯ; ಮತ್ತೊಂದೆಡೆ ಪೇರಳೆಯ ಸಾಮ್ರಾಜ್ಯ! ವಿಚಿತ್ರವಾದ ಕಾಡಹೂಗಳ, ಕಾಫಿಹೂಗಳ ಕಂಪು. ಕನಸಿನಲ್ಲಿಯೂ ಕಾಣದ ತರತರದ ಹಕ್ಕಿಗಳ ವಿವಿಧ ಮಧುರ ಧ್ವನಿ. ಅಲ್ಲಲ್ಲಿ ಗಂಭೀರವಾದ ಪ್ರತಿಧ್ವನಿ, ಮಹಾರಾಜನ ತಲೆಯ ಮುತ್ತಿನ ತುರಾಯಿಯಂತೆ, ಸಜೀವವಾದ ಬೆಳ್ಳಿಯ ಕೊಳವಿಯಂತೆ, ಹಾರುವ ಇಳಿಯುವ ಮಲೆನೀರ ನಿರ್ಝರ! ಅದರ ನಾದದ ಜತೆಗೆ ಜೀರುದುಂಬಿಯ ‘ಝೇಂಕಾರ’. ಈ ನವೀನ-ಪುರಾತನ ಪ್ರಪಂಚದಲ್ಲಿ ಸದಾ ಹಾರುವ ಬಣ್ಣದ ಚಿಟ್ಟೆಗಳೊಳಗೆ ನಾನೂ ಒಂದು ಆಗಿದ್ದೆ.
ಈ ಸುಂದರ ಸನ್ನಿವೇಶದ ಸುಖಕ್ಕೆ ಸೋದರತ್ತೆಯ ಉಪಚಾರದ ಬೆಂಬಲ. ಗಟ್ಟಿ ಜೇನು, ತುಪ್ಪದ ರೊಟ್ಟಿ, ಹಾಲಿನ ಕಾಫಿ, ಕೋಸಿನ ಪಲ್ಯ, ಬಟಾಟೆ ಹುಳಿ, ಏಲಕ್ಕಿ ಹಾಕಿದ ಲಿಂಬೆಹಣ್ಣಿನ ಗಮಗಮಿಸುವ ಉಪ್ಪಿನಕಾಯಿ, ಕೇಸರಿಭಾತು, ಕಿತ್ತಳೆ ಹಣ್ಣು-ಇನ್ನೇನು ಬೇಕು? ಏನು ಬೇಕಾದರೂ ದೊರಕುತ್ತಿತ್ತು. ಆದರೆ ಇದಕ್ಕಿಂತಲೂ ಪ್ರಿಯವಾಗಿತ್ತು ಮಾವನ ಜತೆಯ ಕಾಫಿತೋಟದ ತಿರುಗಾಟ; ಪ್ರತಿದಿನವೂ ತಿರುಗಾಡುತ್ತಿದ್ದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿಗಳು ಕುರಿಗಳೆಡೆಯ ಕುರುಬರಂತೆ ಕಾಣುತ್ತಿದ್ದರು. ನನ್ನ ಮಾವ ದಯಾಳು; ಅವರೊಡನೆ ಪ್ರೀತಿಯಲ್ಲಿ ಮಾತಾಡುತ್ತಿದ್ದರು. ಅವರ ಸುಖದುಃಖಗಳನ್ನು ಆಗಾಗ ಕೇಳುತ್ತಿದ್ದರು. ಅವರೊಳಗೆ ನನಗೆ ಹಲವರ ಪರಿಚಯವಾಯಿತು. ಕೆಲವರು ಗೆಳೆಯರೂ ಆದರು. ಒಬ್ಬ ಅರೆಮುದುಕನಂತೂ ನನಗೆ ಅತ್ಯಂತ ಪ್ರಿಯನಾದ. ಅವನ ಹೆಸರು ಲಿಂಗಯ್ಯ. ಅವನು ನಮ್ಮ ಊರಿನ ಮನೆಯ ಸುದ್ದಿಯೆಲ್ಲ ಕೇಳುತ್ತಿದ್ದ; ತನ್ನ ಕಥೆ ಹೇಳುತ್ತಿದ್ದ. ಲಿಂಗಯ್ಯ ಬೇಲೂರಿನ ಬಳಿಯ ಒಂದು ಹಳ್ಳಿಯವನಂತೆ. ಅವನಿಗೆ ಮನೆಯಲ್ಲಿ ಯಾರೂ ಇಲ್ಲವಂತೆ. ಅವನ ಹೆಂಡತಿ ಅವನನ್ನು ಬಿಟ್ಟು ಓಡಿಹೋಗಿದ್ದಳಂತೆ. ಅವನು ಎಷ್ಟೋ ತೋಟಗಳಲ್ಲಿ ಕೆಲಸ ಮಾಡಿದ್ದನಂತೆ. ಆದರೆ ನನ್ನ ಮಾವನಂತಹ ‘ದೊರೆ’ ಬೇರೆ ಯಾರೂ ತನಗೆ ದೊರಕಲಿಲ್ಲವೆಂದು ಹೇಳುತ್ತಿದ್ದ. ಅವನು ತೋಟದಲ್ಲಿ ಕೆಲಸ ಮಾಡುವಾಗ ವಿನೋದದ ಮಾತುಗಳನ್ನು ಆಡುತ್ತಿದ್ದ. ಇದರಿಂದ ಅವನ ಬಳಿಯಲ್ಲಿ ಮಾವನೊಂದಿಗೆ ನಿಂತುಕೊಂಡು, ತೋಟವನ್ನೂ ಕೆಲಸವನ್ನೂ ನೋಡುತ್ತಾ ಇರುವುದೆಂದರೆ ನನಗೊಂದು ಹಬ್ಬವೇ ಆಗಿತ್ತು. ಸಂಜೆ ತನ್ನ ‘ಹಟ್ಟಿ’ಗೆ ಬಂದು ಊಟ ತೀರಿಸಿ, ಕಂಬಳಿ ಹಾಸಿ ಗೋಡೆಗೆ ಒರಗಿಕೊಂಡು ಹೊಗೆ ಸೇದುತ್ತಾ ಹಾಡುತ್ತಿದ್ದ. ಅವನ ದನಿ ಬಹಳ ಇನಿದಾಗಿತ್ತು. ಅವನ ಹಾಡೆಂದರೆ ನಮ್ಮೂರ ‘ಪಾರ್ದನೆ’ಯ ಹಾಗೆ. ಅದರಲ್ಲೆಷ್ಟೋ ಹಳೆಯ ಕತೆಗಳು-ದುಃಖಗಳು, ಸಂತೋಷಗಳು, ಪೌರುಷಗಳು, ಪ್ರೀತಿಗಳು-ಎಲ್ಲ ತುಂಬಿದ್ದವು. ನಾನು ಅವನ ಬಳಿ ಹೋಗಿ ಕುಳಿತುಕೊಂಡು ಅದನ್ನು ಕೇಳುತ್ತಿದ್ದೆ. ಗಾಳಿ ಚಳಿ ಏರಿದಾಗ, ನನಗೆ ನಿದ್ದೆ ಬರಬಹುದೆಂಬಾಗ, ಅವನು ಹಾಡು ನಿಲ್ಲಿಸಿ, ”ಚಿಕ್ಕಯ್ಯಾ, ಇನ್ನು ನಾಳೆ ಹೇಳುವ,” ಎಂದು ಹೇಳಿ ನನ್ನನ್ನು ಬಂಗಲೆಗೆ ಹೋಗಲು ಹೇಳುತ್ತಿದ್ದ.
ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’
ಹೀಗೆ ಸುಮಾರು ಒಂದು ತಿಂಗಳು ಕಳೆಯಿತು. ಒಂದು ದಿನ ನನ್ನ ಮಾವನಿಗೆ ಏಲಕ್ಕಿಮಲೆಗೆ ಹೋಗಬೇಕಾಗಿ ಬಂತು. ಅವರ ಕಾಫಿತೋಟದಿಂದ ಅಲ್ಲಿಗೆ ಹದಿನಾರು ಮೈಲು ದೂರವಿತ್ತು. ರಸ್ತೆಯೇನೂ ಇಲ್ಲ; ಕಾಲುದಾರಿ. ಆದುದರಿಂದ, ನಾನು ಅವರೊಂದಿಗೆ ಹೊರಡುವ ಮನಸ್ಸು ಮಾಡಿದರೂ ಅವರಾಗಿ ಬೇಡವೆಂದರು. ಮೂರು ದಿನಗಳಲ್ಲಿ ಹಿಂತಿರುಗಿ ಬರುತ್ತೇನೆಂದರು. ಅವರ ಜೊತೆಗೆ ಲಿಂಗಯ್ಯನೂ ಅಲ್ಲಿಗೆ ಹೊರಟ. ನನಗೆ ಬಹಳ ಬಿನ್ನಗೆ, ಅವರು ಹೊರಟುಹೋದ ದಿನವಿಡೀ ಬಂಗಲೆಯಲ್ಲಿ ಸುಮ್ಮನೆ ಕುಳಿತು ನೋಡುತ್ತಾ ಇದ್ದೆ. ಸಂಜೆ ಜೋರು ಚಳಿಯಾಯಿತು. ಅತ್ತೆಯೊಡನೆ ಹೇಳಿದೆ. ಮೆಯ್ ಮುಟ್ಟಿ ನೋಡಿ, “ಮೆಯ್ ಕಾಯುತ್ತಿದೆ!” ಎಂದರು. ಎರಡು ದಿನ ಬೋಧವಿಲ್ಲದ ಜ್ವರ ಬಂತು. ಅತ್ತೆ ನಿದ್ದೆ ಬಿಟ್ಟು ಚೆನ್ನಾಗಿ ಆರೈಕೆ ಮಾಡಿದರು; ಮದ್ದು ಕುಡಿಸಿದರು. ಮೂರನೆಯ ದಿನ ಬೆವರುಬಿಟ್ಟಿತು. ನಾಲ್ಕನೆಯ ದಿನ ಮೆಲ್ಲಗೆ ಎದ್ದು ಬಂಗಲೆಯೊಳಗೆ ಅತ್ತಿತ್ತ ತಿರುಗಾಡುವಂತಾಯಿತು. ಸಂಜೆಯಾಗುವಾಗ ಮಾವನೂ ಬಂದರು. ಜ್ವರ ಬಂದ ಆಯಾಸವೆಲ್ಲ ಥಟ್ಟನೆ ಮಾಯವಾಯಿತು. ಅಷ್ಟರಲ್ಲಿ ಲಿಂಗಯ್ಯ ಬಂದು, ”ಚಿಕ್ಕಯ್ಯಾ! ನನ್ನದೊಂದು ನೆನಪಿಗೆ ಈ ಬೆತ್ತ. ಇದಕ್ಕೆ ಬೆಳ್ಳಿ ಕಟ್ಟಿಸಿಕೊಳ್ಳಿ” ಎಂದು ಒಂದು ಬಣ್ಣಬಣ್ಣದ ಸೆಳೆಬೆತ್ತವನ್ನು ನನ್ನ ಕೈಯಲ್ಲಿ ಕೊಟ್ಟ. ನನಗಾದ ಸಂತೋಷ ಅಷ್ಟಿಷ್ಟಲ್ಲ. ಅದನ್ನು ಹಿಡಿದುಕೊಂಡು ಮನೆ ತುಂಬ ಠೀವಿಯಿಂದ ನಡೆದಾಡಿದೆ. ಅದರ ಪ್ರತಿಯೊಂದು ಮಚ್ಚೆ, ಪ್ರತಿಯೊಂದು ಗಂಟು, ಗಿಣ್ಣು-ಎಲ್ಲವನ್ನೂ ನೋಡಿ ನೋಡಿ ತುಲನೆ ಮಾಡಿ ಮೆಚ್ಚಿ, ಅತ್ತೆಗೆ ತೋರಿಸಿ, ಮಾವನಿಗೆ ಹೇಳಿ, ಬಾರಿಬಾರಿಗೆ ಲಿಂಗಯ್ಯನ ಹೆಸರೆತ್ತಿ, ಅವನ ಬಳಿಗೆ ಹೋಗಿ, ಅದು ಎಲ್ಲಿ ಸಿಕ್ಕಿತು, ಹೇಗೆ ಸಿಕ್ಕಿತು, ಯಾರು ಕಡಿದುದು ಮೊದಲಾದ ಎಲ್ಲಾ ಕಥೆಯನ್ನು ಕೇಳಿ ಕೇಳಿ ತಿಳಿದುಕೊಂಡೆ. ಅದು ನನ್ನ ಮಾವನ ಏಲಕ್ಕಿ ಮನೆಯಲ್ಲಿಯೇ ಬೆಳೆದ ನಾಗರ ಬೆತ್ತವೆಂದು ಕೇಳಿ ಮತ್ತಷ್ಟು ಪ್ರೀತಿಗೊಂಡೆ.
ಮತ್ತೆ ನಾಲ್ಕಾರು ದಿನಗಳಲ್ಲಿ ಮಾವನ ಬಂಗಲೆಗೆ ಏಲಕ್ಕಿಯ ಚೀಲಗಳು ಹೊರೆಹೊರೆಯಾಗಿ ಬರತೊಡಗಿದವು. ಆ ಚೀಲಗಳೆಲ್ಲ ನನ್ನ ಮಾವನ ‘ಬಿಳಿಗಾಡಿ’ಯನ್ನೇರಿದುವು. ಅವುಗಳ ಮಾರಾಟಕ್ಕಾಗಿ ಮಾವನೂ ಊರಿಗೆ ಬಂದು ಮಂಗಳೂರಿಗೆ ಹೋಗಬೇಕಾಗಿತ್ತು. ನಾನೂ ಊರಿಗೆ ಹೊರಡುವುದೆಂದಾಯಿತು.
ಹೊರಡುವಾಗ ನನ್ನತ್ತೆ ಮೂರು ಏಲಕ್ಕಿ ಮಾಲೆಗಳನ್ನು ತಂದು, ಒಂದನ್ನು ನನ್ನ ಕೊರಳಿಗೆ ಹಾಕಿ, ಉಳಿದುದನ್ನು ನನ್ನ ಕೈಯಲ್ಲಿ ಕೊಟ್ಟು “ಮನೆಗೆ ಹೋಗಿ ನಿನ್ನಕ್ಕನಿಗೊಂದು ಕೊಡು; ಅಜ್ಜನಿಗೊಂದು ಕೊಡು” ಎಂದು ಹೇಳಿ ಮತ್ತೆ, “ಮಾವ ಮಂಗಳೂರಿಂದ ಬರುವವರೆಗೆ ನಿನಗೆ ಇಲ್ಲೇ ಇದ್ದುಬಿಡಬಹುದಿತ್ತು” ಎಂದು ಹೇಳುವಾಗ ಅವರ ಕಣ್ಣಲ್ಲಿ ನೀರಿನ ಒಂದು ‘ಪದರು’ ಹೊಳೆಯಿತು. ನನ್ನನ್ನು ಜತೆಯಲ್ಲಿರಿಸಿಕೊಂಡು ಅಷ್ಟು ದಿನ ಇದ್ದು ಈಗ ನಾನೂ ಮಾವನೂ ಇಬ್ಬರೂ ಅಗಲುವಾಗ, ಮಕ್ಕಳಿಲ್ಲದ ನನ್ನ ಅತ್ತೆಗೆ ಬಹಳ ಖೇದವಾಗಿದ್ದಿರಬೇಕು. ಆದರೂ ಇನ್ನೂ ಇಲ್ಲೇ ಇರಿಸಿಕೊಂಡರೆ ನನ್ನ ಅಜ್ಜ, ತಾಯಿ, ಬೇಸರಿಸಬಹುದೆಂದು ಗೊತ್ತಿದ್ದ ಅವರು ಒತ್ತಾಯಿಸಲಿಲ್ಲ. ಮಾವ ಹೊರಡುವುದರಿಂದ ನನಗೂ ಹೊರಡುವ ಮನಸ್ಸೇ ಇತ್ತು. ಆದರೆ ಆ ಕಾಫಿತೋಟದ ಅಂದ, ಲಿಂಗಯ್ಯನ ಗೆಳೆತನ, ಅತ್ತೆಯ ಉಪಚಾರ, ಇವೆಲ್ಲವನ್ನೂ ಬಿಟ್ಟು ಹೊರಡುವಾಗ ಮನಸ್ಸಿನ ಅರ್ಧಾಂಶ ಅವಿತಿತು. ಅತ್ತೆಯ ಕೈಗಳಿಂದ ತಪ್ಪಿಸಿಕೊಂಡು ಹೇಗೂ ಗಾಡಿಯೇರಿದೆ. ಲಿಂಗಯ್ಯ ಗಾಡಿ ಹೊರಡುವಲ್ಲಿ ನಿಂತಿದ್ದ. “ಬೆತ್ತ ಉಂಟಲ್ಲಾ ಚಿಕ್ಕಯ್ಯಾ?” ಎಂದ. ಅದನ್ನು ಬಿಡುವುದುಂಟೆ? ಅದು ನನ್ನ ಬಳಿಯಲ್ಲಿಯೇ ಇತ್ತು, “ಇಗೋ! ಇಲ್ಲಿದೆ”, ಎಂದು ತೆಗೆದು ತೋರಿಸಿದೆ. ಅವನಿಗೆ ನನ್ನ ಕೃತಜ್ಞತೆಯನ್ನು ಹೇಗೆ ತಿಳಿಸುವುದೆಂದು ತಿಳಿಯದಾದೆ. ಸುಮ್ಮನೆ ಅವನ ಮುಖ ನೋಡುತ್ತ ಕುಳಿತೆ. ನನ್ನ ಕಣ್ಣಲ್ಲಿ ನೀರಿಳಿಯಿತು. ಅವನು ಬಳಿಗೆ ಬಂದು ನನ್ನ ಕಣ್ಣೊರೆಸಿ, “ಹೋಗಿ ಬನ್ನಿ” ಎಂದ. ಅವನ ಕಣ್ಣಲ್ಲಿಯೂ ನೀರು ತುಂಬಿದ್ದು ನನಗೆ ಕಂಡಿತು. ನಮ್ಮ ಗಾಡಿ ಹೊರಟಿತು.
ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು
ಮೂರನೆಯ ದಿನ ಗಾಡಿ ನಮ್ಮ ಮಾವನ ಊರ ಮನೆಗೆ ಬಂದು ಮುಟ್ಟಿತು. ಮನೆಯಲ್ಲಿ ಎರಡು ದಿನವಿದ್ದು ಮಾವ ಮಂಗಳೂರಿಗೆ ಗಾಡಿ ಕಟ್ಟಿಸಿದರು. ಅಷ್ಟರೊಳಗೆ ನನ್ನ ಬೆತ್ತಕ್ಕೆ ಕಟ್ಟ ಹಾಕಿಸಿಕೊಟ್ಟರು. ದೇವಯ್ಯಾಚಾರಿ ಮೇಲುತುದಿಗೆ ಬೆಳ್ಳಿಯ ಟೊಪ್ಪಿಗೆಯನ್ನೂ ಕೆಳತುದಿಗೆ ಕುಂಭಕೋಣದ ಹಿತ್ತಾಳೆಯ ಮುಚ್ಚು ಕಟ್ಟನ್ನೂ ಹಾಕಿದ. ಬೆತ್ತದ ಅಂದ ಇಮ್ಮಡಿಸಿತು. ಒಂದು ಜನದ ಜತೆ ಕೊಟ್ಟು ಆರು ಮೈಲು ದೂರದ ನಮ್ಮಜ್ಜನ ಮನೆಗೆ ನನ್ನನ್ನು ಕಳುಹಿಸಿದರು. ಹೊರಡುವಾಗ ಗಿಳಿ ಬಣ್ಣದ ಒಂದು ಕಾಶ್ಮೀರದ ಸಕಲಾತಿಯನ್ನು ನನ್ನ ಹೆಗಲಿಗೆ ಹಾಕಿ ಬೆನ್ನು ತಟ್ಟಿ, ”ನಿನಗೆ ಹೊದೆಯಲಿಕ್ಕೆ” ಎಂದರು. ನನ್ನ ಮುಖವರಳಿದ್ದು ನನಗೇ ಕಂಡಂತಾಯಿತು; ಕಣ್ಣೀರೂ ಬಂತು. ಹಾಗೆಯೇ ಒಮ್ಮೆ ಅವರ ನಗುಮೊಗವನ್ನು ನೋಡಿ, “ಬರುತ್ತೇನೆ” ಎಂದು ಹೇಳಿ ಬೆತ್ತ ಹಿಡಿದುಕೊಂಡು ನೆಟ್ಟಗೆ ಮನೆಗೆ ಹೊರಟೆ.
ಮನೆಗೆ ಬರುವಾಗ ಎರಡು ಗಳಿಗೆ ಹೊತ್ತು ಉಳಿದಿತ್ತು. ನಾನು ಅಷ್ಟು ದಿನ ಕಳೆದು ಬರುವಾಗ ನನ್ನನ್ನು ಕಂಡು, ತುಂಬಿದ ನಮ್ಮ ಮನೆಯವರೆಲ್ಲರೂ ನಗುನಗುತ್ತ ನನ್ನನ್ನು ಮುತ್ತುವರು, ನನ್ನ ಬೆತ್ತ ಸಕಲಾತಿ ಎಲ್ಲಾ ನೋಡಿ ಮೆಚ್ಚಿ ನಲಿಯುವರು, ಎಂದು ಭಾವಿಸಿದ್ದೆ. ಆದರೆ ಕೆಲವರೆಲ್ಲ ನನ್ನನ್ನು ಕಂಡೂ ಕಾಣದಂತೆ ತೊಲಗಿದರು! ಅಂಗಳದ ಮೂಲೆಯಲ್ಲಿದ್ದ ನನ್ನ ಅಕ್ಕ ಮಾತ್ರ ‘ತಮ್ಮ ಬಂದ!’ ಎಂದು ನಗುನಗುತ್ತ ಬೊಬ್ಬಿಟ್ಟು ನನ್ನ ಬಳಿಗೆ ಓಡಿಬಂದಳು. ಆಗ ನಾನು “ಇಗೋ ನೋಡು, ಮಾವ ಕೊಟ್ಟ ಸಕಲಾತಿ!” ಎಂದು ತೋರಿಸಿದೆ. ಅವಳು “ಆಹಾ! ಚಂದವೇ!” ಎಂದು ಹೇಳುತ್ತ ಕೈಯಲ್ಲಿ ತೆಗೆದುಕೊಂಡು ಒಳಗಿದ್ದ ತಾಯಿಗೆ ತೋರಿಸಲು ಕೊಂಡೋಡಿದಳು. ನಾನೂ ಒಳಗೆ ಹೋದೆ. ತಾಯಿ ನನ್ನನ್ನು ಕಂಡು, “ಏನೋ ಇಷ್ಟು ದಿನ? ಅಜ್ಜ ಸಿಟ್ಟಿನಲ್ಲಿದ್ದಾರೆ!” ಎಂದರು. ಅವರ ಕೈಯಲ್ಲಿ ಸಕಲಾತಿ ಇತ್ತು. ಅದನ್ನು ನೋಡಿ “ಒಳಗಿಡು” ಎಂದು ನನ್ನಕ್ಕನ ಕೈಯಲ್ಲಿ ಹೇಳಿ ಕಣ್ಣೂರೆಸಿಕೊಂಡು, ”ಅಬ್ಬ ಹೊಗೆಯೇ!” ಎನ್ನುತ್ತಾ ನನ್ನ ಜತೆಯಲ್ಲಿ ಬಂದ ಆಳಿಗೆ ಬಾಯಾರಿಕೆ ಕೊಡುವುದಕ್ಕಾಗಿ ಮಜ್ಜಿಗೆ ನೀರು ಮಾಡಲು ಹೋದರು. ಬೇರಾರೂ ನನ್ನನ್ನು ಮಾತಾಡಿಸಲೇ ಇಲ್ಲ!
ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್ರ ಕತೆ | ಕದ್ದವರು ಯಾರು?
ನಾನು ಖಿನ್ನತೆಯಿಂದಲೂ ಭೀತಿಯಿಂದಲೂ ಬಾವಿಕಟ್ಟೆಗೆ ಹೋಗಿ ಕಾಲು ತೊಳೆದುಕೊಂಡು ಬಂದು, ತಾಯಿಯ ಹತ್ತಿರ ಕೇಳಿ ಒಂದು ತುಂಡು ಬೆಲ್ಲ ತೆಗೆದುಕೊಂಡು ಬಂದು, ನೀರು ಕುಡಿದು ಹೊರಗೆ ಬಂದು ಚಾವಡಿಯ ಒಂದು ಮೂಲೆಯಲ್ಲಿ ಕುಳಿತೆ. ಏಲಕ್ಕಿ ಮಾಲೆಯ ನೆನಪೇ ಹೋಯಿತು. ಅದು ನನ್ನ ಬಟ್ಟೆಯ ಗಂಟಿನಲ್ಲಿಯೇ ಇತ್ತು. ಕೈಯಲ್ಲಿ ಮಾತ್ರ ಬೆತ್ತವಿತ್ತು. ಅದನ್ನು ನೆಲಕ್ಕೆ ಮೆಲ್ಲನೆ ತಟ್ಟುತ್ತಾ ಇದ್ದೆ. ಮನಸ್ಸು ಎಲ್ಲಿತ್ತೋ ನನಗೇ ಗೊತ್ತಿರಲಿಲ್ಲ. ಅಷ್ಟರಲ್ಲಿ ತೋಟಕ್ಕೋ ಎಲ್ಲಿಗೋ ಹೋಗಿದ್ದ ಅಜ್ಜ ಬಂದರು. ಅವರನ್ನು ನೋಡಿ ಪಕ್ಕನೆ ಅಳುಕಿತು. ಜಾವಡಿಯೇರುವಾಗಲೇ ಅವರು ನನ್ನನ್ನು ಕಂಡರು! “ಏನೋ ಬಂದುಬಿಟ್ಟೆ? ಅಲ್ಲಿಂದ ಹೋಗೆಂದು ಕುತ್ತಿಗೆಗೆ ಕೈಹಾಕಿ ದೂಡಿದರೋ?” ಎಂದು ಕಣ್ಣು ಕೆಂಪುಮಾಡಿ ಹೇಳಿದರು. ನಾನು ಮೂಲೆಗೆ ಅಂಟಿದೆ. ಹಾಗೆಯೇ ಅವರು ಮೇಲೆ ಬಂದು, ‘ಬಾಜಿಲ ಹಲಗೆ’ಯಲ್ಲಿ ವೀಳ್ಯ ಹಾಕತೊಡಗಿದರು. ಇಷ್ಟರಲ್ಲಿಯೇ ಮುಗಿದುಹೋಯಿತೆಂದು ಭಾವಿಸಿ ನಾನು ಸ್ವಲ್ಪ ಸಮಾಧಾನಪಟ್ಟುಕೊಂಡು, ಅನ್ಯಮನಸ್ಕನಾಗಿ ತಲೆ ಬಗ್ಗಿಸಿದಲ್ಲಿಂದಲೇ ಬೆತ್ತದ ತುದಿಯಲ್ಲಿ ನೆಲವನ್ನು ಪುನಃ ತಟ್ಟತೊಡಗಿದೆ. ಅಜ್ಜ ನನ್ನ ಕಡೆಗೆ ನೋಡಿದರು! “ಅದೆಲ್ಲಿಂದಲೋ ಬೆತ್ತ? ಇಲ್ಲಿ ತಾ!” ಎಂದರು. ನನ್ನ ಎದೆಯೊಳಗಿನ ಡಬಡಬ ನನಗೆ ಸರಿಯಾಗಿ ಕೇಳುತ್ತಿತ್ತು. ಬೆತ್ತವನ್ನು ತಂದು ಅವರ ಕೈಯಲ್ಲಿ ಕೊಟ್ಟೆ. ಅದನ್ನವರು ಆಮೂಲಾಗ್ರವಾಗಿ ನೋಡಿದರು; ಅದರ ಕಟ್ಟಗಳನ್ನು ಮುಟ್ಟಿದರು; ನೆಟ್ಟಗೆ ಹಿಡಿದು, ಅಡ್ಡ ಹಿಡಿದು ನೋಟ ಹಿಡಿದು ಪರೀಕ್ಷಿಸಿದರು. ಹಿಡಿದು ಅಲುಗಿಸಿದರು. ಕೊನೆಗೆ ನನ್ನ ಕಡೆಗೆ ನೋಡಿ, “ಸೋಮಾರಿ! ಮನೆಯಲ್ಲಿ ಕುಳಿತು ಓದಿ ಟವಣೆ ಕಲಿತು ಮರ್ಯಾದೆಯಲ್ಲಿ ಎರಡು ಕೂಳು ಸಂಪಾದಿಸುವ ಆಲೋಚನೆ ಬಿಟ್ಟು, ಇನ್ನು ಕೋಲು ಬೆತ್ತ ಹಿಡಿದುಕೋ! ಪನ್ನೆ ತಿದ್ದು! ಪೋಲಿಯಾಗಿ ಅಂಕ-ಅಯನ, ಆಟ-ನೋಟ ಎಲ್ಲುಂಟೆಂದು ತಿರುಗಾಡು! ಮತ್ತೆ ಗಟ್ಟ ಹತ್ತಿ ತೋಟದಲ್ಲಿ ಅಡಿಗೆ ಕೆಲಸಕ್ಕೆ ಸೇರು! ನಿನ್ನ ಹಣೆಬರಹ ನೋಡು ನೀ ನೋಡು!” ಎಂದು ಹೇಳಿ ಬೆತ್ತದ ಎರಡು ಕೊನೆಗಳಲ್ಲಿಯೂ ಹಿಡಿದು ಬಾಗಿಸಿದರು! ನನ್ನ ಜೀವವೇ ಮುರಿಯುವಂತಾಯಿತು. “ಬೇಡಪ್ಪಾ, ಬೇಡಜ್ಜಾ!” ಎಂದೆ. ಅವರು ಕಣ್ಣು ಕೆರಳಿಸಿ ನೋಡಿದರು! ಅಳುತ್ತಾ ಹಿಂದೆ ಸರಿದೆ. ಆದರೆ ಅದು ಸಪುರವಾಗಿ ಸೆಳೆಯಾಗಿದ್ದುದರಿಂದ ಮುರಿಯದೆ ಬಳುಕಿತು. ಕೂಡಲೆ ಅಜ್ಜ ಹಲ್ಲು ಕಚ್ಚಿ ಅದನ್ನು ಇನ್ನೊಂದು ಮೆಯ್ಗೆ ಥಟ್ಟನೆ ಬಗ್ಗಿಸಿದರು; ಅದು ಮುರಿಯಿತು. ನನ್ನ ಲಿಂಗಯ್ಯನ ಪ್ರೀತಿಯ ತಂತು ತುಂಡಾಯಿತು! ಅದರ ಕಟ್ಟಗಳನ್ನವರು ‘ಎಲೆ ಗುದ್ದಾಣ’ದ ಕಲ್ಲಿನಲ್ಲಿ ಗುದ್ದಿ ತೆಗೆದರು; ತಮ್ಮ ಜನಿವಾರದ ಪೆಟ್ಟಿಗೆಯಲ್ಲಿ ಹಾಕಿ ಮೇಲೆ ‘ಉತ್ತರ’ದಲ್ಲಿಟ್ಟರು. ನನ್ನ ಮುದ್ದು ಬೆತ್ತದ ಮುರುಕುಗಳನ್ನು ಕೊಂಡುಹೋಗಿ, ಅಂಗಳದ ಮೂಲೆಯಲ್ಲಿ ಹೊಗೆದುರಿಯುತ್ತಿದ್ದ ಸುಡುಮಣ್ಣಿನ ರಾಶಿಗೆ ಎಸೆದುಬಿಟ್ಟರು!

ನಾನು ಆ ದಿನ ಊಟ ಮಾಡಲಿಲ್ಲ. ನನ್ನನ್ನು ಊಟಕ್ಕೆಬ್ಬಿಸಲು ತಾಯಿ ಬಂದರು. ನಾನು ಎಚ್ಚರವಿದ್ದರೂ ಏಳಲಿಲ್ಲ. “ನಿನಗೆ ಹಸಿವಿಲ್ಲ” ಎಂದು ಹೇಳಿ ಒಳಗೆ ಹೋದರು. ಅವರೂ ಅಂದು ಊಟ ಮಾಡಿದರೋ ಇಲ್ಲವೋ ನನಗೆ ಗೊತ್ತಿಲ್ಲ. ನಾನು ಬೆಳಿಗ್ಗೆ ಎದ್ದು ಮುಖ ತೊಳೆದು ವಿಭೂತಿ ಹಾಕಿ ದೇವರಿಗೆ ನಮಸ್ಕರಿಸಿ, ಭಾಗವತದ ಓಲೆ ಪುಸ್ತಕವನ್ನು ತೆಗೆದುಕೊಂಡು ಓದುವುದಕ್ಕೆ ಕುಳಿತೆ. ಕಣ್ಣಿನಿಂದ ನೀರು ಇಳಿಯುತ್ತಲೇ ಇದ್ದುದರಿಂದ ಓದಲಾಗಲಿಲ್ಲ. ಪುಸ್ತಕವನ್ನು ಕಟ್ಟಿಟ್ಟೆ. ಎದ್ದು ಬಯಿಲಿಗೆ ನಡೆದೆ. ನಾಲ್ಕು ಗಳಿಗೆ ಹೊತ್ತಾಗುವಾಗ ಆಯಾಸದಲ್ಲಿ ಏನೂ ಕೂಡದು. ಮನೆಗೆ ಬಂದೆ. ಮಿಂದು ಜಪ ಮಾಡಿ ಒಳಗೆ ಹೋದೆ. ಎಲೆಯಿಟ್ಟುಕೊಂಡು ಕುಳಿತೆ. ತಾಯಿ ಇಷ್ಟು ಗಂಜಿ ಹಾಕಿದರು. ಮಾತಾಡದೆ ಉಂಡು ಕೈತೊಳೆದು ಬಂದು ತಲೆ ನೋಯುತ್ತದೆ ಎಂದು ಹೇಳಿ, ಒಂದು ಹುಲ್ಲು ಚಾಪೆಯನ್ನೂ ತಲೆದಿಂಬನ್ನೂ ತೆಗೆದುಕೊಂಡು, ಚಾವಡಿಯ ಮೂಲೆಯಲ್ಲಿ ಗೋಡೆಗೆ ಮೋರೆ ಹಾಕಿ ಮಲಗಿದೆ. ನಿದ್ದೆ ಬರುವಂತಿರಲಿಲ್ಲ.
ಅಜ್ಜ ಆ ದಿನ ಮನೆಯಲ್ಲಿರಲಿಲ್ಲ; ಒಂದು ಪಾಲುಪಂಚಾಯಿತಿಕೆಯ ನಿಮಿತ್ತ ನನ್ನ ತಾಯಿಯ ಸೋದರಮಾವನ ಮನೆಗೆ ಹೋಗಿದ್ದರು. ಆದುದರಿಂದ ಮಲಗಿದ್ದಲ್ಲಿಂದ ಎಬ್ಬಿಸಿ ಬರೆಯಲು ಕುಳ್ಳಿರಿಸುವವರು ಯಾರೂ ಇರಲಿಲ್ಲ. ನನ್ನ ಮಾವಂದಿರು ನನ್ನ ಗೊಡವೆಗೆ ಬರುವವರೇ ಅಲ್ಲ. ಆದುದರಿಂದ ಸುಮ್ಮನೆ ಮಲಗಿದ್ದೆ.
ನಮ್ಮಜ್ಜನ ಮನೆಯಲ್ಲಿ ತುಂಬ ಜನರಿದ್ದರು; ದೊಡ್ಡ ಕುಟುಂಬ. ಒಬ್ಬರು ಹಣ್ಣು ಮುದುಕಿಯೂ ಇದ್ದರು. ನನ್ನ ಅಜ್ಜನಿಗೆ ಅವರು ದೊಡ್ಡಮ್ಮ; ಎಂದರೆ ತಂದೆಯ ಅಣ್ಣನ ಹೆಂಡತಿ. ಅವರಿಗೆ ಮಕ್ಕಳಿಲ್ಲ; ಬಾಲವಿಧವೆ. ಎಲ್ಲರ ಮೇಲೂ ಅವರಿಗೆ ಕರುಣೆ, ಪ್ರೀತಿ. ಹೆಚ್ಚಿನ ಸಮಯವೆಲ್ಲ ಒಳಗೇ ಇದ್ದುಕೊಂಡು, ಏನೋ ಧ್ಯಾನಿಸುತ್ತ ಕಾಲ ಕಳೆಯುವರು. ಅವರಿಗೆ ಬಹಳ ದಾಕ್ಷಿಣ್ಯ, ಬಹಳ ಅಂಜಿಕೆ. ನಮ್ಮ ಅಜ್ಜ ಅವರಿಗೆ ಮಗನಾಗಬೇಕಾಗಿದ್ದರೂ, ಅವರ ಇದಿರಿನಲ್ಲಿ ನಿಂತು ಮಾತಾಡಲೂ ಸಹ ಹೆದರುತ್ತಿದ್ದರು. ನಮ್ಮ ಅಜ್ಜನಿಗೆ ಸಿಟ್ಟು ಬಹಳ; ಅವರನ್ನು ಕಂಡೊಡನೆ ಅಲ್ಲಿ ನಿಲ್ಲದೆ ಒಳಗೆ ಹೋಗುತ್ತಿದ್ದರು. ಅಂದು ಅಜ್ಜ ಮನೆಯಲ್ಲಿಲ್ಲದಿದ್ದುದರಿಂದ ಅವರು ಚಾವಡಿಗೆ ಬಂದು, ನಾನು ಮಲಗಿದ್ದುದನ್ನು ನೋಡಿದರು. ನನ್ನ ದುಃಖದ ಕಾರಣ ಅವರಿಗೆ ಗೊತ್ತಿರಲಿಲ್ಲ. ಅವರು ನನ್ನ ಬಳಿಗೆ ಬಂದು ಕುಳಿತು, ಬೆನ್ನು ಸವರಿ ಎದೆ ಮುಟ್ಟಿ ನೋಡಿ, ”ಮಗೂ! ನಿನಗೇನಪ್ಪಾ? ಅತ್ತೆಯ ಮನೆಯಲ್ಲಿ ಊಟಗೀಟ ಸರಿಯಾಗಲಿಲ್ಲವೋ? ಗಟ್ಟಕ್ಕೆ ಹೋಗಿ ಬಂದೆಯಂತೆ. ಅದು ಜ್ವರದ ಊರು. ಏನಾಯಿತು ಮಗೂ?” ಎಂದರು. ನಾನು ಉತ್ತರ ಕೊಡಲೇ ಇಲ್ಲ. ಅವರು ಮತ್ತೂ ಮತ್ತೂ ಕೇಳಿದರು. ಅವರ ದನಿ ನನ್ನ ಮನಸ್ಸನ್ನು ಅಲುಗಿಸಿತು. ಕೊನೆಗೆ ಬಿಕ್ಕುತ್ತಾ ಬಿಕ್ಕುತ್ತಾ ನನ್ನ ದುಃಖದ ಕಾರಣವನ್ನು ಹೇಳಿದೆ: ಮುರಿದುಹೋದ ನನ್ನ ಮುದ್ದು ಬೆತ್ತದ ಕತೆಯನ್ನೆಲ್ಲ ಹೇಳಿದೆ.
ಇದನ್ನು ಓದಿದ್ದೀರಾ?: ಎಸ್.ಜಿ. ಶಾಸ್ತ್ರಿಯವರ ಕತೆ | ಹಬ್ಬದ ಉಡುಗೊರೆ
ದೇವಜ್ಜಿ- ಇದು ನಾವು ಅವರನ್ನು ಕರೆಯುವ ಹೆಸರು; ಅವರ ಹೆಸರು ದೇವಕಿ ಎಂದು- ನನ್ನೊಡನೆ ಕಣ್ಣೀರು ಸುರಿಸುತ್ತಾ ಸುದ್ದಿಯನ್ನೆಲ್ಲ ಕೇಳಿದರು. ಸೆರಗಿನಲ್ಲಿ ಒರಸಿದಷ್ಟೂ ಅವರ ಕಣ್ಣಲ್ಲಿ ನೀರಿಳಿಯುತ್ತಲೇ ಇತ್ತು. ಕೊನೆ ಕೊನೆಗೆ ಅವರಿಗೆ ದುಃಖವನ್ನು ತಡೆಯಲಾಗಲಿಲ್ಲ. ಅವರು ಚೆನ್ನಾಗಿ- ಆದರೆ ಮೆಲ್ಲಗೆ- ಅತ್ತರು. ನಾನೂ ಅತ್ತೆ. ಇಬ್ಬರೂ ಮುಖವನ್ನೊರಸಿಕೊಂಡೆವು. ಅಜ್ಜಿ ಸ್ವಲ್ಪ ತಡೆದು, “ಮಗೂ, ಆ ಬೆತ್ತ ಮುರಿದದ್ದು ಒಳ್ಳೆಯದೇ ಆಯಿತಪ್ಪ, ಅದು ಎಲ್ಲಿದ್ದ ನಾಗರ ಬೆತ್ತವೋ! ನಾಗರ ಬೆತ್ತವೆಂದರೆ ಜೀವಕ್ಕೆ ಸಂಚಕಾರ, ಮಗೂ! ನಿನಗದು ಬೇಡವೇ ಬೇಡ! ಅಳಬೇಡ ಮಗೂ, ಅಳಬೇಡ!” ಎಂದು ಹೇಳುತ್ತಾ ಅವರೇ ಗೊಳೋ ಎಂದು ಅತ್ತರು. ಜಾವಡಿಯಲ್ಲಿ ಬೇರಾರೂ ಇರಲಿಲ್ಲ.
ನನಗೊಂದು ಶಂಕೆ ಹುಟ್ಟಿತು. ನಾಗರಬೆತ್ತವು ಜೀವಕ್ಕೆ ಸಂಚಕಾರವಾಗುವುದು ಹೇಗೆ? ಹೋ! ‘ನಾಗ’ ಎಂದರೆ ಹಾವು! ಹಾವಿಗಿರುವಂತೆ ಬೆತ್ತದಲ್ಲಿ ವಿಷವಿದೆಯೇ? ಇರುವ ಹಾಗಿಲ್ಲ. ಇದ್ದರೆ ಲಿಂಗಯ್ಯ ನನಗದನ್ನು ಕೊಡಲಿಕ್ಕಿಲ್ಲ; ಕೊಡಲು ಮಾವ ಬಿಡಲಿಕ್ಕೂ ಇಲ್ಲ. ಹಾಗಾದರೆ ಅದಕ್ಕೆ ಹಾವಿನ ಹೆಸರೇಕೆ? ನಾಗರ ಹಾವಿನಂತೆ ಬಿಳಿಹಳದಿ ಬಣ್ಣವಿದ್ದು, ಹಾವಿನ ಕೊರಳಲ್ಲಿರುವಂತೆ ಅಲ್ಲಲ್ಲಿ ಮಚ್ಚೆಯಿರುವುದರಿಂದ ನಾಗರಬೆತ್ತವೆಂದು ಹೇಳುವುದಾಗಿರಬೇಕು. ಹಾಗಾದರೆ ಅದು ಅಪಾಯಕರವೆಂದು ದೇವಜ್ಜಿ ಹೇಳಲು ಕಾರಣವೇನು? ತಿಳಿಯಬೇಕಾಯಿತು.
ಸ್ವಲ್ಪ ಹೊತ್ತಿನಲ್ಲಿ ದೇವಜ್ಜಿ ಅಳುವನ್ನು ನಿಲ್ಲಿಸಿ ಕಣ್ಣು ಮೋರೆಯೊರೆಸಿಕೊಂಡರು. ಮೆಲ್ಲಗೆ ಅಂಗಳಕ್ಕಿಳಿದು ಅತ್ತಿತ್ತ ನೋಡಿ ಬಾವಿಕಟ್ಟೆಗೆ ಹೋಗಿ ಮುಖಕ್ಕೆ ನೀರು ಹಾಕಿ ಸೆರಗಿನಲ್ಲಿ ಒರಸಿಕೊಂಡು ಬಂದು ತಿರುಗಿ ನನ್ನ ಬಳಿಯಲ್ಲಿ ಕುಳಿತರು. ಮಳೆ ಬಂದು ಬಿಟ್ಟ ಬಾನಿನಂತೆ ಅವರ ನಿರಿಮೋರೆ ನಿರ್ಮಲವಾಯಿತು. ಆಗ ನಾನು “ದೇವಜ್ಜಿ! ನಾಗರ ಬೆತ್ತದಲ್ಲಿ ವಿಷವುಂಟೋ? ಅದರಲ್ಲಿ ಏನು ಅಪಾಯ?” ಎಂದು ಕೇಳಿದೆ. ಅವರ ತುಟಿಗಳು ನಡುಗಿದವು. ತಿರುಪಿದವು. ಆದರೂ ಅವರು ಅಳುವನ್ನು ಒತ್ತಿಕೊಂಡು, ಬಳಿಯಲ್ಲಿ ಕುಳಿತ ನನ್ನ ತಲೆಯನ್ನು ಸವರುತ್ತ ಹೇಳತೊಡಗಿದರು:
“ಮಗು, ಏನು ಹೇಳಲಿ! ನೀನು ಹಸುಳೆ. ನಿನಗೇನು ಗೊತ್ತು? ನಿನ್ನ ತಾಯಿಗಾದರೆ ನೀವಾದರೂ ಇದ್ದೀರಿ. ನನಗೆ ಯಾರಿದ್ದಾರೆ ಮಗೂ? ನನ್ನ ಭಾಗ್ಯವನ್ನು ಮುಕ್ಕಿ ತಿಂದದ್ದು ಒಂದು ನಾಗರಬೆತ್ತ ಮಗು!” ಎಂದು ಹೇಳಿ ‘ಸೂ’ ಎಂದು ನಿಟ್ಟುಸಿರಲ್ಲಿ ನಿಲ್ಲಿಸಿದರು.
ದೇವಜ್ಜಿ ನಮ್ಮಜ್ಜನ ದೊಡ್ಡಮ್ಮ, ಪಾಪದ ಮುದುಕಿ. ಅಷ್ಟು ಮುದುಕಿಯಾದರೂ ನಮ್ಮೊಡನೆ ಹುಳಿಸೆಬಿತ್ತು ಅಗಿಯುವ ಗೆಳತಿ; ಹೆಣ್ಣುಮಕ್ಕಳಿಗೆಲ್ಲ ಹೂಕಟ್ಟಿ ಕೊಡುವ ಪ್ರಿಯಸಖಿ; ನಮ್ಮ ಭಾಮಜ್ಜಿಯಂತೆ (ಎಂದರೆ ನಮ್ಮಜ್ಜನ ಅಕ್ಕ) ಅಲ್ಲಿ ಮೈಲಿಗೆ ಇಲ್ಲಿ ಮುಸುರೆ ಎಂದು ಬೊಬ್ಬಿಡುತ್ತ, ಮಕ್ಕಳನ್ನು ಬೈದು ಬೆದರಿಸುವ ಮಡಿಮರುಳೆಯಲ್ಲ; ಮಕ್ಕಳೊಳಗೆ ಒಬ್ಬಿಬ್ಬರ ಮೇಲೆ ಮೋಹವಿಟ್ಟುಕೊಂಡು ಅವರ ಕಡೆ ಹಿಡಿದು ಬೇರೆ ಮಕ್ಕಳೊಡನೆ ಕಚ್ಚಾಡುವ ಜಗಳಗಂಟಿಯಲ್ಲ; ಅವಳ ಮುಖ ಹಾಗೆ, ಇವಳ ಮೂಗು ಹೀಗೆ, ಇವಳಿಗೆ ಮತ್ಸರ ಹೆಚ್ಚು, ಅವಳಿಗೆ ಕೋಪ ಹೆಚ್ಚು, ಇವಳು ಬರೀ ಹೆಡ್ಡೆ, ಅವಳಾದರೆ ಬುದ್ಧಿವಂತೆ ಎಂದು ಮೊದಲಾಗಿ ಕೆದಕುತ್ತಲೇ ಇರುವ ‘ಕೊಕ್ಕೆ’ಯೂ ಅಲ್ಲ- ಎಂದಷ್ಟೇ ಅವರ ಕುರಿತು ಅವರೆಗೆ ನನಗೆ ಗೊತ್ತಿದ್ದುದು. ಅವರ ಎದೆಯೊಳಗಿನ ಮರುಕದ ಅರಿವು ನನಗೆ ಇರಲೇ ಇಲ್ಲ. ನಾಗರ ಬೆತ್ತವು ನನ್ನೆದೆಯನ್ನು ಕರಗಿಸಿದ್ದು ಮಾತ್ರವಾದರೆ, ಅವರೆದೆಯನ್ನು ಸೀಳಿಯೇ ಹಾಕಿತ್ತು! ಆ ಬಗೆಯನ್ನು ಅವರು ನನಗೆ ಹೀಗೆ ಹೇಳಿದರು-
“ಮಗೂ! ನಿನಗೆ ಗೊತ್ತಿಲ್ಲ. ನನಗೆ ಹಾಗೆಲ್ಲ ಹೇಳುವ ಅಭ್ಯಾಸವೂ ಇಲ್ಲ. ಯಾರ ಹತ್ತಿರ ಹೇಳಿ ಏನು ಮಾಡುವುದು? ಸುಮ್ಮನೆ ಕರಕರೆಯನ್ನು ಕರೆದಂತಾಗುವುದು. ಆದರೆ ಈ ಹೊತ್ತೇನೊ ನಿನ್ನೊಡನೆ ಹೇಳಬೇಕೆಂದು ತೋರುತ್ತದೆ; ಹೇಳಿಬಿಡುತ್ತೇನೆ, ಕೇಳು: ನನ್ನಪ್ಪನ ಮನೆ ಈ ಊರಲ್ಲಿ ಅಲ್ಲ; ದೂರ. ಇಲ್ಲಿಂದ ಎರಡು ದಿನಗಳ ದಾರಿ, ಗಟ್ಟದ ಬುಡ. ಸಂಪಾಜೆ ಎಂದು ಕೇಳಿದ್ದೀಯಾ? ಅಲ್ಲಿಗೆ ಹತ್ತಿರ. ಈಗ ಅಲ್ಲಿ ಯಾರೆಲ್ಲ ಇದ್ದಾರೋ ನನಗೆ ಗೊತ್ತೇ ಇಲ್ಲ. ಮತ್ತೆ ನನಗೆ ಅಲ್ಲಿಗೆ ಹೋಗಬೇಕೆಂದು ತೋರಲೇ ಇಲ್ಲ. ನನ್ನಪ್ಪ ಇರುವಾಗ ವರ್ಷಕ್ಕೊಮ್ಮೆ ಇಲ್ಲಿಗೆ ಬಂದು ನೋಡಿ ಹೋಗುತ್ತಿದ್ದರು. ನನ್ನನ್ನು ‘ಮನೆಗೊಮ್ಮೆ ಬಾ ಮಗಳೇ!’ ಎಂದು ಕರೆಯುತ್ತಿದ್ದರು. ಆದರೆ ‘ಆ ದಾರಿಯನ್ನೇ ನೋಡಲು ನನ್ನಿಂದಾಗದು’ ಎಂದು ಹೇಳಿ ನಾನು ಬರುವುದಿಲ್ಲವೆನ್ನುತ್ತಿದ್ದೆ. ಇಬ್ಬರೂ ಕಣ್ಣೀರು ಹಾಕುತ್ತಿದ್ದೆವು. ಇಲ್ಲಿಗೆ ಬಂದರೆ ಅವರಿಗೆ ನನ್ನನ್ನು ಬಿಟ್ಟು ಹೊರಡಲು ಕಾಲೇ ಬರುತ್ತಿರಲಿಲ್ಲ. ಆದರೆ ‘ಎಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಕುಳಿತುಕೊಳ್ಳುವುದು? ನೀವು ಹೋಗಿ’ ಎಂದು ನಾನೇ ಅವರನ್ನು ಕಳುಹಿಸುತ್ತಿದ್ದೆ. ಸಂದು ಕಡಿದ ಮೇಲೆ ಸಂಬಂಧಿಕ ಆದರೂ ‘ಬೇಕಾದವ’ರಲ್ಲ. ಮತ್ತೆ ಅವರಿಗೆ ಒಂದು ವಾತರೋಗ ಹಿಡಿಯಿತು. ನಡೆಯಲಿಕ್ಕೆ ಕೂಡದು. ಅವರು ಸಾಯುವುದಕ್ಕೆ ಎರಡು ವರ್ಷಗಳ ಮೊದಲೊಮ್ಮೆ ಗಾಡಿಯಲ್ಲಿ ಬಂದು ಮೂರು ದಿನವಿದ್ದು, ‘ನಾನಿನ್ನು ಬರುವುದಿಲ್ಲ ಮಗಳೇ!’ ಎಂದು ಹೇಳಿ ಹೋಗಿದ್ದರು. ಆಗ ನಾನು ಅವರ ಕಾಲು ಹಿಡಿದದ್ದೇ ಕೊನೆಯದು. ಅವರೆಲ್ಲ ಹೋದರು. ನಾನು ಯಾವಾಗ ಹೋಗುವುದೋ!” ಎಂದು ಹೇಳಿ ದೇವಜ್ಜಿ ಸೆರಗಿನಲ್ಲಿ ಕಣ್ಣೂರೆಸಿ ಕೊಂಡರು; ನಾನೂ ಅದರಲ್ಲೇ ಉಜ್ಜಿಕೊಂಡೆ. ಆಮೇಲೆ ಅವರು ಮೆಲ್ಲಗೆ ಮುಂದುವರಿಸಿದರು-
“ನನಗೆ ಹುಟ್ಟುವಾಗಲೇ ಅದೃಷ್ಟವಿಲ್ಲ. ನಾನು ಒಂದು ವರ್ಷದ ಮಗುವಾಗಿದ್ದಾಗಲೇ ನನ್ನಮ್ಮ ತೀರಿಹೋದರಂತೆ. ಅವರ ಮೋರೆಯ ನೆನಪಿಟ್ಟುಕೊಳ್ಳುವುದಕ್ಕೂ ನನಗೆ ಹಣೆಬರಹವಿರಲಿಲ್ಲ. ನನಗೆ ಬಡಹುಟ್ಟೂ ಇಲ್ಲ; ನಾನೇ ಚೊಚ್ಚಲ ಮಗುವಂತೆ. ನನ್ನಪ್ಪನೇ ನನ್ನನ್ನು ಸಾಕಿದ್ದು. ನನಗೆ ಐದು ವರ್ಷವಾಗುವಾಗ ನನ್ನಪ್ಪ ಬೇರೆ ಮದುವೆಯಾದರು. ಚಿಕ್ಕಮ್ಮನಿಗೆ ಮೇಲೆ ಮೇಲೆ ಹೆರಿಗೆ. ಎಲ್ಲ ಗಂಡು ಮಕ್ಕಳೇ. ನನಗೆ ತಮ್ಮಂದಿರೆಂದರೆ ಬಹು ಪ್ರೀತಿ. ಈಗ ಅವರೆಲ್ಲ ಹೇಗಿದ್ದಾರೋ ಎಲ್ಲಿದ್ದಾರೋ ನನಗೆ ಗೊತ್ತಿಲ್ಲ. ಇಲ್ಲಿಗೆ ಅವರು ಬಂದದ್ದಿಲ್ಲ. ನಾನಂತೂ ಹೋದದ್ದೇ ಇಲ್ಲ. ನನ್ನ ಚಿಕ್ಕಮ್ಮನೂ ಒಳ್ಳೆಯ ಹೆಂಗಸು. ನನ್ನಪ್ಪ ತೀರಿಹೋದ ಮರು ವರ್ಷವೇ ಅವಳೂ ತೀರಿಹೋದಳೆಂದು, ಅದೇ ವರ್ಷ ಕಾವೇರಿ ಯಾತ್ರೆಗೆ ಹೋಗಿ ಬಂದ ಗುಂಡಿಮನೆ ವೆಂಕಟರಮಣಯ್ಯನವರು ಹೇಳಿದ್ದರು. ಮತ್ತೆ ಅಲ್ಲಿಯ ಸುದ್ದಿಯೇ ಇಲ್ಲ. ಯಾರ ಸುದ್ದಿ ನನಗೆ ಯಾಕೆ?
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
“ನನ್ನ ಮದುವೆಗಾಗಿ ನನ್ನಪ್ಪ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನನ್ನದಕ್ಕೆ ಕೂಡಿ ಬರುವ ಜಾತಕ ಆ ಸೀಮೆಯಲ್ಲಿಯೇ ಸಿಕ್ಕಲಿಲ್ಲವಂತೆ. ಮತ್ತೆ ಅವರು ಹುಡುಕಿ ಹುಡುಕಿ ಈ ಸೀಮೆಗೆ ಬಂದರಂತೆ. ‘ಈ ಮನೆಯವರ’ ಒಬ್ಬರ ಜಾತಕ ಕೂಡಿ ಬಂತಂತೆ. ಎಂಥಾ ಕೂಡಿ ಬಂದದ್ದೋ! ನಿಜವಾಗಿ ಕೂಡಿ ಬಂದರೆ ಹೀಗಾಗಬೇಕೇ? ಪಾಪ, ನನ್ನಪ್ಪನಿಗೆ ಹೊರೆಯೊಂದು ಇಳಿದಂತಾಯಿತು; ನನಗೆ ಹದಿಮೂರು ವರ್ಷ ತುಂಬಿತ್ತು. ಮದುವೆಯಾಗಿ ಮರುದಿಬ್ಬಣ ಬಂದದ್ದು ‘ದೋಲಿ’ಯಲ್ಲಿ. ನನಗೆ ಆ ಪ್ರಾಯದಲ್ಲಿ ಹದಿನಾರು ಹರದಾರಿ ನಡೆಯಲಿಕ್ಕಾಗಲಿಕ್ಕಿಲ್ಲವೆಂದು ಅಪ್ಪ ಬಲ್ಲಾಳರ ಮನೆಯಿಂದ ದೊಡ್ಡ ದೋಲಿ ತರಿಸಿದರು. ಆ ಸಮಯದಲ್ಲಿ ಈ ಊರಿಗೆ ರಸ್ತೆ ಇದ್ದಿಲ್ಲ. ಆದುದರಿಂದ ಗಾಡಿ ಮಾಡುವಂತಿರಲಿಲ್ಲ. ಚಿಕ್ಕಮ್ಮ ಬರಲಿಲ್ಲ; ಅವಳು ಬಾಣಂತಿ. ಎಲ್ಲರೂ ನಡೆದದ್ದೇ. ನಾನೂ ‘ಅವರೂ’ ಮಾತ್ರ ದೋಲಿಯಲ್ಲಿ. ಅವರನ್ನು ನಾನು ಸರಿಯಾಗಿ ನೋಡಿದ್ದು ದೋಲಿಯಲ್ಲಿಯೇ. ಅರಸಿನ ಬಿಳಿ ಮೆಯ್ ಬಣ್ಣ; ನುಣುನುಣುಪು ಕೈಬೆರಳು; ಮೋರೆಯಲ್ಲಿ ಯಾವಾಗಲೂ ನಗೆಯೇ. ಉದ್ದ ತಲೆಕೂದಲು; ಜುಟ್ಟು ಕಟ್ಟಿದರೆ ಎರಡು ಕೈತುಂಬ. ಸೂ! ಏನಾದರೇನು! ನನಗೆ ಹಣೆಬರಹ ಬೇಡವೋ?”

ಸ್ವಲ್ಪ ಹೊತ್ತು ದೃಷ್ಟಿಯನ್ನು ತಗ್ಗಿಸಿ ಏನೋ ಧ್ಯಾನಿಸಿ ಅನಂತರ ಮುಂದೆ ಹೇಳಿದರು:
“ಗೃಹಪ್ರವೇಶವಾಗಿ ಅಪ್ಪನ ಮನೆಗೆ ನಾವಿಬ್ಬರೂ ಹೋದಮೇಲೆ ‘ಅವರು’ ಅಲ್ಲಿದ್ದುದು ಎರಡೇ ದಿನ. ಇಲ್ಲಿ ಅವರಜ್ಜನ ಶ್ರಾದ್ಧವಿದ್ದುದರಿಂದ ಕೂಡಲೇ ಬರಬೇಕೆಂದು ಮಾವನವರು ಹೇಳಿದ್ದರು. ಹಿರಿಯ ಮಗನಲ್ಲವೋ? ಹಾಗೆ ಅವರು ಬಂದಮೇಲೆ ಮತ್ತೆ ಆರು ತಿಂಗಳು ನನ್ನನ್ನು ಕರೆದುಕೊಂಡು ಹೋಗಲು ಇಲ್ಲಿಂದ ಯಾರೂ ಬರಲಿಲ್ಲ. ಸಣ್ಣವಳು, ನಡೆಯಲಿಕ್ಕಾಗಲಿಕ್ಕಿಲ್ಲ ಎಂದಿರಬಹುದು. ನನ್ನತ್ತೆಯವರಿಗೆ ಸೊಸೆಯಂದಿರ ಮೇಲೆ ಅತಿ ಕರುಣೆ. ನನ್ನಪ್ಪನ ಮನೆಯಲ್ಲಿ ನವರಾತ್ರಿ ಭಾರಿ ಗದ್ದಲ; ಒಂಬತ್ತು ದಿನ ಮಹಾಪೂಜೆ. ಎಂಥಾ ಮಂಡಲ! ಎಷ್ಟು ಬಣ್ಣ! ಎಷ್ಟಾರತಿ! ಎಂಥ ಮಂತ್ರಘೋಷ! ದಶಮಿ ದಿನ ಸಮಾರಾಧನೆಗೆ ಎಷ್ಟು ಬಗೆ ಪರಮಾನ್ನ! ಎಷ್ಟು ಬಗೆ ಕಜ್ಜಾಯ! ಈ ಪೂಜೆಗೆ ನನ್ನಪ್ಪ ಅಳಿಯನಿಗೆ ಕರೆ ಕಳುಹಿಸಿದರು. ಒಂದು ಕಾಗದ ಕೊಟ್ಟು, ಎರಡಾಳುಗಳನ್ನು ಇಲ್ಲಿಗೆ ಕಳುಹಿಸಿದರು. ಯಾವಾಗ ಬರುವರೆಂದು ನಾನು ಅಲ್ಲಿ ದಾರಿ ನೋಡುತ್ತಲೇ ಇದ್ದೆ. ಐದಾರು ದಿನಗಳಲ್ಲಿ ಬಂದರು. ಅವರು ಬಂದು ಮನೆಮೆಟ್ಟಿಲು ಹತ್ತಿದ್ದು ಈಗಲೂ ನನ್ನ ಕಣ್ಣಿನಲ್ಲಿದೆ. ತಲೆಗೆ ಗದ್ದೆಮಡಿ ಪಟ್ಟೆ ಎಲೆವಸ್ತ್ರ, ಹೆಗಲಿಗೆ ನನ್ನಪ್ಪ ಮದುವೆಗೆ ಉಡುಗೊರೆ ಮಾಡಿದ ಐದು ಬೆರಳಗಲದ ಕಂಬಿಯ ದೋತರ. ಉಟ್ಟದ್ದು ಮಡಿ ಮಾಡಿಸಿದ ಮಂಗಲಜವುಳಿ. ಕೈಯಲ್ಲೊಂದು ‘ಸುಗಂಧಿ’ ತುಂಡು, ಕಾಲಿಗೆ ಎಣ್ಣೆ ಮೇಣದ ಬೇಗಡೆ ಹೂವಿನ ಮೆಟ್ಟು. ಸೂ! ಆ ರೂಪಿನಲ್ಲೇ ಬಂದರು, ಆ ರೂಪಿನಲ್ಲೇ ಹೋದರು!
‘ಅವರು’ ನವರಾತ್ರಿ ಪೂಜೆಗೆ ಬಂದವರು ‘ಹಬ್ಬ'(ದೀಪಾವಳಿ)ದವರೆಗೂ ಅಲ್ಲೇ ಇದ್ದರು. ಮಾವನವರಿಗೆ ನನ್ನಪ್ಪ ಕಾಗದದಲ್ಲಿ ಹಾಗೆ ಬರೆದಿದ್ದರಂತೆ- ನವರಾತ್ರಿಗೆ ‘ಅವರು’ ಬರಬೇಕು; ಹಬ್ಬ ಕಳೆದು ಅಳಿಯನನ್ನೂ ಮಗಳನ್ನೂ ಒಟ್ಟಿಗೆ ಕಳುಹಿಸಿಕೊಡುತ್ತೇನೆಂದು. ಆ ಒಂದು ತಿಂಗಳು ನನ್ನಪ್ಪನ ಮನೆಯಲ್ಲಿ ಎಂದೂ ಇಲ್ಲದಿದ್ದ ಸುಖಸಂತೋಷ. ಒಮ್ಮೊಮ್ಮೆ ಅಪ್ಪನೊಟ್ಟಿಗೆ ‘ಅವರೂ’ ಅತ್ತಿತ್ತ ಬಯಲಲ್ಲೋ ಗುಡ್ಡದಲ್ಲೋ ತಿರುಗಾಡಲು ಹೋಗುತ್ತಿದ್ದರು. ನಾನೂ ಅವರ ಜತೆಯಲ್ಲಿ ಬರಬೇಕೆಂದು ‘ಅವರ’ ಮನಸ್ಸಿನಲ್ಲಿತ್ತು. ಯಾರಾದರೂ ಹಾಸ್ಯ ಮಾಡಬಹುದೆಂದು ನನಗೆ ಅಂಜಿಕೆ. ಒಂದು ದಿನ ಹೊರಡುವಾಗ ಬಾಯಿಬಿಟ್ಟು ಕರೆದರು. ನಾನು ‘ಊಹುಂ’ ಎಂದು ಓಡಿದೆ. ಅವರಿಗೆ ಆಸೆ ತೀರಲಿಲ್ಲ. ಯಾಕೆ ಬಂತೋ ಆ ಆಸೆ! ಮರುದಿನ ಹೇಗೊ ನನ್ನನ್ನು ಒಪ್ಪಿಸಿದರು.
ಇದನ್ನು ಓದಿದ್ದೀರಾ?: ಪ. ರಮಾನಂದರ ಕತೆ | ಬಾಳ್ವೆಯ ಮಸಾಲೆ
ಅಪ್ಪ ಮಧ್ಯಾಹ್ನದ ಊಟ ಮಾಡಿ ಮಲಗಿದ್ದರು. ನಾವಿಬ್ಬರೇ ಹೊರಟೆವು. ಅಯ್ಯೋ ಮಗು! ನಾನು ಯಾಕೆ ಅಲ್ಲಿಗೆ ಅವರನ್ನು ಕರೆದುಕೊಂಡು ಹೋದೆನೋ! ನಾವು ಗದ್ದೆ ಬಯಲಿನ ಕೊನೆಗೆ ಹೋದೆವು. ಅದರಿಂದ ಮೇಲೆ ನನ್ನಪ್ಪನ ಸಣ್ಣದೊಂದು ಅಡಕೆ ತೋಟ. ಮೇಲೆ ದೊಡ್ಡ ಬೆಟ್ಟ. ಬೆಟ್ಟದ ಬುಡದಲ್ಲಿ ತುಂಬ ಏಲಕ್ಕಿ ಗಿಡ. ನನ್ನಪ್ಪ ಅದನ್ನೆಲ್ಲ ಅವರಿಗೆ ತೋರಿಸಿದ್ದರಂತೆ. ಆದರೆ ಮುಂದೆ ದಾರಿ ಸರಿ ಇಲ್ಲ, ಹೋಗುವುದು ಬೇಡ ಎಂದು ಮರಳಿದ್ದರಂತೆ. ಮೇಲೊಂದು ‘ಶಾಸ್ತಾವಿ’ನ ಸಣ್ಣ ಗುಡಿಯಿತ್ತು. ಅದು ಇಡೀ ಕಗ್ಗಲ್ಲಿನದೇ; ಮಾಡು ಕೂಡ ಹಾಸುಗಲ್ಲು. ವರ್ಷಕ್ಕೊಮ್ಮೆ ಅಲ್ಲಿ ಆರಾಧನೆ ಮಾಡುವುದಕ್ಕಾಗಿ ಸುಳ್ಯದಿಂದ ತಂತ್ರಿಗಳನ್ನು ನನ್ನಪ್ಪ ಕರೆಯಿಸುತ್ತಿದ್ದರು. ಬೇರೆ ದಿನಗಳಲ್ಲಿ ಅಲ್ಲಿ ಹೋಗುವವರು ಬಹಳ ಕಡಿಮೆ. ಆದರೆ ಅಲ್ಲೊಂದು ನಾಗಸಂಪಿಗೆ ಮರವಿದ್ದುದರಿಂದ ಅದರ ಹೂವಿಗಾಗಿ ನಾನು ಒಮ್ಮೊಮ್ಮೆ ಹೋಗುತ್ತಿದ್ದೆ. ನಾಗಸಂಪಿಗೆ ಹೂವೆಂದರೆ ನನಗೆ ಜೀವ. ಮಗು! ಈಗ ಕೂಡ ಎಲ್ಲಿಯಾದರೂ ಆ ಹೂ ಕಂಡರೆ ತೆಗೆದು ಮೂಸಿಹೋಗುತ್ತದೆ. ನನಗೆ ಹೂವಾಗದೆಂಬ ನೆನಪೇ ಆಗುವುದಿಲ್ಲ ಮಗು! ಏನು ಮಾಡಲಿ? ನನ್ನ ಹಣೆಬರಹ. ಸೂ! ‘ಹಬ್ಬ’ದ ಸಮಯದಲ್ಲಿ ನಾಗಸಂಪಿಗೆ ಹೂವಾಗುವುದಿಲ್ಲ. ಆದರೂ ಅಲ್ಲೆಲ್ಲ ನೋಡಬೇಕೆಂದು ‘ಅವರು’ ಹೇಳಿದುದರಿಂದ, ಮೇಲೆ ಕರೆದುಕೊಂಡು ಹೋದೆ. ಅವರಿಗೆ ಅಲ್ಲೆಲ್ಲ ನೋಡಿ ಬಹಳ ಸಂತೋಷವಾಯಿತು. ಅದು ಅಷ್ಟು ಚಂದದ ಸ್ಥಳ. ಒಂದೆಡೆ ಬೆತ್ತದ ‘ಹಿಂಡಿಲಿ’ನ ಎಡೆಯಿಂದ ತಿಳಿನೀರು ಅಡಕೆಯ ಸಿಂಗಾರದಂತೆ ಹಾರಿ ಬರುತ್ತಿತ್ತು. ಅದನ್ನು ನಾವಿಬ್ಬರೂ ಮುಟ್ಟಿ ಮುಟ್ಟಿ ಒಬ್ಬರೊಬ್ಬರ ಮುಖಕ್ಕೆ ಸಿಡಿಸಿಕೊಂಡವು. ಬೇಕಾದಷ್ಟು ಮಾತಾಡಿದೆವು. ನಾನು ಅವರೊಡನೆ ಅದಕ್ಕೆ ಮೊದಲು ಅಷ್ಟು ಮಾತಾಡಿದ್ದೇ ಇಲ್ಲ; ಮತ್ತೆಯೂ ಇಲ್ಲ! ಹೂಂ. ಗುಡಿಯ ಹಿಂದೆಲ್ಲ ನಾಗರಬೆತ್ತದ ಹೊದರು. ಅಲ್ಲಿಯ ಬೆತ್ತವೆಂದರೆ ಬಹಳ ಹೆಸರಿನದು. ಆದರೆ ‘ಶಾಸ್ತಾವು’ ಕಾರಣಿಕದ್ದು. ಆದುದರಿಂದ ಸಾಧಾರಣದವರೆಲ್ಲ ಅಲ್ಲಿ ಬೆತ್ತ ಕಡಿಯಲು ಹೆದರುತ್ತಿದ್ದರು. ಮಂತ್ರವಾದಿಗಳು ಬಂದು, ಪ್ರಾರ್ಥನೆ ಮಾಡಿ ಕಡಿಯಬೇಕು. ‘ಅವರಿ’ಗೆ ಇಂಥಾದ್ದರಲ್ಲೆಲ್ಲ ನಂಬಿಕೆಯೇ ಇಲ್ಲ. ಇಲ್ಲಿ ನನ್ನ ಮಾವನವರಿಗೂ ‘ಅವರಿ’ಗೂ ಅಂಥಾ ಸಂಗತಿಗಳಲ್ಲಿ ಯಾವಾಗಲೂ ತರ್ಕವಂತೆ; ನನ್ನತ್ತೆಯವರಿರುವಾಗ ಹೇಳುತ್ತಿದ್ದರು. ಯಾವಾಗಲೂ ಕುಂಪಿನಿಯವರನ್ನು ಹೊಗಳುವುದು. ಅಯ್ಯೋ! ಮೊದಲು ಗೊತ್ತಿದ್ದರೆ ಹಾಗೆ ಹೊಗಳುತ್ತಿದ್ದರೇ? ಪಾಪ! ತುರುಕರ ಹಾವಳಿಯನ್ನು ನಿಲ್ಲಿಸಿದವರೆಂದು ಕುಂಪಿನಿಯವರ ಮೇಲೆ ಭಕ್ತಿ. ಸೂ! ನಾವು ಗುಡಿಯ ಬಾಗಿಲಿಗೆ ಹೋದೆವು. ಅದಕ್ಕೆ ಬಾಗಿಲ ಪಡಿ ಇಲ್ಲ. ಒಳಗೆ ಶಾಸ್ತಾವಿನ ಮೂರ್ತಿ. ಇಣಿಕಿ ನೋಡಿದರು. ಯಾವ ಮಂತ್ರವಾದಿ ಯಾಕೆ ಕಡಿದಿಟ್ಟದ್ದೋ, ಒಂದು ನಾಗರಬೆತ್ತ ಬಿದ್ದಿತ್ತು. ಬೇಡ ಬೇಡ ಎಂದು ಎಷ್ಟು ಹೇಳಿದರೂ ಕೇಳದೆ ಕೈಹಾಕಿ ತೆಗೆದುಬಿಟ್ಟರು! ‘ನೋಡು, ಎಂಥಾ ಬೆತ್ತ! ಇದನ್ನು ಯಾರು ಬಿಟ್ಟಾರು? ಇದು ಕುಂಪಿನಿ ರಾಜ್ಯ; ಈಗ ಇಲ್ಲಿ ಕಾರಣಿಕವೂ ಇಲ್ಲ, ಏನೂ ಇಲ್ಲ’ ಎಂದು ಹೇಳಿ, ‘ಇಲ್ಲಿಗೆ ಬಂದದ್ದು ಸಾರ್ಥಕವಾಯಿತು. ಇನ್ನು ಹೋಗುವ’ ಎಂದು ಹೇಳಿ ಹೊರಟರು. ನಾನು ಹಿಂಬಾಲಿಸಿದೆ; ನನಗೆ ಮನಸ್ಸಿನಲ್ಲಿ ಆಗಲೇ ಒಂದು ‘ಕಳ್ಳ’ ನುಗ್ಗಿತ್ತು. ಆದರೆ ಗಂಡಸರು ನಮ್ಮ ಮಾತು ಕೇಳುತ್ತಾರೋ? ಬರುವಾಗ ನಾನು ಹೆಚ್ಚು ಮಾತಾಡಲಿಲ್ಲ. ಅವರು ಬೆತ್ತದ ಕುರಿತು ಹೇಳುತ್ತಲೇ ಇದ್ದರು. ಅವರು ಹೇಳಿದ್ದಕ್ಕೆ ಹುಂಗುಟ್ಟುತ್ತಾ ಬಂದೆ.
ನನ್ನಪ್ಪ ಜಗುಲಿಯಲ್ಲಿ ನಿಂತು ನಾವು ಬರುವುದನ್ನೇ ನೋಡುತ್ತಿದ್ದರು. ಅವರ ಮುಗುಳುನಗೆ ಕಂಡು ನನಗೆ ನಾಚಿಕೆಯಾಯಿತು. ನಾನು ಓಡಿಹೋಗಿ ‘ಕುರುಬಾಗಿಲ’ಲ್ಲಿ ಒಳನುಗ್ಗಿದೆ. ಚಿಕ್ಕಮ್ಮನ ಮೋರೆಯನ್ನು ನೋಡುವ ಧೈರ್ಯವೇ ನನಗಾಗಲಿಲ್ಲ. ನಾನು ಕೈಸಾಲೆಯ ಕತ್ತಲೆ ಮೂಲೆಯಲ್ಲಿ ನಿಂತುಕೊಂಡು ಹೊರಗಿನ ಮಾತನ್ನು ಕೇಳುತ್ತಿದ್ದೆ.
‘ಇದೆಲ್ಲಿಂದ ಬೆತ್ತ? ಈಗ ಕಡಿದ ಹಾಗಿಲ್ಲ’ ಎಂದರು ನನ್ನಪ್ಪ, ‘ಶಾಸ್ತಾವಿನ ಬಳಿಯಲ್ಲಿ ಬಿದ್ದಿತ್ತು. ಯಾರೋ ಪುಣ್ಯಾತ್ಮರು ಕಡಿದಿಟ್ಟಿದ್ದರು. ಬಿಡುವುದಕ್ಕೆ ಮನಸ್ಸು ಬರಲಿಲ್ಲ. ತೆಗೆದುಕೊಂಡೆ. ಇದರ ಮಚ್ಚೆ ನೋಡಿ! ಇದರ ಗಂಟುಗಳು ಎಷ್ಟು ಹತ್ತಿರ; ಒಂದಕ್ಕೊಂದು ಎಷ್ಟು ಸಮ! ಇಂಥಾ ಬೆತ್ತವನ್ನೇ ನಮ್ಮ ಪಟೇಲರು ಎಲ್ಲಿಂದಲೋ ಹೋದ ವರ್ಷ ತರಿಸಿದ್ದರು. ಐದು ರೂಪಾಯಿ ಕೊಟ್ಟರಂತೆ. ಅದಕ್ಕಿಂತ ಇದು ಒಂದು ಬಣ್ಣ ಮಿಗಿಲಾದೀತು ಹೊರತು ಕಮ್ಮಿಯಲ್ಲ. ಬೆಳ್ಳಿ ಕಟ್ಟಿಸಿದರೆ ಮುದ್ದು ಮುದ್ದಾಗಿ ಕಂಡೀತು. ಒಬ್ಬನಿಗೆ ಒಂದೇ ಹೊಡೆತ ಸಾಕು. ನೋಡಿ ಇದರ ಭಾರ!’ ಎಂದರು ‘ಅವರು’. ನನ್ನಪ್ಪ, ‘ನಿನಗೆ ಬೆತ್ತ ಬೇಕಾದರೆ ನಾನು ತರಿಸಿಕೊಡುತ್ತಿದ್ದೆ. ಅಲ್ಲಿರುವುದೆಲ್ಲ ಶಾಸ್ತಾವಿನ ಬೆತ್ತ. ತಂತ್ರಿಗಳಲ್ಲದೆ ನಾವದನ್ನು ಕುಡಿಯುವ ಕಟ್ಟಳೆ ಇಲ್ಲ, ಅಷ್ಟೆ’ ಎಂದರು. ‘ಏನು ಮಾವ? ನಿಮಗೆ ಭ್ರಾಂತೋ? ಕುಂಪಿನಿಯವರಿಗೆ ಈ ಶಂಕೆಯೆಲ್ಲ ಉಂಟೇ? ನೋಡಿ, ಈಗ ನಮ್ಮೂರಿಂದ ಮಂಗಳೂರಿಗೆ ಮಾರ್ಗ ಕಡಿಸಲು ತೊಡಗಿದ್ದಾರೆ. ಕಳೆದ ತಿಂಗಳಲ್ಲಿ ಏನಾಯಿತು ಗೊತ್ತುಂಟೋ? ನಮ್ಮ ಗ್ರಾಮದ ಭೂತಸ್ಥಾನದ ಬಾಗಿಲಲ್ಲಿ ಒಂದು ಅಶ್ವತ್ವದ ಕಟ್ಟೆ ಇತ್ತು. ಮರ ಬಹಳ ಮುದಿಯಾಗಿ ಹೋಗಿತ್ತು. ಅದರ ಬುಡದಲ್ಲಿ ಏಳೆಂಟು ನಾಗನ ಕಲ್ಲುಗಳು. ಬಯಲನ್ನು ಸೀಳಿ ರಸ್ತೆ ಬರುವಾಗ ಅದು ಅಡ್ಡ ಬಂತು. ಜನ ಯಾರೂ ಕಡಿಯಲಿಕ್ಕೆ ಒಪ್ಪಲಿಲ್ಲ. ಒಬ್ಬ ಬಿಳಿ ಮೋರೆಯವ ಬಂದ; ಒಬ್ಬ ಜಾತಿಕೆಟ್ಟ ಹೊಲೆಯನ ಕೈಯಲ್ಲಿ ಪೂರಾ ತೆಗೆಯಿಸಿಬಿಟ್ಟ! ಅವನಿಗೇನಾಯಿತು? ಹೊಲೆಯನಿಗೇನಾಯಿತು? ಹೇಳಿ! ಈ ಭ್ರಾಂತೆಲ್ಲ ಇಲ್ಲದಿದ್ದುದರಿಂದಲೇ ಕುಂಪಿನಿಯವರು ರಾಜ್ಯವನ್ನೆಲ್ಲ ಹಿಡಿದಿದ್ದಾರೆ’ ಎಂದು ‘ಅವರು’ ಹೇಳಿದ ಮೇಲೆ ನನ್ನಪ್ಪ ಹೆಚ್ಚೇನೂ ಆ ಕುರಿತು ಮಾತಾಡಲಿಲ್ಲ.
ಇದನ್ನು ಓದಿದ್ದೀರಾ?: ವಿ.ಜಿ. ಶ್ಯಾನಭಾಗರ ಕತೆ | ದೇವದಾಸಿ
”ಅವರಿಗೆ ಬೆತ್ತ ಸಿಕ್ಕಿದ ಸಂತೋಷ ಅಷ್ಟಿಷ್ಟಲ್ಲ. ಆ ದಿನ ಅದರ ತುದಿಗಳನ್ನು ನಯಗೊಳಿಸಿ, ನೋಡಿ ನೋಡಿ ಮೆಚ್ಚುವುದರಲ್ಲೇ ಸಂಜೆಯಾಯಿತು. ಮರುದಿನ ಬೆಳಗ್ಗೆ ನನ್ನಪ್ಪನನ್ನು ಕರೆದುಕೊಂಡು ಒಂದು ಹರದಾರಿ ದೂರದಲ್ಲಿದ್ದ ರಾಮಾಚಾರಿಯ ಮನೆಗೆ ಹೋಗಿ ಮಧ್ಯಾಹ್ನದೊಳಗೆ ಬೆಳ್ಳಿಯ ಕಟ್ಟ ಹಾಕಿಸಿಕೊಂಡು ಬಂದರು. ಅದು ತತ್ಕಾಲಕ್ಕೆ ಹಾಕಿದ ಕಟ್ಟು. ಇನ್ನೊಂದು ಬಾರಿ ಬಂದಾಗ ‘ಹುಲಿಮೋರೆಯಿಟ್ಟು’ ಕಟ್ಟಿ ಕೊಡಬೇಕೆಂದು ರಾಮಾಚಾರಿಗೆ ಅಪ್ಪನಿಂದ ಹೇಳಿಸಿದರಂತೆ! ಅವನೂ ಒಪ್ಪಿದನಂತೆ. ಅಲ್ಲಿಂದ ಬಂದು ಸ್ನಾನ ಮಾಡುವಾಗ ನನ್ನ ಹತ್ತಿರ ಹಾಗೆಲ್ಲ ಹೇಳಿದರು. ಆದರೆ ಹುಲಿಮೋರೆ… ಹುಲಿಮೋರೆ…! ಅಯ್ಯೋ! ಮನೆಯ ದಾರಿಯಲ್ಲಿಯೇ ಕಾಣುವಂತಾಯಿತು!” ಎಂದು ದೇವಜ್ಜಿ ನಡುಗು ದನಿಯಲ್ಲಿ ನುಡಿದು ಮೋರೆಗೆ ಸೆರಗು ಮುಚ್ಚಿಕೊಂಡರು.
ಸ್ವಲ್ಪ ಹೊತ್ತು ಸುಮ್ಮನಿದ್ದು ಏನೋ ಧ್ಯಾನಿಸಿ, ಮತ್ತೆ ಹೇಳಲು ತೊಡಗಿದರು- ”ಆಮೇಲೆ ಮೂರು ದಿನಗಳಲ್ಲಿ ‘ಹಬ್ಬ’ ಬಂತು. ಚಿಕ್ಕಮ್ಮ ‘ಅವರಿ’ಗೂ ನನಗೂ ಎಣ್ಣೆಯೆರೆದರು; ನನ್ನ ಹೆತ್ತ ತಾಯಂತೆಯೇ ನನ್ನ ಮೈಗೆ ಎಣ್ಣೆ ಹಚ್ಚಿದರು. ‘ಅವರಿ’ಗೆ ನನ್ನಪ್ಪನೇ ಎಣ್ಣೆ ಹಚ್ಚಿದರು. ಅಳಿಯನೆಂದರೆ ಅವರಿಗೆ ಮಗನ ಹಾಗೆ ಅಷ್ಟು ಪ್ರೀತಿಯಾಗಿಹೋಗಿತ್ತು. ಚಿಕ್ಕಮ್ಮ ನಮಗಿಬ್ಬರಿಗೂ ಒಟ್ಟಿಗೆ ನೀರು ಹಾಕಿದರು. ನನ್ನಪ್ಪನ ಮನೆಯ ಬಚ್ಚಲ ಮನೆಯೆಂದರೆ ಸಣ್ಣದಲ್ಲ; ಗುಳಿಯೂ ದೊಡ್ಡದು. ಯಾವಾಗಲೂ ಎರಡು ಹರವಿಗಳಲ್ಲಿ ನೀರು ಕಾಯುತ್ತಲೇ ಇರಬೇಕು. ಭಾರಿ ಸ್ನಾನವಾಯಿತು; ಸಮ್ಮಾನವಾಯಿತು. ಹಬ್ಬದ ಪಾಡ್ಯದ ದಿನ ಉಡುಗೊರೆಯಾಯಿತು. ಸೀರೆ ದೋತರಗಳಲ್ಲದೆ, ನನ್ನ ಕೈಗೆ ಹವಳದ ಕಟ್ಟಿನ ಬಳೆಗಳನ್ನೂ, ‘ಅವರ’ ಕೈಗೆ ಕೆಂಪು ಕಲ್ಲಿನ ಉಂಗುರವನ್ನೂ ಅಪ್ಪನೇ ತೊಡಿಸಿದರು. ಆದರೆ ಆ ಕೈಯನ್ನು ನೋಡುವ ಭಾಗ್ಯ ನನಗೆ ಮತ್ತೆ ಇದ್ದದ್ದು ಎಷ್ಟು ದಿನ ಮಗು?… ಮುಂದೆ ಹೇಳಲು ಕಷ್ಟವಾಗುತ್ತದೆ… ಗಂಟಲು ಬಿಗಿಯುತ್ತಿದೆ!… ಆದರೆ ಹೇಳತೊಡಗಿದರೆ ನಿಲ್ಲಿಸಲಿಕ್ಕಾಗುವುದಿಲ್ಲ ಮಗೂ!” ಎಂದು ಕಟ್ಟಿ ಕಟ್ಟಿ ಹೇಳಿ, ಮತ್ತೆ ಬಿಕ್ಕಿ ಬಿಕ್ಕಿ ಅತ್ತರು.
ಮುಂದೆ ದೇವಜ್ಜಿಗೆ ಹೇಳುವುದು ಅತಿ ಕಷ್ಟವಾಯಿತು. ಅವರ ಸ್ಥಿತಿಯನ್ನು ನೋಡಿ ನನಗೂ ಅಂತರಂಗದಲ್ಲಿ ಅತಿ ವೇದನೆಯಾಯಿತು. ಆದರೆ ಅವರಿಗೆ ಕೊನೆಯತನಕ ಹೇಳಿ ಮುಗಿಸದೆ ಇರಲು ಸಾಧ್ಯವಾಗುವಂತಿರಲಿಲ್ಲ. ನನಗಾದರೂ ಪೂರ್ಣವಾಗಿ ಕೇಳದೆ ಮನಸ್ಸು ನಿಲ್ಲುವಂತಿರಲಿಲ್ಲ. ಅವರು ತಡೆದು ತಡೆದು ಅತ್ತು ಅತ್ತು ಹೇಗೋ ಹೇಳಿದರು; ನಾನೂ ನನ್ನ ಕಣ್ಣೊರಸಿ ಅವರ ಕಣ್ಣೊರಸಿ, ಅವರ ಮಡಿಲಲ್ಲಿ ತಲೆಯಿಟ್ಟು ಹೇಗೋ ಕೇಳಿದೆ. ಆದುದರಿಂದ ಮುಂದಿನ ಕಥೆಯನ್ನು ಅವರು ಹೇಳಿದ ಸರಣಿಯಲ್ಲಿಯೇ ನಾನಿಂದು ಬರೆಯಲಾರೆ. ಅವರು ಹೇಳಿದುದೆಲ್ಲ ಅಲ್ಲಲ್ಲಿ ತುಂಡು ತುಂಡಾಗಿ, ಕೆಲವು ಮಾತುಗಳು ಅಸ್ಫುಟವಾಗಿ, ಕೆಲವೆಲ್ಲ ಕೈಬಾಯಿಯ ಸನ್ನೆಯಾಗಿ ಹೋಗುತ್ತಿತ್ತು. ಅದರ ತಾತ್ಪರ್ಯವನ್ನು ತೆಗೆದು ಇಲ್ಲಿ ಕೊಡುತ್ತೇನೆ. ಆದುದರಿಂದ ಮುಂದಿನ ಕಥಾಭಾಗದಲ್ಲಿ ಆ ನೊಂದೆದೆಯ ‘ಬೇವಿ’ನ ಪಾಕವು ಕಾಣದಿದ್ದರೆ ವಾಚಕರು ಮನ್ನಿಸಬೇಕು.
ದೀಪಾವಳಿ ಹಬ್ಬ ಕಳೆದು ಎರಡು ದಿನಗಳ ಮೇಲೆ ಆ ದಂಪತಿಗಳು ಮನೆಗೆ ಹೊರಟರು. ಜತೆಗೆ ಎರಡು ಆಳುಗಳನ್ನು ನಮ್ಮ ದೇವಜ್ಜಿಯ ತಂದೆ ಕಳುಹಿಸಿಕೊಟ್ಟರು. ಗಂಡಹೆಂಡಿರು ಚೆನ್ನಾಗಿ ಸಿಂಗರಿಸಿಕೊಂಡು, ಒಳಗೆ ದೇವರಿಗೆ ನಮಸ್ಕರಿಸಿ ಚಾವಡಿಯಲ್ಲಿ ಬಂದು ನಿಂತರು; ಅವರ ಅಂದವನ್ನು ಕಣ್ಣು ತುಂಬ ನೋಡುತ್ತಿದ್ದ ಹಿರಿಯರ ಕಾಲು ಹಿಡಿದು, ಕಿರಿಯರನ್ನು ಮುಟ್ಟಿ ತಟ್ಟಿ, ಮಕ್ಕಳನ್ನು ಎತ್ತಿ ಮುದ್ದಿಸಿ ಅಂಗಳಕ್ಕಿಳಿದರು. ಗಂಡ ಬೆತ್ತ ಹಿಡಿದು ಮುಂದೆ ನಡೆದರು; ಬೆನ್ನಿಗೆ, ಹೊಸಸೀರೆಯ ಬಸಬಸದೊಡನೆ ಹೆಂಡತಿ ಬಂದರು. ಎಡೆತಿಂಡಿಗಾಗಿ ಅವಲಕ್ಕಿ, ಕಾಯಿ, ಬೆಲ್ಲ, ಸಕ್ಕರೆ, ಸೀಯಾಳ ಮೊದಲಾದುವನ್ನೆಲ್ಲ ಆಳುಗಳು ಗಂಟು ಕಟ್ಟಿ ಹಿಡಿದುಕೊಂಡಿದ್ದರು. ಅಳಿಯನನ್ನೂ ಮಗಳನ್ನೂ ಕೊಟ್ಟು ಕಳುಹುವುದಕ್ಕಾಗಿ ಯಜಮಾನರು ಅರ್ಧ ಹರದಾರಿಯ ತನಕ, ರಾಜರಸ್ತೆಗೆ ದಾರಿ ಕೂಡುವವರೆಗೆ, ಮಾತಾಡುತ್ತಾ ಬಂದರು. ದಂಪತಿಗಳು ಅಲ್ಲಿ ಮತ್ತೊಮ್ಮೆ ಅವರ ಕಾಲು ಹಿಡಿದರು. ಅಳಿಯನನ್ನು ತಲೆ ಮುಟ್ಟಿ ಮಗಳನ್ನು ಮೈ ಮುಟ್ಟಿ ಅವರು ಹರಸಿ, ನಿಂತರು; ಇವರು ಮುಂದೆ ನಡೆದರು.
ಮೂರು ದಿನದ ಪಯಣ ಹಾಕಿ ಮನೆಗೆ ಮುಟ್ಟುವುದೆಂದು ನಿಶ್ಚಯವಾಗಿತ್ತು. ಅಲ್ಲಲ್ಲಿ ತಂಗುವುದಕ್ಕೆ ಸಂಬಂಧಿಕರ, ಪರಿಚಿತರ, ಉದಾರಬುದ್ದಿಯ ಶ್ರೀಮಂತರ ಮನೆಗಳಿದ್ದವು. ಮೊದಲನೆಯ ರಾತ್ರಿ ಗುಜ್ಜರ ಕಾಡು ಸರಳಾಯರ ಮನೆಯಲ್ಲಿ. ಆ ಮನೆಯವರೆಲ್ಲ ಅತಿಥಿಗಳಲ್ಲಿ ಅತ್ಯಂತ ಆದರವುಳ್ಳವರು. ಊಟ ಉಪಚಾರ ಬಹಳ ಚೆನ್ನಾಯಿತು. ಮರುದಿನ ಬೆಳಗ್ಗೆ ಹಾಗೆಯೇ ಹೊರಡಲು ಅವರು ಬಿಡಲಿಲ್ಲ; ಬೇಗ ಬೇಗ ಊಟ ಮಾಡಿಸಿ ಕಳುಹಿಸಿಕೊಟ್ಟರು. ಎರಡನೆಯ ರಾತ್ರಿ ಪಡುಮಲೆ ಶಂಭಯ್ಯನವರಲ್ಲಿ. ಅಲ್ಲಿಗೆ ರಸ್ತೆ ಬಿಟ್ಟು ಸ್ವಲ್ಪ ದೂರ ಹೋಗಬೇಕು. ಅವರಿಗೂ ದೇವಜ್ಜಿಯ ತಂದೆಯವರಿಗೂ ದೂರದ ನಂಟತನವಿತ್ತು. ಇವರು ಬಂದುದು ಅವರಿಗೆ ಬಹಳ ಸಂತೋಷಕರವಾಯಿತು; ಅತಿ ಪ್ರೀತಿಯಿಂದ ಆದರಿಸಿದರು. ಮಾತ್ರವಲ್ಲ, ಮರುದಿನ ಹೊರಡಲು ಬಿಡಲಿಲ್ಲ; ಔತಣದ ಊಟ ಮಾಡಿಸಿದರು. ಅದರ ಮರುದಿನ ಬೆಳಗ್ಗೆ ಸ್ನಾನ ಊಟ ತೀರಿದ ಮೇಲೆ ಬೀಳ್ಕೊಟ್ಟರು. ಮತ್ತೂ ಒಂದೂವರೆ ದಿನದ ಹಾದಿ ಉಳಿದಿತ್ತು. ಅದೂ ಕೂಡ ಒಳದಾರಿ; ರಸ್ತೆಯಿಲ್ಲ. ಅಂದಿನ ಇರುಳು ಹೇಗೋ ಕಲ್ಲೂರು ಅಪ್ಪಯ್ಯ ಶಾಸ್ತ್ರಿಗಳಲ್ಲಿ ಮುಟ್ಟಿದರು. ಅವರು ಬಡವರು; ಆದರೂ ದಾರಿಗರಿಗೆ ಸಂತೋಷದಿಂದ ಒಂದು ಚೆಂಬು ನೀರು ಕೊಡುವವರು. ರಾತ್ರಿಯ ಸಾರನ್ನದೂಟ ಬಲು ರುಚಿಯಾಗಿತ್ತು. ಶಾಸ್ತ್ರಿಗಳು ಊರಲ್ಲೆಲ್ಲ ಹೆಸರುಗೊಂಡ ವಿದ್ವಾಂಸರು. ಊಟವಾದ ಮೇಲೆ ಶ್ರೀಮದ್ರಾಮಾಯಣ(ಸಂಸ್ಕೃತ ವಾಲ್ಮೀಕಿ ರಾಮಾಯಣ)ದ ಅರಣ್ಯಕಾಂಡದ ಒಂದೆರಡು ಸರ್ಗಗಳನ್ನು ಓದಿ ಅರ್ಥ ಹೇಳಿದರು. ಅದು ಅತ್ಯಂತ ರಸವತ್ತಾಗಿ ಎದೆ ಕರಗಿಸಿತು. ಅನಂತರ ಒಂದು ನಿದ್ದೆ. ಕೋಳಿ ಕೂಗುವಾಗಲೇ ಎದ್ದು ಹೊರಟರು. ಸುಮಾರು ಹತ್ತು ಗಳಿಗೆ ಹೊತ್ತಿನವರೆಗೆ ಒಂದೇ ಸವನೆ ನಡೆದರು; ಗುಮ್ಮಪದವಿಗೆ ಬಂದರು. ಗುಮ್ಮಪದವು ದೊಡ್ಡ ಮೈದಾನು. ಉರಿಬಿಸಿಲಲ್ಲಿ ನಡೆಯುವುದು ಕಷ್ಟವಾಯಿತು. ಹೇಗೊ ಸ್ವಲ್ಪ ದೂರ ನಡೆದು ದೊಡ್ಡದೊಂದು ಆಲದ ಮರದ ಬುಡದಲ್ಲಿ ಕುಳಿತರು. ಸುಖವಾಗಿ ಗಾಳಿ ಬೀಸಿತು; ತಂಪಾಯಿತು. ಪಡುಮಲೆಯಿಂದ ಹೊರಡುವಾಗಲೂ ನಾಲ್ಕು ಸೀಯಾಳ ಕೊಟ್ಟಿದ್ದರಂತೆ. ಅವುಗಳೊಳಗೆ ಎರಡು ಉಳಿದಿದ್ದುವು. ಒಂದನ್ನು ಗಂಡಹೆಂಡಿರು ಕುಡಿದರು. ಮತ್ತೊಂದನ್ನು ಆಳುಗಳಿಗೆ ಕೊಟ್ಟರು. ಅವರು ಬೇಡವೆಂದರು; ಆದರೆ ನಮ್ಮ ದೇವಜ್ಜಿಯ ಗಂಡ ಒತ್ತಾಯಿಸಿದ್ದರಿಂದ ಹೇಗೊ ಕುಡಿದರು. ಆಳುಗಳು ವೀಳ್ಯ ಜಗಿಯುತ್ತಾ ಕುಳಿತಿದ್ದರು.
ಇದನ್ನು ಓದಿದ್ದೀರಾ?: ಕುಲಕರ್ಣಿ ಶ್ರೀನಿವಾಸರ ಕತೆ | ಹೊಸಬಾಯಿ
ಹೀಗೆ ಅವರು ವಿಶ್ರಮಿಸುತ್ತಿದ್ದಾಗ ದೂರದಲ್ಲಿ ನಾಲ್ಕಾರು ಜನ ಕುದುರೆ ಸವಾರಿ ಮಾಡುತ್ತಾ ಬರುತ್ತಿರುವುದು ಕಂಡಿತು. ದೇವಜ್ಜಿ ಆವರೆಗೆ ಅಂಥಾದ್ದನ್ನು ನೋಡಿರಲಿಲ್ಲವಂತೆ. ಅವರು ಆಶ್ಚರ್ಯ ಪಟ್ಟು ಕೈತೋರಿ ಗಂಡನೊಡನೆ ಕೇಳಿದರು. ಆಗ ಆಳುಗಳು ದಿಗಿಲಿನ ದನಿಯಲ್ಲಿ “ಸೋಜರರು! ಸೋಜರರು!” ಎಂದರು. ದೇವಜ್ಜಿ ನಡುಗಿತು. “ನಾವು ಮರದಡ್ಡದಲ್ಲಿ ಆಡಗುವ! ಅವರು ಕಂಡದ್ದನ್ನು ಎಳೆದುಕೊಂಡು ಹೋಗುತ್ತಾರೆ! ಹೋದವರ್ಷ ಹಾಲೇರಿಯಲ್ಲಿ ನನ್ನಕ್ಕನ ಮಗಳನ್ನು ನಡುರಸ್ತೆಯಲ್ಲಿಯೇ ಹಿಡಿದೆಳೆದರಂತೆ” ಎಂದು ಒಬ್ಬ ಹೇಳಿದ. ಇನ್ನೊಬ್ಬ ”ನನ್ನ ತಮ್ಮನ ಕಿವಿ ಹರಿದು ಒಂಟಿ ತೆಗೆದಿದ್ದಾರೆ! ಓಡಿದರೆ ಅಟ್ಟಿ ಹಿಡಿದು ಕೊಲ್ಲುತ್ತಾರೆ!” ಎಂದ. ದೇವಜ್ಜಿಗೆ ಕಂಗಾಲಾಯಿತು. ಆದರೆ ಅವರ ಗಂಡ ನಗಾಡಿದರಂತೆ. “ಏನು ಹೇಡಿಗಳೋ ನೀವು! ಬರೀ ಮೂಢರು! ಸುಮ್ಮನಿರಿ. ಅವರೇನು ಮನುಷ್ಯರಲ್ಲವೇ? ಅವರು ಕುಂಪಿನಿ ‘ಸೋಜರ’ರು! ಹಾಗೆಲ್ಲ ಸುಲಿಗೆ ಮಾಡಲು ಅವರು ಕಾಟಕಾಯಿಯವರಲ್ಲ. ನಮ್ಮೂರ ಸಂತೆಯ ಮೂರು ಕಾಸಿಗೊಂದರ ಅರಸುಗಳ ಕಾಟವನ್ನೆಲ್ಲ ನಿಲ್ಲಿಸಿಬಿಟ್ಟಿದ್ದಾರೆ. ನಮ್ಮೂರಲ್ಲಿ ಈಗ ರಾಮರಾಜ್ಯ! ನೋಡಿ, ಎಲ್ಲೆಲ್ಲಿಗೆ ರಸ್ತೆ ಕಡಿಸುತ್ತಿದ್ದಾರೆ! ಎಂಥಾ ಸಂಕ ಕಟ್ಟಿಸಿದ್ದಾರೆ! ಕಳ್ಳರನ್ನೆಲ್ಲ ಹಿಡಿದು ಜೈಲಿಗೆ ತಳ್ಳುತ್ತಾರೆ. ಅದಕ್ಕಾಗಿ ‘ಪುಲಿಸಿ’ನವರು ಕೆಂಪು ಪಗಡಿ ಇಟ್ಟುಕೊಂಡು ಹಳ್ಳಿ ಹಳ್ಳಿ ತಿರುಗುತ್ತಿದ್ದಾರೆ. ಕುಂಪಿನಿಯವರನ್ನು ದೇವರೇ ನಮ್ಮೂರಿಗೆ ಕಳುಹಿಸಿದ್ದು! ಅವರನ್ನು ಕಂಡರೆ ಎದ್ದು ನಿಂತು ಕೈ ಮುಗಿಯಬೇಕು!” ಎಂದರಂತೆ. ಆದರೆ ಆ ಎಳೆ ಹುಡುಗಿಗೆ ಧೈರ್ಯ ಹುಟ್ಟಲಿಲ್ಲ. ಅಲ್ಲದೆ ಅದಕ್ಕೆ ಮೊದಲಿನ ವರ್ಷ ಮಡಿಕೇರಿಯ ಬಳಿಯಲ್ಲಿ’ಸೋಜರ’ರು ಅನರ್ಥಗಳನ್ನು ಮಾಡಿದ್ದರೆಂದು ಅವರ ಚಿಕ್ಕಮ್ಮ ಸುದ್ದಿ ಹೇಳಿದ್ದು ಅವರ ನೆನಪಿಗೆ ಬಂತು. ಅವರು ಏನು ಮಾಡುವುದೆಂದು ತಿಳಿಯದೆ ಕಣ್ಣಗಲಿಸಿ ಗಂಡನ ಮುಖವನ್ನು ನೋಡಿ ಕಣ್ಣೀರು ತುಂಬಿ ನಡುನಡುಗಿದರು. ಆ ವಿಹ್ವಲತೆಯನ್ನು ಕಂಡು ಗಂಡನಿಗೆ ಕರುಣೆ ಹುಟ್ಟಿತೆಂದು ತೋರುತ್ತದೆ. ಅವರು ”ನೀನು ಬೇಕಾದರೆ ಈ ಮರದ ಮೇಲೆ ಹತ್ತಿ ಕುಳಿತುಕೋ. ನೋಡು, ಅವರೆಂತಹ ದೇವತಾ ಮನುಷ್ಯರೆಂದು!” ಎಂದು ಹೇಳಿ ಹೆಂಡತಿಯನ್ನು ಹೆಗಲೇರಿಸಿದರು. ಮರ ಹತ್ತಿ ಅಭ್ಯಾಸವಿಲ್ಲದಿದ್ದರೂ ಹುಡುಗಿಯಾಗಿದ್ದ ದೇವಜ್ಜಿ ಕೊಂಬೆಯನ್ನು ಹಿಡಿದು ಥಟ್ಟನೆ ಮೇಲೇರಿ ಕುಳಿತರು. ಗಂಡ ಬೆತ್ತ ಹಿಡಿದುಕೊಂಡು ಹತ್ತು ಮಾರು ಮುಂದೆ ನಡೆದು ದಾರಿಯ ಬಳಿಯಲ್ಲಿ ನೆಟ್ಟಗೆ ನಿಂತುಕೊಂಡರು. ಆಳುಗಳು ಮರದ ಬುಡದಲ್ಲೇ ಕಣ್ಣು ಕಣ್ಣು ಬಿಡುತ್ತಿದ್ದರು.

“ನಾನು ಮರದಲ್ಲಿ ಕುಳಿತು ಎಲ್ಲಾ ನೋಡುತ್ತಿದ್ದೆ. ಮಗೂ! ಅಯ್ಯೋ, ಅದನ್ನು ನೋಡಿದ ಕಣ್ಣು ಇನ್ನೂ ಮುಚ್ಚಲಿಲ್ಲವಲ್ಲಾ!” ಎಂದು ದೇವಜ್ಜಿ ಕೊರಗಿದ ದನಿ ನನ್ನೆದೆಯನ್ನು ಈಗಲೂ ಕೊರೆಯುತ್ತಿದೆ.
ಇದನ್ನು ಓದಿದ್ದೀರಾ?: ಎ.ಆರ್. ಕೃಷ್ಣಶಾಸ್ತ್ರಿ ಅವರ ಕತೆ | ಬಂಗಲಿಯ ವಾಸ
‘ಸೋಜರ’ರು ಕುಣಿಯುವ ಕುದುರೆಗಳಲ್ಲಿ ಬರುತ್ತಿದ್ದರು. ಭಾರಿ ದೊಡ್ಡ ಕುದುರೆಗಳು! ಅವರ ‘ಕೊಡೆ ಟೊಪ್ಪಿ’ ಹಣೆಯರ್ಧವನ್ನು ಮುಚ್ಚಿತ್ತು. ಮೈಗೆಲ್ಲ ಕೆಂಪಂಗಿ; ಅಂಗಿಯಲ್ಲಿ ಅಲ್ಲಲ್ಲಿ ಜೋಲಾಡುವ ‘ಚೌರಿ’, ಮುಖ ಕೆಂಪು ಕೆಂಪು. ಕೆಲವರಿಗೆ ಮೀಸೆಯಿಲ್ಲ. ಒಬ್ಬನಿಗೆ ಕೆಂಚು ಮೀಸೆ. ಅವನ ಮೋರೆಯೋ! ಹುಲಿಮೋರೆಯ ಹಾಗಿತ್ತು! ಮರದ ಮೇಲಿದ್ದ ಆ ಎಳೆ ಹುಡುಗಿಗೆ ಮೆಯ್ ಜುಂ ಜುಂ ಎಂದಿತು. ಅವರ ಗಂಡ ನಿಂತಲ್ಲಿಗೆ ಸರಿಯಾಗಿ ಸೋಜರರು ಬಂದರು. ‘ಇವರು’ ಹರ್ಷಗೊಂಡು ತಲೆಬಾಗಿ ಕೈ ಮುಗಿದರು. ಕೆಂಪು ಮೀಸೆಯ ಸೋಜರನು ಏನೋ ಸನ್ನೆ ಮಾಡಿದ. ಎಲ್ಲ ಕುದುರೆಗಳೂ ನಿಂತವು. ಅವನು ನಗುತ್ತ ಉಳಿದವರಿಗೆ ಏನೋ ಹೇಳಿದ. ಎಲ್ಲರೂ ಸಂತೋಷಪಟ್ಟಂತೆ ಕಂಡಿತು. ಕೂಡಲೆ ಹುಲಿಮೋರೆಯವನು ಕೆಳಗಿಳಿದ. ಬಾಯಲ್ಲಿ ಏನೋ ಹೇಳುತ್ತ ‘ಇವರ’ ಬಳಿಗೆ ಬಂದ. ಬೆತ್ತಕ್ಕೆ ಕೈತೋರಿ ‘ಕೊಡು’ ಎಂದು ಸನ್ನೆ ಮಾಡಿದ. ‘ಇವರು’ ‘ಊಂಹುಂ’ ಎಂದು ಹೇಳಿ ಹಿಂದೆ ಸರಿದರು. ಅವನು ಕಣ್ಣು ಕೆರಳಿಸಿಕೊಂಡು ಮುಂದೆ ಬಂದು ‘ರಾಶ್ಕಾ!’ ಎಂದು ದಟ್ಟಿಸಿ ಬೆತ್ತಕ್ಕೆ ಕೈ ಹಾಕಿದ! ಇವರು ಕೈ ಬಿಡಲಿಲ್ಲ; “ಇದೆಂಥಾ ನ್ಯಾಯ?” ಎಂದು ಹೇಳಿ ಹಿಂದಕ್ಕೆಳೆದರು! ಮರದಲ್ಲಿದ್ದ ದೇವಜ್ಜಿಗೆ ಕೆಳಗೆ ಬೀಳುವಂತಾಯಿತು. ಬೊಬ್ಬೆ ಹೊಡೆಯಲಿದ್ದ ಬಾಯಿ ತೆರೆದಲ್ಲಿಯೇ ಕಟ್ಟಿಹೋಯಿತು. ಆ ಸೋಜರನು ಕಾಲೆತ್ತಿ ಇವರ ಹೊಟ್ಟೆಗೆ ಒದೆದನು! ಇವರು ಬಿದ್ದರು. ಬೀಳುವಾಗಲೂ ಬೆತ್ತ ಕೈಯಲ್ಲಿಯೇ ಇತ್ತು. “ಅಯ್ಯೋ, ಕುಂಪಿನಿ ರಾಕ್ಷಸಾ! ಅಯ್ಯೋ! ದೇವ…” ಎಂದು ಮುಂದೆ ಹೇಳುವಷ್ಟರೊಳಗೆ, ಅವನು ಕೊರಳೊತ್ತಿ ಹಿಡಿದ. ಕೈಯಿಂದ ಬೆತ್ತ ಸಡಿಲಿತು; ಎಳೆದುಕೊಂಡ. ಅಷ್ಟರಲ್ಲಿ ಇವರು ತಲೆಯೆತ್ತಿದರು. ಕೂಡಲೇ ಅದೇ ನಾಗರಬೆತ್ತದಲ್ಲಿ ಒಂದು ಹೊಡೆದ. ತಲೆಯೊಡೆದು ಹೋಯಿತು! ರಕ್ತ ದಿಳಿ ದಿಳಿ ಎಂದಿಳಿಯಿತು! ದೇವಜ್ಜಿಗೆ ಹಿಡಿದ ಕವಲುಗೊಂಬೆಯಿಂದ ಕೈಬಿಡಲೂ ಚೈತನ್ಯವಿರಲಿಲ್ಲ! ಆ ರಾಕ್ಷಸನು “ಹಹ್ಹಾ” ಎಂದು ನಗಾಡಿ, ಮುಖ ತಿರುಗಿಸಿ ಬೆತ್ತವನ್ನು ನೋಡುತ್ತಾ ‘ರಾಶ್ಕಾ, ರಾಶ್ಕಾ’ ಎಂದು ಒದರುತ್ತಾ ಕುದುರೆಯ ಬಳಿಗೆ ಹೋಗಿ ಏರಿದನು. ಎಲ್ಲರೂ ಪಿಶಾಚಗಳಂತೆ ನಕ್ಕರು, ಕೆನೆದರು; ಕುದುರೆ ಹಾರಿಸಿಕೊಂಡು ಎತ್ತಲೋ ಹೋದರು.
ಅವರು ಕಣ್ಮರೆಯಾದೊಡನೆ ದೇವಜ್ಜಿ, ತಲೆತಿರುಗಿ ಕೈಬಿಟ್ಟರು; ಮರದ ಅಡ್ಡದಲ್ಲಿ ಅಡಗಿ ನಿಂತಿದ್ದ ಆಳುಗಳಲ್ಲಿ ಒಬ್ಬನು ಕಂಡು ಓಡಿ ಬಂದು, ಕೆಳಗೆ ಬೀಳುವುದಕ್ಕೆ ಮೊದಲೇ ಹಿಡಿದುಕೊಂಡ. ಅಷ್ಟರಲ್ಲಿ ಇನ್ನೊಬ್ಬನೂ ಬಂದ; ಇಬ್ಬರೂ ಕೂಡಿ ಕೆಳಗಿಳಿಸಿದರು. ದೇವಜ್ಜಿಗೆ ಬೋಧ ತಪ್ಪಿಹೋಗಿತ್ತು. ಅರ್ಧ ಗಳಿಗೆಯ ಅನಂತರ ಬೋಧ ಬಂತಂತೆ. “ಯಾಕೆ ಬಂತೋ!” ಎಂದು ದೇವಜ್ಜಿ ನನ್ನೊಡನೆ ಹೇಳಿ ಹಂಬಲಿಸಿ ಅತ್ತರು. ಅಲ್ಲಿ ಬಿದ್ದ ದೇಹದ ಬಳಿಗೆ ಹೋಗಿ ನೋಡಿದರು, ಮುಟ್ಟಿದರು. ಏನು ಪ್ರಯೋಜನ? ಎಲ್ಲ ಯಾವಾಗಲೋ ಮುಗಿದುಹೋಗಿತ್ತು. ಆಯಿತು, ಮುಂದೇನು ಮಾಡುವುದು? ಹಿಂದೆ ತಂದೆ ಮನೆಗೆ ಹೋಗಲು ಎರಡೂವರೆ ದಿನಗಳ ದಾರಿ ಇದೆ. ಮಾವನ ಮನೆಗೆ-ಅದು ಮಾವನ ಮನೆಯೇ ಸರಿ; ಗಂಡನಮನೆ ಇನ್ನೆಲ್ಲಿ? -ಅರ್ಧ ದಿನದ ದಾರಿ. ದಾರಿ ತನಗೆ ಗೊತ್ತಿಲ್ಲ; ಆಳುಗಳಿಗೆ ಮೊದಲೆರಡು ಬಾರಿ ನಡೆದು ಬಂದವರಾದುದರಿಂದ, ಗೊತ್ತಿತ್ತು. ಮಾತ್ರವಲ್ಲ; ಯಾವಾಗ ತನ್ನನ್ನು ಈ ಮನೆಗೆ ಮದುವೆಯಾಯಿತೋ, ತಂದೆಯ ಮನೆಗೆ ತಾನು ಹೊರಗೆ. ಆಳುಗಳು ಹಿಡಿದುಕೊಂಡಿದ್ದ ಗಂಟಿನಿಂದ ಮಾಸಿದ ಸೀರೆಯೊಂದನ್ನು ತೆಗೆದಿಟ್ಟರು; ಅವರು ಉಟ್ಟಿದ್ದ ಹದಿನಾರು ಮೊಳದ ಹೊಸ ಸೀರೆಯನ್ನು ಆಳುಗಳು ಆ ದೇಹಕ್ಕೆ ಸುತ್ತಿದರು. ಯಾವುದೋ ಒಂದು ಮರದ ಕೊಂಬೆಯೊಂದನ್ನು ಹೇಗೊ ಕಡಿದು ತಂದು ಅದಕ್ಕೆ ಬಿಗಿಯಲಾಯಿತು. ಆಳುಗಳಿಬ್ಬರೂ ಅದಕ್ಕೆ ಹೆಗಲು ಕೊಟ್ಟರು. ಹೊರಲಾರದ ಗಂಟುಮೂಟೆಗಳನ್ನು ಅಲ್ಲೇ ಬಿಸಾಡಿದರು. ಪತಿಯ ದೇಹವನ್ನು ಹಿಂಬಾಲಿಸಿ ಸತಿ ನಡೆದರು. ಎರಡು ಗಳಿಗೆ ಇರುಳಾಗುವಾಗ ಹೇಗೊ ಮನೆಯಂಗಳದಲ್ಲಿ ಬಂದು ಬಿದ್ದರು.
ಇದನ್ನು ಓದಿದ್ದೀರಾ?: ‘ಶ್ರೀ ಸ್ವಾಮಿ’ಯವರ ಕತೆ | ಬೀಬೀ ನಾಚ್ಚಿಯಾರ್
ಮುಂದಿನ ವೃತ್ತಾಂತವನ್ನು ಹೇಳುವುದೇನು, ಕೇಳುವುದೇನು? ಆ ದಿನ ದೇವಜ್ಜಿ ಹೇಳಲೂ ಇಲ್ಲ. ಹೇಳೆಂದು ನಾನು ಕೇಳಲೂ ಇಲ್ಲ. ಅವರು ಮಾತು ಮುಗಿಸಿ ಧ್ಯಾನಿಸುತ್ತ ಕುಳಿತರು; ನಾನು ಅವರ ಮಡಿಲಲ್ಲಿ ಮೊಗವನ್ನು ಮುಚ್ಚಿಟ್ಟು ಬಹಳ ಹೊತ್ತು ಹಾಗೇ ಮಲಗಿದೆ. ಆದರೆ ಇನ್ನೊಂದು ದಿನ ಹೀಗೆ ಯಾವುದೋ ಒಂದು ಪ್ರಸ್ತಾವದಲ್ಲಿ, ಅವರು ತಮ್ಮ ಅತ್ತೆಯವರನ್ನು ಬಹಳ ಕೊಂಡಾಡಿದರು. ತಮ್ಮ ಹೊಟ್ಟೆಯ ಮಗಳಂತೆಯೇ ಸೊಸೆಯನ್ನವರು ನೋಡಿಕೊಳ್ಳುತ್ತಿದ್ದರಂತೆ. ಯಾರು ಏನೆಂದರೂ ಸೊಸೆಯ ತಲೆ ಕೂದಲನ್ನು ಉಳಿಸಿಕೊಂಡರಂತೆ; ”ಅಷ್ಟಾದರೂ ನನಗೆ ನೋಡಲು ಉಳಿಯಲಿ!” ಎಂದು ಮರುಗಿದರಂತೆ. ಯಾವಾಗಲೂ ತಮ್ಮ ಜತೆಯಲ್ಲಿಯೇ ಮಲಗಿಸಿಕೊಂಡು, ”ನೀನೇ ನನ್ನ ಹಿರಿಯ ಮಗ!” ಎಂದು ಹೇಳಿ ಕಣ್ಣೀರು ಹಾಕುತ್ತಿದ್ದರಂತೆ. ಇದನ್ನೆಲ್ಲ ದೇವಜ್ಜಿ ನನ್ನೊಡನೆ ಹೇಳಿ ಆ ದಿನವೂ ಕಣ್ಣೀರು ತುಂಬಿದರು. ನನ್ನ ಕಣ್ಣು ತುಂಬಿ ಬಂತೆಂದು ಬೇರೆ ಹೇಳಬೇಕಾಗಿಲ್ಲ. ದೇವಜ್ಜಿಗೂ ನನಗೂ ಹಾರ್ದಿಕವಾದ ಯಾವುದೋ ಒಂದು ಬಾಂಧವ್ಯ ನನ್ನ ಮುದ್ದು ಬೆತ್ತ ಮುರಿದ ಮರುದಿನದಿಂದ ನೆಲೆಗೊಂಡುಹೋಗಿತ್ತು. ಅವರೀಗ ಕಣ್ಮರೆಯಾದರೂ ಅದು ಹಾಗೆಯೇ ಉಳಿದಿದೆ.
(ಕೃಪೆ: ಮಲ್ಲಿಗೆ ಮಾಸಪತ್ರಿಕೆ; ‘ಪಳಮೆಗಳು’, ವ್ಯಾಸ ಪ್ರಕಾಶನ, ಉಡುಪಿ, 1947)

ಸೇಡಿಯಾಪು ಕೃಷ್ಣಭಟ್ಟರ ‘ನಾಗರ ಬೆತ್ತ’
ಸೇಡಿಯಾಪು ಕೃಷ್ಣಭಟ್ಟರು (1902-1996) ದಕ್ಷಿಣ ಕನ್ನಡ ಜಿಲ್ಲೆಯ ಎರಡನೆಯ ಪೀಳಿಗೆಯ ಬರಹಗಾರರಲ್ಲಿ ಒಬ್ಬರು. ವಿದ್ವಾಂಸರೆಂದು ಅವರಿಗೆ ಸಾಕಷ್ಟು ಮನ್ನಣೆ ಬಂದಿದೆ. ನಾಲ್ಕು ಕಥೆಗಳನ್ನು ಒಳಗೊಂಡ ಇವರ ಒಂದೇ ಒಂದು ಸಂಕಲನ “ಪಳಮೆಗಳು” ಎಂಬ ಹೆಸರಿನಿಂದ ಪ್ರಕಟವಾಗಿದೆ (1947). ಈಚೆಗೆ ಇನ್ನೆರಡು ಕಥನಗಳು ಸೇರಿದ ಅದರ ಒಂಬತನೆಯ ಮುದ್ರಣ ಪ್ರಕಟವಾಗಿದೆ (1979). ಬಹುಶಃ ಶ್ರೀನಿವಾಸರ ಮೊದಲ ಕಥಾಸಂಕಲನವೊಂದನ್ನು ಬಿಟ್ಟರೆ, ಕನ್ನಡದಲ್ಲಿ ಇಷ್ಟು ಪುನರ್ಮುದ್ರಣಗಳನ್ನು ಕಂಡ ಕಥಾಸಂಗ್ರಹ ಇನ್ನೊಂದಿಲ್ಲ. ವಿಮರ್ಶೆಯ ದೃಷ್ಟಿಯಿಂದಲೂ ಕುರ್ತಕೋಟಿ (‘ಯುಗಧರ್ಮ ಹಾಗೂ ಸಾಹಿತ್ಯದರ್ಶನ’, ಪುಟ: 161), ಅಮೃತ ಸೋಮೇಶ್ವರ (‘ಒಸಗೆ’), ಎಂ.ರಾಮಚಂದ್ರ (‘ಸೇಡಿಯಾಪು ಕೃಷ್ಣಭಟ್ಟರು’) ಮೊದಲಾದವರು ಕೃಷ್ಣಭಟ್ಟರ ಕಥೆಗಳನ್ನು ಗಮನಕ್ಕೆ ತೆಗೆದುಕೊಂಡಿದ್ದಾರೆ. ಆದರೂ ಅವರ ಕಥೆಗಳು ದಕ್ಷಿಣ ಕನ್ನಡದ ಹೊರಗೆ ಹೆಚ್ಚು ಪ್ರಚಾರಕ್ಕೆ ಬಂದಿಲ್ಲ.
“ಪಳಮೆಗಳು” ಸಂಕಲನಕ್ಕೆ ಈಚೆಗೆ ಸೇರಿಸಿರುವ ‘ಮಹಾರಾಣಿ ಲಕ್ಷ್ಮೀಬಾಯಿ’ ಮತ್ತು ‘ಶಕುಂತಲೆ’ಗಳು ಆಧುನಿಕ ಅರ್ಥದಲ್ಲಿ ಸಣ್ಣಕಥೆಗಳಲ್ಲ. ಮೊದಲಿನ ನಾಲ್ಕು ಕಥೆಗಳಲ್ಲಿ ಮಾತ್ರ ಕೃಷ್ಣಭಟ್ಟರ ಬರವಣಿಗೆಯ ವೈಶಿಷ್ಟ್ಯ ಎದ್ದು ಕಾಣುತ್ತದೆ. ಸಂಕಲನದ ಹೆಸರೇ ಸೂಚಿಸುವಂತೆ ಈ ನಾಲ್ಕೂ ಕಥೆಗಳ ವಸ್ತು ಹಳೆಯವು. ಕುರ್ತಕೋಟಿಯವರು ಸೂಚಿಸಿರುವಂತೆ ವಡ್ಡಾರಾಧನೆಯ ಕಥೆಗಳಲ್ಲಿ ಇವುಗಳನ್ನು ಸುಲಭವಾಗಿ ಸೇರಿಸಿ ಬಿಡಬಹುದು. ಈ ಕಥೆಗಳನ್ನು ಕೂಡ ಸಣ್ಣ ಕಥೆ ಎಂಬ ಹೆಸರಿನಿಂದ ಕರೆಯಬೇಕೋ-ಬಾರದೋ ಎಂಬ ಸಂಶಯವನ್ನು ಲೇಖಕರೇ ವ್ಯಕ್ತಪಡಿಸಿದ್ದಾರೆ. ವಸ್ತು ಮತ್ತು ಭಾಷೆಗಳ ದೃಷ್ಟಿಯಿಂದ ಈ ಕಥೆಗಳು ಪಳಮೆಗಳಾದರೂ ಅವಕ್ಕೆ ಆಧುನಿಕ ಸಣ್ಣಕಥೆಗಳ ಸ್ವರೂಪ ಇಲ್ಲದೆ ಇಲ್ಲ. ‘ನಾಗರ ಬೆತ್ತ’, ‘ಚೆನ್ನೆಮಣೆ’ಗಳನ್ನು ಸಣ್ಣಕಥೆಗಳ ಉತ್ತಮ ಉದಾಹರಣೆಗಳೆಂದು ಖಂಡಿತ ಹೆಸರಿಸಬಹುದು.
ಈ ಕಥೆಗಳಲ್ಲಿ ಕೃಷ್ಣಭಟ್ಟರು ಅಳಿದುಹೋದ ಜೀವನ ಕ್ರಮವೊಂದನ್ನು ಪುನರ್ರಚಿಸಿದ್ದಾರೆ. ಆ ಜೀವನ ಕ್ರಮಕ್ಕೆ ಸಂಬಂಧಿಸಿದ ಕಾಲ, ಸಂಸ್ಕೃತಿ, ನಂಬಿಕೆ, ಮೌಲ್ಯಗಳು ಅವಕ್ಕೆ ತಕ್ಕದಾದ ಭಾಷೆಯಲ್ಲಿಯೇ ಪ್ರಕಟವಾಗಿವೆ. ‘ಚಿನ್ನದ ಚೇಳು’, ‘ಧರ್ಮಮ್ಮ’ಗಳಲ್ಲಿ ಉದ್ದೇಶ ಇಷ್ಟಕ್ಕೇ ಸೀಮಿತವಾಗಿದ್ದು, ಎರಡೂ ದೃಷ್ಟಾಂತಗಳಂತಿವೆ. ಒಂದು ದೃಷ್ಟಿಯಿಂದ ನಮ್ಮ ಹಳೆಯ ದೇಶೀಯ ಕಥನ ಪರಂಪರೆಯನ್ನು ಮುಂದುವರಿಸಿಕೊಂಡು ಬರುವ ಪ್ರಯತ್ನ ಇದೆಂದು ಹೇಳಬಹುದು. ‘ಚೆನ್ನೆಮಣೆ’, ‘ನಾಗರ ಬೆತ್ತ’ಗಳು ಮಾತ್ರ ಇದೇ ಪರಂಪರೆಯ ಆಧುನಿಕವಾದ ರೂಪಗಳಾಗಿವೆ. ನಮ್ಮ ಪ್ರಾಚೀನ ಕಥನ ಪರಂಪರೆಯನ್ನು ಇಂದಿನ ಉದ್ದೇಶಗಳಿಗಾಗಿ ಎಷ್ಟರಮಟ್ಟಿಗೆ ಉಳಿಸಿಕೊಳ್ಳಲು ಸಾಧ್ಯ ಎಂಬ ಪ್ರಶ್ನೆಯನ್ನು ಈ ಕಥೆಗಳು ಎತ್ತುತ್ತವೆ.
‘ಚೆನ್ನೆಮಣೆ’ ಮತ್ತು ‘ನಾಗರ ಬೆತ್ತ’ಗಳ ಕಥನ ತಂತ್ರ ಹೆಚ್ಚು ಕಡಿಮೆ ಒಂದೇ ರೀತಿಯದಾಗಿದೆ. ಎರಡೂ ಕಥೆಗಳಲ್ಲಿ ಇಂದಿನ ಹಾಗೂ ಅಂದಿನ ಕಾಲಮಾನಗಳೆರಡರ ಭಿನ್ನ ಸ್ತರಗಳಿವೆ. ಎರಡರಲ್ಲೂ ಇಂದಿನ ಯಾವುದೋ ಒಂದು ಮಣೆಯೋ, ಬೆತ್ತವೋ ಹಿಂದಿನ ಕಾಲದ ಕಥೆಗಳಿಗೆ ಪ್ರೇರಣೆಯನ್ನೊದಗಿಸುತ್ತದೆ. ‘ಚೆನ್ನಮಣೆ’ಯಲ್ಲಿ ಇಂದಿನ ಮತ್ತು ಅಂದಿನ ಕಾಲಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಯಾಕೆಂದರೆ ಅಂದಿನ ನೀಲಮ್ಮ ಇಂದಿಗೂ ಅದೃಶ್ಯಳಾಗಿ ಬಂದು ಚೆನ್ನೆಯಾಡುವ ಪವಾಡ ನಡೆಯುತ್ತದೆ. ‘ನಾಗರ ಬೆತ್ತ’ದಲ್ಲಿ ಮಾತ್ರ ಹಿಂದಿನ ಮತ್ತು ಇಂದಿನ ಕಾಲಗಳು ಬೇರೆಯಾಗಿದ್ದು, ಚಿಕ್ಕ ಮಗು ತರುವ ಬೆತ್ತವೊಂದು ದೇವಜ್ಜಿಯ ಬದುಕಿನ ಯಾತನೆಯ ಕಥೆಯನ್ನು ಬಿಚ್ಚಿಹಾಕುತ್ತದೆ. ಈ ಎರಡೂ ಕಥೆಗಳಲ್ಲೂ ಬಾಣನ ಕಾದಂಬರೀ ಕಥೆಯಲ್ಲಿಯಂತೆ ಕಥೆಯಲ್ಲಿ ಕಥೆ ಹೇಳುವ, ಆಗಾಗ ನಿರೂಪಕರನ್ನು ಬದಲಿಸುವ (ವಿಶೇಷವಾಗಿ ‘ನಾಗರ ಬೆತ್ತ’ದಲ್ಲಿ) ತಂತ್ರವನ್ನು ಬಳಸಲಾಗಿದೆ. ಹೀಗೂ ಈ ಕಥೆಗಳು ಪ್ರಾಚೀನ ಭಾರತೀಯ ಕಥಾ ಪರಂಪರೆಯ ಕಡೆಗೆ ಮುಖಮಾಡಿವೆ.
‘ನಾಗರ ಬೆತ್ತ’ ಉತ್ತಮಪುರುಷ ನಿರೂಪಣೆಯ ಕಥೆ. ಒಬ್ಬ ಹುಡುಗ ತನ್ನ ಬಗೆಗೇ ಹೇಳಿಕೊಳ್ಳುತ್ತಿದ್ದಂತೆ ಕಥೆ ಆರಂಭವಾಗುತ್ತದೆ. ಹುಡುಗನ ಬದುಕಿನ ಲವಲವಿಕೆಯ ಪ್ರಪಂಚ ಅವನ ಉತ್ಸಾಹ, ಮುಗ್ಧ ಕುತೂಹಲಗಳೊಡನೆ ಇಲ್ಲಿ ಪ್ರಕಟವಾಗುತ್ತದೆ. ಅವನನ್ನು ಪ್ರೀತಿಸುವ ಮಾವ, ಅತ್ತೆ, ಲಿಂಗಯ್ಯ ಮೊದಲಾದವರು ಅವನ ಸುತ್ತ ವಾತ್ಸಲ್ಯದ ಪರಿಸರವನ್ನು ನಿರ್ಮಿಸುತ್ತಾರೆ. ತನ್ನ ಊರಿನಿಂದ ಮಾವನ ಮನೆಗೆ ಬಂದು ಸುಂದರವಾದ ನಾಗರ ಬೆತ್ತದೊಂದಿಗೆ ತಿರುಗಿ ತನ್ನ ಮನೆಗೆ ಬರುವವರೆಗಿನ ಸನ್ನಿವೇಶವೆಲ್ಲ ಉತ್ಸಾಹ-ಸಡಗರದಿಂದ ತುಂಬಿದ್ದು.
ಅವನ ಮನೆಯಲ್ಲೂ ಅವನನ್ನು ಪ್ರೀತಿಸುವ ಜನ ಇದ್ದಾರೆ. ತಾಯಿ, ಅಜ್ಜ, ದೇವಜ್ಜಿ ಎಲ್ಲರೂ ಅವನನ್ನು ಪ್ರೀತಿಸುವವರೇ. ಆದರೆ ತಿರುಗಿ ತನ್ನ ಮನೆಗೆ ಬಂದೊಡನೆ ಅವನು ಬೇರೊಂದು ಬಗೆಯ ಸನ್ನಿವೇಶವನ್ನೇ ಎದುರಿಸಬೇಕಾಗುತ್ತದೆ. ಅಜ್ಜ ಸಿಟ್ಟಿನಿಂದ ಅವನ ನಾಗರ ಬೆತ್ತವನ್ನು ಮುರಿದುಹಾಕುತ್ತಾನೆ. ಅದರ ಕಾರಣ ತಿಳಿಯದೆ ಹುಡುಗ ದುಃಖಿತನಾಗುತ್ತಾನೆ. ಈ ಸಂದರ್ಭದಲ್ಲಿ ನಾಗರಬೆತ್ತ ಯಾಕೆ ಆ ಮನೆಯಲ್ಲಿ ಅರುಚಿ ಎಂಬುದಕ್ಕೆ ದೇವಜ್ಜಿ ತನ್ನ ಕಥೆ ಹೇಳುತ್ತಾಳೆ. ದೇವಜ್ಜಿಯನ್ನು ಇಲ್ಲಿ ನಿರೂಪಕಳನ್ನಾಗಿ ಬಳಸಿಕೊಳ್ಳುವ ಮೂಲಕ ಕಥೆಗಾರರು ಕಥೆಗೆ ಹೆಚ್ಚು ಅಧಿಕೃತವಾದ ನಿರೂಪಕನನ್ನು ಒದಗಿಸುತ್ತಾರೆ. ದೇವಜ್ಜಿ ತನ್ನ ಕಾಲದ ಜೀವನದ ವಿವರಗಳನ್ನು, ಪ್ರಾಕೃತಿಕ ಪರಿಸರವನ್ನು, ಜನರ ನಂಬಿಕೆಗಳನ್ನು ತನ್ನ ಸ್ವಂತ ಅನುಭವದ ಮೂಲಕ ಪುನಃ ನಿರ್ಮಿಸುತ್ತಾಳೆ. ತನ್ನ ಬದುಕನ್ನು ಹಾಳುಮಾಡಿದ ದುರಂತ ಪ್ರಸಂಗವನ್ನು ಪ್ರತ್ಯಕ್ಷದರ್ಶಿಯಾಗಿ ನಿರೂಪಿಸುತ್ತಾಳೆ. ಹುಡುಗನ ಮುಗ್ಧ ದೃಷ್ಟಿಕೋನಕ್ಕಿಂತ ಭಿನ್ನವಾದ ಪ್ರಬುದ್ಧ ದೃಷ್ಟಿಕೋನ ಇದರಿಂದಾಗಿ ಕಥೆಗೆ ಒದಗುತ್ತದೆ. ಅನುಭವವನ್ನು ಸರಿಯಾಗಿ ಅರ್ಥೈಸಲು ಇದರಿಂದ ಸಹಾಯವಾಗುತ್ತದೆ. ದೇವಜ್ಜಿ ಕಥೆ ಹೇಳುತ್ತ ಹೇಳುತ್ತ ಹಿಂದಿನ ದುರಂತವನ್ನು ಮತ್ತೆ ಅನುಭವಿಸತೊಡಗಿ ದುಃಖತಪ್ತಳಾದಾಗ ಹುಡುಗ ಮುಂದಿನ ಕಥೆಯ ನಿರೂಪಣೆಯನ್ನು ತಾನು ತೆಗೆದುಕೊಳ್ಳುತ್ತಾನೆ. ತನ್ನ ನಿರೂಪಣೆಯನ್ನು ಹೆಚ್ಚು ಅಧಿಕೃತಗೊಳಿಸಲು ಅಲ್ಲಲ್ಲಿ ದೇವಜ್ಜಿಯ ಮಾತುಗಳನ್ನು ಉದ್ದರಿಸುತ್ತಾನೆ. ಇದೆಲ್ಲ ಕಥೆಯ ನಿರೂಪಣೆಯಲ್ಲಿ ಲೇಖಕರು ವಹಿಸಿರುವ ಕಾಳಜಿಗೆ ಸಾಕ್ಷಿಯಾಗಿದೆ.
ನಿರೂಪಣೆಯ ದೃಷ್ಟಿಯಿಂದ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ, ಹುಡುಗ ಮತ್ತು ದೇವಜ್ಜಿಯ ಗಂಡ ನಾಗರ ಬೆತ್ತವನ್ನು ಪಡೆಯುವ ಮೂಲ ಮತ್ತು ಬೆತ್ತದ ಬಗ್ಗೆ ಪಡುವ ಸಂಭ್ರಮದಲ್ಲಿರುವ ಹೋಲಿಕೆ. ಆ ಬೆತ್ತ ಆ ಹಿಂದಿನ ದುರಂತವನ್ನು ನೆನಪಿಸುತ್ತದೆಂದೇ, ಅಂಥ ಅನಿಷ್ಟ ಹುಡುಗನಿಗೆ ತಟ್ಟಬಾರದೆಂಬ ಪ್ರೀತಿಯಿಂದಲೇ ಅಜ್ಜ ಹುಡುಗನ ಬೆತ್ತವನ್ನು ಮುರಿದುಹಾಕುತ್ತಾನೆ ಎಂಬುದನ್ನು ಇಲ್ಲಿ ನೆನೆಯಬೇಕು.
ಇಂದಿನ ಬೆತ್ತ ಅಂದಿನ ಬೆತ್ತವೊಂದರಿಂದ ಸಂಭವಿಸಿದ ದುರಂತವೊಂದನ್ನು ನೆನಪಿಗೆ ತರುವಷ್ಟಕ್ಕೇ ಕಥೆ ಮುಗಿಯುವುದಿಲ್ಲ. ದೇವಜ್ಜಿಯ ಗಂಡ ಭಾರತದಲ್ಲಿ ಇಂಗ್ಲೀಷರ ಆಳ್ವಿಕೆಯ ಬಗೆಗೆ ಇಟ್ಟುಕೊಂಡಿರುವ ಗೌರವದ ಭಾವನೆ ಮಹತ್ವದ ವಿವರವಾಗಿದೆ. ಇಂಗ್ಲೀಷರ ಉದಾರ ಬುದ್ಧಿ, ನ್ಯಾಯ ನಿಷ್ಠೆ, ದೇವರೇ ಅವರನ್ನು ಇಲ್ಲಿಗೆ ಕಳಿಸಿದ್ದೆಂಬ ದೇವಜ್ಜಿಯ ಗಂಡನ ನಂಬಿಕೆಗಳೆಲ್ಲ ಇಂದಿಗೂ ಎಷ್ಟೋ ಜನ ಇಟ್ಟುಕೊಂಡಿರುವ ಭಾವನೆಗಳಾಗಿವೆ. ಕಥೆಯಲ್ಲಿ ಈ ಭಾವನೆಗಳಿಗೆ ಆಗುವ ಕ್ರೂರ ಆಘಾತವನ್ನು ಗಮನಿಸಬೇಕು. ದೇವಜ್ಜಿಯ ದುರಂತದ ಬೆಳಕಿನಲ್ಲಿ ಈ ವಿವರ ಗಮನಕ್ಕೆ ಬಾರದೇ ಹೋಗುವ ಸಂಭವವಿದೆ. ಆದರೆ ಕಥೆಯ ಪ್ರಸ್ತುತತೆಯ ದೃಷ್ಟಿಯಿಂದ ಇದನ್ನು ಮರೆಯುವಂತಿಲ್ಲ.
ಇದನ್ನು ಓದಿದ್ದೀರಾ?: ಹ.ಪೀ. ಜೋಶಿ ಅವರ ಕತೆ | ಕಿಚ್ಚಿನ ಕಾವಲು
ಈ ಎಲ್ಲ ವಿವರಗಳ ನಡುವೆ ನಾಗರಬೆತ್ತ ಒಂದು ಸಂಕೇತವಾಗಿ ಅರ್ಥಪಡೆದುಕೊಳ್ಳುವ ರೀತಿ ವಿಶಿಷ್ಟವಾಗಿದೆ. ಒಂದು ರೀತಿಯಿಂದ ಭಾರತೀಯರಾಗಿ ನಾವು ಇತಿಹಾಸವನ್ನು ಸ್ವೀಕರಿಸುವ ರೀತಿಗೂ ಇದು ಸಂಕೇತವಾಗಿದೆ. ಸಿಟ್ಟಿನಿಂದ ನಾಗರಬೆತ್ತವನ್ನು ಮುರಿದು ಹಾಕುವ ಅಜ್ಜ ಇತಿಹಾಸದ ನೋವು, ಅವಮಾನಗಳನ್ನು ಮರೆಯಲೆತ್ನಿಸುವ, ಮುಚ್ಚಿಡಬಯಸುವ ನಮ್ಮ ಪ್ರವೃತ್ತಿಯನ್ನು ಸೂಚಿಸುತ್ತಾನೆ. ಇತಿಹಾಸದ ಅವಮಾನಗಳನ್ನು ನೆನಪಿನಲ್ಲಿರಿಸಿಕೊಂಡು ಅವುಗಳಿಂದ ಪಾಠ ಕಲಿಯಬೇಕೇ ಹೊರತು, ಅವುಗಳನ್ನು ಮುಚ್ಚಿಡುವದು ಪ್ರಬುದ್ಧತೆಯ ಲಕ್ಷಣವಲ್ಲ. ಆದರೆ ಸೇಡಿಯಾಪು ಅವರ ಕಥೆ ನಮ್ಮ ಇತಿಹಾಸಪ್ರಜ್ಞೆಯನ್ನು ಅದಿದ್ದಂತೆ ಅಪ್ರಜ್ಞಾಪೂರ್ವಕವಾಗಿ ಪ್ರಕಟಿಸುವದರ ಆಚೆ ಅದರ ವಿಮರ್ಶೆಯ ಕಡೆಗೆ ತುಡಿಯುವದಿಲ್ಲ. ಒಬ್ಬ ಲೇಖಕ ತನಗೆ ಗೊತ್ತಿಲ್ಲದೆಯೇ ತನ್ನ ಕಾಲದ, ಜನಾಂಗದ ನಂಬಿಕೆಗಳನ್ನು ತನ್ನ ಕೃತಿಗಳಲ್ಲಿ ದಾಖಲಿಸುತ್ತಾನೆ ಎಂಬ ಮಾರ್ಕ್ಸ್ವಾದೀ ವಿಮರ್ಶಕರ ವಾದವನ್ನು ಇದು ಪುಷ್ಟೀಕರಿಸುತ್ತದೆ.
ಇನ್ನು ಕೃಷ್ಣಭಟ್ಟರ ಕಥೆಗಳ ಭಾಷೆಯ ಬಗೆಗೆ ಒಂದು ಮಾತನ್ನು ಹೇಳಲೇಬೇಕು. ಕುರ್ತಕೋಟಿಯವರು ಕೇವಲ ಭಾಷೆಯ ದೃಷ್ಟಿಯಿಂದ ನೋಡಿದರೂ ಈ ಕಥೆಗಳು ಗಮನಾರ್ಹವಾಗಿವೆಯೆಂದು ಹೇಳಿದ್ದಾರೆ. ಹಳೆಗನ್ನಡದ ಬಿಗುವನ್ನು ತಂದು ಕಸಿ ಮಾಡಿದಂತಿರುವ ಅವರ ಭಾಷೆಯ ವೈಶಿಷ್ಟ್ಯವನ್ನು ಅವರು ಎತ್ತಿ ಹೇಳಿದ್ದಾರೆ. ಈ ಬಗೆಯ ಭಾಷೆಯನ್ನು ಮುಳಿಯ ತಿಮ್ಮಪ್ಪಯ್ಯನವರ “ಪಂಪ ಭಾರತಸಾರ”ದಲ್ಲಿಯಂಥ ಗ್ರಂಥಗಳಲ್ಲಿ ಮಾತ್ರ ಕಾಣಬಹುದಾಗಿದೆ. ‘ಚೆನ್ನೆಮಣೆ’ಯ ಹೊಡೆದಾಟದ ವರ್ಣನೆ ಈ ದೃಷ್ಟಿಯಿಂದ ಗಮನ ಸೆಳೆಯುತ್ತದೆ. ಆದರೆ ಈ ಭಾಷೆ ಕೂಡ ಇಲ್ಲಿಯ ಕಥೆಗಳ ವಸ್ತುವಿನ ಅಗತ್ಯಕ್ಕೆ ತಕ್ಕಂತೆ ಹುಟ್ಟಿಕೊಂಡದ್ದು ಎಂಬುದು ಮುಖ್ಯ ಸಂಗತಿಯಾಗಿದೆ. ಹಿಂದಿನ ಕಾಲದ ಜೀವನ ಕ್ರಮದ ನಿರೂಪಣೆಗೆ ಮತ್ತು ಅದರ ಆಧುನಿಕ ಅರ್ಥವಂತಿಕೆಯನ್ನು ಸೂಚಿಸುವುದಕ್ಕೆ ಈ ಬಗೆಯ ಹಳೆ-ಹೊಸ ಭಾಷೆಗಳ ಕಸಿ ಸಮರ್ಥ ಮಾಧ್ಯಮವಾಗಿ ಬಳಕೆಯಾಗಿದೆ. ಈ ಮೂಲಕವೂ ಕೃಷ್ಣಭಟ್ಟರು ದೇಶೀಯ ಕಥನಪರಂಪರೆಯನ್ನು ಮುಂದುವರಿಸಬಹುದೆಂಬ ಸೂಚನೆಯನ್ನು ಕೊಟ್ಟಿದ್ದಾರೆ.
ಕೃಷ್ಣಭಟ್ಟರು ಇನ್ನೂ ಇಂಥ ಹಲವಾರು ಕಥೆಗಳನ್ನು ಬರೆದು ಮಾರ್ಗ ತೋರಿಸಿದ್ದರೆ ಆಧುನಿಕ ಉದ್ದೇಶಗಳಿಗೆ ನಮ್ಮ ಹಳೆಯ ಕಥನಪರಂಪರೆಯನ್ನು ಒಗ್ಗಿಸಿಕೊಳ್ಳುವ, ಆ ಮೂಲಕ ನಮ್ಮದೇ ಆದ ಸಣ್ಣಕಥೆಯ ಹೊಸದೊಂದು ಸ್ವರೂಪವನ್ನು ಕಂಡುಕೊಳ್ಳುವ ಸಾಧ್ಯತೆ ಇರುತ್ತಿತ್ತೋ ಏನೊ! ಈಗಿರುವಂತೆ ಕೃಷ್ಣಭಟ್ಟರ ಕಥೆಗಳು ಇಂದಿನ ಅನುಭವಗಳಿಗೆ ತುಡಿಯುವಂಥವಲ್ಲ. ಹಿಂದಿನ ಜೀವನಕ್ರಮವನ್ನು ಪುನರ್ರಚಿಸುವ ಸೀಮಿತ ಉದ್ದೇಶವನ್ನು ಮಾತ್ರ ಹೊಂದಿರುವ ಈ ಕಥೆಗಳು ಕುತೂಹಲಕರ ಪ್ರಯೋಗಗಳಾಗಿ ಮಾತ್ರ ಉಳಿಯುತ್ತವೆ.
(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)