ಕೀನ್ಯಾದ ಪ್ರಸಿದ್ಧ ಲೇಖಕ ಗೂಗಿ ವಾ ಥಿಯಾಂಗೋ, ಜಾಗತಿಕ ಸಾಹಿತ್ಯದ ಸಂದರ್ಭದಲ್ಲಿ ತಮ್ಮ ಅಸಾಧಾರಣ ವ್ಯಕ್ತಿತ್ವ ಮತ್ತು ಪ್ರತಿಭೆಗೆ ಹೆಸರಾದವರು. ತಮ್ಮ 87ನೇ ವಯಸ್ಸಿನಲ್ಲಿ ಅಮೆರಿಕದ ಅಟ್ಲಾಂಟಾದಲ್ಲಿ ನಿಧನರಾಗಿದ್ದಾರೆ.
ಕೀನ್ಯಾದ ಪ್ರಸಿದ್ಧ ಲೇಖಕ, ಆಫ್ರಿಕಾದ ಸಾಹಿತ್ಯ ದಿಗ್ಗಜ, ವಿಶೇಷವಾಗಿ ತಮ್ಮ ಸ್ಥಳೀಯ ಗಿಕುಯು ಭಾಷೆಯಲ್ಲಿ ಬರೆಯುತ್ತಿದ್ದ ಕೆಲವೇ ಲೇಖಕರಲ್ಲಿ ಒಬ್ಬರಾಗಿದ್ದ ಗೂಗಿ ವಾ ಥಿಯಾಂಗೋ ತಮ್ಮ 87ನೇ ವಯಸ್ಸಿನಲ್ಲಿ ಅಮೆರಿಕದ ಅಟ್ಲಾಂಟಾದಲ್ಲಿ ನಿಧನರಾಗಿದ್ದಾರೆ.
ಗೂಗಿ ವಾ ಥಿಯಾಂಗೋ ಅವರ ನಿಧನವನ್ನು ಅವರ ಮಗಳು ವಾಂಜಿಕು ವಾ ಥಿಯಾಂಗೋ, “ನಮ್ಮ ತಂದೆ ಗೂಗಿ ವಾ ಥಿಯಾಂಗೋ ಬುಧವಾರ ಬೆಳಗ್ಗೆ ನಿಧನರಾದರು ಎಂಬ ವಿಷಯವನ್ನು ದುಃಖಭರಿತ ಹೃದಯದಿಂದ ತಿಳಿಸುತ್ತಿದ್ದೇವೆ. ಅವರು ತಮ್ಮ ಸಮೃದ್ಧ ಜೀವನವನ್ನು ಜೀವಿಸಿ, ಅದ್ಭುತ ಹೋರಾಟ ನಡೆಸಿ ತೆರಳಿದ್ದಾರೆ” ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ದೃಢಪಡಿಸಿದ್ದಾರೆ.
ಅವರ ಮಗ ಮುಕೊಮಾ ವಾ ಥಿಯಾಂಗೋ ಕೂಡ ತಮ್ಮ X ಖಾತೆಯಲ್ಲಿ ”ಅವರು ನನ್ನ ತಂದೆಯಷ್ಟೆ ಅಲ್ಲ, ನನ್ನ ಬರಹಗಳ ಮೇಲೆಯೂ ಹೆಚ್ಚು ಪ್ರಭಾವ ಬೀರಿದ್ದಾರೆ. ಅವರು ಇಲ್ಲದ ನಾಳೆ ಹೇಗಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಲಾಗುತ್ತಿಲ್ಲ” ಎಂದು ಬರೆದುಕೊಂಡಿದ್ದಾರೆ.
1938ರ ಜನವರಿ 5ರಂದು ಕೀನ್ಯಾದ ಲಿಮುರು ಎಂಬಲ್ಲಿ ಜನಿಸಿದ ಥಿಯಾಂಗೋ, ಜಾಗತಿಕ ಸಾಹಿತ್ಯದ ಸಂದರ್ಭದಲ್ಲಿ ತಮ್ಮ ಅಸಾಧಾರಣ ವ್ಯಕ್ತಿತ್ವ ಮತ್ತು ಪ್ರತಿಭೆಗೆ ಹೆಸರಾದವರು. ಗೂಗಿ ಅವರ ತಂದೆಗೆ ನಾಲ್ಕು ಮಂದಿ ಪತ್ನಿಯರು. 28 ಮಂದಿ ಮಕ್ಕಳು. ಕಿಶೋರಾವಸ್ಥೆಯಲ್ಲಿದ್ದಾಗಲೇ ಮೌ ಮೌ ಹೋರಾಟದಲ್ಲಿ ಭಾಗಿಯಾಗಿದ್ದರು. ಗೂಗಿ ಸೇರಿದಂತೆ ಸಾವಿರಾರು ಜನರನ್ನು ಬ್ರಿಟಿಷ್ ಸರ್ಕಾರ ಬಂಧಿಸಿ ಹಿಂಸೆ ನೀಡಿತು. ಈ ಹೋರಾಟವೇ ಅವರ ಮೊದಲ ಹೆಸರಾಂತ ಕಾದಂಬರಿ ‘ವೀಪ್ ನಾಟ್- ಚೈಲ್ಡ್’ಗೆ ಪ್ರೇರಣೆಯಾಯಿತು.
ಚಿನುವಾ ಅಚಿಬೆ ಅವರ ಸಾಹಿತ್ಯದಂತೆ ಇವರ ಕೃತಿಗಳನ್ನೂ ವಿವಿಧ ಲೇಖಕರು ಕನ್ನಡಕ್ಕೆ ಅನುವಾದಿಸಿದ್ದಾರೆ ಮತ್ತು ಕೆಲವು ಚಿಂತಕರು ಇವರ ಬಗೆಗೆ ಬರೆದಿದ್ದಾರೆ. ‘ವೀಪ್ ನಾಟ್- ಚೈಲ್ಡ್’, ‘ದಿ ರಿವರ್ ಬಿಟ್ವೀನ್’, ‘ಎ ಗ್ರೈನ್ ಆಫ್ ವೀಟ್’, ‘ಡೆವಿಲ್ ಆನ್ ದಿ ಕ್ರಾಸ್’, ‘ವಿಜರ್ಡ್ ಆಫ್ ದಿ ಕ್ರೊ’ ಇವರ ಪ್ರಮುಖ ಕಾದಂಬರಿಗಳು. ಜೊತೆಗೆ ನಾಟಕಗಳನ್ನು ರಚಿಸಿದ್ದಾರೆ. ಸಾಹಿತ್ಯ, ಸಂಸ್ಕೃತಿ, ರಾಜಕೀಯ ಸ್ವರೂಪದ ಬಗ್ಗೆ ಹಲವಾರು ಪ್ರಬಂಧಗಳನ್ನೂ ಬರೆದಿದ್ದಾರೆ. ಇವರ ಬಹು ಚರ್ಚಿತ ಲೇಖನಗಳು ಕನ್ನಡಕ್ಕೆ ಅನುವಾದಗೊಂಡಿವೆ.

ಅವರನ್ನು ಪೂರ್ವ ಆಫ್ರಿಕಾದ ಪ್ರಮುಖ ಕಾದಂಬರಿಕಾರ ಎಂದು ಪರಿಗಣಿಸಲಾಗಿದೆ. ಅವರ ಜನಪ್ರಿಯ ‘ವೀಪ್ ನಾಟ್- ಚೈಲ್ಡ್’ (1964) ಪೂರ್ವ ಆಫ್ರಿಕನ್ ಒಬ್ಬರಿಂದ ಇಂಗ್ಲಿಷ್ನಲ್ಲಿ ಪ್ರಕಟವಾದ ಮೊದಲ ಪ್ರಮುಖ ಕಾದಂಬರಿ.
ಥಿಯಾಂಗೋ 1963ರಲ್ಲಿ ಉಗಾಂಡಾದ ಕಂಪಾಲಾದ ಮಕೆರೆರೆ ವಿಶ್ವವಿದ್ಯಾಲಯದಿಂದ ಮತ್ತು 1964ರಲ್ಲಿ ಇಂಗ್ಲೆಂಡ್ನ ಯಾರ್ಕ್ಷೈರ್ನ ಲೀಡ್ಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಲೀಡ್ಸ್ನಲ್ಲಿ ಪದವಿ ಪಡೆದ ಬಳಿಕ, ಅವರು ಕೀನ್ಯಾದ ನೈರೋಬಿ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಮತ್ತು ಅಮೆರಿಕದ ಇಲಿನಾಯ್ಸ್ನ ಇವಾನ್ಸ್ಟನ್ನ ನಾರ್ತ್ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ನ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 1972ರಿಂದ 1977ರವರೆಗೆ ನೈರೋಬಿ ವಿಶ್ವವಿದ್ಯಾಲಯದಲ್ಲಿ ಹಿರಿಯ ಉಪನ್ಯಾಸಕರಾಗಿ ಮತ್ತು ಸಾಹಿತ್ಯ ವಿಭಾಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಥಿಯಾಂಗೋ ಅವರ ಬಹುತೇಕ ಬರವಣಿಗೆಗಳು ಆಫ್ರಿಕಾದ ವಸಾಹತುಶಾಹಿ ಇತಿಹಾಸದ ವಿಷಾದಕರ ಪರಂಪರೆಯ ಕುರಿತು ಗಂಭೀರವಾಗಿ ಚರ್ಚಿಸುತ್ತವೆ. ವರ್ಷಗಳ ಕಾಲ ನೊಬೆಲ್ ಪ್ರಶಸ್ತಿಯ ಆಕಾಂಕ್ಷಿಯಾಗಿದ್ದ ಅವರು, 2010ರಲ್ಲಿ ಪೆರು ದೇಶದ ಮಾರಿಯೋ ವರ್ಗಾಸ್ ಯೋಸಾ ಪ್ರಶಸ್ತಿ ಪಡೆದಾಗ, ”ಮಾಡಿದ ತಯಾರಿಗಿಂತ ಬಹಳಷ್ಟು ದುಃಖಿತರಾಗಿದ್ದವರು ನನ್ನ ಮನೆಯ ಮುಂದೆ ನಿಂತ ಛಾಯಾಗ್ರಾಹಕರು!” ಎಂದು ಹಾಸ್ಯದಿಂದ ನುಡಿದಿದ್ದರು.
1977ರಲ್ಲಿ ತಮ್ಮ ನಾಲ್ಕನೇ ಕಾದಂಬರಿ ‘ಪೆಟಲ್ಸ್ ಆಫ್ ಬ್ಲಡ್’ ಮತ್ತು ‘ದಿ ಟ್ರಯಲ್ ಆಫ್ ಡೆಡಾನ್ ಕಿಮತಿ’ ಎಂಬ ನಾಟಕಗಳನ್ನು ಪ್ರಕಟಿಸಿದರು. ಅವರ ಮತ್ತೊಂದು ನಾಟಕ ‘ಐ ವಿಲ್ ಮ್ಯಾರಿ ವೆನ್ ಐ ವಾಂಟ್’ವನ್ನು ತಮ್ಮ ಭಾಷೆ ಗಿಕುಯುನಲ್ಲಿ ಬರೆದ ಕಾರಣ ಅವರನ್ನು ಬಂಧಿಸಿ ಕಠಿಣ ಭದ್ರತಾ ಜೈಲಿಗೆ ಕಳಿಸಲಾಯಿತು. ”ಇಂಗ್ಲಿಷ್ನಲ್ಲಿ ಬರೆದಾಗ ನನ್ನನ್ನು ಬಂಧಿಸಿಲ್ಲ, ಆದರೆ ನನ್ನ ಭಾಷೆಯಲ್ಲಿ ಬರೆದಾಗ ಬಂಧಿಸಿದರು” ಎಂದು ವಿಷಾದಿಸಿದ ಅವರು, ಮುಂದೆ ಗಿಕುಯು ಭಾಷೆಯಲ್ಲಿಯೇ ತಮ್ಮ ಬರವಣಿಗೆ ಮುಂದುವರೆಸಲು ನಿರ್ಧರಿಸಿದರು.
ಇದನ್ನು ಓದಿದ್ದೀರಾ?: ನೊಬೆಲ್ ಪುರಸ್ಕೃತ ಲ್ಯಾಟಿನ್ ಅಮೆರಿಕದ ಅಪ್ರತಿಮ ಬರಹಗಾರ ಯೋಸಾ
ಆಫ್ರಿಕನ್ ಭಾಷೆಯಲ್ಲಿ ಬರೆಯುವವರು ಎಂಬ ಕಾರಣಕ್ಕೆ ಕೀನ್ಯಾದಲ್ಲಿ ಅವರ ಬರಹಗಳನ್ನು ನಿಷಿದ್ಧ ಮಾಡಲಾಗುತ್ತಿತ್ತು. 2004ರಲ್ಲಿ ಅವರ ಪತ್ನಿ ಜೆರಿಯೊಂದಿಗೆ ಮೊತ್ತಮೊದಲಿಗೆ ಅವರು ನೈರೋಬಿಗೆ ವಾಪಸ್ಸಾದಾಗ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಅವರನ್ನು ಬರಮಾಡಿಕೊಂಡರೂ, ನಂತರ ಅವರ ಫ್ಲಾಟ್ಗೆ ಬಂದ ದರೋಡೆಕೋರರು, ಅವರ ಪತ್ನಿಯ ಮೇಲೆ ಅತ್ಯಾಚಾರವೆಸಗಿ, ತೀವ್ರ ಹಿಂಸೆ ನೀಡಿದರು. ”ನಾವು ಬದುಕಿ ಹೊರಬರುವ ನಂಬಿಕೆ ನಮಗಿರಲಿಲ್ಲ” ಎಂದು ಥಿಯಾಂಗೋ ಆಘಾತದಿಂದ ವಿವರಿಸಿದ್ದರು.
2021ರಲ್ಲಿ, ಅವರ ಗಿಕುಯು ಭಾಷೆಯ ಪದ್ಯಕಾದಂಬರಿ ‘ದ ಪರ್ಫೆಕ್ಟ್ ನೈನ್’ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶಿತವಾಗುವ ಮೂಲಕ ಮೊದಲ ಆಫ್ರಿಕನ್ ಮೂಲ ಭಾಷೆಯ ಲೇಖಕರಾಗಿದ್ದರು. ತಮ್ಮದೇ ಕೃತಿಯನ್ನು ತಾವು ಭಾಷಾಂತರಿಸಿ ಪ್ರತಿಷ್ಠಿತ ನಾಮನಿರ್ದೇಶನ ಪಡೆದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದರು.
ಗೂಗಿಯವರಿಗೆ 1995ರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆಯಾಗಿತ್ತು. 2019ರಲ್ಲಿ ಹೃದಯ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಅವರು ಒಟ್ಟು 9 ಮಕ್ಕಳ ತಂದೆ. ಈ ಪೈಕಿ ಟೀ ವಾ ಥಿಯಾಂಗೋ, ಮುಕೊಮಾ ವಾ ಥಿಯಾಂಗೋ, ನ್ಡೂಕು ವಾ ಥಿಯಾಂಗೋ ಮತ್ತು ವಾಂಜಿಕು ವಾ ಥಿಯಾಂಗೋ ಅವರಂತೆಯೇ ಲೇಖಕರಾಗಿ ಹೆಸರು ಮಾಡಿರುವವರು.
2018ರಲ್ಲಿ, ಅವರು “ವಿರೋಧವೇ ಬದುಕುಳಿಯುವ ಶ್ರೇಷ್ಠ ಮಾರ್ಗ. ನ್ಯಾಯವಿಲ್ಲದ ಮೇಲೆ ‘ಇಲ್ಲ’ ಎನ್ನುವ ಸಾಹಸವೇ ಸಾಕು. ನಂಬಿಕೆಯಲ್ಲಿ ಬದ್ಧರಾಗಿದ್ದರೆ ಬದುಕಿ ಉಳಿಯುವುದು ಸಾಧ್ಯ” ಎಂದಿದ್ದರು.