ತನಿಖೆ ಮತ್ತು ವಿಚಾರಣೆಯ ಅವಧಿಯಲ್ಲಿ ಸಂಬಂಧಪಟ್ಟ ಪತ್ರಕರ್ತರು ಮತ್ತು ಅವರ ಸುದ್ದಿ ಸಂಸ್ಥೆಯ ಬ್ಯಾಂಕ್ ಖಾತೆಗಳು ಮತ್ತು ಆಸ್ತಿಪಾಸ್ತಿಗಳನ್ನು ಸ್ತಬ್ಧಗೊಳಿಸಲಾಗುತ್ತದೆ. ಈ ಆಪಾದನೆಗಳ ವಿರುದ್ಧ ಕಾನೂನು ಸಮರ ಬಲು ದುಬಾರಿ. ತೆರಿಗೆ ಮತ್ತು ಕ್ರಿಮಿನಲ್ ಲಾಯರ್ಗಳ ನೆರವು ಪಡೆಯುವುದು ಅನಿವಾರ್ಯ. ಇಂತಹ ಕೇಸುಗಳಲ್ಲಿ ಆಪಾದಿತರ ಪರವಾಗಿ ವಾದ ಮಾಡುವ ವಕೀಲರೂ ‘ದಾಳಿಗೆ’ ತುತ್ತಾಗುತ್ತಿದ್ದಾರೆ.
ಸರ್ಕಾರಗಳು ಆರ್ಥಿಕ ಅಪರಾಧಗಳ ಸುಳ್ಳು ಆರೋಪಗಳನ್ನು ಹೊರಿಸಿ ಸಮೂಹ ಮಾಧ್ಯಮಗಳ ಬಾಯಿ ಬಡಿಯುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ ಎಂದು ದಿ ವರ್ಲ್ಡ್ ಅಸೋಸಿಯೇಷನ್ ಆಫ್ ನ್ಯೂಸ್ ಪಬ್ಲಿಶರ್ಸ್ ನ (WAN-IFRA) ಹೊಸ ವರದಿ ಹೇಳಿದೆ.
“ಮಾಧ್ಯಮಗಳನ್ನು ಬೆದರಿಸಲು, ಬಾಯಿ ಮುಚ್ಚಿಸಲು ಹಾಗೂ ಅವುಗಳ ಮೇಲೆ ದಾಳಿ ನಡೆಸಲು ಹಣಕಾಸು ಆಪಾದನೆಗಳ ದುರ್ಬಳಕೆ: ನಿರ್ದಿಷ್ಟ ಪ್ರಕರಣಗಳ ಪರಾಮರ್ಶೆ” ಎಂಬುದು ವಿಶ್ವ ಸುದ್ದಿ ಪ್ರಕಾಶಕರ ಸಂಸ್ಥೆಯ ಇತ್ತೀಚಿನ ವರದಿ. ಭಾರತದ ‘ನ್ಯೂಸ್ ಕ್ಲಿಕ್’ ಸೇರಿದಂತೆ ಸ್ವತಂತ್ರ ಪತ್ರಿಕೋದ್ಯಮ ನಡೆಸುತ್ತಿದ್ದ ಎಂಟು ಪ್ರಕರಣಗಳನ್ನು ಈ ವರದಿಯಲ್ಲಿ ವಿಶ್ಲೇಷಿಸಲಾಗಿದೆ.
ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್), ತೆರಿಗೆ ಕಳ್ಳತನ, ಬ್ಲ್ಯಾಕ್ ಮೇಲ್, ಭಯೋತ್ಪಾದನೆಗೆ ಹಣಕಾಸು ನೀಡಿಕೆ, ವಂಚನೆ ಹಾಗೂ ವಿದೇಶೀ ಹಣಕಾಸಿನ ಅಕ್ರಮ ಸ್ವೀಕಾರದ ಆಪಾದನೆಗಳನ್ನು ಮತ್ತೆ ಮತ್ತೆ ದುರುಪಯೋಗ ಮಾಡಿ ಸ್ವತಂತ್ರ ಪತ್ರಿಕೋದ್ಯಮ ನಡೆಸುತ್ತಿರುವ ಮಾಧ್ಯಮಗಳು ಮತ್ತು ಪತ್ರಕರ್ತರ ಬಾಯಿ ಮುಚ್ಚಿಸಲು ಮತ್ತೆ ಮತ್ತೆ ದುರುಪಯೋಗ ಮಾಡಲಾಗುತ್ತಿದೆ.
ಈ ಆರ್ಥಿಕ ಅಪರಾಧಗಳ ಅಡಿಯಲ್ಲಿ ಜೈಲುಶಿಕ್ಷೆಯ ಅಪಾಯವು ಸಮೂಹ ಮಾಧ್ಯಮ ಸಮುದಾಯಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು ತಮ್ಮ ಕರ್ತವ್ಯಗಳ ನಿರ್ವಹಣೆ ಕುರಿತು ಅತೀವ ಬೆದರಿಕೆ ಹುಟ್ಟಿ ಹಾಕಿದೆ.
ಹಲವಾರು ಪ್ರಕರಣಗಳಲ್ಲಿ ವಿಚಾರಣೆಗೆ ಮೊದಲೇ ದೀರ್ಘಾವಧಿ ದಸ್ತಗಿರಿ, ಜೈಲುವಾಸ, ಹಾಗೂ ಭಾರೀ ಮೊತ್ತದ ದಂಡಶುಲ್ಕಗಳನ್ನು ವಿಧಿಸಲಾಗುತ್ತಿದೆ. ಇವುಗಳ ಪರಿಣಾಮವಾಗಿ ಹಣಕಾಸು ನಷ್ಟ-ವಿನಾಶ ಹಾಗೂ ಮೀಡಿಯಾ ಸಂಸ್ಥೆಯು ಬಾಗಿಲು ಮುಚ್ಚಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಲಾಗುತ್ತಿದೆ.
ತನಿಖೆ ಮತ್ತು ವಿಚಾರಣೆಯ ಅವಧಿಯಲ್ಲಿ ಸಂಬಂಧಪಟ್ಟ ಪತ್ರಕರ್ತರು ಮತ್ತು ಅವರ ಸುದ್ದಿ ಸಂಸ್ಥೆಯ ಬ್ಯಾಂಕ್ ಖಾತೆಗಳು ಮತ್ತು ಆಸ್ತಿಪಾಸ್ತಿಗಳನ್ನು ಸ್ತಬ್ಧಗೊಳಿಸಲಾಗುತ್ತದೆ. ಈ ಆಪಾದನೆಗಳ ವಿರುದ್ಧ ಕಾನೂನು ಸಮರ ಬಲು ದುಬಾರಿ. ತೆರಿಗೆ ಮತ್ತು ಕ್ರಿಮಿನಲ್ ಲಾಯರ್ಗಳ ನೆರವು ಪಡೆಯುವುದು ಅನಿವಾರ್ಯ. ಇಂತಹ ಕೇಸುಗಳಲ್ಲಿ ಆಪಾದಿತರ ಪರವಾಗಿ ವಾದ ಮಾಡುವ ವಕೀಲರೂ ‘ದಾಳಿಗೆ’ ತುತ್ತಾಗುತ್ತಿದ್ದಾರೆ.
ಇಂತಹ ಪ್ರಕರಣಗಳಿಗೆ ಗುರಿಯಾಗುವ ಪತ್ರಕರ್ತರಿಗೆ ‘ಕ್ರಿಮಿನಲ್’ ಎಂಬ ಹಣೆಪಟ್ಟಿ ಹಚ್ಚಿ ಅವರ ಪರವಾಗಿ ಮೂಡಿರಬಹುದಾದ ಸಾರ್ವಜನಿಕ ಬೆಂಬಲವನ್ನೂ ದುರ್ಬಲಗೊಳಿಸಲಾಗುತ್ತದೆ. ಸಂಬಂಧಪಟ್ಟ ಪತ್ರಕರ್ತ ಅಥವಾ ಸುದ್ದಿ ಸಂಸ್ಥೆಯ ಹೆಸರಿಗೆ ಮಸಿ ಬಳಿಯುವ ನಿರೂಪಣೆಯನ್ನು ಹುಟ್ಟಿ ಹಾಕಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ವಿಕಾಸ್ ಯಾದವ್ ಯಾರು? ತನ್ನ ನೆಲದಲ್ಲಿ ತನ್ನದೇ ನಾಗರಿಕನ ಹತ್ಯೆಯ ಯತ್ನ ಕುರಿತು ಏನಿದು ಅಮೆರಿಕೆಯ ಆಪಾದನೆ ?
ಮೇಲಿನ ಈ ಎಲ್ಲ ಸಂಗತಿಗಳೂ ನ್ಯೂಸ್ ಕ್ಲಿಕ್ ಎಂಬ ಆನ್ ಲೈನ್ ಸುದ್ದಿ ಸಂಸ್ಥೆಯ ಮೇಲೆ ನಡೆದ ದಾಳಿಯಲ್ಲಿ ಕಂಡು ಬಂದವು. ಈ ಸಂಸ್ಥೆಯ ಕಚೇರಿಗಳು ಹಾಗೂ ಸಿಬ್ಬಂದಿಯ ಮೇಲೆ 2021 ಮತ್ತು 2023ರಲ್ಲಿ ದಾಳಿ ನಡೆಸಲಾಯಿತು. ಈ ಸಂಸ್ಥೆಯ ಮುಖ್ಯಸ್ಥ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವಸಂಪನ್ಮೂಲಗಳ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಲಾಯಿತು.
ಅಕ್ರಮವಾಗಿ ವಿದೇಶೀ ನೆರವನ್ನು ಪಡೆಯುತ್ತಿರುವ ಆರೋಪ ಹೊರಿಸಲಾಯಿತು. ಭಾರತದ ಆಳುವ ಪಕ್ಷದ ಕುರಿತು ಟೀಕೆಯ ನಿಲುವು ಹೊಂದಿದ್ದೇ, ಈ ಸಂಸ್ಥೆಯ ಮೇಲಿನ ದಾಳಿಗೆ ಕಾರಣ. ಆಳುವ ಪಕ್ಷಗಳನ್ನು ಟೀಕೆ ಟಿಪ್ಪಣಿ ವಿಮರ್ಶೆಗೆ ಗುರಿಪಡಿಸುವ ಇಂತಹ ಸುದ್ದಿ ಸಂಸ್ಥೆಗಳ ಮೇಲೆ ಭಯೋತ್ಪಾದಕ ನಿಗ್ರಹ ಕಾನೂನು ಕಾಯಿದೆಗಳ ಪ್ರಕಾರ ಕ್ರಮ ಜರುಗಿಸಲಾಗುತ್ತಿದೆ. ಅತ್ಯಂತ ಚಿಂತಾಜನ ಸಂಗತಿಯಿದು. ಬಹುತೇಕ ಮೀಡಿಯಾ ಆಳುವ ಬಿಜೆಪಿ ಪಕ್ಷದ ಪರವಾಗಿರುವ ದೇಶದಲ್ಲಿ ಸ್ವತಂತ್ರ ಮಾಧ್ಯಮಕ್ಕೆ ಲಭ್ಯವಿರುವ ಕೆಲವೇ ಆದಾಯಗಳನ್ನು ಕತ್ತರಿಸುವ ಈ ಪ್ರಯತ್ನವಿದು ಎಂದು ವರದಿ ಕಳವಳ ಪ್ರಕಟಿಸಿದೆ.
ಅಕ್ರಮ ಹಣ ವರ್ಗಾವಣೆ (ಪಿಎಂಎಲ್ಎ) ಕಾಯಿದೆಯಡಿ ಅಂತ್ಯವೇ ಕಾಣದಷ್ಟು ಸುದೀರ್ಘ ತನಿಖೆಯ ಅವಕಾಶವಿದೆ. ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡು ನ್ಯೂಸ್ ಕ್ಲಿಕ್ ಸಂಸ್ಥೆಯ ಆಸ್ತಿಪಾಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಸ್ತಬ್ಧಗೊಳಿಸಲಾಯಿತು. ಭಯೋತ್ಪಾದನೆ ನಿಗ್ರಹ ಕಾಯಿದೆಯಂತಹ (ಯುಎಪಿಎ) ಮತ್ತೊಂದು ಕರಾಳ ಕಾಯಿದೆಯಡಿ ಈ ಸಂಸ್ಥೆಯ ಸಿಬ್ಬಂದಿಯನ್ನು ಬಂಧಿಸಲಾಯಿತು. ಇಂತಹ ಕರಾಳ ಕಾಯಿದೆಗಳನ್ನು ರಾಜಕೀಯವಾಗಿ ದುರ್ಬಳಕೆ ಮಾಡುತ್ತಿರುವುದರ ನಿದರ್ಶನವಿದು ಎಂದು ವರದಿಯಲ್ಲಿ ಹೇಳಲಾಗಿದೆ.
ಅಜರ್ ಬೈಜಾನಿನ ಅಬ್ಝಾಸ್ ಮೀಡಿಯಾ, ಎಲ್ ಸಾಲ್ವಡೋರಿನ ಎಲ್ ಫಾರೋ, ತಾಂಜಾನಿಯಾದ ಎರಿಕ್ ಕಾಬೆಂದೇರಾ, ಹಾಂಗಾ ಕಾಂಗ್ ನ ಜಿಮ್ಮಿ ಲಾಯ್, ಗ್ವಾಟೆಮಾಲಾದ ಜೂಸ್ ರೂಬೆನ್ ಝಮೋರಾ, ಫಿಲಿಪೈನ್ಸ್ ನ ಮರಿಯಾ ರೆಸ್ಸಾ ಮತ್ತು ರ್ಯಾಪ್ಲರ್ ಹಾಗೂ ಜಾರ್ಜಿಯಾದ ನಿಕಾ ಗ್ವಾರಮಿಯಾ ಸುದ್ದಿ ಸಂಸ್ಥೆಗಳು ಇಂತಹುದೇ ದಾಳಿಗಳಿಗೆ ತುತ್ತಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಯುನೆಸ್ಕೋ ಬೆಂಬಲಿತ ಸಂಸ್ಥೆ ಇಂಟರ್ ಅಮೆರಿಕನ್ ಪ್ರೆಸ್ ಅಸೋಸಿಯೇಷನ್ನ ಸಹಭಾಗಿತ್ವದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.
