ಗಾಜಾದಲ್ಲಿ ತಕ್ಷಣದಿಂದಲೇ ಕದನ ವಿರಾಮ ಘೋಷಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಂಗೀಕರಿಸಿದೆ. ಯುಎನ್ ಜನರಲ್ ಅಸೆಂಬ್ಲಿಯಲ್ಲಿ ನಡೆದ ನಿರ್ಣಯದ ಮೇಲಿನ ಮತದಾನದ ವೇಳೆ ಭಾರತವು ಗೈರುಹಾಜರಾಗಿತ್ತು ಎಂದು ವರದಿಯಾಗಿದೆ.
ನಿರ್ಣಯದಲ್ಲಿ, ಹಮಾಸ್ ಮತ್ತು ಇಸ್ರೇಲ್ ನಡುವಿನ ಕದನವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು ಎಂಬ ಪ್ರಮುಖ ಅಂಶದ ಜೊತೆಗೆ, ಗಾಜಾಗೆ ಅಗತ್ಯವಿರುವ ಎಲ್ಲ ಸೇವೆಗಳನ್ನು ಒದಗಿಸಬೇಕು. ಉಭಯ ರಾಷ್ಟ್ರಗಳು ಒತ್ತೆಯಾಳುಗಳಾಗಿ ಇರಿಸಿಕೊಂಡಿರುವ ಎಲ್ಲರನ್ನು ಬಿಡುಗಡೆ ಮಾಡಬೇಕು ಎಂಬ ಅಂಶಗಳೂ ಸೇರಿವೆ.
193 ಸದಸ್ಯರಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ನಾಗರಿಕರ ರಕ್ಷಣೆ, ಕಾನೂನು ಮತ್ತು ಮಾನವೀಯ ಬಾಧ್ಯತೆಗಳನ್ನು ಎತ್ತಿಹಿಡಿಯುವುದು’ ಎಂಬ ಶೀರ್ಷಿಕೆಯಡಿ ನಿರ್ಣಯವನ್ನು ಸ್ಪೇನ್ ಮಂಡಿಸಿತು. ನಿರ್ಣಯ ಅಂಗೀಕಾರಕ್ಕೆ ಮತದಾನ ನಡೆದಿದ್ದು, ಹಾಜರಿದ್ದ ಎಲ್ಲ ರಾಷ್ಟ್ರಗಳ ಸದಸ್ಯರು ಮತ ಚಲಾಯಿಸಿದ್ದಾರೆ. ಅವರಲ್ಲಿ, 149 ರಾಷ್ಟ್ರಗಳು ನಿರ್ಣಯದ ಪರವಾಗಿ ಮತ್ತು 12 ರಾಷ್ಟ್ರಗಳ ನಿರ್ಣಯದ ವಿರುದ್ಧ ಮತ ಚಲಾಯಿಸಿವೆ. ಇನ್ನು, ಭಾರತ ಸೇರಿದಂತೆ 19 ರಾಷ್ಟ್ರಗಳು ಗೈರಾಗಿದ್ದವು ಎಂದು ತಿಳಿದುಬಂದಿದೆ.
ತಕ್ಷಣದ ಕದನ ವಿರಾಮ, ಒತ್ತೆಯಾಳುಗಳ ಬಿಡುಗಡೆ, ಕೊಲ್ಲಲ್ಪಟ್ಟ ಒತ್ತೆಯಾಳುಗಳ ಅವಶೇಷಗಳನ್ನು ಹಿಂದಿರುಗಿಸುವುದು, ಪ್ಯಾಲೆಸ್ಟೀನಿಯನ್ ಕೈದಿಗಳ ವಿನಿಮಯ, ಪ್ಯಾಲೆಸ್ಟೀನಿಯನ್ ನಾಗರಿಕರನ್ನು ಅವರ ಮನೆಗಳು ಮತ್ತು ನೆರೆಹೊರೆಗಳಿಗೆ ಹಿಂದಿರುಗಿಸುವುದು ಸೇರಿದಂತೆ ಜೂನ್ 2024ರ ಭದ್ರತಾ ಮಂಡಳಿಯ ನಿರ್ಣಯದ ಎಲ್ಲ ನಿಬಂಧನೆಗಳನ್ನು ಎರಡು ಕಡೆಯವರು ಸಂಪೂರ್ಣವಾಗಿ, ಬೇಷರತ್ತಾಗಿ ಮತ್ತು ವಿಳಂಬವಿಲ್ಲದೆ ಜಾರಿಗೆ ತರಬೇಕೆಂದು ನಿರ್ಣಯವು ಒತ್ತಾಯಿಸಿದೆ.
“ಪ್ರಸ್ತುತ ಅಂಗೀಕರಿಸಲ್ಪಟ್ಟ ನಿರ್ಣಯವು, ‘ಆಕ್ರಮಣಶೀಲ ಶಕ್ತಿ’ಯಾದ ಇಸ್ರೇಲ್ ತಕ್ಷಣವೇ ಗಾಜಾ ಮೇಲಿನ ದಿಗ್ಬಂಧನವನ್ನು ಕೊನೆಗೊಳಿಸಬೇಕು. ಎಲ್ಲ ಗಡಿ ದಾಟುವಿಕೆಗಳನ್ನು ತೆರೆಯಬೇಕು. ಅಂತಾರಾಷ್ಟ್ರೀಯ ಕಾನೂನು ಮತ್ತು ಮಾನವೀಯ ತತ್ವಗಳ ಅಡಿಯಲ್ಲಿ ತನ್ನ ಬಾಧ್ಯತೆಗಳಿಗೆ ಅನುಗುಣವಾಗಿ ಗಾಜಾಪಟ್ಟಿಯಾದ್ಯಂತ ಪ್ಯಾಲೆಸ್ಟೀನಿಯನ್ ನಾಗರಿಕ ಜನಸಂಖ್ಯೆಗೆ ನೆರವನ್ನು ತಕ್ಷಣವೇ ತಲುಪುವಂತೆ ನೋಡಿಕೊಳ್ಳಬೇಕು” ಎಂದು ಸ್ಪೇನ್ ಹೇಳಿದೆ.
ಈ ವರದಿ ಓದಿದ್ದೀರಾ?: ತುರ್ತುಪರಿಸ್ಥಿತಿಯ ಭೂಕಂಪಕ್ಕೆ ಕಾರಣವಾದ ಆ ನಿಷ್ಠುರ ತೀರ್ಪು!
ನಿರ್ಣಯದ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯಲ್ಲಿರುವ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್, “ಭಾರತವು ಹೆಚ್ಚುತ್ತಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಿದೆ. ನಾಗರಿಕರ ಜೀವಹಾನಿಯನ್ನು ಖಂಡಿಸುತ್ತದೆ. ಇಸ್ರೇಲ್-ಪ್ಯಾಲೆಸ್ತೀನ್ ವಿಷಯದ ಕುರಿತಾದ ನಿರ್ಣಯಗಳಿಗೆ ಭಾರತ ಈ ಹಿಂದೆಯೂ ಗೈರುಹಾಜರಾಗಿತ್ತು” ಎಂದು ಹೇಳಿದ್ದಾರೆ.
“ಇಸ್ರೇಲ್-ಪ್ಯಾಲೆಸ್ತೀನ್ ಸಮಸ್ಯೆಗೆ ಮಾತುಕತೆಯ ಮೂಲಕ ಎರಡು ದೇಶಗಳು ಪರಿಹಾರವನ್ನು ಕಂಡುಕೊಳ್ಳುವುದನ್ನು ಭಾರತ ಯಾವಾಗಲೂ ಬೆಂಬಲಿಸುತ್ತದೆ. ಇದು ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯವಾದ ಪ್ಯಾಲೆಸ್ತೀನ್ ದೇಶ ಸ್ಥಾಪಿಸಲು ಕಾರಣವಾಗುತ್ತದೆ. ನೇರ ಶಾಂತಿ ಮಾತುಕತೆಗಳ ಆರಂಭಿಕ ಪುನರಾರಂಭಕ್ಕೆ ಪರಿಸ್ಥಿತಿಗಳನ್ನು ಸೃಷ್ಟಿಸುವ ಕಡೆಗೆ ನಾವು ಕೆಲಸ ಮಾಡಬೇಕಾಗಿದೆ. ಶಾಂತಿಯ ಪುನಃಸ್ಥಾಪನೆ ಮತ್ತು ಗಾಜಾದಲ್ಲಿನ ಮಾನವೀಯ ಬಿಕ್ಕಟ್ಟನ್ನು ಅಂತ್ಯಗೊಳಿಸುವ ಕಡೆಗೆ ಸಂವಾದ ಮತ್ತು ರಾಜತಾಂತ್ರಿಕತೆಯ ನಿರೀಕ್ಷೆಯನ್ನು ವಿಸ್ತರಿಸಲು ಈ ಆಗಸ್ಟ್ ಸಭೆ ಸ್ಪಷ್ಟ ಸಂದೇಶವನ್ನು ಕಳುಹಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಎರಡೂ ಕಡೆಯವರನ್ನು ಹತ್ತಿರ ತರುವ ಕಡೆಗೆ ಜಂಟಿ ಪ್ರಯತ್ನವನ್ನು ನಿರ್ದೇಶಿಸಬೇಕು. ಈ ಕಾರಣಗಳಿಗಾಗಿ ನಾವು ಈ ನಿರ್ಣಯಕ್ಕೆ ಗೈರುಹಾಜರಾಗುತ್ತೇವೆ” ಎಂದು ಅವರು ತಿಳಿಸಿದ್ದಾರೆ.
“ಭಾರತವು ದ್ವಿಪಕ್ಷೀಯವಾಗಿ ಮತ್ತು ವಿಶ್ವಸಂಸ್ಥೆಯ ಮೂಲಕ ಗಾಜಾದ ಜನರಿಗೆ ಯಾವಾಗಲೂ ಮಾನವೀಯ ಸಹಾಯವನ್ನು ನೀಡಿದೆ. ಗಾಜಾದಲ್ಲಿ ಮಾನವೀಯ ಪರಿಸ್ಥಿತಿಯನ್ನು ಸುಧಾರಿಸಲು ಉಳಿದ ಒತ್ತೆಯಾಳುಗಳ ಬಿಡುಗಡೆ ಮತ್ತು ಕದನ ವಿರಾಮ ಮುಖ್ಯ ಎಂದು ನಾವು ನಂಬುತ್ತೇವೆ. ನಮ್ಮ ಸಾಮೂಹಿಕ ಧ್ವನಿ ಇದನ್ನು ಪ್ರತಿಧ್ವನಿಸಬೇಕು” ಎಂದು ಅವರು ಹೇಳಿದ್ದಾರೆ.