ಪಠ್ಯದ ಜತೆಗೆ ಬಸವಾದಿ ಶರಣರ ತತ್ವಗಳನ್ನು ಅಧ್ಯಯನ ನಡೆಸಿ ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ಹೇಳಿದರು.
ರಾಯಚೂರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಆಯೋಜಿಸಿದ 2022-23ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಷು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಯಲು ಸಿರಿ ಬೆಳಕು ಪ್ರಶಸ್ತಿ ಪ್ರದಾನ, ತ್ರಿಕಾಲ ಸತ್ಯ ಸಂಗ್ರಹ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
“ಶರಣರು ಅನುಸರಿಸಿದ್ದು ಒಂದೇ ಧರ್ಮ ಅದು ವೀರಶೈವ-ಲಿಂಗಾಯತ ಧರ್ಮ, ಶರಣರ ವಚನಗಳನ್ನು ಅಧ್ಯಯನ ಮಾಡಿ ಅದರಂತೆ ನಡೆದುಕೊಳ್ಳಬೇಕು, ಓದಿನಲ್ಲಿಯೂ ಸಹ ಸಮಾಜದ ವಿದ್ಯಾರ್ಥಿಗಳು ಮುಂದೆ ಬರಬೇಕು, ವೀರಶೈವ-ಲಿಂಗಾಯತ ಸಮಾಜವನ್ನು ಕಟ್ಟಿ ಬೆಳೆಸುವ ಕೆಲಸ ನಿರಂತರವಾಗಿ ನಡೆಯಬೇಕು” ಎಂದರು.
ಮಾಜಿ ಸಚಿವ ವೆಂಟರಾವ್ ನಾಡಗೌಡ ಮಾತನಾಡಿ, “ಜಾತಿ ಜನಗಣತಿಯಿಂದ ಜಾತಿಗಳನ್ನು ಬೇರ್ಪಡಿಸುವ ಕೆಲಸ ನಡೆಯುತ್ತಿದ್ದು, ನಾವು ಒಳಪಂಗಡಗಳ ಜಗಳ ಬೀದಿಗೆ ತರುವ ಕೆಲಸ ಮಾಡದೇ ಸಮಾಜ ಒಗ್ಗೂಡಿಸುವ ಕೆಲಸ ಮಾಡಬೇಕಿದೆ. ಬೇರೆಯವರನ್ನು ತೆಗಳುವ ಬದಲು ನಮ್ಮನ್ನು ನಾವು ಸರಿ ಮಾಡಿಕೊಳ್ಳಬೇಕು. ಸಮಾಜದ ಬಡ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣ ಒದಗಿಸುವ ಕೆಲಸ ಮಾಡಬೇಕಾಗಿದೆ, ಸಮಾಜ ಬೆಳೆಯಲು ಶಿಕ್ಷಣದ ಅಗತ್ಯವಿದೆ, ಬಡ ಜನರಿಗೆ ಶಿಕ್ಷಣ, ಉದ್ಯೋಗ ಒದಗಿಸಬೇಕು” ಎಂದು ತಿಳಿಸಿದರು.
ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಸ್ವಾಮೀಜಿ ಮಾತನಾಡಿ, “ಹಾನಗಲ್ ಶಿವಕುಮಾರ ಮಹಾ ಸ್ವಾಮೀಜಿಗಳು ಸ್ಥಾಪಿಸಿದ ವೀರಶೈವ-ಲಿಂಗಾಯತ ಸಮಾಜ ನಾವು ಮುನ್ನಡೆಸಬೇಕಿದೆ, ಅಂದಿನಿಂದ ಇಲ್ಲಿಯವರೆಗೆ ಸಮುದಾಯ ಒಗ್ಗೂಡಿದೆ, ಮುಂದೆಯೂ ಒಗ್ಗಟಾಗಿರಬೇಕು. ಧರ್ಮ ಪ್ರಸಾರದ ಕೆಲಸ ನಿರಂತರವಾಗಿ ನಡೆದರೆ ಮಾತ್ರ ಸಮಾಜ ಒಗ್ಗಟ್ಟಾಗಿರಲು ಸಾಧ್ಯ” ಎಂದು ನುಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಅವರಿಗೆ ʼಬಯಲು ಸಿರಿ ಬೆಳಕುʼ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 140 ವಿದ್ಯಾರ್ಥಿಗ ಳಿಗೆ ಪ್ರತಿಭಾ ಪುರಸ್ಕಾರ ಹಾಗೂ 2 ಸಾವಿರ ನಗದು ಬಹುಮಾನ ವಿತರಣೆ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ? ಅಧಿಕೃತ ಚುನಾವಣಾ ಫಲಿತಾಂಶ ಪ್ರಕಟಿಸಿದ ಆಯೋಗ: ಯಾವ ರಾಜ್ಯಗಳಲ್ಲಿ ಯಾರಿಗೆ ಎಷ್ಟು ಸ್ಥಾನ?
ಕಾರ್ಯಕ್ರಮದಲ್ಲಿ ಬಿಚ್ಚಾಲಿ- ಮಟಮಾರಿ -ಗಬ್ಬೂರು ಮಠದ ವೀರತಪಸ್ವಿ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಜಾಲಹಳ್ಳಿ ಬೃಹನ್ಮಠದ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಬಳ್ಳಾರಿಯ ಸುವರ್ಣಗಿರಿ ವಿರಕ್ತಮಠ ಸಿದ್ಧಲಿಂಗ ಮಹಾಸ್ವಾಮಿಗಳು, ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು, ಗಣೇಕಲ್ ಬೃಹನ್ಮಠದ ನೀಲಗಲ್ನ ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು, ಸೋಮವಾರ ಪೇಟೆ ಹಿರೇಮಠದ ಅಭಿನವ ರಾಟೋಟಿವೀರ ಶಿವಾಚಾರ್ಯ ಮಹಾಸ್ವಾಮಿ, ಗಬ್ಬೂರು ಸಂಸ್ಥಾನ ಮಠದ ಶ್ರೀ ಬೂದಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಸುಲ್ತಾನಪೂರುದ ಶಂಭು ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು, ದೇವದುರ್ಗದ ಕಪಿಲ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಸೇರಿದಂತೆ ಜಿಲ್ಲೆಯ ವಿವಿಧ ಮಠಗಳ ಮಹಾಸ್ವಾಮಿಗಳು, ಶಾಸಕ ಎಸ್. ಶಿವರಾಜ ಪಾಟೀಲ್, ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೆಚ್.ಎಮ್. ರೇಣುಕ ಪ್ರಸನ್ನ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪೂರ, ಶರಣಭೂಪಾಲ ನಾಡಗೌಡ, ರಾಚನಗೌಡ ಕೋಳೂರು, ಕಲ್ಲೂರು ಭೀಮರೆಡ್ಡಿ, ಮಲ್ಲಿಕಾರ್ಜುನ ದೋತರಬಂಡಿ, ಬಸನಗೌಡ, ಪರಮೇಶ್ವರ ಸಾಲಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಹಫೀಜುಲ್ಲ