ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳರ ಉಪಟಳ ಹೆಚ್ಚಾಗಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಚೈನ್ ಕಿತ್ತುಕೊಳ್ಳುವುದು, ವಾಹನ ನಿಲ್ಲಿಸಿ ದರೋಡೆ ಮಾಡುವುದು ಸೇರಿದಂತೆ ಹಲವಾರು ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದೀಗ, ಮಾಜಿ ಶಾಸಕರ ಮೊಮ್ಮಗನೊಬ್ಬ ಸರಗಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಹೌದು, ತಿಪಟೂರಿನ ಕಾಂಗ್ರೆಸ್ ಮಾಜಿ ಶಾಸಕ ತಿಮ್ಮೇಗೌಡ ಅವರ ಮೊಮ್ಮಗ ಅಭಿ, ರಾಕೇಶ್ ಹಾಗೂ ಸಲ್ಮಾನ್ ಎಂಬುವವರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದ್ವಿಚಕ್ರ ವಾಹನಕ್ಕೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಈ ಮೂವರು ಸೇರಿ ಸರಗಳ್ಳತನ ಮಾಡುತ್ತಿದ್ದರು. ಬೆಂಗಳೂರಿನ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ಮೂವರು ಸೇರಿ ಕೃತ್ಯ ಎಸಗಿದ್ದು, ಸದ್ಯ ಇವರ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಏನಿದು ಕಥೆ?
ರಾಜ್ಯದ ಪ್ರಪ್ರಥಮ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೆಲುವು ಸಾಧಿಸಿದ್ದ ಮಾಜಿ ಶಾಸಕ ಟಿ.ಜಿ.ತಿಮ್ಮೇಗೌಡ ಅವರು 2015ರಲ್ಲಿ ನಿಧನರಾಗಿದ್ದಾರೆ. ದೇಶದ ಸ್ವಾತಂತ್ರ್ಯಾ ನಂತರ ರಚನೆಗೊಂಡ ರಾಜ್ಯದ ಮೊದಲ ವಿಧಾನಸಭೆಯ ತಿಪಟೂರು ತಾಲ್ಲೂಕಿನ ಪ್ರಥಮ ಶಾಸಕರಾಗಿದ್ದರು ಎಂಬ ಹೆಗ್ಗಳಿಕೆಯೂ ಇವರಿಗಿದೆ.
1947ರಲ್ಲಿ ಮೈಸೂರು ರಾಜ್ಯದ ಪ್ರಜಾ ಪ್ರತಿನಿಧಿ ಸಭೆಯ (ಎಂ.ಆರ್.ಎ) ಸದಸ್ಯರಾಗಿ 1952ರ ವರೆಗೂ ಸೇವೆ ಸಲ್ಲಿಸಿದ್ದರು. ನಂತರ 1952ರಲ್ಲಿ ರಾಜ್ಯದಲ್ಲಿ ನಡೆದ ಪ್ರಥಮ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಮ್ಮ ಮೆಟ್ರೋದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ
ಊರಿಗೆ ಉಪಕಾರಿಯಾಗಿದ್ದ ತಿಮ್ಮೇಗೌಡರು ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಯಾವ ಆಸ್ತಿಯನ್ನು ಮಾಡಿರಲಿಲ್ಲ ಎಂದು ತಿಳಿದುಬಂದಿದೆ. ತಿಮ್ಮೇಗೌಡರ ಸಾವಿನ ಬಳಿಕ ಅವರ ಕುಟುಂಬದವರು ಯಾರೂ ರಾಜಕಾರಣದಲ್ಲಿ ಮುಂದುವರೆಯಲಿಲ್ಲ. ಕುಟುಂಬ ಬೆಳೆದಂತೆ ಎಲ್ಲರೂ ಇದ್ದ ಆಸ್ತಿಯನ್ನೇ ಪಾಲು ಮಾಡಿಕೊಂಡಿದ್ದರು. ಕೆಲವರು ಆಸ್ತಿಯನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಆದರೆ, ಇದೀಗ ಅವರ ಮೊಮ್ಮಗ ಕೆಲಸ ಮಾಡದೆ, ಸರಗಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಸೋಲದೇವನಹಳ್ಳಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಬಂಧಿತ ಅಭಿ ಮಾಜಿ ಶಾಸಕರ ಕುಟುಂಬದವನು ಎಂದು ತಿಳಿದುಬಂದಿದೆ. ನಂತರ ಆತ ಮನೆಯ ಬಡತನದ ಬಗ್ಗೆ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ಈಗಿನ ಶಾಸಕರು ಒಮ್ಮೆ ಶಾಸಕರಾದರೆ ಮುಂದಿನ ಮೂರು ತಲೆಮಾರುಗಳು ಮಜಾ ಮಾಡುವಷ್ಟು ದರೋಡೆ ಮಾಡುವರು