“ಶಾಲೆಗಳಲ್ಲಿ ಮಕ್ಕಳು ಮತ್ತು ಕಲಿಕೆಯೇ ಕೇಂದ್ರಬಿಂದು. ಮಕ್ಕಳಿಗೆ ಶಿಕ್ಷಣದ ಮೂಲಭೂತ ಹಕ್ಕಿನ ಭಾಗವಾಗಿ ನೀಡಬೇಕಾದ ಹಲವು ಉತ್ತೇಜಕಗಳು, ಅಗತ್ಯ ಮೂಲಸೌಕರ್ಯಗಳು ಹಾಗೂ ಪಾಠ ಮಾಡಲು ಅರ್ಹ ಶಿಕ್ಷಕರನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ಮುಖ್ಯವಾಗಿ ಯಾವುದೇ ನೆಪ ಹೇಳಿ ಸರ್ಕಾರಿ ಶಾಲೆಗಳನ್ನು ಸಾಮೂಹಿಕವಾಗಿ ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆ ಪೂರ್ಣವಾಗಿ ನಿಲ್ಲಬೇಕು” ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಹೇಳಿದೆ.
“ಶಾಲೆ ಪ್ರಾರಂಭವಾಗಿ ತಿಂಗಳುಗಳೇ ಕಳೆದು ಹೋದರೂ, ಇನ್ನೂ ಮಕ್ಕಳ ಕೈಗೆ ಪಠ್ಯಪುಸ್ತಕ ಸೇರಿಲ್ಲ. ಸಮವಸ್ತ್ರ, ಶೂ, ಸಾಕ್ಸ್ ಸಕಾಲಕ್ಕೆ ದೊರೆತಿಲ್ಲ. ಎಂಟರಿಂದ ಒಂಭತ್ತನೇ ತರಗತಿಗೆ ಹೋಗುತ್ತಿರುವ ಮಕ್ಕಳಿಗೆ ಕಳೆದ ಮೂರು ವರ್ಷದಿಂದ ಉಚಿತ ಬೈಸಿಕಲ್ ಸಿಕ್ಕಿಲ್ಲ” ಎಂದು ವೇದಿಕೆ ತಿಳಿಸಿದೆ.
“ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದ ಸದನದಲ್ಲಿ ಸ್ಥಗಿತಗೊಂಡಿರುವ ಯೋಜನೆಯನ್ನು ಪುನರಾರಂಭಿಸಲಾಗುವುದು. ಮಕ್ಕಳಿಗೆ ಮುಂದಿನ ವರ್ಷದಿಂದ ಬೈಸಿಕಲ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದು ಸ್ವಾಗತಾರ್ಹ. ಇದರ ಜತೆಗೆ, ಮಕ್ಕಳಿಗೆ ಉಳಿದ ಉತ್ತೇಜಕಗಳು ಸಕಾಲಕ್ಕೆ ದೊರೆಯುವಂತೆ ಕ್ರಮವಹಿಸುವುದು ಕೂಡ ಆದ್ಯತೆಯ ವಿಷಯವಾಗಬೇಕು” ಎಂದು ಹೇಳಿದೆ.
“ಸಚಿವರು ಮಕ್ಕಳ ಕಲಿಕೆಗೆ ಪೂರಕವಾಗಿರುವ ವಿಷಯಗಳ ಬಗ್ಗೆ ಆದ್ಯತೆಯ ಮೇಲೆ ಗಮನ ಹರಿಸಿ, ಮುಂದಿನ ಶೈಕ್ಷಣಿಕ ವರ್ಷ 2024-25 ರಿಂದಲಾದರೂ ಎಲ್ಲ ಉತ್ತೇಜಕಗಳನ್ನು ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಒದಗಿಸಬೇಕು” ಎಂದು ವೇದಿಕೆ ಒತ್ತಾಯಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅತ್ಯಾಚಾರ ಆರೋಪಿಯನ್ನು ದುಬೈನಲ್ಲಿ ಸೆರೆಹಿಡಿದ ಪೊಲೀಸರು
ಹಕ್ಕೊತ್ತಾಯಗಳು
- ಎಲ್ಲ ಮಕ್ಕಳಿಗೆ ಪರಿಷ್ಕೃತ ಪಠ್ಯಪುಸ್ತಕ ಮತ್ತು ನೋಟ್ ಪುಸ್ತಕ, 2 ಜತೆ ಸಮವಸ್ತ್ರ ಮತ್ತು 2 ಜತೆ ಷೂ ಹಾಗೂ ಸಾಕ್ಸ್ ವಿತರಣೆ ಮಾಡಬೇಕು.
- ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿ ಮಾಡಬೇಕು. ವಿಳಂಬವಾದಲ್ಲಿ ಶಾಲೆ ಪ್ರಾರಂಭದಲ್ಲಿಯೇ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು.
- ಏಕೋಪಾಧ್ಯಾಯ / ಶೂನ್ಯ ಶಿಕ್ಷಕರಿರುವ ಶಾಲೆಗಳಿಗೆ ಕೂಡಲೇ ಖಾಯಂ ಶಿಕ್ಷಕರ ನೇಮಕ ಮಾಡಬೇಕು. ಖಾಯಂ ಶಿಕ್ಷಕರನ್ನು ಅತ್ಯಗತ್ಯವಿರುವ ಗ್ರಾಮೀಣ ಪ್ರದೇಶಗಳಿಗೆ ನಿಯೋಜನೆ ಮಾಡಬೇಕು.
- ಪ್ರೌಢ ಶಿಕ್ಷಣ ಮುಂದುವರಿಸಲು ಏಳನೇ ತರಗತಿಯಿಂದ ಎಂಟು ಅಥವಾ ಎಂಟರಿಂದ ಒಂಭತ್ತನೇ ತರಗತಿಗೆ ಹೋಗುತ್ತಿರುವ ಮಕ್ಕಳಿಗೆ ಉಚಿತ ಬೈಸಿಕಲ್ ನೀಡಬೇಕು.
- ಯಾವುದೇ ನೆಪ ಹೇಳಿ ಸರ್ಕಾರಿ ಶಾಲೆಗಳನ್ನು ಸಾಮೂಹಿಕವಾಗಿ ಮುಚ್ಚುವ/ ವಿಲೀನಗೊಳಿಸುವ ಪ್ರಕ್ರಿಯೆ ಪೂರ್ಣವಾಗಿ ನಿಲ್ಲಬೇಕು.
- ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಭಾಗವಾಗಿ ಮಧ್ಯಾಹ್ನದ ಬಿಸಿಯೂಟದ ವೆಚ್ಚಕ್ಕೆ ಈಗಿರುವ ಪ್ರತಿ ಮಗುವಿನ ಯುನಿಟ್ ವೆಚ್ಚವನ್ನು ಹೆಚ್ಚಿಸಬೇಕು.
- ಈ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಸ್ಥಿತಿಗತಿ ಅರಿಯಲು ಸಿ ಆರ್ ಪಿ, ಶಿಕ್ಷಣ ಸಂಯೋಜಕರು, ಬಿಆರ್ಸಿ, ಬಿಆರ್ಪಿ, ಬಿಇಒ, ಡಿಡಿಪಿಐ ಮತ್ತು ಡಯಟ್ ಸಿಬ್ಬಂದಿ ಶಾಲೆಗಳಿಗೆ ಭೇಟಿ ನೀಡಿ ವಿವರವಾದ ವರದಿ ಸಲ್ಲಿಸಲು ಕ್ರಮ ವಹಿಸಬೇಕು.
- ಸಂವಿಧಾನದಲ್ಲಿನ ಮೂಲಭೂತ ಹಕ್ಕಾಗಿರುವ 21ಎ ಅನ್ನು ಕೊಡಮಾಡುವ ಶಿಕ್ಷಣ ಹಕ್ಕು ಕಾಯಿದೆಯನ್ನು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹಾಗೂ ನಿಗದಿತ ಸಮಯದಲ್ಲಿ ಎಲ್ಲ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಕಾಲಮಿತಿ ಯೋಜನೆ ರೂಪಿಸಬೇಕು.
- ಶಾಲಾ ಹಂತದಲ್ಲಿ ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಶಾಲಾ ಅಭಿವೃದ್ಧಿ ಮತ್ತು ಮೇಲು ಉಸ್ತುವಾರಿ ಸಮಿತಿಗಳನ್ನು ಪ್ರಜಾಸತ್ತಾತ್ಮಕವಾಗಿ ರಚಿಸಿ ಬಲವರ್ಧನೆಗೊಳಿಸಲು ಪರಿಣಾಮಕಾರಿ ತರಬೇತಿ ಒದಗಿಸಲು ಕ್ರಮ.
- ಬಾಲ್ಯಪೂರ್ವ ಆರೈಕೆ ಮತ್ತು ಶಿಕ್ಷಣವೂ ಒಳಗೊಂಡಂತೆ ಕನಿಷ್ಠ 12ನೆಯ ತರಗತಿಯವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ವಿಸ್ತರಿಸಲು ಸಂವಿಧಾನ ಹಾಗೂ ಶಿಕ್ಷಣಹಕ್ಕು ಕಾಯಿದೆಗೆ ಅಗತ್ಯ ತಿದ್ದುಪಡಿ ತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು.