ಮಹತ್ವದ ಆದೇಶವೊಂದರಲ್ಲಿ, ಪೊಲೀಸರು ಮತ್ತು ಜಾರಿ ನಿರ್ದೇಶನಾಲಯದಂಥ ಸಂಸ್ಥೆಗಳು ವಿಚಾರಣೆ, ಬಂಧನ ಅಥವಾ ಯಾವುದೇ ಸಂಬಂಧಿತ ತನಿಖಾ ಸಂದರ್ಭದಲ್ಲಿ ಯಾವುದೇ ಆರೋಪಿಯ ಡಿಜಿಟಲ್ ಸಾಧನಗಳನ್ನು ಶೋಧಿಸಲು ಮತ್ತು ವಶಪಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಆರು ವಾರಗಳ ಕಾಲಾವಕಾಶ ನೀಡಿದೆ.
ಫೌಂಡೇಶನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್ (ಎಫ್ಎಂಪಿ) ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ವಿಚಾರಣೆಯ ಸಮಯದಲ್ಲಿ ಯಾವುದೇ ಆರೋಪಿಯ ವಿರುದ್ಧ ಕಾನೂನು ಜಾರಿ ಸಂಸ್ಥೆಗಳು ಯಾವುದೇ ರೀತಿಯ ವಿವೇಚನಾರಹಿತ ಹಸ್ತಕ್ಷೇಪದ ವಿರುದ್ಧ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಅಥವಾ ಯಾವುದೇ ಸಂಬಂಧಿತ ಸಮಸ್ಯೆಗಳಿಗೆ ಪ್ರಮಾಣಿತ ಕಾರ್ಯಾಚರಣೆಯ ವಿಧಾನ (ಎಸ್ಒಪಿ)ವನ್ನು ರಚಿಸುವಂತೆ ನ್ಯಾಯಾಲಯವನ್ನು ಕೋರಿದೆ.
ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದಲ್ಲಿ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ನ ದ್ವಿಸದಸ್ಯ ಪೀಠವು 2021 ರಿಂದ ಮಾರ್ಗಸೂಚಿಗಳ ರಚನೆಯನ್ನು ಕೇಂದ್ರವು ವಿಸ್ತರಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಈ ನಿಟ್ಟಿನಲ್ಲಿ ಕೇಂದ್ರದ ನೂತನ ಮತ್ತು ಅಧಿಕೃತ ಮಾರ್ಗಸೂಚಿಗಳನ್ನು ರಚಿಸುವವರೆಗೂ ಡಿಜಿಟಲ್ ಸಾಧನಗಳ ಶೋಧ ಮತ್ತು ವಶಪಡಿಸಿಕೊಳ್ಳಲು ಎಲ್ಲ ಕೇಂದ್ರ ಸರ್ಕಾರದ ಏಜೆನ್ಸಿಗಳು ಪ್ರಸ್ತುತ ಸಿಬಿಐ ಕೈಪಿಡಿಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ನಿರ್ದೇಶಿಸಿದೆ.
ಈ ಸುದ್ದಿ ಓದಿದ್ದೀರಾ? ಅಶಿಸ್ತಿನ ವರ್ತನೆ: ಕಾಂಗ್ರೆಸ್, ಡಿಎಂಕೆ ಸೇರಿ 14 ಲೋಕಸಭಾ ಸದಸ್ಯರ ಅಮಾನತು
2024ರ ಫೆಬ್ರವರಿ 6ರವರೆಗೂ ಈ ಆದೇಶದ ಮುಂದಿನ ವಿಚಾರಣೆಯನ್ನು ಜಾರಿಯಲ್ಲಿಡಲು ನ್ಯಾಯಾಲಯವು ಪಟ್ಟಿ ಮಾಡಿತು.
ಡಿಸೆಂಬರ್ 06 ರಂದು ಸುಪ್ರೀಂ ಕೋರ್ಟ್ ತನ್ನ ಕೊನೆಯ ವಿಚಾರಣೆಯಲ್ಲಿ, ಯಾವುದೇ ಆರೋಪಿಗಳ ದಾಳಿಯ ಸಮಯದಲ್ಲಿ, ಪೊಲೀಸರು ಮತ್ತು ಕೇಂದ್ರೀಯ ಏಜೆನ್ಸಿಗಳಿಂದ ವೈಯಕ್ತಿಕ ಡಿಜಿಟಲ್ ಸಾಧನಗಳನ್ನು ಶೋಧಿಸಲು ಮತ್ತು ವಶಪಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ರೂಪಿಸುವಲ್ಲಿ ವಿಳಂಬವಾಗುತ್ತಿರುವ ಕೇಂದ್ರದ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.
ಡಿಜಿಟಲ್ ಸಾಧನಗಳ ಹುಡುಕಾಟ ಮತ್ತು ವಶಪಡಿಸಿಕೊಳ್ಳಲು ಸಮಗ್ರ ಮಾರ್ಗಸೂಚಿಗಳನ್ನು ರಚಿಸಲು ಸಂಬಂಧಿಸಿದ ಅಧಿಕಾರಿಗಳು ಮತ್ತು ತನಿಖಾ ಸಂಸ್ಥೆಗಳಿಗೆ ಉನ್ನತ ನ್ಯಾಯಾಲಯ ನಿರ್ದೇಶನ ನೀಡಬೇಕೆಂದು ಎಫ್ಎಂಪಿ ಕೋರಿತ್ತು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ನಿತ್ಯಾ ರಾಮಕೃಷ್ಣನ್ ಅವರು, ಮಾರ್ಗಸೂಚಿಗಳ ತುರ್ತು ಅಗತ್ಯಕ್ಕಾಗಿ ಉನ್ನತ ನ್ಯಾಯಾಲಯವನ್ನು ಒತ್ತಾಯಿಸಿದರು ಮತ್ತು ಸಂಪೂರ್ಣ ದಾಖಲೆಗಳನ್ನು ವಶಪಡಿಸಿಕೊಳ್ಳುವ ಬದಲು ಸಾಧನಗಳಲ್ಲಿನ ಅಗತ್ಯ ದತ್ತಾಂಶಗಳ ಪ್ರತಿಗಳನ್ನು ತೆಗೆದುಕೊಳ್ಳಬಹುದು ಎಂದು ಸಲಹೆ ನೀಡಿದರು.
ಇತ್ತೀಚಿನ ನ್ಯೂಸ್ಕ್ಲಿಕ್ ಪ್ರಕರಣಕ್ಕೆ ಸಂಬಂಧಿಸಿದಂತೆ 300 ಪತ್ರಕರ್ತರ ಮೇಲೆ ದಾಳಿ ನಡೆಸಲಾಗಿದೆ ಎಂದು ರಾಮಕೃಷ್ಣನ್ ತಿಳಿಸಿದರು.
ಮಾಧ್ಯಮ ವೃತ್ತಿಪರರು ತಮ್ಮ ಪತ್ರಿಕೋದ್ಯಮ ಕೆಲಸಕ್ಕಾಗಿ ವೈಯಕ್ತಿಕ ಡಿಜಿಟಲ್ ಸಾಧನಗಳ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಸಾಧನಗಳನ್ನು ವಶಪಡಿಸಿಕೊಳ್ಳುವುದರಿಂದ ಸುದ್ದಿಯ ಬಗೆಗಿನ ಗೌಪ್ಯ ಮಾಹಿತಿ, ಗೌಪ್ಯ ಮೂಲಗಳು ಸೋರಿಕೆಯಾಗುವ ಸಾಧ್ಯತೆಯಿರುತ್ತದೆ. ಇದು ಪತ್ರಕರ್ತರನ್ನು ಆಪತ್ತಿಗೆ ಸಿಲುಕಿಸುವ ಸಂಭವವಿರುತ್ತದೆ ಎಂದು ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.