- ಏಕಾಏಕಿ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ ಈಶ್ವರಪ್ಪ
- ಶಿವಮೊಗ್ಗ ಬಿಜೆಪಿಯಲ್ಲಿ ತೆರೆಮರೆಗೆ ಸರಿದ ಎರಡನೇ ಹಿರಿಯ ನಾಯಕ
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯೊಳಗೆ ಮಹತ್ತರ ಬೆಳವಣಿಗೆಗಳು ದಾಖಲಾಗುತ್ತಿವೆ. ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬೆನ್ನಲ್ಲೇ ಮತ್ತೋರ್ವ ನಾಯಕ ಕೆಎಸ್ ಈಶ್ವರಪ್ಪ ಕೂಡ ಚುನಾವಣಾ ರಾಜಕಾರಣದಿಂದ ದೂರ ಸರಿಯುವ ಘೋಷಣೆ ಮಾಡಿದ್ದಾರೆ.
ಈ ಸಂಬಂಧ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಪತ್ರ ಬರೆದಿರುವ ಅವರು, ”ನಾನು ಸ್ವ-ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತನಾಗಲು ಬಯಸಿದ್ದೇನೆ. ಹಾಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬಾರದು” ಎಂದು ಮನವಿ ಮಾಡಿದ್ದಾರೆ.
ಕಳೆದ 40ಕ್ಕೂ ಹೆಚ್ಚು ವರ್ಷದ ರಾಜಕೀಯ ಜೀವನದಲ್ಲಿ ಬೂತ್ ಮಟ್ಟದಿಂದ ರಾಜ್ಯದ ಉಪ-ಮುಖ್ಯಮಂತ್ರಿಯವರೆಗೆ ಗೌರವ ಸ್ಥಾನಮಾನಗಳನ್ನು ನೀಡಿದ ಪಕ್ಷದ ಹಿರಿಯರಿಗೆ ಧನ್ಯವಾದಗಳು” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈಶ್ವರಪ್ಪ ಅವರ ಪತ್ರವೀಗ ಬಿಜೆಪಿ ದೆಹಲಿ ನಾಯಕರ ರಾಜಕೀಯದಾಟದ ಹೊಸ ಆಯಾಮದ ಪರಿಚಯ ಮಾಡಿಕೊಟ್ಟಿದೆ.
ಬಂಡಾಯ ಶಮನಕ್ಕಾದ ಬಲಿಯೇ?
ಮಾಜಿ ಸಚಿವ ಕೆಎಸ್ಈ ಚುನಾವಣಾ ರಾಜಕೀಯ ನಿವೃತ್ತಿ ಮೇಲ್ನೋಟಕ್ಕೆ ವಯೋ ಸಹಜ ನಿವೃತ್ತಿ ಎನಿಸಿದರೂ ಅದರ ಹಿಂದೆ ಜಿಲ್ಲಾ ರಾಜಕಾರಣದಲ್ಲಿರುವ ಬಂಡಾಯ ಶಮನದ ಭಾಗ ಎನ್ನಲಾಗುತ್ತಿದೆ.
ಇದೇ ಜಿಲ್ಲೆಯ ಮತ್ತೋರ್ವ ಶಾಸಕ( ವಿಧಾನಪರಿಷತ್ ಸದಸ್ಯ)ಆಯುನೂರು ಮಂಜುನಾಥ್ ಕೆಎಸ್ಈ ಕ್ಷೇತ್ರದ ಮೇಲೆ ಕಣ್ಣು ಹಾಕಿದ್ದರು. ಈ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಿ ಬಂಡಾಯದ ಬಾವುಟವನ್ನೂ ಹಾರಿಸಿದ್ದರು.
ಈ ವಿಚಾರ ಶಿವಮೊಗ್ಗ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿತ್ತು. ಇತ್ತ ಈ ವಿಚಾರವನ್ನು ಗಂಭಿರವಾಗಿ ಪರಿಗಣಿಸಿದ ಬಿಜೆಪಿ ನಾಯಕರು ಬಂಡಾಯ ಶಮನಕ್ಕೆ ಮುಂದಾಗಿದ್ದರು. ಆಯನೂರು ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಸಲುವಾಗಿ ಕೆಎಸ್ಇ ಅವರನ್ನು ಕಣದಿಂದ ಹಿಂದೆ ಸರಿಸುವ ನಿರ್ಧಾರ ಕೈಗೊಂಡರು ಎನ್ನುವುದು ಮೂಲಗಳ ಮಾಹಿತಿ.
ಮಗನಿಗಾಗಿ ಚುನಾವಣಾ ರಾಜಕಾರಣದಿಂದ ಹಿಂದಕ್ಕೆ
ಮತ್ತೊಂದು ಮಾಹಿತಿ ಪ್ರಕಾರ ಕುಟುಂಬ ರಾಜಕಾರಣದ ಎರಡನೇ ಪೀಳಿಗೆ ಬೆಳವಣಿಗೆಗೆ ಬಿಜೆಪಿ ಮಾಡಿಕೊಂಡಿರುವ ಕುಟುಂಬಕ್ಕೊಂದೇ ಟಿಕೆಟ್ ವಿಚಾರ ಅಡ್ಡಿಯಾದ ಹಿನ್ನೆಲೆಯಲ್ಲಿ ಮಾಜಿ ಉಪಮುಖ್ಶಮಂತ್ರಿಗಳು ಈ ನಿರ್ಧಾರ ಪ್ರಕಟಿಸಿದ್ದಾರೆ ಎನ್ನಲಾಗಿದೆ.
ತಮ್ಮ ಪುತ್ರ ಕಾಂತೇಶ್ ಅವರಿಗೆ ಈ ಬಾರಿ ಚುನಾವಣೆ ಸ್ಪರ್ಧೆ ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ತಾವು ಹಿಂದೆ ಸರಿದು ಅವರಿಗೆ ಟಿಕೆಟ್ ಕೊಡಿಸಲು ಮಾಜಿ ಸಚಿವರು ನಿವೃತ್ತಿ ಪ್ರಕಟಿಸಿದ್ದಾರೆ.
ಯಡಿಯೂರಪ್ಪ ಮಾದರಿಯಲ್ಲೇ ಮಕ್ಕಳ ಭವಿಷ್ಯ ಗಟ್ಟಿಗೊಳಿಸಲು ಶಿವಮೊಗ್ಗ ನಗರ ಶಾಸಕರು ಚುನಾವಣಾ ರಾಜಕಾರಣದಿಂದ ದೂರ ಸರಿಯುತ್ತಿದ್ದಾರೆ ಎನ್ನುವುದು ಅವರ ಆಪ್ತರ ಮಾತು. ಒಟ್ಟಿನಲ್ಲಿ ಕೆಎಸ್ಈ ನಿರ್ಧಾರ ಶಿವಮೊಗ್ಗ ಜಿಲ್ಲಾ ರಾಜಕಾರಣಕ್ಕೆ ದೊಡ್ಡ ಹೊಡೆತ ನೀಡಿರುವುದು ಮಾತ್ರ ಸುಳ್ಳಲ್ಲ.
ಈಶ್ವರಪ್ಪ ಬಿಎಸ್ವೈ ಜೋಡಿ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ಈ ಬಿಜೆಪಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದವರು.
ಬಿಎಸ್ವೈ ರಾಜ್ಯದಲ್ಲಿ ಪಕ್ಷಕ್ಕೊಂದು ನೆಲೆ ಕಲ್ಪಸಿದ್ದ ಕಾಲದಲ್ಲಿ ಅವರ ಜೊತೆಗೂಡಿದ ಈಶ್ವರಪ್ಪ ಅದನ್ನು ಮತ್ತಷ್ಟು ಗಟ್ಟಿಗೊಳಿಸಲು ಹೆಗಲು ಕೊಟ್ಟು ನಿಂತವರು. ಒಂದೇ ಊರಿನ ಜೊತೆಗಾರರಾಗಿ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ತಂದು ನಿಲ್ಲಿಸುವವರೆಗೂ ಜೊತೆಗಿದ್ದ ನಾಯಕರು.
ಪಕ್ಷ ನಿಷ್ಠೆಯಲ್ಲಿ ಯಡಿಯೂರಪ್ಪನವರನ್ನೇ ಮೀರಿಸಿ ಒಂದು ಕಾಲದಲ್ಲಿ ಗೆಳೆತನವನ್ನೂ ಲೆಕ್ಕಿಸದೆ ಅವರಿಗೇ ಸವಾಲೆಸೆದು ಸೈ ಎನಿಸಿಕೊಂಡಿದ್ದ ನಾಯಕ ಈಶ್ವರಪ್ಪ.
ಈ ಸುದ್ದಿ ಓದಿದ್ದೀರಾ? : ಚುನಾವಣೆ ವಿಶೇಷ | ಕಾಂಗ್ರೆಸ್ನತ್ತ ಮುಖ ಮಾಡಿದ್ರಾ ಬಿಜೆಪಿ ನಾಯಕ ಲಕ್ಷ್ಮಣ ಸವದಿ?
ಬೊಮ್ಮಾಯಿ ಸರ್ಕಾರದಲ್ಲಿ 40% ಕಮಿಷನ್ ವಿಚಾರದಲ್ಲಿ ಗುತ್ತಿಗೆದಾರನ ಸಾವಿಗೆ ಕಾರಣರಾದ ಆರೋಪ ಹೊತ್ತು ಸಚಿವ ಸ್ಥಾನ ಕಳೆದುಕೊಂಡಿದ್ದ ಅವರು ಕೋರ್ಟ್ನಿಂದ ಕಳಂಕ ರಹಿತ ಮುದ್ರೆ ಪಡೆದು ಮರಳಿ ಬಂದವರು. ಬಳಿಕ ಸಚಿವನಾಗುವ ಆಸೆ ವ್ಯಕ್ತಪಡಿಸಿದ್ದ ಕೆಎಸ್ಈ ಅದೇ ಕಾರಣಕ್ಕೆ ಪಕ್ಷದ ಮೇಲೆ ಮುನಿಸು ತೋರಿಸಿದ್ದರು.
ಈಗ ಜೊತೆಗಾರ ಯಡಿಯೂರಪ್ಪನವರಂತೆಯೇ ಈಗ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿ, ಪುತ್ರನಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದಾರೆ.