ಭಾರೀ ಮಳೆಯಿಂದಾಗಿ ತಮಿಳುನಾಡು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ರಾಜ್ಯದ ತಿರುನಲ್ವೇಲಿ, ತೂತುಕುಡಿ, ತೆಂಕಶಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ತೂತುಕುಡಿಯಲ್ಲಿ ಒಬ್ಬರು, ತಿರುನೆಲ್ವೆಲಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಹೆಲೆಕಾಪ್ಟರ್ ಮೂಲಕ ಆಹಾರವನ್ನು ನೀಡಲು ರಾಜ್ಯವು ವಾಯುಪಡೆಯ ನೆರವನ್ನು ಕೇಳಿದೆ.
ತೂತುಕುಡಿ ಜಿಲ್ಲೆಯ ತಿರುಚೆಂದೂರಿನಲ್ಲಿ ಬೆಳಗಿನ ಜಾವ 1:30 ರವರೆಗಿನ ಕೇವಲ 15 ಗಂಟೆಗಳಲ್ಲಿ 60 ಸೆಂ.ಮೀ ಮಳೆಯಾಗಿದೆ. ತಿರುನಲ್ವೇಲಿ ಜಿಲ್ಲೆಯ ಪಾಲಯಂಕೊಟ್ಟೈನಲ್ಲಿ 26 ಸೆಂ.ಮೀ. ಇದೇ ವೇಳೆ ಕನ್ಯಾಕುಮಾರಿಯಲ್ಲಿ 17.3 ಸೆಂ.ಮೀ ಮಳೆಯಾಗಿದೆ.
ಧಾರಾಕಾರ ಮಳೆಯಿಂದಾಗಿ ತಮಿಳುನಾಡು ರಾಜ್ಯದ ಸಂತ್ರಸ್ತ ಜಿಲ್ಲೆಗಳಲ್ಲಿ ಇಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ. ಶಾಲೆಗಳು, ಕಾಲೇಜುಗಳು, ಬ್ಯಾಂಕುಗಳು, ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಮುಚ್ಚಲ್ಪಟ್ಟಿವೆ.
ಪಾಪನಾಸಂ, ಪೆರುಂಜನಿ ಮತ್ತು ಪೆಚುಪರೈ ಅಣೆಕಟ್ಟುಗಳಿಂದ ನೀರು ಬಿಡುತ್ತಿರುವುದರಿಂದ ತಿರುನಲ್ವೇಲಿ, ತೂತುಕುಡಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಮೂರರಿಂದ ನಾಲ್ಕು ಅಡಿಗಳವರೆಗೆ ನೀರು ನಿಂತಿದೆ.
ತಾಮರಪರಣಿ ನದಿ ಉಕ್ಕಿ ಹರಿಯುತ್ತಿದೆ. ಅಣೆಕಟ್ಟುಗಳಲ್ಲಿ ನೀರಿನ ಸಮರ್ಪಕ ನಿರ್ವಹಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಭಾರತದಲ್ಲಿ ಕೊರೋನಾ ಮತ್ತೆ ಸಕ್ರಿಯ: 1800 ಪ್ರಕರಣ ದಾಖಲು
ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಇಂದು(ಡಿ.18) ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿದ್ದಾರೆ. ಪ್ರತಿ ಪೀಡಿತ ಜಿಲ್ಲೆಯ ಮೇಲ್ವಿಚಾರಣೆಗೆ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ದುರ್ಬಲ ಪ್ರದೇಶಗಳಲ್ಲಿ ಪರಿಹಾರ ಕೇಂದ್ರಗಳು, ದೋಣಿಗಳನ್ನು ಸಿದ್ಧಪಡಿಸುವಂತೆ ಮತ್ತು ಅಗತ್ಯವಿದ್ದಲ್ಲಿ ಜನರನ್ನು ಬೇಗನೆ ಸ್ಥಳಾಂತರಿಸುವಂತೆ ಸ್ಟಾಲಿನ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ತಲಾ 50 ಸದಸ್ಯರನ್ನೊಳಗೊಂಡ ಎರಡು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಂಡಗಳು ತಿರುನಲ್ವೇಲಿ ಮತ್ತು ತೂತುಕುಡಿ ಜಿಲ್ಲೆಗಳಿಗೆ ಧಾವಿಸಿದ್ದು, ಕನ್ಯಾಕುಮಾರಿ ಜಿಲ್ಲೆಯಲ್ಲಿ ಮೂರು ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡಗಳನ್ನು ನಿಯೋಜಿಸಲಾಗಿದೆ.
ಹೆಚ್ಚುವರಿ ದೋಣಿಗಳನ್ನು ತೂತುಕುಡಿ ಮತ್ತು ಹತ್ತಿರದ ಪಟ್ಟಣಗಳಾದ ಶ್ರೀವೈಕುಂಡಂ ಮತ್ತು ಕಾಯಲ್ಪಟ್ಟಿಣಂ ಮುಂತಾದ ಪ್ರದೇಶಗಳಿಗೆ ಸಜ್ಜುಗೊಳಿಸಲಾಗಿದೆ. ಸುಮಾರು 7,500 ಜನರನ್ನು 84 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಮೊಬೈಲ್ ಗಳ ಮೂಲಕ 62 ಲಕ್ಷ ಜನರಿಗೆ ಎಚ್ಚರಿಕೆ ಸಂದೇಶ ಕಳುಹಿಸಲಾಗಿದೆ. ಅಲ್ಲದೆ, ಪೀಡಿತ ಜಿಲ್ಲೆಗಳಲ್ಲಿ 4,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೀನುಗಾರರು 40 ರಿಂದ 55 ಕಿ.ಮೀ ವರೆಗಿನ ಹೆಚ್ಚಿನ ಗಾಳಿಯ ವೇಗದಲ್ಲಿ ಸಮುದ್ರಕ್ಕೆ ಇಳಿಯದಂತೆ ಬಲವಾಗಿ ಸೂಚಿಸಲಾಗಿದೆ.
ಈ ತಿಂಗಳ 3 ಮತ್ತು 4 ರಂದು ಮಿಚಾಂಗ್ ಚಂಡಮಾರುತ ತಂದ ಭಾರೀ ಮಳೆಯಿಂದ ಉಂಟಾದ ಪ್ರವಾಹದ ನಂತರ ಚೆನ್ನೈ ಮತ್ತು ಪಕ್ಕದ ಮೂರು ಜಿಲ್ಲೆಗಳು ಚೇತರಿಸಿಕೊಳ್ಳುತ್ತಿರುವಾಗಲೇ ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಮಳೆ ಅವಾಂತರ ಸೃಷ್ಟಿಸಿದೆ.
ತೂತುಕುಡಿಗೆ ಹೋಗುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ವಂದೇ ಭಾರತ್ ರೈಲು ಸೇರಿದಂತೆ ತಿರುನಲ್ವೇಲಿಗೆ ಹೋಗುವ ಮತ್ತು ಆಗಮಿಸುವ ಹದಿನೇಳು ರೈಲುಗಳನ್ನು ಭಾಗಶಃ ಅಥವಾ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.