ಗೌರವಾನ್ವಿತ ಉಪರಾಷ್ಟ್ರಪತಿಗಳಿಗೆ ಅವಮಾನ ಮಾಡಿದ ವಿಪಕ್ಷಗಳಿಗೆ ಜನತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ದೆಹಲಿ ರಾಜ್ಯದ ಪ್ರಧಾನ ಕಾರ್ಯದರ್ಶಿ ಕುಲ್ಜೀತ್ ಸಿಂಗ್ ಚಾಹಲ್ ಹೇಳಿದರು.
ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ವಿರೋಧ ಪಕ್ಷಗಳ ಕ್ರಮವು ಎಲ್ಲ ರೈತ ಸಮುದಾಯ, ಒಬಿಸಿ ಸಮುದಾಯಕ್ಕೆ ಬೇಸರ ತಂದಿದೆ. ನಾನೂ ಒಬಿಸಿ ಸಮುದಾಯಕ್ಕೆ ಸೇರಿದವನು. ಸಂಸದರು ತಮ್ಮ ಸ್ಥಾನಕ್ಕೆ ತಕ್ಕುದಾಗಿ ವರ್ತಿಸುತ್ತಿಲ್ಲ. ಅಧಿಕಾರ ಕಳಕೊಂಡಾಗ ಅವರು ಹತಾಶರಾಗಿ ವರ್ತಿಸುತ್ತಾರೆ” ಎಂದರು.
“ರಾಹುಲ್ ಗಾಂಧಿಯವರು ಉಪರಾಷ್ಟ್ರಪತಿಗಳ ಅಣಕವನ್ನು ವಿಡಿಯೋ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕನಂತೆ, ಸಂಸದನಂತೆ ಅವರ ವರ್ತನೆ ಇಲ್ಲ. ರೈತ ಸಮುದಾಯ ಮತ್ತು ಒಬಿಸಿ ಸಮುದಾಯದ ನಾಯಕ, ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಹೀಗೆ ಸದನದ ಒಳಗೆ ಮತ್ತು ಹೊರಗೆ ಅವಮಾನಿಸುವುದು ಸರಿಯಲ್ಲ” ಎಂದು ಆಕ್ಷೇಪಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೂಷಣೆ ಬಿಡಲಿ, ಆತ್ಮಹತ್ಯೆಯಿಂದ ರೈತರನ್ನು ದೂರ ಮಾಡಲಿ
“ದೆಹಲಿಯಲ್ಲಿ ಮುಂಗೇರಿಲಾಲ್ ಕಿ ಹಸೀನ್ ಸಪ್ನೇ ಎಂಬ ಮಾತಿದೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಮಾಡುವ ಕನಸು ಕಾಣುವ ಮೊದಲು ಕಾಂಗ್ರೆಸ್ ಅಗತ್ಯ ಸಂಸದರ ಕುರಿತು ಚಿಂತಿಸಬೇಕಿದೆ. ಅದು ಈಗ ಅತ್ಯಂತ ಕಡಿಮೆ ಸಂಸದರನ್ನು ಹೊಂದಿದೆ. ಇದು ಕೇವಲ ಹಗಲುಗನಸಷ್ಟೇ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
“ಉತ್ತರದ ದೊಡ್ಡ 3 ರಾಜ್ಯಗಳ ಚುನಾವಣಾ ಫಲಿತಾಂಶವು ಮೋದಿ ಗ್ಯಾರಂಟಿಯ ಪರವಾಗಿದೆ. ಬಿಜೆಪಿ 2019ಕ್ಕಿಂತ ಹೆಚ್ಚು ಸ್ಥಾನಗಳೊಂದಿಗೆ 2024ರಲ್ಲಿ ಅಧಿಕಾರಕ್ಕೆ ಏರಲಿದೆ. ಆಪ್ ಪಕ್ಷದ ಮುಖಂಡರು ಕಡು ಭ್ರಷ್ಟಾಚಾರಿಗಳು ಎಂಬುದು ಸ್ಪಷ್ಟವಾಗಿದೆ. ಲಿಕ್ಕರ್ ಸ್ಕ್ಯಾಮ್ನಡಿ ದೆಹಲಿಯ ಕೇಜ್ರಿವಾಲ್ ಸಂಪುಟದ ಇಬ್ಬರು ಸಚಿವರು ಮತ್ತು ಒಬ್ಬ ಸಂಸದ ಈಗಾಗಲೇ ಜೈಲಿನಲ್ಲಿದ್ದು, ಅವರಿಗೆ ಜಾಮೀನೂ ಸಿಗುತ್ತಿಲ್ಲ. ಕೇಜ್ರಿವಾಲ್ ಸರದಿ ಬರಲಿದೆ” ಎಂದರು.