ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಐಯುಟಿಯುಸಿಗೆ ಸಂಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಪ್ರತಿಭಟನೆ ನಡೆಸಿದರು.
ಬಳ್ಳಾರಿಯ ಗಾಂಧಿಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾಕಾರರು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದು, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಅವರು ಮಾತನಾಡಿ “ ಹಗಲಿರುಳು, ಜನಗಳ ಆರೋಗ್ಯಕ್ಕಾಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರನ್ನು ಸರ್ಕಾರಗಳು ಅತ್ಯಂತ ನಿರ್ಲಕ್ಷ್ಯದಿಂದ ಕಾಣುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕೊರಾನಾ ಸಂದರ್ಭದಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ದುಡಿದ ಆಶಾ ಕಾರ್ಯಕರ್ತೆಯರಿಗೆ ಸರ್ಕಾರಗಳು ನೀಡಿದ್ದಾದರೂ ಏನು? ಹಿಂದಿನ ಬಿಜೆಪಿ ಸರ್ಕಾರ ಬಜೆಟ್ನಲ್ಲಿ ₹1,000 ಹೆಚ್ಚಿಸಿತ್ತಾದರೂ, ಅದನ್ನು ಕಾರ್ಯಗತಗೊಳಿಸಲಿಲ್ಲ. ಆಶಾಗಳಿಗೆ ಮೋಸ ಮಾಡಿತು. ಈಗಿನ ಕಾಂಗ್ರೆಸ್ ಸರ್ಕಾರ ಚುನಾವಣಾ ಸಂದರ್ಭದಲ್ಲಿ ನಿಗದಿತ ವೇತನ ₹5000ದಿಂದ ₹8000ಕ್ಕೆ ಏರಿಸುವ ಗ್ಯಾರಂಟಿ ನೀಡಿತ್ತು. ಆದರೆ ಈವರೆಗೆ ಕಾರ್ಯಗತವಾಗಿಲ್ಲ. ಇದಲ್ಲದೆ ಆರ್ಸಿಹೆಚ್ ಪೋರ್ಟಲ್ನ ಸಮಸ್ಯೆಯಿಂದಾಗಿ ಸಾವಿರಾರು ರೂಪಾಯಿಗಳು ಆಶಾಗಳಿಗೆ ನಷ್ಟವಾಗುತ್ತಿದ್ದರೂ, ಇಲಾಖೆಯಿಂದ ಸಮರ್ಪಕ ಕ್ರಮವಿಲ್ಲ” ಎಂದು ಆರೋಪಿಸಿದರು.
ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಎ ದೇವದಾಸ್ ಮಾತನಾಡಿ, “ಒತ್ತಾಯಪೂರ್ವಕವಾಗಿ ಆಶಾಗಳಿಗೆ ಅವರದಲ್ಲದ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳಿಂದ ಆಶಾಗಳ ಕೆಲಸಗಳ ಬಗ್ಗೆ ಸ್ಪಷ್ಟ ನಿರ್ದೇಶನಗಳಿದ್ದರೂ, ಪಿಹೆಚ್ಸಿ ಮಟ್ಟದಲ್ಲಿ ಅದು ಪಾಲನೆಯಾಗುತ್ತಿಲ್ಲ. ಅನಗತ್ಯ ಸರ್ವೆಗಳು, ಪರೀಕ್ಷೆ, ಚುನಾವಣೆ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ತಾಯಿ-ಶಿಶುವಿನ ಆರೋಗ್ಯಕ್ಕೆ ಸಂಬಂಧಪಟ್ಟ ಕೆಲಸಗಳು ಹಿಂದೆ ಸರಿದಿವೆ” ಎಂದರು.
“ದುಡಿದಷ್ಟು ಪ್ರೋತ್ಸಾಹ ಧನ ಸಂಪೂರ್ಣವಾಗಿ ದೊರೆಯಬೇಕು. ಆರ್ಸಿಹೆಚ್ ಪೋರ್ಟಲ್ನ ಗೊಂದಲಗಳಿಗೆ ಅಂತ್ಯ ಹಾಡಬೇಕು. ಪ್ರೋತ್ಸಾಹ ಧನ ₹15,000 ನಿಗಧಿಯಾಗಬೇಕು. ನಿಗಧಿಯಾಗದ ಅನ್ಯ ಕೆಲಸಗಳನ್ನು ಆಶಾಗಳಿಗೆ ನೀಡಬಾರದು, ಅನಗತ್ಯ ಸರ್ವೆ ಹಾಗೂ ಕಾರ್ಯಕ್ರಮಗಳಲ್ಲಿ ತೊಡಗಿಸಬಾರದು ಸೇರಿದಂತೆ ಮುಂತಾದ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮಲೆನಾಡು ಕರಾವಳಿ ಜನಪರ ಒಕ್ಕೂಟ ಆಯೋಜಿಸಿದ್ದ ಎರಡು ದಿನಗಳ ಶಿಬಿರ ಯಶಸ್ವಿ
ಮನವಿ ಪತ್ರವನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಮಾತನಾಡಿ, “ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಕುರಿತು ಚರ್ಚಿಸಲು, ಸಭೆ ಕರೆಯುವಂತೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಎ ಶಾಂತಾ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ ಪ್ರಮೋದ್, ಮುಖಂಡರುಗಳಾದ ಗೀತಾ, ರೇಷ್ಮಾ, ರಾಮಕ್ಕ, ಜಲಜಾಕ್ಷಿ ಸೇರಿದಂತೆ ಇತರರು ಇದ್ದರು.
ವರದಿ : ರಾಧಾಕೃಷ್ಣ