ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಕ್ಯಾಲಿಕಟ್ ವಿಶ್ವವಿದ್ಯಾಲಯದ ಸೆನೆಟ್ಗೆ ನಾಮನಿರ್ದೇಶನ ಮಾಡಿರುವ ಸೆನೆಟ್ ಸದಸ್ಯರ ವಿರುದ್ಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಸೆನೆಟ್ ಸದಸ್ಯರು ಸಂಘಪರಿವಾರದ ಜೊತೆ ಸಂಬಂಧ ಹೊಂದಿದ್ದಾರೆ. ಅವರು ವಿಶ್ವವಿದ್ಯಾಲಯದ ಸೆನೆಟ್ಗೆ ಬೇಡವೆಂದು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ‘ನಮಗೆ ಕುಲಪತಿ ಬೇಕು – ಸಾವರ್ಕರ್ ಅಲ್ಲ’ ಎಂಬ ಬ್ಯಾನರ್ ಹಿಡಿದು ವಿಶ್ವವಿದ್ಯಾಲಯಗಳ ಕುಲಪತಿಯೂ ಆಗಿರುವ ರಾಜ್ಯಪಾಲರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ನಡೆದ ಸಭೆಯಲ್ಲಿ ರಾಜ್ಯಪಾಲರು ಐದು ಮಂದಿ ಸೆನೆಟ್ ಸದಸ್ಯರನ್ನು ನಾಮನಿರ್ದೇಶನ ಮಾಡಿದ್ದಾರೆ. ನೂತನ ಸೆನೆಟ್ ಸಭೆಗೆ ಭಾಗಿಯಾಗಲು ವಿಶ್ವವಿದ್ಯಾಲಯಕ್ಕೆ ಬಂದ ಸದಸ್ಯರನ್ನು ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಡೆದಿದ್ದಾರೆ. ಸೆನೆಟ್ ಭವನದ ಪ್ರವೇಶದ್ವಾರದಲ್ಲಿ ಧರಣಿ ನಡೆಸಿದ್ದಾರೆ.
ಸೆನೆಟ್ ಸಭೆಗೆ ಸಂಘಪರಿವಾರದ ಹಿನ್ನೆಲೆ ಇರುವ ನಾಮನಿರ್ದೇಶಿತರನ್ನು ಯಾವುದೇ ಕಾರಣಕ್ಕೂ ಬರಲು ಬಿಡುವುದಿಲ್ಲ. ಸೆನೆಟ್ನಲ್ಲಿ ಎಂದಿಗೂ ಸಂಘಪರಿವಾರದವರಿಗೆ ಅವಕಾಶ ನೀಡುವುದಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
“ರಾಜ್ಯದ ಶಿಕ್ಷಣ ಕ್ಷೇತ್ರವನ್ನು ಕೇಸರಿಮಯಗೊಳಿಸಲು ಆರಿಫ್ ಖಾನ್ ಪ್ರಯತ್ನಿಸುತ್ತಿದ್ದಾರೆ. ಕುಲಪತಿಗಳು ಸಂಘಪರಿವಾರಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಸೆನೆಟ್ ಮತ್ತು ಸಿಂಡಿಕೇಟ್ಗಳಿಗೆ ನೇಮಿಸುವ ಮೂಲಕ ಸಂಘ ಪರಿವಾರದ ಪರವಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: 97 ಸಂಸದರ ಅನುಪಸ್ಥಿತಿಯ ನಡುವೆ ಲೋಕಸಭೆಯಲ್ಲಿ ಮೂರು ಕ್ರಿಮಿನಲ್ ಮಸೂದೆಗಳ ಅಂಗೀಕಾರ
“ಸಂಘಪರಿವಾರದ ಬೆಂಬಲಿಗರಿಗೆ ಸೆನೆಟ್ ಸಭೆಯಲ್ಲಿ ಪಾಲ್ಗೊಳ್ಳಲು ನಾವು ಅವಕಾಶ ನೀಡುವುದಿಲ್ಲ. ಸಂಘಪರಿವಾರ ಮತ್ತು ಬಿಜೆಪಿ ವಿರುದ್ಧ ಕೇರಳ ಒಗ್ಗಟ್ಟಾಗಿ ನಿಂತಿದೆ. ಆದರೆ, ಕುಲಪತಿಗಳು ವಿಶ್ವವಿದ್ಯಾನಿಲಯಗಳಲ್ಲಿ ಸೆನೆಟ್ ಮತ್ತು ಸಿಂಡಿಕೇಟ್ಗೆ ಸಂಘಪರಿವಾರದ ಬೆಂಬಲಿಗರನ್ನು ನೇಮಿಸುತ್ತಿದ್ದಾರೆ. ಅಂತಹ ಯಾವುದೇ ಪ್ರಯತ್ನವನ್ನು ನಾವು ಸಹಿಸುವುದಿಲ್ಲ” ಎಂದು ಎಸ್ಎಫ್ಐ ಮುಖಂಡ ಅಫ್ಸಲ್ ಹೇಳಿದ್ದಾರೆ.
ಪ್ರತಿಭಟನಾನಿರತ ಎಸ್ಎಫ್ಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.