ಲೋಕಸಭೆ ಹಾಗೂ ರಾಜ್ಯಸಭೆಯ ಉಭಯ ಸದನಗಳ 146 ಸಂಸದರನ್ನು ಅಮಾನತುಗೊಳಿಸಿದ್ದನ್ನು ಖಂಡಿಸಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದ ಡಾ. ಬಾಬಾಸಾಹೇಬ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧ್ಯಕ್ಷ ರಾಜು ಆಲಗೂರ ಅವರ ನೇತೃತ್ವದಲ್ಲಿ ಪ್ರಜಾಪ್ರಭುತ್ವ ವಿರೋಧಿ, ಜನವಿರೋಧಿ ಕೇಂದ್ರ ಬಿಜೆಪಿ ಸರ್ಕಾರದ ಧೋರಣೆಯನ್ನು ಬಲವಾಗಿ ಖಂಡಿಸಿದರು.
ಜಿಲ್ಲಾಧ್ಯಕ್ಷ ರಾಜು ಆಲಗೂರ ಮಾತನಾಡಿ, “ಕೇಂದ್ರದ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿಯಾಗಿದ್ದು, ಇವರಿಗೆ ಸಂವಿಧಾನದ ಮೇಲೆ ವಿಶ್ವಾಸವಿಲ್ಲ ಹಾಗೂ ರಾಷ್ಟ್ರದ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ಮಾಡುತ್ತಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿರುವುದನ್ನು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ. ರಾಜಕೀಯ ದ್ವೇಷ ಸಾಧಿಸಲು ಹೊರಟಿರುವ ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ಮೇಲೆ ಗದಾಪ್ರಹಾರ ಮಾಡುತ್ತಿದೆ” ಎಂದು ಆರೋಪಿಸಿದರು.
“ಲೋಕಸಭೆ ಹಾಗೂ ರಾಜ್ಯಸಭೆಯ ಸಭಾಪತಿಗಳನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ವಿರೋಧ ಪಕ್ಷಗಳನ್ನು ನಿರ್ನಾಮ ಮಾಡಲು ಹೊರಟಿದ್ದಾರೆ. ಇವರ ಜನವಿರೋಧಿ ನೀತಿಗಳನ್ನು ಪ್ರಶ್ನೆ ಮಾಡಿದಾಗ ಹಿಂಬಾಗಿಲಿನಿಂದ ಕೇಂದ್ರದ ಬಿಜೆಪಿ ಸರ್ಕಾರ ವಿರೋಧ ಪಕ್ಷದ ಉಭಯ ಸದನಗಳ ಸಂಸದರನ್ನು ಅಮಾನತುಗೊಳಿಸುವುದು ಯಾವುದೇ ಒಂದು ಸಣ್ಣ ವಿಷಯಕ್ಕೆ ಅನರ್ಹಗೊಳಿಸುವ ಕೃತ್ಯಗಳಿಗೆ ಕೈಹಾಕಿರುವುದು ಈ ದೇಶದ ದುರಂತಗಳಲ್ಲಿ ಒಂದು” ಎಂದರು.
“ಭಾರತ ರಾಷ್ಟ್ರ ಸ್ವತಂತ್ರಗೊಂಡ ನಂತರ ಇಷ್ಟೊಂದು ಸಂಖ್ಯೆಯಲ್ಲಿ ಸಂಸದರನ್ನು ಅಮಾನತುಗೊಳಿಸಿದ್ದು ಇದೇ ಮೊದಲ ಬಾರಿಯಾಗಿದೆ. ಈ ದೇಶದ ಜನ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಇವರಿಗೆ ತಕ್ಕಪಾಠ ಕಲಿಸಲಿದ್ದಾರೆ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರು ನೋಡುತ್ತಿಲ್ಲಾ ಅಂತಾ ಇವರು ಭಾವಿಸಿದಂತೆ ಕಾಣುತ್ತದೆ” ಎಂದರು.
“ವಿರೋಧ ಪಕ್ಷಗಳನ್ನು ಹೊರಗಿಟ್ಟು, ಜನವಿರೋಧಿ ಬಿಲ್ಗಳನ್ನು ಮಂಡಿಸಿ ಅವುಗಳನ್ನು ಪಾಸ್ ಮಾಡಿಕೊಳ್ಳುವ ಇವರ ಹುನ್ನಾರವನ್ನು ಇಡೀ ದೇಶ ಗಮನಿಸಿದೆ. ಇವರ ಹುಳುಕನ್ನು ಯಾವಾಗ ಯಾವಾಗ ವಿರೋಧ ಪಕ್ಷ ಪ್ರಶ್ನೆ ಮಾಡಿದೆಯೋ ಆಗ ಇವರು ಈ ತರಹದ ಕೆಲಸ ಮಾಡಿದ್ದಾರೆ. ಇವರು ಈ ದೇಶವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ಜನವಿರೋಧಿ ನೀತಿಗಳ ಬಿಲ್ಗಳನ್ನು ಮಂಡಿಸಿ ಈ ದೇಶದ ಸಾಮರಸ್ಯಕ್ಕೆ ಧಕ್ಕೆ ತಂದೊಡ್ಡುವ ಪ್ರಯತ್ನ ಮಾಡುತ್ತಿದ್ದು, ಸರ್ವಾಧಿಕಾರಿ ರಾಜನಂತೆ ವರ್ತಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಇವರ ಈ ನೀತಿಯನ್ನು ಜನರ ಮುಂದೆ ಕೊಂಡೊಯ್ದು ಇವರಿಗೆ ತಕ್ಕಪಾಠ ಕಲಿಸುತ್ತದೆ. ಇವರ ಈ ಸರ್ವಾಧಿಕಾರಿ ಧೋರಣೆಯನ್ನು ಬಲವಾಗಿ ಖಂಡಿಸುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಸಿರಿಧಾನ್ಯ ಬೆಳೆಯುವ ರೈತರಿಗೆ ರೈತಸಿರಿ ಯೋಜನೆ: ಜಂಟಿ ಕೃಷಿ ನಿರ್ದೇಶಕ
ಈ ವೇಳೆ ಕೆ ಎಫ್ ಅಂಕಲಗಿ, ಆಜಾದ ಪಟೇಲ, ರಮೇಶ ಗುಬ್ಬೇವಾಡ, ಮಹ್ಮದರಫೀಕ ಟಪಾಲ, ಆರತಿ ಶಹಾಪೂರ, ಶಬ್ಬೀರ ಜಾಗೀರದಾರ, ಸಾಹೇಬಗೌಡ ಬಿರಾದಾರ ಮುಂತಾದವರು ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಡಾ.ಗಂಗಾಧರ ಸಂಬಣ್ಣಿ, ಚಂದ್ರಕಾಂತ ಶೆಟ್ಟಿ, ಕೆಪಿಸಿಸಿ ವಕ್ತಾರ ಎಸ್ ಎಂ ಪಾಟೀಲ ಗಣಿಹಾರ, ಜಮೀರ್ ಅಹ್ಮದ್ ಬಕ್ಷಿ, ಕಾಂಗ್ರೆಸ್ ಮುಖಂಡ ಡಿ ಎಲ್ ಚವ್ಹಾಣ, ಎನ್ಎಸ್ಯುಐ ಜಿಲ್ಲಾ ಅಧ್ಯಕ್ಷ ಅಮಿತ ಚವ್ಹಾಣ, ಮಹಾನಗರಪಾಲಿಕೆ ಸದಸ್ಯ ದಿನೇಶ ಹಳ್ಳಿ, ಅಂಗ ಘಟಕಗಳ ಅಧ್ಯಕ್ಷ ಕೃಷ್ಣಾ ಕಾಮಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನಮಲ್ಲ ಸಾರವಾಡ, ಚನಬಸಪ್ಪ ನಂದರಗಿ ಸೇರಿದಂತೆ ಬಹುತೇಕರು ಇದ್ದರು.