ಕೇಂದ್ರದ ಎನ್ಡಿಎ ಸರ್ಕಾರದ ನೀತಿಗಳನ್ನು ಪ್ರಶ್ನೆ ಮಾಡಿದ ಪ್ರಗತಿಪರ ಹೋರಾಟಗಾರರು, ಆದಿವಾಸಿ ಮುಖಂಡರು, ದಲಿತ ಮುಖಂಡರು ಮತ್ತು ಹಲವಾರು ರಾಜಕೀಯ ನಾಯಕರುಗಳನ್ನು ಇಂದು ಜೈಲಿನಲ್ಲಿಟ್ಟು ರಾಜಕೀಯ ನಡೆಸುತ್ತಿದೆ ಎಂದು ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಆರೋಪಿಸಿದರು.
ತುಮಕೂರಿನಲ್ಲಿ ನಡೆದ ಭಾರತ ಕಮ್ಯುನಿಸ್ಟ್ ಪಕ್ಷದ 98ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. “ದೇಶದ ಸಂಸತ್ತಿಗೆ ಭದ್ರತೆ ಇಲ್ಲವೆಂದು ಪ್ರಶ್ನಿಸಿದ ಪ್ರತಿಪಕ್ಷಗಳ ಎಲ್ಲ ಸಂಸದರನ್ನು ಅಮಾನತ್ತಿನಲ್ಲಿಟ್ಟು, ಚರ್ಚೆ ಇಲ್ಲದೆ ಅಧಿವೇಶನ ನಡೆಸಿ ಕಾನೂನುಗಳನ್ನು ಅಂಗೀಕರಿಸುತ್ತಿದೆ. ಇಂತಹ ನೀತಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಇಂದಿನ ಬಡವ ವಿರೋಧಿ, ನಿರುದ್ಯೋಗಿ, ರೈತ ವಿರೋಧಿ, ಮಹಿಳಾ ವಿರೋಧಿ, ವಿದ್ಯಾರ್ಥಿ ಯುವಜನ ವಿರೋಧಿ, ಎನ್ಡಿಎ ಪಕ್ಷವನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ತಿಳಿಸಿದರು.
“ಭಾರತ ಕಮ್ಯುನಿಸ್ಟ್ ಪಕ್ಷವು ದೇಶದ ದುಡಿಯುವ ವರ್ಗದ ರೈತ, ಕಾರ್ಮಿಕ, ಬಡವರು, ಮಹಿಳೆಯರು, ವಿದ್ಯಾರ್ಥಿ ಯುವಜನರ ರಾಜಕೀಯ ಪಕ್ಷವಾಗಿ 1925ರಲ್ಲಿ ಉದಯವಾಯಿತು. ಅಂದು ದೇಶದಲ್ಲಿ ಬ್ರಿಟಿಷರು ಆಡಳಿತ ನಡೆಸಿದ ಸಂದರ್ಭದಲ್ಲಿ ದೇಶದ ರೈತರು, ಕಾರ್ಮಿಕರು ಮತ್ತು ಬಡವರ ಪರವಾಗಿ ರಾಜಕೀಯ ಹೋರಾಟವನ್ನು ರೂಪಿಸಿಕೊಂಡು ಬಂದಿದೆ. ಇಂದು ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಸಂಪೂರ್ಣವಾಗಿ ಕಾರ್ಪೊರೇಟ್ ಪರವಾಗಿ ಆಡಳಿತ ನಡೆಸುತ್ತಿದೆ. ಇದರಿಂದ ದೇಶದಲ್ಲಿ ಉಳ್ಳವರು ಮತ್ತೆ ಬಡವರ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು ಹೋಗಲಾಡಿಸಬೇಕೆಂದರೆ ಸಮತಾ ಸಮಾಜವಾದ ನಿರ್ಮಾಣ ಮಾಡಬೇಕಾಗಿರುವ ಭಾರತ ಕಮ್ಯುನಿಸ್ಟ್ ಪಕ್ಷದ ಧ್ಯೇಯೋದ್ದೇಶಗಳ ಬಗ್ಗೆ ಜನರಿಗೆ ಹೆಚ್ಚೆಚ್ಚು ತಿಳುವಳಿಕೆ ಮಾಡಿಕೊಡಬೇಕಾಗಿದೆ” ಎಂದರು.
ಪಕ್ಷದ ತುಮಕೂರು ಜಿಲ್ಲಾ ಉಸ್ತುವಾರಿ ಎ ಜ್ಯೋತಿ ಮಾತನಾಡಿ, “ನೂರು ವರ್ಷಗಳ ಹಿಂದೆ ಮಹಿಳೆಯರು ಪ್ರಶ್ನೆ ಮಾಡಲು ಭಯಪಡುತ್ತಿದ್ದರು. ಇಂತಹ ಸಮಯದಲ್ಲಿ ಭಾರತ ಕಮ್ಯುನಿಷ್ಟ್ ಪಕ್ಷದ ನೇತೃತ್ವದಲ್ಲಿ ಮಹಿಳೆಯರು ತಮ್ಮ ಪ್ರಶ್ನೆಗಳನ್ನು ಕೇಳಿ ಹೋರಾಟ ಮಾಡಿದ ಹಲವಾರು ಮಹಿಳೆಯರು ಇದ್ದಾರೆ. ಭಾರತ ಕಮ್ಯುನಿಸ್ಟ್ ಪಕ್ಷವನ್ನು ಮುನ್ನಡೆಸುವಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ. ಹಾಗಾಗಿ ಬಹುತೇಕ ಮಹಿಳೆಯರು ಪಕ್ಷದಲ್ಲೇ ತೊಡಗಿಸಿಕೊಂಡು ಪಕ್ಷವನ್ನು ಮುನ್ನಡೆಸಬೇಕು” ಎಂದು ಕರೆ ನೀಡಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ, “ಪ್ರಸ್ತುತ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ಕಂಪನಿಗಳಿಂದ ಸಾವಿರಾರು ಕೋಟಿ ರೂಪಾಯಿಗಳ ಚುನಾವಣೆ ಬಾಂಡ್ಗಳು ಬರುತ್ತವೆ. ಆದರೆ ಭಾರತ ಕಮ್ಯುನಿಸ್ಟ್ ಪಕ್ಷವು ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳಿಂದ ನಿರಂತರವಾಗಿ ಬಡವ ರೈತ ಕಾರ್ಮಿಕರ ಪರವಾಗಿ ಹೋರಾಟಗಳನ್ನು ಮಾಡುತ್ತಾ ಬಂದಿದ್ದು, ಪಕ್ಷಕ್ಕೆ ಹಣದ ಮೂಲ ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳೇ ಆಗಿದ್ದಾರೆ. ಹಾಗಾಗಿ ಭಾರತ ಕಮ್ಯುನಿಸ್ಟ್ ಪಕ್ಷವು ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಸಕ್ರಿಯವಾಗಿ ಇರಬೇಕೆಂದರೆ ಕಾರ್ಯಕರ್ತರು ಭದ್ರವಾಗಿ ಗ್ರಾಮ ಶಾಖೆಗಳನ್ನು ಮಾಡುವ ಮುಖಾಂತರ ಪಕ್ಷಗಳಿಗೆ ಬಲ ತುಂಬಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶ
ಉಪ್ಪಾರಹಳ್ಳಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರೇವಣ್ಣ ಪಕ್ಷದ ಧ್ವಜವನ್ನು ಹಾರಿಸುವುದರ ಮುಖಾಂತರ ಉದ್ಘಾಟನೆ ಮಾಡಿದರು. ಟಿ ಆರ್ ರೇವಣ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿಗಳಾದ ಜಿ ಚಂದ್ರಶೇಖರ್, ಗೋವಿಂದರಾಜು, ಜಿಲ್ಲಾ ಖಜಾಂಚಿ ಅಶ್ವಥ್ ನಾರಾಯಣ, ಜಿಲ್ಲಾ ಮಂಡಳಿ ಕಾರ್ಯದರ್ಶಿ ಕಂಬೇಗೌಡ ತಿಪಟೂರು ಬಾಬಣ್ಣ, ಪಾವಗಡ ರಾಮಕೃಷ್ಣ, ಶಿರಾ ರುದ್ರಪ್ಪ ಸೇರಿದಂತೆ ಬಹುತೇಕರು ಇದ್ದರು.