ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿ ಪಾಳುಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆಯಾಗಿವೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸಿದಾಗ ಅಸ್ಥಿಪಂಜರಗಳು ಕಂಡುಬಂದಿವೆ.
ಘಟನೆ ಸಂಬಂಧ ಪವನ್ ಕುಮಾರ್ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆ ಮನೆಯಲ್ಲಿ ತಮ್ಮ ಸಂಬಂಧಿ, ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ, ಅವರ ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣರೆಡ್ಡಿ ಹಾಗೂ ನರೇಂದ್ರರೆಡ್ಡಿ ವಾಸವಾಗಿದ್ದರು ಎಂದು ಪವನ್ ಕುಮಾರ್ ತಿಳಿಸಿದ್ದಾರೆ. ಈ ಅಸ್ಥಿಪಂಜರಗಳು ಅವರದ್ದೇ ಇರಬಹುದು ಎಂದು ಹೇಳಲಾಗಿದೆ.
ಆ ಐವರು ಆತ್ಮಹತ್ಯೆ ಮಾಡಿಕೊಂಡಿರಬಹುದೇ? ಅಥವಾ ಯಾರಾದರೂ ಕೊಲೆ ಮಾಡಿರಬಹುದೇ? ಎಂಬ ಅನುಮಾನಗಳು ವ್ಯಕ್ತವಾಗಿವೆ. ಅಸ್ಥಿಪಂಜರಗಳನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳಿಸಲಾಗಿದೆ. ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಗೊತ್ತಾಗಿದೆ ಎಂದು ತಿಳಿದುಬಂದಿದೆ.
ಬುಧವಾರ ಯಾರೋ ಮನೆಯ ಬಾಗಿಲು ಹೊಡೆದಿದ್ದಾರೆ. ಹೀಗಾಗಿ, ನಾಯಿಗಳು ಮನೆ ಒಳಗೆ ಹೋಗಿದ್ದು, ಅಲ್ಲಿದ್ದ ಅಸ್ಥಿಪಂಜರದ ತಲೆಬುರುಡೆಯನ್ನು ಹೊರತಂದು ಹಾಕಿವೆ. ಅದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
“ಆ ಮನೆಯಲ್ಲಿ 2019ರ ಕ್ಯಾಲೆಂಡರ್ ಸಿಕ್ಕಿದೆ. ಕೊರೊನಾ ಸಮಯದಲ್ಲಿ ಅವರು ಸಾವಿಗೀಡಾಗಿರುವ ಅನುಮಾನವಿದೆ” ಎಂದು ಸ್ಥಳೀಯರು ಹೇಳಿದ್ದಾರೆ.
“ಜಗನ್ನಾಥರೆಡ್ಡಿ ಹಲವು ವರ್ಷಗಳಿಂದ ನಮ್ಮ ಸಂಪರ್ಕದಲ್ಲಿ ಇರಲಿಲ್ಲ. ಕೆಲ ವರ್ಷಗಳಿಂದ ಅವರ ಕುಟುಂಬ ಕಾಣಿಸಿರಲಿಲ್ಲ. ಅವರ ಮನೆಯಲ್ಲಿ ಪತ್ತೆಯಾಗಿರುವ ಅಸ್ಥಿಪಂಜರಗಳು ಅವರದ್ದೇ ಇರಬಹುದು. ವರ್ಷಗಳ ಹಿಂದೆಯೇ ಅವರು ಮೃತಪಟ್ಟಿರುವ ಸಾಧ್ಯತೆಗಳಿವೆ” ಎಂದು ಪವನ್ ಕುಮಾರ್ ಹೇಳಿದ್ದಾರೆ.