ರಾಯಚೂರು ಮತ್ತು ಯಾದಗಿರಿ ಹಲವಾರು ಗ್ರಾಮಗಳಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಬೃಹತ್ ಯಂತ್ರಗಳನ್ನು ಬಳಸಿ ಗಣಿಗಾರಿಕೆ ನಡೆಸಲಾಗುತ್ತಿದೆ. ಅಧಿಕಾರಿಗಳು ಎಚ್ಚೆತ್ತು, ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಬೇಕೆಂದು ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.
ರಾಯಚೂರು ಮತ್ತು ಯಾದಗಿರಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಬರೆದಿರುವ ವೇದಿಕೆಯ ಮುಖಂಡರು, “ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚಿಕಲಪರ್ವಿ ಮತ್ತು ಯಾಳವಾರ ಗ್ರಾಮದಲ್ಲಿ ತುಂಗಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ದೇವದುರ್ಗ ತಾಲೂಕಿನ ಕರ್ಕಹಳ್ಳಿ, ಬೆಣಕಲ್, ಗೋಪಳಪುರ್ ಹಾಗೂ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಟೂಣೂರು, ಗೌಡೂರು, ಕೋಳೂರಿನಲ್ಲಿ ಕೃಷ್ಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ” ಎಂದು ತಿಳಿಸಿದೆ.
“ಎರಡೂ ಜಿಲ್ಲೆಗಳ ಹಲವು ಗ್ರಾಮಗಳಲ್ಲಿ ಹಸಿರು ಪೀಠದ ಆಧೇಶವನ್ನು ಉಲ್ಲಂಘಿಸಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಹಲವರು ದೂರುಗಳನ್ನು ಕೊಟ್ಟಿರುವುದಾಗಿ ವರದಿಯಾಗಿದೆ. ಆದರೆ, ಅದನ್ನು ತಡೆಯುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗಕ್ಕೆ ನಾಗರಿಕರು ಕೊಟ್ಟ ದೂರುಗಳ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮಗಳನ್ನು ಜರುಗಿಸುವ ಗುರುತರಜವಾಬ್ದಾರಿ ಜಿಲ್ಲಾಧಿಕಾರಿಗಳಿಗೂ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಇದೆ. ಆದರೆ ಜಿಲ್ಲೆಯ ನಾಗರಿಕರ ಅಹವಾಲುಗಳನ್ನು ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪಗಳಿವೆ” ಎಂದು ಕಿಡಿಕಾರಿದ್ದಾರೆ.
“ಕೃಷ್ಣಾ, ತುಂಗಭದ್ರಾ ನದಿಗೆ ನುಗ್ಗಿ ಬಹಿರಂಗವಾಗಿ ಭಾರಿ ಗಾತ್ರದ ಯಂತ್ರೋಪಕರಣಗಳಿಂದ ಮರಳುಗಳನ್ನೂ ಅಕ್ರಮವಾಗಿ ಕಡಿದು ಸರಬರಾಜು ಮಾಡಲಾಗುತ್ತಿದೆ. ಆದರೂ, ಮರ, ಮರಳು ಕಳ್ಳರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳದಿರುವುದು ಜಿಲ್ಲಾಡಳಿತದ ವೈಫಲ್ಯವಾಗಿದೆ. ಉತ್ತರ ಕರ್ನಾಟಕದದ ಜೀವನದಿ ಕೃಷ್ಣೆ, ತುಂಗಭದ್ರಾ ನದಿಗಳು ಆಡಳಿತದ ವೈಫಲ್ಯದಿಂದ ಮುಂದಿನ ದಿನಗಳಲ್ಲಿ ಕಾಣೆಯಾಗಬಹುದು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈ ನೆಲದ ಕಾನೂನು ಎಲ್ಲರಿಗೂ ಒಂದೇ ಎನ್ನುವ ರೀತಿಯಲ್ಲಿ ಆಡಳಿತ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕು. ಯಾವುದೇ ರೀತಿಯ ಮುನ್ಸೂಚನೆ ನೀಡದೆ ಆಗಾಗ್ಗೆ ನದಿಗಳ ಬಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಅಕ್ರಮವನ್ನು ತಡೆಯಬೇಕು” ಎಂದು ಒತ್ತಾಯಿಸಿದ್ದಾರೆ.
ಹಕ್ಕೊತ್ತಾಯ ಪತ್ರದಲ್ಲಿ ವೇದಿಕೆಯ ಮುಖಂಡ ಹೆಚ್ ಎಂ ವೆಂಕಟೇಶ್, ಹಂದ್ರಾಳ್ ನಾಗಭೂಷಣ್, ಕುಣಿಗಲ್ ನರಸಿಂಹಮೂರ್ತಿ, ಲೋಕೇಶ್ ಬಿಎಸ್, ಜಗದೀಶ್ ಟಿ ಸಹಿ ಹಾಕಿದ್ದಾರೆ.