ಸುಮಾರು 12 ವರ್ಷಗಳ ಹಿಂದಿನ ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಕರ್ನಾಟಕದ ಜನಪ್ರತಿನಿಧಿ ನ್ಯಾಯಾಲಯ 6 ಕೋಟಿ 96 ಲಕ್ಷದ 70 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.
ದಂಡ ಪಾವತಿಸಲು ವಿಫಲರಾದಲ್ಲಿ 6 ತಿಂಗಳುಗಳ ಸೆರೆವಾಸ ಅನುಭವಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದೆ.
ಮಧು ಬಂಗಾರಪ್ಪ ಅವರು 6 ಕೋಟಿ, 96 ಲಕ್ಷದ 70 ಸಾವಿರ ರೂ.ಗಳನ್ನು ದಂಡವನ್ನಾಗಿ ಕಟ್ಟಬೇಕು. ಅದರಲ್ಲಿ ಅವರು 6 ಕೋಟಿ, 96 ಲಕ್ಷದ, 60 ಸಾವಿರ ರೂ.ಗಳನ್ನು ಫಿರ್ಯಾದುದಾರರಾದ ರಾಜೇಶ್ ಎಕ್ಸ್ ಪೋರ್ಟ್ಸ್ ಅವರಿಗೆ ನೀಡಬೇಕು. ಉಳಿದ 10 ಸಾವಿರ ರೂ.ಗಳನ್ನು ಸರ್ಕಾರಕ್ಕೆ ದಂಡದ ರೂಪದಲ್ಲಿ ಕಟ್ಟಬೇಕು ಎಂದು ಹೇಳಿದೆ. ಈ ಎಲ್ಲ ಪ್ರಕ್ರಿಯೆಗಳಿಗೆ ತಪ್ಪಿದರೆ 6 ತಿಂಗಳ ಕಾರಾಗೃಹ ವಾಸವನ್ನು ಅನುಭವಿಸಬೇಕು ಎಂದು ಹೇಳಿದೆ.
ತೀರ್ಪು ಪ್ರಕಟಿಸಿದ ಜನಪ್ರತಿನಿಧಿ ನ್ಯಾಯಾಲಯ, ಇದರ ನಡುವೆಯೇ, ಮಧು ಬಂಗಾರಪ್ಪನವರು ಕೋರ್ಟ್ ನಲ್ಲಿ ಮುಚ್ಚಳಕೆಯೊಂದನ್ನು ಸಲ್ಲಿಸಿದರು. ಸದ್ಯಕ್ಕೆ 50 ಲಕ್ಷ ರೂ. ಗಳನ್ನು ಈಗ ಫಿರ್ಯಾದುದಾರರಿಗೆ ಪಾವತಿಸಿ, ಉಳಿದ 6 ಕೋಟಿ, 10 ಸಾವಿರ ರೂಗಳನ್ನು ಜ. 30ರೊಳಗೆ ಕೊಡುವುದಾಗಿ ಅದರಲ್ಲಿ ತಿಳಿಸಿದ್ದರು. ಆದರೆ, ಅದನ್ನು ನ್ಯಾಯಾಲಯ ಒಪ್ಪಿಕೊಳ್ಳಲಿಲ್ಲ. ಈ ಹಿಂದೆಯೂ ಇಂಥದ್ದೇ ಮುಚ್ಚಳಿಕೆಯನ್ನು ಬರೆದುಕೊಟ್ಟು ಅದನ್ನು ಮಧು ಬಂಗಾರಪ್ಪನವರು ಪಾಲಿಸಿಲ್ಲ. ಹಾಗಾಗಿ, ಈ ಬಾರಿ ಮುಚ್ಚಳಿಕೆಯನ್ನು ಒಪ್ಪಲಾಗದು ಎಂದು ಹೇಳಿದ ನ್ಯಾಯಾಧೀಶರು, ದಂಡ ವಿಧಿಸಿ ಆದೇಶ ಹೊರಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ; ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಏನು ಮಾಡುತ್ತಿವೆ?
2011ರಲ್ಲಿ ದಾಖಲಾಗಿದ್ದ ಪ್ರಕರಣವಾಗಿದ್ದು ಮಧು ಬಂಗಾರಪ್ಪನವರು ಅವರೇ ಸ್ಥಾಪಿಸಿದ್ದ ಆಕಾಶ್ ಆಡಿಯೋ ಸಂಸ್ಥೆಯಲ್ಲಿ ಅವರೇ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಆ ಸಂಸ್ಥೆಯಿಂದ ರಾಜೇಶ್ ಎಕ್ಸ್’ಪೋರ್ಟ್ಸ್ ಎಂಬುವವರಿಗೆ 6 ಕೋಟಿ, 96 ಲಕ್ಷದ 60 ಸಾವಿರ ರೂ. ಸಂದಾಯ ಮಾಡಬೇಕಾಗಿತ್ತು. ಹಲವಾರು ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಹಣಕ್ಕೆ ಮಧು ಬಂಗಾರಪ್ಪನವರು ಚೆಕ್ ನೀಡಿದ್ದರು. ಆದರೆ, ಅದು ಬೌನ್ಸ್ ಆಗಿತ್ತು. ಇದರಿಂದ, ರಾಜೇಶ್ ಎಕ್ಸ್ ಪೋರ್ಟ್ಸ್ ಸಂಸ್ಥೆ ಮಧು ಬಂಗಾರಪ್ಪ ವಿರುದ್ಧ ಪ್ರಕರಣ ದಾಖಲಿಸಿತ್ತು. ಅಂದಿನಿಂದ ವಿಚಾರಣೆ ನಡೆಯುತ್ತಿದ್ದ ಪ್ರಕರಣಕ್ಕೆ ಈಗ ತೀರ್ಪು ನೀಡಲಾಗಿದೆ.