ಮರಗಳ್ಳತನ ಪ್ರಕರಣದ ಆರೋಪ ಎದುರಿಸುತ್ತಿರುವ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹನನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, “ಸ್ವಾರ್ಥಕ್ಕಾಗಿ ಯಾರೇ ಮರ ಕಡಿದರೂ ಅದು ಅಪರಾಧ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ” ಎಂದು ತಿಳಿಸಿದ್ದಾರೆ.
ಬೀದರ್ನಲ್ಲಿ ಮಾತನಾಡಿದ ಅವರು, “ಪ್ರಕೃತಿ ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ಆದರೆ ಬೇಲೂರು ತಾಲೂಕು ನಂದಗೋಡನ ಹಳ್ಳಿಯಲ್ಲಿ 126ಕ್ಕೂ ಹೆಚ್ಚು ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ. ಇದರಲ್ಲಿ 50-60 ವರ್ಷದ ಬೃಹತ್ ಹಳೆಯ ಮರಗಳೂ ಇವೆ. ಈ ರೀತಿ ಸ್ವಾರ್ಥಕ್ಕಾಗಿ ಯಾರೇ ಮರ ಕಡಿದರೂ ಅದು ಅಪರಾಧ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ” ಎಂದು ಹೇಳಿದ್ದಾರೆ.
“ವೃಕ್ಷ ಸಂರಕ್ಷಣಾ ಕಾಯಿದೆಯಡಿ ಸರ್ಕಾರಿ ಜಾಗದಲ್ಲಿಯೇ ಆಗಲೀ, ಪಟ್ಟಾ ಜಮೀನಿನಲ್ಲೇ ಆಗಲಿ, ಅನುಮತಿ ಪಡೆಯದೆ ಅಕ್ರಮವಾಗಿ ಮರ ಕಡಿಯುವುದು ಅಪರಾಧ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ.
ನಾನು ಯಾರ ಹೆಸರೂ ಹೇಳಲು ಇಚ್ಛಿಸುವುದಿಲ್ಲ. ಆದರೆ, ವಿಕ್ರಂ ಸಿಂಹ ಎಂಬುವವರು ಶುಂಠಿ ಬೆಳೆಯಲು ಜಮೀನಿನ ಕರಾರು ಮಾಡಿಕೊಂಡಿದ್ದಾರೆ. ಹೀಗಾಗಿ ಅವರನ್ನು ವಶಕ್ಕೆ ಪಡೆದು ಪ್ರಶ್ನಿಸುವುದು ಅಗತ್ಯವೆಂದು ಮನಗಂಡು ತನಿಖಾಧಿಕಾರಿಗಳು ಅವರನ್ನು ಬಂಧಿಸಿದ್ದಾರೆ” ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮರಗಳ್ಳತನ ಪ್ರಕರಣ | ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಬಂಧನ
“ಈ ಪ್ರಕರಣದಲ್ಲಿ ತಹಶೀಲ್ದಾರ್ ಅವರು ಪ್ರಕರಣ ಬೆಳಕಿಗೆ ತಂದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯ ಮೇಲ್ನೋಟಕ್ಕೆ ಕಂಡು ಬಂದಿದೆ. ಕ್ಷಿಪ್ರವಾಗಿ ಕ್ರಮವಹಿಸದ ಮತ್ತು ನಿಯಮಾನುಸಾರ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಎಸಗಿರುವ ಆರೋಪದಡಿ ಐವರು ಅಧಿಕಾರಿ ಸಿಬ್ಬಂದಿಗಳನ್ನು ಈಗಾಗಲೇ ಅಮಾನತು ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಬಂಧನದ ಮೂಲಕ ನಿಸರ್ಗದ ಶೋಕಕ್ಕೆ ನ್ಯಾಯ ಸಿಕ್ಕಿದೆ: ಕಾಂಗ್ರೆಸ್
ವಿಕ್ರಂ ಸಿಂಹ ಬಂಧನದ ಬೆನ್ನಲ್ಲೇ ಟ್ವೀಟ್ ಮಾಡಿರುವ ಕಾಂಗ್ರೆಸ್ ಐಟಿ ಸೆಲ್, “ಈ ಬಂಧನದ ಮೂಲಕ ನಿಸರ್ಗದ ಶೋಕಕ್ಕೆ ನ್ಯಾಯ ಸಿಕ್ಕಂತಾಗಿದೆ” ಎಂದು ತಿಳಿಸಿದೆ.
ಪಾರ್ಲಿಮೆಂಟ್ ದಾಳಿಕೋರರಿಗೆ ಪಾಸ್ ನೀಡಿದ್ದ ಬ್ಯಾರಿಕೆಡ್ ಶೂರ ಪ್ರತಾಪ್ ಸಿಂಹ ಅವರ ಸಹೋದರ ಕಾಡಿನ ಕಳ್ಳ ವಿಕ್ರಮ್ ಸಿಂಹರ ಬಂಧನವಾಗಿದೆ.
ಈ ಬಂಧನದ ಮೂಲಕ ನಿಸರ್ಗದ ಶೋಕಕ್ಕೆ ನ್ಯಾಯ ಸಿಕ್ಕಂತಾಗಿದೆ.ನನ್ನ ತಮ್ಮ ತಪ್ಪೇ ಮಾಡಿಲ್ಲ ಎನ್ನುತ್ತಿದ್ದ @mepratap ಅವರೇ,
ನಿಮ್ಮ ತಮ್ಮ ತಲೆಮರೆಸಿಕೊಂಡಿದ್ದೇಕೆ? ಈಗ ಬಂಧನವಾಗಿದ್ದೇಕೆ?ಕಾಡುಗಳ್ಳ…
— Karnataka Congress (@INCKarnataka) December 30, 2023
“ಪಾರ್ಲಿಮೆಂಟ್ ದಾಳಿಕೋರರಿಗೆ ಪಾಸ್ ನೀಡಿದ್ದ ಬ್ಯಾರಿಕೆಡ್ ಶೂರ ಪ್ರತಾಪ್ ಸಿಂಹ ಅವರ ಸಹೋದರ ಕಾಡಿನ ಕಳ್ಳ ವಿಕ್ರಮ್ ಸಿಂಹರ ಬಂಧನವಾಗಿದೆ. ಈ ಬಂಧನದ ಮೂಲಕ ನಿಸರ್ಗದ ಶೋಕಕ್ಕೆ ನ್ಯಾಯ ಸಿಕ್ಕಂತಾಗಿದೆ. ನನ್ನ ತಮ್ಮ ತಪ್ಪೇ ಮಾಡಿಲ್ಲ ಎನ್ನುತ್ತಿದ್ದ ಪ್ರತಾಪ್ ಸಿಂಹ ಅವರೇ, ನಿಮ್ಮ ತಮ್ಮ ತಲೆಮರೆಸಿಕೊಂಡಿದ್ದೇಕೆ? ಈಗ ಬಂಧನವಾಗಿದ್ದೇಕೆ? ಕಾಡುಗಳ್ಳ ವೀರಪ್ಪನ್ ಸ್ಥಾನ ತುಂಬುವಂತೆ ನಿಮ್ಮ ಸಹೋದರನನ್ನು ತಯಾರು ಮಾಡುತ್ತಿದ್ರಾ?” ಎಂದು ಪ್ರಶ್ನಿಸಿದೆ. ಕಳೆದ ಡಿ.23ರಂದು ಕಡಿದಿದ್ದ ಮರಗಳ ವಿಡಿಯೋವನ್ನು ಕಾಂಗ್ರೆಸ್ ಐಟಿ ಸೆಲ್, ಪೋಸ್ಟ್ ಮಾಡಿತ್ತು.