ಜನವರಿ 22ರಂದು ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಂದು ಸಾರ್ವತ್ರಿಕ ರಜೆ ಘೋಷಿಸಿ ಎಂದು ಆಗ್ರಹಿಸಿ ಸಿಎಂ ಸಿದ್ದರಾಮಯ್ಯನವರಿಗೆ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ಪತ್ರ ಬರೆದಿದ್ದಾರೆ.
ಪತ್ರ ಬರೆದಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಉಡುಪಿಯ ಶಾಸಕ, “ಸಮಸ್ತ ಹಿಂದೂಗಳ ಶ್ರದ್ಧಾ ಕೇಂದ್ರವಾಗಿ 500 ವರ್ಷಗಳ ಕನಸು ನನಸಾಗುವ ಸಮಸ್ತ ಭಾರತೀಯರ ಪಾಲಿಗೆ ಅತ್ಯಂತ ಪವಿತ್ರ ದಿನ. ಅಯೋಧ್ಯೆ ರಾಮ ಮಂದಿರದ ಲೋಕಾರ್ಪಣೆಯ ಭಾವನಾತ್ಮಕ ಐತಿಹಾಸಿಕ ಕ್ಷಣವನ್ನು ಮನೆ ಮನಗಳಲ್ಲಿ ಆಚರಿಸಲು ಜನವರಿ 22ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಿ” ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸಮಸ್ತ ಹಿಂದೂಗಳ ಶ್ರದ್ಧಾ ಕೇಂದ್ರವಾಗಿ 500 ವರ್ಷಗಳ ಕನಸು ನನಸಾಗುವ ಸಮಸ್ತ ಭಾರತೀಯರ ಪಾಲಿಗೆ ಅತ್ಯಂತ ಪವಿತ್ರ ದಿನವಾಗಿ ಅಯೋಧ್ಯೆ ಶ್ರೀ ರಾಮ ಮಂದಿರದ ಲೋಕಾರ್ಪಣೆಯ ಭಾವನಾತ್ಮಕ ಐತಿಹಾಸಿಕ ಕ್ಷಣವನ್ನು ಮನೆ ಮನಗಳಲ್ಲಿ ಆಚರಿಸಲು ಜನವರಿ 22 ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರಿಗೆ ನಾಡಿನ… pic.twitter.com/5q5QsBVn3N
— Yashpal Anand Suvarna (@YashpalBJP) January 1, 2024
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಾಡಿನ ಜನತೆಯ ಪರವಾಗಿ ಕೋರಿಕೆ ಮಾಡುವುದಾಗಿ ತಿಳಿಸಿರುವ ಅವರು, “ಈ ವಿಶೇಷ ದಿನದಂದು ದೇಶದಾದ್ಯಂತ ಹಲವು ದೇವಸ್ಥಾನ, ಮಂದಿರ ಹಾಗೂ ಸಂಘ ಸಂಸ್ಥೆಗಳಲ್ಲಿ ವಿಶೇಷ ಪೂಜೆ, ಭಜನಾ ಸಂಕೀರ್ತನೆ, ಅನ್ನ ಸಂತರ್ಪಣೆಯ ಮೂಲಕ ಅತ್ಯಂತ ಸಂಭ್ರಮ ಸಡಗರದಿಂದ ಅಚರಿಸುತ್ತಿದೆ. ರಾಜ್ಯ ಸರಕಾರ ಜನವರಿ 22ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಿ ಪವಿತ್ರ ದಿನವನ್ನು ಸಂಭ್ರಮದಿಂದ ಆಚರಿಸಲು ರಾಜ್ಯದ ಜನತೆಗೆ ಅವಕಾಶ ಕಲ್ಪಿಸುವಂತೆ ತಮ್ಮಲ್ಲಿ ಈ ಮೂಲಕ ಮನವಿ ಮಾಡುತ್ತಿದ್ದೇನೆ” ಎಂದು ತಿಳಿಸಿದ್ದಾರೆ.
ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಶ್ರೀ ರಾಮ ದೇವರ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆಯ ಮೂಲಕ ರಾಮಮಂದಿರದ ಲೋಕಾರ್ಪಣೆ ನಡೆಯಲಿದೆ.