ಚಾಮರಾಜನಗರ ಗುಂಡ್ಲುಪೇಟೆ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಡಿಸೆಂಬರ್ 20ರಂದು ಬಿಟ್ಟು ಹೋಗಿದ್ದ ಹೆಣ್ಣು ಮಗುವಿನ ಗುರುತು ಪತ್ತೆಯಾಗಿದೆ.
“ಭಾನುವಾರ ಹಾಸನದಿಂದ ಬಂದಿದ್ದ ಮಗುವಿನ ತಂದೆ, ಮಗು ಆಶ್ರಯ ಪಡೆದಿದ್ದ ಕೊಳ್ಳೇಗಾಲದ ಜೀವನ ಜ್ಯೋತಿ ಟ್ರಸ್ಟ್ಗೆ ಭೇಟಿ ನೀಡಿ ಮಗುವಿನ ದಾಖಲೆಗಳನ್ನು ಹಾಜರು ಪಡಿಸಿದ್ದಾರೆ. ಸೋಮವಾರ ಮಗುವನ್ನು ಹಾಸನ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಗುಂಡ್ಲುಪೇಟೆಯಲ್ಲಿ ಮಗು ಬಿಟ್ಟು ಹೋಗಿರುವ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದನ್ನು ಗಮನಿಸಿ, ಮಗುವಿನ ತಂದೆ ಠಾಣೆಯನ್ನು ಸಂಪರ್ಕಿಸಿದ್ದರು. ಪೊಲೀಸರು ಮಗು ಜೀವನ್ ಜ್ಯೋತಿ ಟ್ರಸ್ಟ್ನಲ್ಲಿ ಇರುವುದಾಗಿ ಮಾಹಿತಿ ನೀಡಿದ್ದರು. ಅದರ ಆಧಾರದಲ್ಲಿ ಅವರು ಬಂದು ದಾಖಲೆಗಳನ್ನು ಸಲ್ಲಿಸಿದ್ದಾರೆ. ತಂದೆ ಮಾತ್ರ ಬಂದಿದ್ದರಿಂದ ಮಗುವನ್ನು ಪೋಷಕರಿಗೆ ಒಪ್ಪಿಸಿಲ್ಲ. ಹಾಸನ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ. ಜತೆಗೆ ಇನ್ನಷ್ಟು ದಾಖಲೆಗಳನ್ನು ನೀಡುವಂತೆ ಕೇಳಿದ್ದೇವೆ” ಎಂದು ಸಿಡಿಪಿಒ ಚೆಲುವರಾಜು ತಿಳಿಸಿದ್ದಾರೆ.
ಘಟನೆಯ ವಿವರ: ಡಿಸೆಂಬರ್ 20ರಂದು ಗುಂಡ್ಲುಪೇಟೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಕಲ್ಲೀಗೌಡನಹಳ್ಳಿಯ ಮಹದೇವಮ್ಮ ಅವರ ಬಳಿ ಮಗುವನ್ನು ಕೊಟ್ಟು, ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿದವರು ವಾಪಸ್ ಆಗಿರಲಿಲ್ಲ.
ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದ ಪೊಲೀಸರು ಮಗುವನ್ನು ವಶಕ್ಕೆ ಪಡೆದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯೊಂದಿಗೆ ಚರ್ಚಿಸಿದ ಬಳಿಕ ಮಗುವನ್ನು ಸ್ಥಳೀಯ ಸಿಎಂಎಸ್ ಅನಾಥಾಲಯದಲ್ಲಿ ಇರಿಸಿದ್ದರು. ನಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರು ಮಗುವನ್ನು ಕೊಳ್ಳೇಗಾಲ ತಾಲೂಕಿನ ಜೀವನಜ್ಯೋತಿ ಟ್ರಸ್ಟ್ಗೆ ಹಸ್ತಾಂತರಿಸಿದ್ದರು.
ಈ ಸುದ್ದಿ ಓದಿದ್ದೀರಾ? ವಿಶ್ವಕರ್ಮ ಅಧ್ಯಯನ ಪೀಠ ಸ್ಥಾಪನೆಗೆ ಕ್ರಮ; ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ
ಮಗುವಿನ ತಂದೆ ತಾಯಿ ಹಾಸನದವರು. ಕೌಟುಂಬಿಕ ಕಲಹದಿಂದಾಗಿ ಡಿಸೆಂಬರ್ 2ರಂದು ತಾಯಿಯು ಮಗುವಿನೊಂದಿಗೆ ಮನೆ ಬಿಟ್ಟು ಬಂದಿದ್ದರು. ಈ ಸಂಬಂಧ ಹಾಸನ ಠಾಣೆಯಲ್ಲಿ ದೂರು ದಾಖಲಾಗಿತ್ತು.