ಶಾಸಕಾಂಗ ಕ್ಷೇತ್ರದಲ್ಲಿ ಶಾಸಕರೆ ತಮ್ಮ ವೇತನವನ್ನು ತಾವೇ ಹೆಚ್ಚಿಸಿಕೊಳ್ಳುವ ವಿಧಾನವೇ ಸರಿಯಿಲ್ಲ ಈ ವ್ಯವಸ್ಥೆ ಬದಲಾಗಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ನಗರದಲ್ಲಿ ಧಾರವಾಡ ಜರ್ನಲಿಸ್ಟ್ ಗಿಲ್ಡ್ ಆಯೋಜಿಸಿದ್ದ ಮಾಧ್ಯಮ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿ, ಶಾಸಕರ ವೇತನ, ಸೌಲಭ್ಯ ಹೆಚ್ಚಳ ಕುರಿತಂತೆ ತಾವೇ ಕ್ರಮ ಕೈಗೊಳ್ಳುವದು ಅಸಮಂಜಸ. ಒಂದು ಆಯೋಗ ರಚನೆ ಮಾಡಿ ಅದರ ವರದಿ ಆದರಿಸಿ ಕ್ರಮ ಕೈಗೊಳ್ಳಬೇಕು ಎಂದರು.
ಈ ಹಿಂದಿನ ರಾಜಕಾರಣಿಗಳಿಗೆ ಇದ್ದಷ್ಟು ಬದ್ಧತೆ, ಸಾಮಾಜಿಕ ಕಳಕಳಿ ಈಗಿನ ರಾಜಕಾರಣಿಗಳಿಗೆ ಇಲ್ಲದಿರುವದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತದ್ದು. ಈ ನಿಟ್ಟಿನಲ್ಲಿ ದೇಶದಲ್ಲಿ ಚಿಂತನ, ಮಂಥನ ನಡೆಯಬೇಕಾಗಿದೆ. ರಾಜಕಾರಣ ಎನ್ನುವುದು ಸಾಮಾಜಿಕ ಸೇವೆಯಾಗಿತ್ತು. ಆದರೆ, ಈ ಕ್ಷೇತ್ರದಲ್ಲಿ 65-70ನೇ ಶತಮಾನದಿಂದ ಭ್ರಷ್ಟಾಚಾರ ತಾಂಡವ ಆರಂಭವಾಯಿತು. ರಾಜಕಾರಣಿಗಳು ಶಾಸಕಾಂಗದ ಕಾರ್ಯಚಟುವಟಿಕೆಗಳಿಗೆ ದಕ್ಕೆ ತರುವ ಕೆಲಸದಲ್ಲಿ ತೊಡಗಿದರು.
ಸದ್ಯ ಮೌಲ್ಯಯುತ ರಾಜಕಾರಣಿಗಳ ಕೊರತೆ ಎದ್ದುಕಾಣುತ್ತಿದೆ. ಸಂವಿಧಾನದ ಆಶಯ ಈಡೇರುತ್ತಿಲ್ಲ. ಕಾರ್ಯಾಂಗದಲ್ಲಿ ದಕ್ಷತೆ ಮರೆಯಾಗುತ್ತಿದೆ. ಇದರಿಂದಾಗಿ ಭ್ರಷ್ಟಾಚಾರ ಮಿತಿಮೀರಿದೆ ಯಾವಾಗ ಕಾರ್ಯಾಂಗ ಸುಧಾರಿಸುತ್ತದೆಯೋ ಆವಾಗ ಒಳ್ಳೆಯ ದಿನಗಳನ್ನು ಕಾಣಬಹುದು ಎಂದರು.
ಆಡಳಿತದಲ್ಲಿ ಸುಧಾರಣಾತ್ಮಕ ಅಂಶಗಳು ಮೂಡಿಬರಬೇಕಾಗಿದೆ. ಸುಧಾರಣೆ ಎಲ್ಲ ಹಂತಗಳಲ್ಲಿ ಕಂಡುಬಂದಾಗ ಮಾತ್ರ ಸಂವಿಧಾನದ ಆಶಯ ಈಡೇರಿಸಿ ಮೌಲ್ಯಯುತ ಸಮಾಜ ನಿರ್ಮಿಸಲು ಸಾಧ್ಯ. ಆಡಳಿತಾತ್ಮಕ ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾನಿಲಯವನ್ನು ಧಾರವಾಡದಲ್ಲಿ ಆರಂಭಗೊಳ್ಳಬೇಕು ಎನ್ನುವ ಚಿಂತನೆ ನನ್ನದಾಗಿದೆ ಎಂದು ಹೇಳಿದರು.
ಈ ಸಂದಭ೯ದಲ್ಲಿ ಧಾಜಗಿ ಅಧ್ಯಕ್ಷ ಡಾ. ಬಸವರಾಜ ಹೊಂಗಲ, ಕಾರ್ಯದರ್ಶಿ ನಿಜಗುಣಿ ದಿಂಡಲಕೊಪ್ಪ, ಖಜಾಂಜಿ ವಿಕ್ರಮ ನಾಡಗೇರ, ಇತರೆ ಸದಸ್ಯರು ಉಪಸ್ಥಿತರಿದ್ದರು.