ಬಾಲಕನಿಗೆ ಪೂರ್ಣ ಟಿಕೆಟ್ ನೀಡಿದ್ದ ಕೆಎಸ್ಆರ್ಟಿಸಿ ಕಂಡಕ್ಟರ್ಗೆ ಹೆಚ್ಚುವರಿ ಟಿಕೆಟ್ ಹಣವನ್ನು ಶೇ.9ರಷ್ಟು ಬಡ್ಡಿ ಸೇರಿಸಿ ಪಾವತಿಸುವಂತೆ ಬಾಗಲಕೋಟೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಕೆಎಸ್ಆರ್ಟಿಸಿ ಕಂಡಕ್ಟರ್ 12 ವರ್ಷದೊಳಗಿನ ಬಾಲಕನಿಗೆ ಪೂರ್ಣ ಟಿಕೆಟ್ ನೀಡಿ, ಶುಲ್ಕ ಪಡೆದಿದ್ದರು. ಇದನ್ನು ಪ್ರಶ್ನಿಸಿ ಬಾಲಕನ ತಾಯಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ಮುಧೋಳ ತಾಲೂಕು ಅನಂತಪುರ ಗ್ರಾಮದ ನಿವಾಸಿ ದೀಪಾ ಹಿರೇಮಠ ಅವರು ಪುತ್ರನೊಂದಿಗೆ ಕಳೆದ ವರ್ಷ ಜುಲೈ 1ರಂದು ಮುಧೋಳದಿಂದ ವಿಜಯಪುರಕ್ಕೆ ಹೊರಟಿದ್ದರು. ಈ ವೇಳೆ ಪುತ್ರನಿಗೆ 10 ವರ್ಷ 11 ತಿಂಗಳು ಆಗಿದ್ದು ಅರ್ಧ ಟಿಕೆಟ್ ನೀಡಿ ಎಂದು ದೀಪಾ ಅವರು ಕಂಡಕ್ಟರ್ಗೆ ಕೇಳಿದರು.
ಹುಡುಗ 12 ವರ್ಷ ಮೇಲ್ಪಟ್ಟಿದ್ದಾನೆ, ಪೂರ್ಣ ಟಿಕೆಟ್ ಪಡೆಯಬೇಕು ಎಂದು ಕಂಡಕ್ಟರ್ ಸೂಚಿಸಿದರು. ಆಗ ಜನ್ಮ ದಾಖಲೆಯ ಆಧಾರ್ ಕಾರ್ಡ್ ತೋರಿಸಿದರೂ ಒಪ್ಪದ ಅವರು, ಬಸ್ನಿಂದ ಕೆಳಗೆ ಇಳಿಯಿರಿ ಎಂದಿದ್ದರು. ಆಗ ದೀಪಾ ಅವರು ಪೂರ್ಣ ಟಿಕೆಟ್ ಪಡೆದೇ ಪ್ರಯಾಣಿಸಿದ್ದರು.
ನಂತರ ಈ ವಿಷಯವನ್ನು ಡಿಪೊ ವ್ಯವಸ್ಥಾಪಕರ ಗಮನಕ್ಕೆ ತಂದು, ಕಂಡಕ್ಟರ್ ವಿರುದ್ಧ ಕ್ರಮ ಕೈಗೊಂಡು, ಟಿಕೆಟ್ ಹಣ ವಾಪಸ್ ಕೊಡಬೇಕು ಎಂದು ಕೋರಿದರು. ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ. ವಕೀಲರಿಂದ ನೋಟಿಸ್ ಕಳುಹಿಸಿದರೂ ಸ್ಪಂದಿಸದ ಕಾರಣ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಕೆಎಸ್ಆರ್ಟಿಸಿ ನಿಯಮಾವಳಿ ಉಲ್ಲಂಘಿಸಿ ಪೂರ್ಣ ಟಿಕೆಟ್ ಕೊಟ್ಟು ಸೇವಾ ನ್ಯೂನತೆ ಮತ್ತು ಅನುಚಿತ ವ್ಯಾಪಾರ ಮಾಡಿದ್ದು ಸಾಬೀತಾಗಿದೆ. ದೂರುದಾರರಿಂದ ಹೆಚ್ಚುವರಿಯಾಗಿ ಪಡೆದ 50 ರೂಪಾಯಿ ಟಿಕೆಟ್ ಹಣವನ್ನು ಶೇ. 9ರ ಬಡ್ಡಿಯೊಂದಿಗೆ ಎರಡು ತಿಂಗಳಲ್ಲಿ ಬಡ್ಡಿ ಸಮೇತ ನೀಡಬೇಕು. ಜೊತೆಗೆ ಮಾನಸಿಕ ಹಿಂಸೆ ಅನುಭವಿಸಿರುವುದರಿಂದ ವಿಶೇಷ ಪರಿಹಾರವಾಗಿ 2 ಸಾವಿರ ರೂ, ಪ್ರಕರಣದ ಖರ್ಚಾಗಿ ಒಂದು ಸಾವಿರ ರೂ. ನೀಡಬೇಕು ಎಂದು ಆಯೋಗ ಆದೇಶಿಸಿದೆ.
ಅಧ್ಯಕ್ಷ ಡಿ.ವೈ. ಬಸಾಪುರ, ಸದಸ್ಯರಾದ ಸಿ.ಎಚ್. ಸಮಿಉನ್ನಿಸಾ ಅಬ್ರಾರ್, ಕಮಲಕಿಶೋರ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.