ಅಂಬೇಡ್ಕರ್ ಅರಿವು ಪುಸ್ತಕ ಮನೆ ಮನಗಳಿಗೆ ಮುಟ್ಟಿಸುವ ಮೂಲಕ ಮಕ್ಕಳ ಮನಸ್ಸನ್ನು ಮುಟ್ಟುವುದಕ್ಕೆ ಸಹಕಾರಿಯಾಗಿದೆ ಎಂದು ದಲಿತ ಮುಖಂಡ ಎಂ ಆರ್ ಬೇರಿ ಹೇಳಿದರು.
ರಾಯಚೂರು ನಗರದ ಪತ್ರಿಕಾ ಭವನದಲ್ಲಿ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ವತಿಯಿಂದ ಮಲ್ಕುಂಡಿ ಮಹದೇವಸ್ವಾಮಿ ಅವರ ಅಂಬೇಡ್ಕರ್ ಅರಿವು ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.
“ಅಂಬೇಡ್ಕರ್ ಅವರ ಚಿಂತನೆಗಳು ಸಾಕಾರಗೊಳಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅರಿವು ಕುರಿತು ಪುಸ್ತಕ ರಚನೆ ಮಾಡಿದ್ದಾರೆ. ಅಂಬೇಡ್ಕರ್ ಅವರ ಕನಸನ್ನು ಬಿತ್ತರಿಸಲು ಭರವಸೆ ಮೂಡಿಸುವ ಪುಸ್ತಕವಾಗಿದ್ದು, ದೇಶವೇ ಸಂವಿಧಾನದ ಮೇಲೆ ಆಧಾರವಾಗಿದೆ. ಸಂವಿಧಾನದ ರಚನೆಗೆ ಕಾರಣರಾಗಿರುವ ಅಂಬೇಡ್ಕರ್ ಅವರ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಇಲ್ಲ. ಮೊದಲು ಮಕ್ಕಳಿಗೆ ಅಂಬೇಡ್ಕರ್ ಅವರ ಚಿಂತನೆಗಳು, ಅವರ ಆಶಯಗಳ ಕುರಿತು ಮನ ಮುಟ್ಟುವಂತಹ ಕೆಲಸ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಸುತ್ತಿದ್ದು, ಅಂಬೇಡ್ಕರ್ ಅರಿವು ಪುಸ್ತಕ ಇದರ ಭಾಗವಾಗಿದೆ” ಎಂದರು.
“ಸಾಕಷ್ಟು ಜನರಿಗೆ ಸಂವಿಧಾನದ ಬಗ್ಗೆ ಅರಿವು ಇಲ್ಲ. ಕೆಲವರು ನೋಡಿದರೂ ನೊಡದಂತೆ ಇದ್ದಾರೆ.
ಇದರಿಂದ ಅಂಬೇಡ್ಕರ್ ಅವರ ಆಶಯಗಳನ್ನು ಸಾಕಾರಗೊಳಿಸುವಲು ಆಗುತ್ತಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಅಂಬೇಡ್ಕರ್ ಎನ್ನುವುದು ಸಮುದ್ರವಿದ್ದಂತೆ. ಸಾಕಷ್ಟು ಕಲಿಯಬೇಕಿದೆ, ಎಷ್ಟು ಕಲಿತರೂ ಕಡಿಮೆ, ಮನೆ ಮನೆಗೆ ಅಂಬೇಡ್ಕರ್ ಅರಿವು ಕುರಿತು ಮಕ್ಕಳಿಗೆ ಮನದಟ್ಟು ಮಾಡುವಂತಹ ಕೆಲಸಗಳು ನಿರಂತರವಾಗಿ ನಡೆಯಬೇಕಿದೆ” ಎಂದು ತಿಳಿಸಿದರು.
ಸಾಮಾಜಿಕ ಚಿಂತಕ, ಹೋರಾಟಗಾರ ಆರ್ ಮಾನಸಯ್ಯ ಮಾತನಾಡಿ, “ಮೈಸೂರು ಸಾಂಸ್ಕೃತಿಕ ನಗರಿಯಾಗಿದ್ದು, ಅಲ್ಲಿಂದ ಬಂದು ಇಲ್ಲಿ ಅಂಬೇಡ್ಕರ್ ಅರಿವು ಪುಸ್ತಕ ಬಿಡುಗಡೆಗೊಳಿಸುತ್ತಿರುವುದು ಇಲ್ಲಿನ ಚಟುವಟಿಕೆಗಳಿಗೆ ಪ್ರೇರಣೆ ನೀಡಿದ್ದಾರೆ. ಈ ಹಿಂದೆ ಶಾಲೆಯ ಗೋಡೆಗಳ ಮೇಲೆ ಬರಹಗಳಿದ್ದವು, ಇಂದಿನ ಬಾಲಕರು ಮುಂದಿನ ನಾಗರಿಕರು, ಬೆಳೆಯುವ ಸಿರಿ ಮೊಳಕೆಯಲ್ಲಿ ಈ ಬರಹಗಳು ಇಂದು ಮರೆಯಾಗಿವೆ. ಈ ಗಾದೆಗಳು ಸಾಕಷ್ಟು ಪ್ರಭಾವ ಬೀರುತ್ತಿದ್ದವು. ಮಕ್ಕಳಿಗೆ ದೇಶದ ಚರಿತ್ರೆ, ಅಧ್ಯಯನದ ಅರಿವಿಲ್ಲ. ಸಾಂಸ್ಕೃತಿಕ ಪರಂಪರೆ, ಅಧ್ಯಯನದ ಕೊರತೆ ಇದೆ” ಎಂದರು.
“ಮಕ್ಕಳಲ್ಲಿ ವಿಷ ಬೀಜ ಬಿತುತ್ತಿದ್ದಾರೆ, ಮಕ್ಕಳಲ್ಲಿ ದ್ವೇಷ, ಅಸೂಯೆ, ಜಾತಿವಾದ, ತಾರತಮ್ಯ ಬೆಳೆಸುತ್ತಿದ್ದಾರೆ. ಮನುವಾದದತ್ತ ಕೊಡ್ಯೊಯ್ಯುತ್ತಿದ್ದಾರೆ. ಇದು ದೇಶಕ್ಕೆ ಮಾರಕವಾಗಿದೆ. ಮನುವಾದ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇದಕ್ಕೆ ಅಂಬೇಡ್ಕರ್ ಅರಿವಿನ ಪುಸ್ತಕ ಔಷಧವಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಜಗತ್ತಿನಲ್ಲಿ ಅತಿ ಹೆಚ್ಚು ಕಡೆಗಣಿಸ್ಪಡುತ್ತಿರುವವರು ವೃದ್ಧ ತಂದೆ ತಾಯಂದಿರು: ಮಹಮ್ಮದ್ ಕುಂಞಿ
“ಅಂಬೇಡ್ಕರ್ ಅರಿವು ಪುಸ್ತಕದಲ್ಲಿ ಅನೇಕ ದಾರ್ಶನಿಕರ ಕಿರುಪರಿಚಯವಿದೆ. ಬಸವಣ್ಣ, ಭೀಮಾಬಾಯಿ, ಗೌತಮ ಬುದ್ಧ, ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಸೇರಿದಂತೆ ಸಾಕಷ್ಟು ಮಾಹಿತಿ ಇದರಲ್ಲಿ ಲಭ್ಯವಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಟಿಯುಸಿಐ ಜಿಲ್ಲಾಧ್ಯಕ್ಷ ಜಿ ಅಮರೇಶ, ಆರ್ಸಿಎಫ್ ಉಪಾಧ್ಯಕ್ಷ ಆದಿ ನಗನೂರು, ಕೆಎಸ್ಆರ್ಡಿಪಿಆರ್ ಎಸ್ಸಿ/ಎಸ್ಟಿಯ ರಾಜ್ಯ ಖಜಾಂಚಿ ಚಂದ್ರಕಾಂತ ನೇರಳೆ, ಕೃತಿ ಕರ್ತೃ ಮಲ್ಕುಂಡಿ ಮಹದೇವಸ್ವಾಮಿ ಸೇರಿದಂತೆ ಬಹುತೇಕರು ಇದ್ದರು.
ವರದಿ : ಅಜೀಜ್ ಜಾಗಿರದಾರ