ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ಎಸಗಿ, ಅವರ ಕುಟುಂಬದ ಸದಸ್ಯರನ್ನು ಕೊಲೆ ಮಾಡಿದ ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳುಹಿಸಲು ಸುಪ್ರೀಂ ಕೋರ್ಟ್ ಸೂಚನೆ ನೀಡಿರುವುದು ಭರವಸೆ ಹುಟ್ಟಿಸಿದೆ. ಮತ್ತೊಂದೆಡೆ ಅಪರಾಧಿಗಳು ಮತ್ತಷ್ಟು ಕಾಲವಕಾಶವನ್ನು ಕೋರುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕೋರ್ಟ್ ಅವರ ಮನವಿಯನ್ನು ಒಪ್ಪಿಕೊಳ್ಳಬಾರದು ಎಂದು ಹೋರಾಟಗಾರರು ಒತ್ತಾಯಿಸಿದರು.
ಬಿಲ್ಕಿಸ್ ಬಾನೊ ಅವರಿಗೆ ಬೆಂಬಲ ಸೂಚಿಸಿ ‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆಯ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅತ್ಯಾಚಾರಿಗಳ ವಿರುದ್ಧ ಘೋಷಣೆಗಳು ಮೊಳಗಿದವು.
‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆಯ ಸಂಘಟಕಿ ಮಮತಾ ಅವರು ಮಾತನಾಡಿ, “ಸನ್ನಡತೆಯ ಆಧಾರದಲ್ಲಿ ಗುಜರಾತ್ ಸರ್ಕಾರ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿತ್ತು. ಈ ನಾಚಿಗೆಗೇಡು ನಡೆಯ ವಿರುದ್ಧ ಆ ಸಂದರ್ಭದಲ್ಲೂ ನಾವು ಪ್ರತಿಭಟನೆ ಮಾಡಿದ್ದವು. ಇದರ ವಿರುದ್ಧ 40 ಸಾವಿರ ಜನರ ಸಹಿ ಸಂಗ್ರಹ ಮಾಡಿ ಸುಪ್ರೀಂಕೋರ್ಟ್ಗೆ ಕಳುಹಿಸಿದ್ದೆವು. ಕರ್ನಾಟಕದಿಂದ ಹೋದಂತಹ ಜಸ್ಟಿಸ್ ನಾಗರತ್ನ ಅವರಿದ್ದ ಪೀಠ ಗುಜರಾತ್ ಸರ್ಕಾರದ ತೀರ್ಪನ್ನು ರದ್ದುಗೊಳಿಸಿರುವುದು ಸಮಾಧಾನ ತಂದಿದೆ” ಎಂದರು.

“ಅತ್ಯಾಚಾರಿಗಳ ಮನವಿಯನ್ನು ಸುಪ್ರೀಂಕೋರ್ಟ್ ಸ್ವೀಕರಿಸಬಾರದು. ಇಪ್ಪತ್ತೆರಡು ವರ್ಷ ದಿಟ್ಟ ಹೋರಾಟವನ್ನು ಬಿಲ್ಕಿಸ್ ಬಾನೊ ನಡೆಸಿದ್ದಾರೆ. ಅವರಿಗೆ ಯಾವುದೇ ಮನ್ನಣೆಯನ್ನು ಕೊಡದೆ ಅವರನ್ನು ಕೂಡಲೇ ಜೈಲಿಗೆ ಕಳುಹಿಸಬೇಕು ಎಂಬುದು ನಮ್ಮೆಲ್ಲರ ಒಕ್ಕೊರಲ ದನಿ” ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ದಂಡು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಸಂತೋಷ್ ಬಿ.ನಾಯಕ್ ಮಾತನಾಡಿ, “ಅತ್ಯಾಚಾರಿಗಳು ಬಿಡುಗಡೆಯಾದ ಸಂದರ್ಭದಲ್ಲಿ ಕೆಲವರು ಸಂಭ್ರಮಾಚರಣೆ ಮಾಡಿದ್ದು ನೋವಿನ ಸಂಗತಿ. ಅತ್ಯಾಚಾರಿಗೆ ಹೂವಿನ ಹಾರ ಹಾಕಿ, ಸ್ವೀಟ್ ಕೊಟ್ಟಿದ್ದು ನಮ್ಮ ಜನ ಎಷ್ಟು ಕೆಟ್ಟಿದ್ದಾರೆ ಎಂಬುದರ ಸೂಚನೆ. ತಮ್ಮ ಮನೆಯ ಮಕ್ಕಳಿಗೆ ಈ ರೀತಿ ಆಗಿದ್ದರೆ ಸ್ವೀಟ್ ಕೊಟ್ಟು ತಿನ್ನಿಸುತ್ತಿದ್ರಾ?” ಎಂದು ಪ್ರಶ್ನಿಸಿದರು.

ಅತ್ಯಾಚಾರಿಗಳನ್ನು ಸಂಸ್ಕಾರಿ ಬ್ರಾಹ್ಮಣರು ಎಂದು ಕೆಲವು ರಾಜಕೀಯ ಮುಖಂಡರು ಕರೆದಿದ್ದರು. ಬ್ರಾಹ್ಮಣರು ಕೂಡ ಅತ್ಯಾಚಾರ ಮಾಡಿದ್ದಾರೆ ಎಂಬುದನ್ನು ಇತಿಹಾಸ ಹೇಳುತ್ತದೆ. ಕೆಲವರು ಮಾಡಿದ ತಪ್ಪಿಗೆ ಇಡೀ ಬ್ರಾಹ್ಮಣ ಸಮುದಾಯವನ್ನು ಟೀಕಿಸುವುದು ತಪ್ಪಾಗುತ್ತದೆ. ಇಂತಹ ಅತ್ಯಾಚಾರಿಗಳ ಪರ ಯಾವುದೇ ಬ್ರಾಹ್ಮಣರು ನಿಲ್ಲಬಾರದು. ಒಬ್ಬ ಅತ್ಯಾಚಾರಿಯ ಪರ ನಿಲ್ಲುವುದೆಂದರೆ ತಾನು ಕೂಡ ಅತ್ಯಾಚಾರಿ ಎಂದು ಒಪ್ಪಿಕೊಂಡಂತೆ, ಒಬ್ಬ ಕೊಲೆಗಡುಕನ ಪರ ನಿಲ್ಲುವುದೆಂದರೆ ತಾನು ಕೂಡ ಕೊಲೆಗಡುಕ ಎಂದು ಒಪ್ಪಿದಂತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಹೋರಾಟಗಾರ್ತಿ ಮನು ಮಾತನಾಡಿ, “ಮಹಿಳೆಯರು ಮತ್ತು ತುಳಿತಕ್ಕೆ ಒಳಗಾದ ಸಮುದಾಯದವರು ಬಿಜೆಪಿ ಸರ್ಕಾರದ ಆಡಳಿತದಲ್ಲಿ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ನ್ಯಾಯ ಕೇಳಿದರೆ ನಮ್ಮನ್ನು ಜೈಲಿಗೆ ತಳ್ಳುತ್ತಾರೆ. ಧರ್ಮದ ಹೆಸರಲ್ಲಿ ಹಿಂಸೆಯತ್ತ ಕರೆದೊಯ್ಯಲಾಗುತ್ತಿದೆ” ಎಂದು ವಿಷಾದಿಸಿದರು.

ಸಾಮಾಜಿಕ ಕಾರ್ಯಕರ್ತ ಆದರ್ಶ್ ಅಯ್ಯರ್, ಅಂಬೇಡ್ಕರ್ ದಂಡು ಸಂಘಟನೆಯ ಅಧ್ಯಕ್ಷ ಡಿ.ಶಿವಣ್ಣ, ಜನಶಕ್ತಿ ಸಂಘಟನೆಯ ಚನ್ನಮ್ಮ ಸೇರಿದಂತೆ ಹಲವು ಹೋರಾಟಗಾರರು ಸ್ಥಳದಲ್ಲಿ ಹಾಜರಿದ್ದರು.
