ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳಿಗೆ ಒಳಮೀಸಲಾತಿ ನೀಡುವ ನಿಟ್ಟಿನಲ್ಲಿ ಸಂವಿಧಾನದ 341(3)ನೇ ವಿಧಿಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆಸಲಾಗಿದ್ದ ಸಂಪುಟ ಸಭೆಯಲ್ಲಿಈ ತೀರ್ಮಾನ ಕೈಗೊಳ್ಳಲಾಗಿತ್ತು.
ಈ ವಿಚಾರವಾಗಿ ಹಾಸನದಲ್ಲಿ ಇಂದು ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, “ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿ ಹೊಣೆ ಕೇಂದ್ರ ಸರ್ಕಾರಕ್ಕೆ ವರ್ಗಾಯಿಸುವ ಮೂಲಕ ರಾಜ್ಯ ಸರ್ಕಾರವು ರಾಜಕೀಯ ಮಾಡಲು ಹೊರಟಿದೆ” ಎಂದು ಆರೋಪಿಸಿದ್ದಾರೆ.
“ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಸಚಿವ ಸಂಪುಟದ ಸದಸ್ಯರಾಗಿದ್ದ ಸಿದ್ಧರಾಮಯ್ಯ ನೇತೃತ್ವದಲ್ಲಿಯೇ ಮೀಸಲಾತಿಯಲ್ಲಿ ವರ್ಗೀಕರಣ ಮಾಡಿ ಸಾಮಾಜಿಕ ನ್ಯಾಯ ಒದಗಿಸಲಾಗಿತ್ತು. ಮುಸಲ್ಮಾನರಿಗೆ ಮೀಸಲಾತಿ, ನಾಯಕ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದು ನಾನು. ಈಗ ಪರಿಶಿಷ್ಟರ ಒಳ ಮೀಸಲಾತಿಯ ಹೊಣೆಯನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಿ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡಲು ಹೊರಟಿದೆ. ಲೋಕಸಭಾ ಚುನಾವಣೆಗೆ ಇದೇ ಒಳ ಮೀಸಲಾತಿ ವಿಷಯವನ್ನೇ ಮುಂದಿಟ್ಟುಕೊಂಡು ಹೋರಾಟ ಮಾಡುವೆ” ಎಂದು ದೇವೇಗೌಡರು ಘೋಷಿಸಿದ್ದಾರೆ.
“ಅಂದು ಒಕ್ಕಲಿಗ ಸಮುದಾಯಕ್ಕೆ ನೀಡಿದ್ದ ಮೀಸಲಾತಿಯನ್ನು ಕಡಿಮೆ ಮಾಡಿ, ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದು ನಾನು” ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿಕೊಂಡಿದ್ದಾರೆ.
“ಮುಸಲ್ಮಾನ ಬಂಧುಗಳು ನನ್ನ ಅಣ್ಣ ತಮ್ಮಂದಿರು, ನಿಮಗಾಗಿ ಈ ಶರೀರವನ್ನ ತ್ಯಾಗ ಮಾಡಿದ್ದೇನೆ. ನಿಮಗೆ ಮೀಸಲಾತಿ ನೀಡಿದ್ದೇನೆ. ಖರ್ಗೆಯವರು ಒಮ್ಮೆ ಮಾತ್ರ ಮೀಸಲಾತಿ ಕೊಡೋಣಾ ಎಂದಿದ್ದರು. ನಾನು ಕೊಟ್ಟ ಮೀಸಲಾತಿಯನ್ನ ಇಲ್ಲಿಯವರೆಗೂ ತೆಗೆದು ಹಾಕಲಿಕ್ಕೆ ಆಗಿಲ್ಲ. ಬೆಟ್ಟದ ರಂಗನಾಥ ಸ್ವಾಮಿಗೆ ಹರಕೆ ಮಾಡಿಕೊಂಡ ನಂತರ ನಾನು ಹುಟ್ಟಿದ್ದೇನೆ. ಎಲ್ಲ ಸಮುದಾಯದ ದೇವಾಲಯಗಳಿಗೂ ಹೋಗಿದ್ದೇನೆ. ನನಗೆ ಎಲ್ಲ ದೇವಸ್ಥಾನಗಳೂ ಒಂದೇ” ಎಂದಿದ್ದಾರೆ.
“ನಾನು ಈ ಜಿಲ್ಲೆಗೆ ಬಂದಿರೋದು ನನ್ನ ಮೊಮ್ಮಗನನ್ನು ಗೆಲ್ಲಿಸೋದಕ್ಕಲ್ಲ, ಈ ಜಿಲ್ಲೆಯ ಅಭಿವೃದ್ಧಿಗಾಗಿ. ನಾವು ಏನು ಮೋಸ ಮಾಡಿದ್ದೇವೆ ಹೇಳಲಿ. ನಮ್ಮ ಸಮಾಜದವರನ್ನ ದೊಡ್ಡ ದೊಡ್ಡ ಸ್ಥಾನಕ್ಕೆ ಕಳಿಸಿದ್ದೇನೆ. ಅವರೆಲ್ಲ ಸೇರಿ ನಮ್ಮನ್ನ ಸೋಲಿಸಿದರು. ನಾನು ಕಾಂಗ್ರೆಸ್ಗಾಗಿ ನನ್ನ ಜೀವನವನ್ನೇ ತೆತ್ತಿದ್ದೇನೆ. ಒಂದು ಪುರಸಭೆ ಚುನಾವಣೆ ಗೆಲ್ಲಿಸೋಕೆ ದೇಶದ ಮಾಜಿ ಪ್ರಧಾನಿ ಆದವನು ಇಲ್ಲಿ ಬಂದು ಕೂತೆ” ಎಂದಿದ್ದಾರೆ.
“ಗುಂಡೂರಾವ್ ಸರ್ಕಾರದಲ್ಲಿ ಅಂಬೇಡ್ಕರ್ ಅವರು ನೀಡಿದ್ದ 18% ಮೀಸಲಾತಿಯಲ್ಲಿ ಎಸ್ಸಿಗೆ 15%, ಎಸ್ಟಿಗೆ 3% ನೀಡಿದ್ದರು. ಆದರೆ, ಆ ಕೋಟಾ ಭರ್ತಿ ಮಾಡಲಿಲ್ಲ. ನಂತರ ನಾನು 1983ರಲ್ಲಿ ಲೋಕೋಪಯೋಗಿ ಸಚಿವನಾದಾಗ ಅಂಬೇಡ್ಕರ್ ಕೊಟ್ಟಂತಹ ಕೋಟಾ ಭರ್ತಿಯಾಗಲು 15% ಮೀಸಲಾತಿಯನ್ನು 18%ಗೆ ಹೆಚ್ಚಿಸಿದೆ. 3% ಇದ್ದ ಎಸ್ಟಿ ಮೀಸಲಾತಿಯನ್ನು 5%ಗೆ ಹೆಚ್ಚಿಸಿದೆ. ಅಂಬೇಡ್ಕರ್ ಅವರ ಆಶಯದಂತೆ ಆ ಕೋಟಾ ಗುರಿ ಮುಟ್ಟುವವರೆಗೂ ಕೆಲಸ ಮಾಡಿದ್ದೇನೆ. ಅದು ಖಾಯಂ ಆಗಿರಬೇಕು ಅಂತ ಮಾಡಿದ್ದೆ. ಇದು ಎಲ್ಲ ಇಲಾಖೆಗಳ ಮೇಲೆ ಪರಿಣಾಮ ಬೀರುತ್ತೆ ಎಂದು ಅವತ್ತು ಎಲ್ಲರೂ ಹೇಳಿದ್ದರು. ಆದರೂ ನಾನು ಮೀಸಲಾತಿ ಹೆಚ್ಚಿಸುವ ಧೈರ್ಯ ಮಾಡಿದ್ದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಗೋಧ್ರಾ ಹೇಳಿಕೆ ಸಿಸಿಬಿ ವಿಚಾರಣೆ | ಸರ್ಕಾರ ಕಾಂಗ್ರೆಸ್ಸಿನದೋ, ಆರ್ಎಸ್ಎಸ್ನದೋ?: ಹರಿಪ್ರಸಾದ್ ಆಕ್ರೋಶ
“ಅಯೋಧ್ಯೆಗೆ ಜ.21ರಂದು ಸಂಜೆಯೇ ವಿಶೇಷ ವಿಮಾನದಲ್ಲಿ ತೆರಳಿ ಜ.22ರಂದು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವೆ. ನನ್ನ ಪತ್ನಿ ಚನ್ನಮ್ಮ, ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರೂ ಅಯೋಧ್ಯೆಗೆ ಬರಲಿದ್ದಾರೆ” ಎಂದು ಇದೇ ವೇಳೆ ದೇವೇಗೌಡರು ತಿಳಿಸಿದರು.
ದೊಡ್ಡ ಗೌಡ್ರು ತಮ್ಮ ಜೀವಮಾನದ ತ್ಯಾಗ ಜ್ಯಾತ್ಯಾತೀತ ಸಾಧನೆಗಳನ್ನು,, ಚಾತುರ್ವರ್ಣ ಪ್ರತಿಪಾದಕರ ಉಡಿಗೆ ಹಾಕಿ ತಮ್ಮ ಪರಿಶ್ರಮದ ಫಲವನ್ನು ಮುಂದಿನ ಪೀಳಿಗೆಗೆ ಸಿಗದಂತೆ ಮಾಡಿದರು ಅನ್ನುವ ನೋವು ಕಾರ್ಯಕರ್ತರಲ್ಲಿ ಮೂಡುತ್ತಿದೆ