ನಮ್ಮ ಭಾರತ ದೇಶದಲ್ಲಿ ಎಲ್ಲಿಯವರೆಗೆ ಸಂವಿಧಾನ ಸದೃಢವಾಗಿರುತ್ತದೆಯೋ ಅಲ್ಲಿಯವರೆಗೆ ಪ್ರಜಾಪ್ರಭುತ್ವಕ್ಕೆ ತೊಂದರೆ ಉಂಟಾಗುವುದಿಲ್ಲ. ಅರ್ಥಾತ್ ಎಲ್ಲ ಧರ್ಮಗಳ ಮಕ್ಕಳು, ಧರ್ಮಗ್ರಂಥಗಳು, ಹೀಗೆ ಪ್ರತಿಯೊಬ್ಬರೂ ಸುರಕ್ಷಿತವಾಗಿ ಇರುತ್ತಾರೆ ಎಂದು ಶರಣ ಸಾಹಿತಿ, ಪ್ರಗತಿಪರ ಚಿಂತಕ ರಂಜಾನ್ ದರ್ಗಾ ಅಭಿಪ್ರಾಯ ವ್ಯಕ್ತಪಡಿಸಿದರು.
ಧಾರವಾಡ ನಗರದ ಟಿಪ್ಪು ಸುಲ್ತಾನ್ ಸರ್ಕಲ್ನಲ್ಲಿ ಟಿಪ್ಪು ಸುಲ್ತಾನ್ ಯುವ ಸಂಘಟನೆಯಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
“ನಮ್ಮ ಭಾರತದ ಧರ್ಮ ಪ್ರಜಾಪ್ರಭುತ್ವ, ಧರ್ಮಗ್ರಂಥ ಬಾಬಾಸಾಹೇಬರು ನೀಡಿದ ಭಾರತದ ಸಂವಿಧಾನವಾಗಿದೆ. 75 ವರ್ಷ ತುಂಬಿದ ಸಂದರ್ಭದಿಂದ ಒಂದು ವರ್ಷಕಾಲ ಸರ್ವರೂ ಸಮಾನರೆಂದು ಸಾರಿದ ಸಂವಿಧಾನದ ಪ್ರಸ್ತಾವನೆಯ ಪ್ರತಿಯನ್ನು ಇಡೀ ದೇಶದಲ್ಲಿ ಪ್ರಿಂಟ್ ಮಾಡಿ ಹಂಚುವ ಕಾರ್ಯವಾಗಬೇಕಿದೆ. ಇದರಿಂದ ಹಿಂದೂ-ಮುಸ್ಲಿಂ, ಶ್ರೀಮಂತ-ಬಡವರು ಎಲ್ಲರೂ ಸಮಾನರೆಂಬ ಭಾವ ನಮ್ಮಲ್ಲಿ ಇನ್ನಷ್ಟು ಗಟ್ಟಿಗೊಳ್ಳುತ್ತದೆ” ಎಂದು ಹೇಳಿದರು.
“ನಮ್ಮ ದೇಶ ಇತ್ತೀಚಿಗೆ ಬಹಳಷ್ಟು ಕಷ್ಟಕರವಾದ ದಿನಗಳನ್ನು ಎದುರಿಸುವ ಪರಿಸ್ಥಿತಿ ಉಂಟಾಗಿದೆ. ನೀವು ಯಾವುದೇ ಜಾತಿ, ಧರ್ಮ, ಪಕ್ಷದವರೇ ಆಗಿದ್ದರೂ ಎಲ್ಲದಕ್ಕಿಂತ ಮೊದಲು ಭಾರತೀಯರಾಗಿಯೇ ಉಳಿಯಬೇಕಿದೆ. ಅದಕ್ಕಾಗಿ ಸಂವಿಧಾನವನ್ನು ಉಳಿಸಿಕೊಳ್ಳಬೇಕಿದೆ” ಎಂದು ತಿಳಿಸಿದರು.
ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಮಾತನಾಡಿ, “ರಾಷ್ಟ್ರದ ಬೆಳವಣಿಗೆಯೆಂದರೆ ಈ ರಾಷ್ಟ್ರದಲ್ಲಿರುವ ಎಲ್ಲ ಜನ ಸಮುದಾಯಗಳ ಬೆಳವಣಿಗೆಯಾಗಿದೆ. ಗಣರಾಜ್ಯೋತ್ಸವ ಆಚರಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ. ಆ ನಿಟ್ಟಿನಲ್ಲಿ ಎಲ್ಲ ಜನರಿಗೂ ಒಳಿತಾಗಲಿ” ಎಂದು ಹಾರೈಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ನೃತ್ಯದಲ್ಲಿ ಕಮಲ ಹೂವು ಬಳಕೆ; ಶಾಸಕ ಶಿವಲಿಂಗೇಗೌಡ ಆಕ್ಷೇಪ
ಪ್ರಗತಿಪರ ಚಿಂತಕ ಲಕ್ಷ್ಮಣ ಬಕ್ಕಾಯಿ ಮಾತನಾಡಿ, “ಬಾಬಾ ಸಾಹೇಬರ ನಿರಂತರ ಹೋರಾಟದ ಪ್ರತಿಫಲವಾಗಿ ಇವತ್ತು ಭಾರತದಲ್ಲಿ ಪ್ರಜಾಪ್ರಭುತ್ವದ ಹಬ್ಬವನ್ನು ನಾವೆಲ್ಲ ಆಚರಿಸುವಂತಾಗಿದೆ. ಬಾಬಾಸಾಹೇಬರು ಸಂವಿಧಾನದ ಮೂಲಕ ಸಮಾನತೆ, ಭ್ರಾತೃತ್ವವನ್ನು ಉಳಿಸಿದ್ದಾರೆ. ಅದರಂತೆ ಸಂವಿಧಾನದ ಆಶಯಗಳನ್ನು ನಾವೆಲ್ಲ ಉಳಿಸುವ ಪ್ರಯತ್ನ ಮಾಡಬೇಕಿದೆ. ಒಬ್ಬರಿಗೆ ಒಂದೇ ಮತದಾನದ ಹಕ್ಕನ್ನು ನೀಡಿ ಪ್ರಜೆಗಳನ್ನಾಗಿಸಿದ್ದಕ್ಕೆ ನಾವೆಲ್ಲ ಅವರನ್ನು ಕಡ್ಡಾಯವಾಗಿ ಸ್ಮರಿಸಲೇಬೇಕಿದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಈ ಪ್ರಜಾಪ್ರಭುತ್ವದ ಅರ್ಥಾತ್ ಗಣರಾಜ್ಯೋತ್ಸವ ಅಥವಾ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಆಚರಿಸುವುದು ಕಡ್ಡಾಯ” ಎಂದು ತಿಳಿಸಿದರು.
ಪ್ರಗತಿಪರ ಚಿಂತಕರು, ಹೋರಾಟಗಾರರು, ಸಾಹಿತಿಗಳು, ಟಿಪ್ಪು ಸುಲ್ತಾನ್ ಯುವಕ ಮಂಡಳಿ ಸದಸ್ಯರು ಇದ್ದರು.