ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯ ಮಾಡುತ್ತಿದ್ದ ವೇಳೆ ಕಮಲದ ಹೂವು ಬಳಸಿದ್ದಕ್ಕೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ.
ಶುಕ್ರವಾರ ಅರಸೀಕೆರೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆದಿದೆ. ಈ ವೇಳೆ, ಮಕ್ಕಳು ಹಾಡೊಂದಕ್ಕೆ ನೃತ್ಯ ಮಾಡಿದ್ದಾರೆ. ನೃತ್ಯ ಮಾಡುತ್ತಿದ್ದ ವಿದ್ಯಾರ್ಥಿಗಳ ಕೈಗೆ ಶಿಕ್ಷಕಿಯೊಬ್ಬರು ಕಮಲ ಹೂವು ಕೊಟ್ಟಿದ್ದಾರೆ. ಶಿಕ್ಷಕಿ ಹೂವು ಕೊಟ್ಟಿದ್ದನ್ನು ಶಾಸಕ ಶಿವಲಿಂಗೇಗೌಡ ಖಂಡಿಸಿದ್ದು, ಮಾತಿನ ಚಕಮಕಿ ನಡೆದಿದೆ.
ವಿದ್ಯಾರ್ಥಿಗಳು ರಾಷ್ಟ್ರೀಯ ಚಿಹ್ನೆಗಳನ್ನು ಹಿಡಿದು ನೃತ್ಯ ಮಾಡುತ್ತಿದ್ದರು. ಅದೇ ರೀತಿ ಕಲಮ ರಾಷ್ಟ್ರೀಯ ಹೂವು ಆಗಿರುವುದರಿಂದ, ಆ ಹೂವನ್ನು ವಿದ್ಯಾರ್ಥಿಗಳಿಗೆ ಕೊಡಲಾಗಿತ್ತು ಎಂದು ಹೇಳಲಾಗಿದೆ.
ಕಮಲ ಹೂವು ಬಳಸಿದ್ದನ್ನು ಪ್ರಶ್ನಿಸಿರುವ ಶಾಸಕ, “ವಿದ್ಯಾರ್ಥಿಗಳಿಗೆ ಕಮಲ ಯಾಕೆ ಕೊಟ್ಟಿದ್ದೀರಿ. ಮಕ್ಕಳನ್ನು ಇನ್ನೇನ್ ಉದ್ದಾರ ಮಾಡ್ತೀರಿ” ಎಂದು ಶಿಕ್ಷಕಿಗೆ ಗದರಿದ್ದಾರೆ ಎಂದು ವರದಿಯಾಗಿದೆ.
ಶಿವಲಿಂಗೇಗೌಡರ ಮಾತಿಗೆ ಶಿಕ್ಷಕಿ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನನಗೆ ಎದುರು ಮಾತನಾಡುತ್ತೀರಾ. ನೋಟೀಸ್ ನೀಡಬೇಕಾಗುತ್ತದೆ ಎಂದು ಶಿವಲಿಂಗೇಗೌಡ ಎಚ್ಚರಿಕೆ ಮಾತನಾಡಿದ್ದಾರೆ.