ನಿಗದಿತ ದಾಖಲಾತಿ ಇದ್ದರೂ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ತುಮಕೂರು ವಿ.ವಿ ವಿಜ್ಞಾನ ಕಾಲೇಜಿನಲ್ಲಿರುವ ಭೌತಶಾಸ್ತ್ರ ಸ್ನಾತಕೋತ್ತರ ಪದವಿ ವಿಭಾಗವನ್ನು ಅವೈಜ್ಞಾನಿಕ ಕಾರಣಗಳನ್ನು ನೀಡಿ ಮುಚ್ಚಲಾಗಿದೆ ಎಂದು ಎಐಡಿಎಸ್ಒ ತುಮಕೂರು ಜಿಲ್ಲಾ ಅಧ್ಯಕ್ಷರಾದ ಅಶ್ವಿನಿ ಆರೋಪಿಸಿದ್ದು, ಈ ಕೂಡಲೇ ಮುಚ್ಚಿರುವ ವಿಭಾಗವನನ್ನು ಪುನರಾಂಭಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಸರ್ಕಾರಿ ವಿಜ್ಞಾನ ಕಾಲೇಜಿಗೆ 2007ರಲ್ಲಿ ಸರ್ಕಾರ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಪರಿಸರ ವಿಜ್ಞಾನ ಸ್ನಾತಕೋತ್ತರ ಪದವಿ ಕೋರ್ಸ್ಗಳನ್ನು ಮಂಜೂರು ಮಾಡಿದೆ. ನಂತರ 2010ರಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ತುಮಕೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಾಗಿ ಮಾರ್ಪಾಡಾಗಿದೆ.
ಈಗ ಹೊಸದಾಗಿ ವಿ.ವಿ ಕ್ಯಾಂಪಸ್ ನಗರದ ಹೊರವಲಯದಲ್ಲಿ ಆರಂಭವಾಗುತ್ತಿದ್ದು ಅಲ್ಲಿ ಇನ್ನೂ ಸಂಪೂರ್ಣವಾಗಿ ತರಗತಿಗಳನ್ನು ಪ್ರಾರಂಭಿಸಿಲ್ಲ ಮತ್ತು ಅಲ್ಲಿಯೂ ಈಗಾಗಲೇ ಒಂದು ಭೌತಶಾಸ್ತ್ರ ಸ್ನಾತಕೋತ್ತರ ಪದವಿ ವಿಭಾಗ (ವಿ.ವಿ ವಿಜ್ಞಾನ ಕಾಲೇಜಿನ ಮತ್ತು ಕ್ಯಾಂಪಸ್ನಲ್ಲಿರುವ ಭೌತಶಾಸ್ತ್ರ ವಿಭಾಗದ ಪಠ್ಯ ವಿಷಯ ಬೇರೆ ಬೇರೆ ಇರುತ್ತದೆ) ಚಾಲನೆಯಲ್ಲಿದ್ದು ಅಲ್ಲಿಯೂ ಬಹಳಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
ಆದರೆ, ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನಲ್ಲಿರುವ ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರವೇಶವನ್ನು ಸ್ಥಗಿತಗೊಳಿಸಿರುವ ಕ್ರಮ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ಧಕ್ಕೆಯನ್ನು ತರುತ್ತದೆ. ಕುಲಪತಿಗಳನ್ನು ಈ ಕುರಿತು ಪ್ರಶ್ನೆ ಮಾಡಿದಾಗ ತಾಂತ್ರಿಕ ದೋಷಗಳು ಮತ್ತು ಶೈಕ್ಷಣಿಕ ಗುಣಮಟ್ಟದ ಕೊರತೆ, ಹಣಕಾಸಿನ ಕೊರತೆ ಮತ್ತು ವಿದ್ಯಾರ್ಥಿಗಳಿಗೆ ಎರಡು ಕಡೆ ಒಂದೇ ಕೋರ್ಸ್ಗಳಿದ್ದರೆ ಗೊಂದಲವಾಗುತ್ತದೆ ಎಂಬ ಕಾರಣಗಳನ್ನು ಹೇಳುತ್ತಾರೆ. ನೆಗಡಿ ಬಂದರೆ ಮೂಗನ್ನೇ ಕತ್ತರಿಸಿ ಎಂಬ ಗಾದೆಯಂತೆ ಉತ್ತರಿಸುತ್ತಾರೆ.
ಕರ್ನಾಟಕದಲ್ಲಿರುವ ಹಲವಾರು ವಿಶ್ವವಿದ್ಯಾನಿಲಯಗಳ ಘಟಕ ಕಾಲೇಜುಗಳಲ್ಲಿ, ಸಂಯೋಜಿತ ಪದವಿ ಕಾಲೇಜುಗಳಲ್ಲಿ ಮತ್ತು ವಿಶ್ವವಿದ್ಯಾನಿಲಯದ ಕ್ಯಾಂಪಸ್ಗಳಲ್ಲಿ ಕೂಡ ಒಂದೇ ಸ್ನಾತಕೋತ್ತರ ಪದವಿ ಕೋರ್ಸ್ಗಳಿರುವುದನ್ನು ನೋಡಬಹುದು.
ವಿಶ್ವವಿದ್ಯಾನಿಲಯದ ಈ ಶಿಕ್ಷಣವಿರೋಧಿ ನಿಲುವು ತುಮಕೂರಿನ ಶಿಕ್ಷಣತಜ್ಞರು, ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಮತ್ತು ಶಿಕ್ಷಣಪ್ರೇಮಿ ಜನತೆಗೆ ಆತಂಕವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ. ಈ ಕ್ರಮವನ್ನು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯು ಖಂಡಿಸುತ್ತದೆ. ಮತ್ತು ಮಾನ್ಯ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಲು, ಮುಚ್ಚಿರುವ ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗವನ್ನು ಪುನರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಲಕ್ಕಪ್ಪ ಸಿ.ಬಿ, ಸೆಕ್ರೇಟರಿಯೇಟ್ ಸದಸ್ಯರಾದ ಭರತ್ ಮತ್ತು ಪಲ್ಲವಿ ಉಪಸ್ಥಿತರಿದ್ದರು.