ಸಾಹಿತ್ಯದಲ್ಲಿ ಅಧಿಕ ಸಂಖ್ಯೆಯ ಬ್ಯಾರಿ ಲೇಖಕ – ಲೇಖಕಿಯರು ತೊಡಗಿಸಿಕೊಂಡಿದ್ದಾರೆ. ಆದರೆ, ಕನ್ನಡ ಸಾರಸ್ವತ ಲೋಕದಲ್ಲಿ ಈ ಬ್ಯಾರಿ ಬರಹಗಾರರು ಯಾಕೆ ಕಾಣಿಸುತ್ತಿಲ್ಲ, ಗುರುತಿಸಿಕೊಂಡಿಲ್ಲ? ಬ್ಯಾರಿ ಸಮುದಾಯದಲ್ಲೇ ಹುಟ್ಟಿ ಬೆಳೆದ ಸಾಹಿತಿ ಬೊಳುವಾರು ಮುಹಮ್ಮದ್ ಕುಂಞಿ, ಫಕೀರ್ ಮುಹಮ್ಮದ್ ಕಟ್ಪಾಡಿ ಕನ್ನಡ ಸಾರಸ್ವತ ಲೋಕದಲ್ಲಿ ನಿರೀಕ್ಷೆಗೂ ಮೀರಿ ಸಾಧಿಸಿದ್ದಾರೆ. ಆದರೆ, ಆ ಮಟ್ಟಕ್ಕೆ ಇತರ ಬ್ಯಾರಿ ಲೇಖಕ-ಲೇಖಕಿಯರು ಇನ್ನೂ ಯಾಕೆ ಬೆಳೆದಿಲ್ಲ ಎಂದು ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂನ ಸ್ಥಾಪಕಾಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಪ್ರಶ್ನಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲದಲ್ಲಿ ಆಯೋಜಿಸಿದ್ದ, ‘ಮೇಲ್ತೆನೆ’ ಸಂಘಟನೆ ಪ್ರಕಟಿಸಿದ ಕವಿ ಬಶೀರ್ ಅಹ್ಮದ್ ಕಿನ್ಯಾ ರಚಿಸಿರುವ ‘ಕವಿಯಲ್ಲ-ನಾನೊಬ್ಬ ಹಾಡುಗಾರ’ ಕವನ ಸಂಕಲನವನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. “ಬಶೀರ್ ಅಹ್ಮದ್ ಕಿನ್ಯಾ ಸಾತ್ವಿಕ ಕವಿ. ಸಂವೇದನಾಶೀಲ ಬರಹಗಾರ. ಆದರೆ, ಪ್ರೋತ್ಸಾಹದ ಕೊರತೆಯಿಂದ ಅವರು ಸೇರಿದಂತೆ ಹಲವಾರು ಬ್ಯಾರಿ ಬರಹಗಾರರು ಹಿಂದೆ ಬಿದ್ದಿದ್ದಾರೆ. ಅಂತಹವರನ್ನು ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮದಾಗಿದೆ” ಎಂದು ಮುಹಮ್ಮದ್ ಅಲಿ ಉಚ್ಚಿಲ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಮಾತನಾಡಿ “ಕಲುಷಿತ ಸಮಾಜದಲ್ಲಿ ಮನಸುಗಳನ್ನು ಬೆಸೆಯಲು ಬಶೀರ್ ಅಹ್ಮದ್ ಕಿನ್ಯಾರಂತಹ ಬರಹಗಾರರ ಅಗತ್ಯವಿದೆ” ಎಂದರು.
ಸಾಮಾಜಿಕ ಮುಖಂಡ ಫಾರೂಕ್ ಉಳ್ಳಾಲ್, ನಝೀರ್ ಉಳ್ಳಾಲ್, ಪತ್ರಕರ್ತ ಎ.ಕೆ. ಕುಕ್ಕಿಲ, ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ ಕೊಣಾಜೆ ಭಾಗವಹಿಸಿ ಮಾತನಾಡಿದರು.
ನಿವೃತ್ತ ಪ್ರಾಂಶುಪಾಲ ಇಸ್ಮಾಯೀಲ್ ಮಾಸ್ಟರ್ ಕೃತಿ ಪರಿಚಯಿಸಿದರು. ಬಶೀರ್ ಅಹ್ಮದ್ ಕಿನ್ಯ ಅನಿಸಿಕೆ ವ್ಯಕ್ತಪಡಿಸಿದರು. ಮೇಲ್ತೆನೆಯ ಮಾಜಿ ಅಧ್ಯಕ್ಷರಾದ ಮನ್ಸೂರ್ ಅಹ್ಮದ್ ಸಾಮಣಿಗೆ ಮತ್ತು ಮುಹಮ್ಮದ್ ಬಾಷಾ ನಾಟೆಕಲ್, ಕೋಶಾಧಿಕಾರಿ ಇಬ್ರಾಹೀಂ ಹಾಜಿ ನಡುಪದವು, ಸದಸ್ಯ ಮಂಗಳೂರು ರಿಯಾಝ್ ಉಪಸ್ಥಿತರಿದ್ದರು.
ಮೇಲ್ತೆನೆಯ ಅಧ್ಯಕ್ಷ ಅಶೀರುದ್ದೀನ್ ಸಾರ್ತಬೈಲ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಬಶೀರ್ ಕಲ್ಕಟ್ಟ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್ ಕಾರ್ಯಕ್ರಮ ನಿರೂಪಿಸಿದರು.