ಹರಿಹರ ತಾಲೂಕು ಕ್ರೀಡಾಂಗಣದ ವಾಣಿಜ್ಯ ಮಳಿಗೆಯ ಮರು ಹರಾಜು ಪ್ರಕ್ರಿಯೆ ಕೈಗೊಳ್ಳಲು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ದಾವಣಗೆರೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಅಂಬೇಡ್ಕರ್ ವೃತ್ತ ದಿಂದ ಯುವಜನ ಕ್ರೀಡಾ ಇಲಾಖೆ ಕಛೇರಿಯವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಪ್ರತಿಭಟಿಸಿದರು.
ಈ ವೇಳೆ ಸಂಘಟನೆಯ ಮುಖಂಡ ಎಸ್. ಗೋವಿಂದ್ ಮಾತನಾಡಿ, “ಹರಿಹರದ ತಾಲೂಕು ಕ್ರೀಡಾಂಗಣದಲ್ಲಿ ನಿರ್ಮಿಸಿರುವ 42ವಾಣಿಜ್ಯ ಮಳಿಗೆಗಳು 2019ನೇ ಸಾಲಿನ ಅವಧಿ ಮುಕ್ತಾಯಗೊಂಡಿದ್ದು, ಇಲ್ಲಿಯವರೆಗೂ ಮರು ಹರಾಜು ಮಾಡಿಲ್ಲ. ಸದರಿ ಮಳಿಗೆಗಳನ್ನು ಕಡಿಮೆ ಬಾಡಿಗೆಗೆ ಪಡೆದು, ಹೆಚ್ಚುವರಿ ಬಾಡಿಗೆಗೆ ಉಪಗುತ್ತಿಗೆ ನೀಡಿರುವ ಮೂಲ ಮಳಿಗೆ ಬಾಡಿಗೆದಾರರು ಸರ್ಕಾರಕ್ಕೆ ವಂಚನೆ ಮಾಡಿದ್ದು, ವಿದ್ಯಾವಂತ ನಿರುದ್ಯೋಗಿಗಳಿಗೆ ಸ್ವಾವಲಂಭಿ ಉದ್ಯೋಗಕ್ಕೆ ಅವಕಾಶ” ಇಲ್ಲದಂತಾಗಿದೆ.
ಮಳಿಗೆಗಳು ಸಾರ್ವಜನಿಕರಿಗೆ ಅತ್ಯವಶ್ಯಕವಾಗಿರುವುದರಿಂದ ಮರು ಹರಾಜು ಮಾಡುವ ಮೂಲಕ ಸರ್ಕಾರದ ಆದಾಯದ ಜೊತೆಗೆ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿದಂತಾಗುತ್ತದೆ. ಈಗಾಗಲೇ ಮರು ಹರಾಜು ಪ್ರಕ್ರಿಯೆಯನ್ನು ಮಾಡಿ ಅರ್ಜಿಯನ್ನು ಸಹ ನೀಡಲಾಗಿರುತ್ತದೆ.
ಆದರೆ, ಹಾಲಿ ಇರುವ ಮಳಿಗೆಯ ಬಾಡಿಗೆದಾರರು ನ್ಯಾಯಾಲಯದ ದಾವೆ ಹಾಕಿದ ಕಾರಣ ಹರಾಜು ಪ್ರಕ್ರಿಯೆಯು ನಿಲ್ಲಿಸಲಾಗಿತ್ತು. ಆದರೆ, ನ್ಯಾಯಾಲಯದ ಆದೇಶವಾಗಿ 8-10 ತಿಂಗಳು – ಕಳೆದರೂ ಹರಾಜು ಪ್ರಕ್ರಿಯೆ ಮುಂದುವರೆಸಲು ಕ್ರೀಡಾಧಿಕಾರಿಗಳು ಆಸಕ್ತಿ ತೋರದ ಕಾರಣ ಹಲವು ಅನುಮಾನಗಳು ಮೂಡಿರುತ್ತವೆ ಎಂದರು.
ಈ ಬಗ್ಗೆ ಆದಷ್ಟು ಬೇಗನೆ ಸೂಕ್ತ ನಿರ್ಧಾರವನ್ನು ಕೈಗೊಂಡು ವಿದ್ಯಾವಂತ ನಿರುದ್ಯೋಗಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.