ಕರ್ನಾಟಕದಲ್ಲಿ ಸುಮಾರು 14 ಜಿಲ್ಲೆಗಳಲ್ಲಿ 9,600 ಮಂದಿ ಮಾಜಿ ದೇವದಾಸಿ ತಾಯಂದಿರು ಇದ್ದು, 45,000 ಮಂದಿ ದೇವದಾಸಿ ತಾಯಂದಿರು ಸರ್ಕಾರದ ದೇವದಾಸಿ ಪುನರ್ವಸತಿ ನಿಗಮದಲ್ಲಿ ನೋಂದಣಿಯಾಗಿದ್ದಾರೆ. ಅವರಿಗೆ ಈವರೆಗೆ ನಾಲ್ಕು ಯೋಜನೆಗಳು ದೊರೆಯತ್ತಿದ್ದು, ಅವೂ ಕೂಡ ಸಮರ್ಪಕವಾಗಿ ಎಲ್ಲ ದೇವದಾಸಿ ತಾಯಂದಿರಿಗೆ ದೊರೆಯುತ್ತಿಲ್ಲ ಎಂದು ವಿಮುಕ್ತ ದೇವದಾಸಿ ತಾಯಂದಿರ ಒಕ್ಕೂಟ ಸಂಚಾಲಕ ಚಂದಲಿಂಗ ಕಲಾಲಬಂಡಿ ಹೇಳಿದರು.
ವಿಜಯಪುರ ನಗರದ ಸಂತ ಅನ್ನಮ್ಮನವರ ದೇವಾಲಯದ ಸಭಾಂಗಣದಲ್ಲಿ ಜೀವನ ಜ್ಯೋತಿ ಮಾಜಿ ದೇವದಾಸಿ ತಾಯಂದಿರ ಜಿಲ್ಲಾ ಒಕ್ಕೂಟ, ಸಾಮಾಜಿಕ ನ್ಯಾಯ ಪಡೆಯುವುದು ಮಾಜಿ ದೇವದಾಸಿ ತಾಯಂದಿರ ಹಕ್ಕು ಮತ್ತು ಅನೌಪಚಾರಿಕ ಶಿಕ್ಷಣ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾಜಿ ದೇವದಾಸಿ ತಾಯಂದಿರ ಜಿಲ್ಲಾ ಮಟ್ಟದಲ್ಲಿ ಸಂಘಟನೆ ಮತ್ತು ಹೊಸ ಕಾಯ್ದೆಗಳ ಮಾಹಿತಿ ಕುರಿತು ಒಂದು ದಿನದ ತರಬೇತಿ ಕಾರ್ಯಗಾರದಲ್ಲಿ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
“40,000ದವರೆಗೂ ದೇವದಾಸಿ ತಾಯಂದಿರು ನೋಂದಣಿಯಿಂದ ಹೊರಗೆ ಉಳಿದಿದ್ದು, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹೊಸದಾಗಿ ಸರ್ವೇ ಮಾಡಿ ಹೊರಗುಳಿದ ದೇವದಾಸಿ ತಾಯಂದಿರನ್ನು ನಿಗಮದಲ್ಲಿ ನೋಂದಣಿ ಮಾಡಿಕೊಳ್ಳಲು ಸಕಾರಕ್ಕೆ ಸಾಕಷ್ಟು ಬಾರಿ ವಿನಂತಿ ಮಾಡಿಕೊಂಡರೂ ಕೂಡ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ ಮಾಜಿ ದೇವದಾಸಿ ತಾಯಂದಿರು ಸಂಘಟನೆಯಾಗಬೇಕಾಗಿದೆ. ನಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯಲು ಮುಂದಾಗಬೇಕಿದೆ” ಎಂದು ತಿಳಿಸಿದರು.
“ಸಮಾಜದ ಕಟ್ಟ ಕಡೆಯ ಸಮುದಾಯಗಳಲ್ಲಿ ಅತಿ ಶೋಷಣೆಗೆ ಒಳಗಾಗಿರುವ ದೇವದಾಸಿ ತಾಯಂದಿರಿಗೆ ಕನಿಷ್ಟ ಸೌಲಭ್ಯಗಳೂ ಸಿಗದೆ ಜೀವನ ನಡೆಸುವಂತಾಗಿದೆ. ದೇವದಾಸಿ ತಾಯಂದಿರು ಮತ್ತು ಅವರ ಮಕ್ಕಳು ಸಂವಿಧಾನಾತ್ಮಕವಾಗಿ ಗೌರಯುತವಾಗಿ ಬದುಕುವ ಹಕ್ಕು ರಕ್ಷಣೆ ಮಾಡುವುದು ಸರ್ಕಾರಗಳ ಕರ್ತವ್ಯವಾಗಿದೆ. ದೇವದಾಸಿ ಮತ್ತು ಅವರ ಮಕ್ಕಳ ಹಕ್ಕುಗಳು, ಮಾನವ ಹಕ್ಕುಗಳನ್ನು ರಕ್ಷಿಸುವ ಹೊಣೆ ಸರ್ಕಾರದ ಕರ್ತವ್ಯ. ಆದ್ದರಿಂದ ದೇವದಾಸಿ ಪದ್ಧತಿ ನಿರ್ಮೂಲನೆ ಮತ್ತು ಪುನರ್ವವಸತಿಗಾಗಿ 2018ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿರುವ ಮಸೂದೆಯನ್ನು ಕಾಯ್ದೆಯಾಗಿ ಜಾರಿ ಮಾಡಲು ನಾವು ಸಂಘಟಿತರಾಗಬೇಕಾಗಿದೆ. ನಮ್ಮ ಕೂಗು ನಮ್ಮ ನೋವು ನಮಗಾದ ಅನ್ಯಾಯವು ಸರ್ಕಾರದ ಗಮನಕ್ಕೆ ಬರುವವರೆಗೂ ನಾವು ಹೋರಾಟ ಮಾಡಲೇಬೆಕಾದ ಅನಿವಾರ್ಯತೆ ಇದೆ” ಎಂದು ತಬೇತಿಯಲ್ಲಿ ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಒಂದು ದಿನದ ಕಾರ್ಯಗಾರ
ಕಾರ್ಯಕ್ರಮದಲ್ಲಿ ಹೋರಾಟಗಾರರು ಎಂ ಆರ್ ಬೇರಿ ರಾಯಚೂರು ಹಾಗೂ ವಿಮುಕ್ತ ದೇವದಾಸಿ ತಾಯಂದಿರ ಒಕ್ಕೂಟ ಅಧ್ಯಕ್ಷೆ ಪಡಿಯಮ್ಮ ಮಾತನಾಡಿ, “ನಾವು ಅಪ್ರಾಪ್ತ ವಯಸ್ಸಿನಲ್ಲಿ ಇದ್ದಾಗ ನಮ್ಮನ್ನು ಈ ಅನಿಷ್ಟ ಪದ್ಧತಿಗೆ ದೂಡಲಾಗಿದೆ. ನಾವು ಬಯಸಿ ದೇವದಾಸಿ ಪದ್ದತಿಗೆ ಬಂದಿಲ್ಲ. ಸಮಾಜ ನಮಗೆ ಅನ್ಯಾಯ ಮಾಡಿದೆ. ಆದ್ದರಿಂದ ನಮಗೆ ಸಮಾಜದಲ್ಲಿ ಗೌರಯತ ಬದುಕು ಕಟ್ಟಿಕೊಳ್ಳಲು ನಾವು ಮುಂದಾಗಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುನಿತಾ ಮೋರೆ, ಅಧ್ಯಕ್ಷೆ ರೇಣುಕಾ ಎಂಟಮಾನ, ಸಿಸ್ಟರ್ ಜಯಾ ಮೇರಿ, ಎಲ್ಲ ತಾಲೂಕು ಒಕ್ಕೂಟದ ಮುಖಂಡರು, ಪದಾಧಿಕಾರಿಗಳು ಸೇರಿದಂತೆ 200 ಜನ ಭಾಗಿಯಾಗಿದ್ದರು.