‘ದಲಿತ ಅಭಿವ್ಯಕ್ತಿ ಸ್ವಾತಂತ್ರ್’ ದಮನ ಮಾಡುತ್ತಿರುವ ತಹಸೀಲ್ದಾರ್ ನಡೆ ಖಂಡಿಸಿ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಕಚೇರಿ ಮುಂಭಾಗ ದಸಂಸ, ಕರ್ನಾಟಕ ರಾಜ್ಯ ರೈತ ಸಂಘ, ಜನಾಂದೋಲನಗಳ ಮಹಾ ಮೈತ್ರಿಸೇರಿ ಹಲವು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ತಾಲೂಕಿನಲ್ಲಿ ದಲಿತರ ಹಲವು ಭೂ ಸಮಸ್ಯೆಗಳಿದ್ದು ಪ್ರಮುಖವಾಗಿ ದೊಡ್ಡ ಹೊಸೂರು ಚೆನ್ನಮ್ಮರ ಪಿಟಿಸಿಎಲ್ ಭೂ ಸಮಸ್ಯೆ, ಕೊಪ್ಪ ಗರಸಿಯ ಕಾಲೋನಿ ಸಮಸ್ಯೆ, ಕೊಣಸುರು ಸರ್ವೇ ನಂ. 138ರ ಭೂ ಸಮಸ್ಯೆ, ಮುಮ್ಮಡಿ ಕಾವಲ್ ಪಕ್ಕಾ ಪೋಡ್ ದುರಸ್ತಿ, ಕದರೆ ಗೌಡನ ಕೊಪ್ಪಲು ಭೂ ಸಮಸ್ಯೆ, ಬೆಣಗಾಲು ಸರ್ವೇ ನಂ. 42ರ ಬಿಡಿಎ ಜಾಗವನ್ನು ಕಾಫಿ ಕ್ಯೂರಿಂಗ್ ಮಾಲೀಕರು ಮಾಡಿರುವ ಒತ್ತುವರಿ, ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ನಡೆಸಿರುವ ಅಕ್ರಮ ಅವ್ಯವಹಾರಗಳ ಕುರಿತಾಗಿ ಕ್ರಮ ವಹಿಸುವಂತೆ ದಸಂಸ 645 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಾ ಬಂದಿದೆ.
ತಹಸೀಲ್ದಾರ್ ಕುಂಜಿ ಅಹಮ್ಮದ್ ಅವರು ಪ್ರತಿಭಟನಾಕಾರರ ಬೇಡಿಕೆಗೆ ಸ್ಪಂದಿಸದೆ ದಲ್ಲಾಳಿಗಳ, ಮಧ್ಯವರ್ತಿಗಳ, ಜನ ಪ್ರತಿನಿಧಿಗಳ ಕೈಗೊಂಬೆಯಾಗಿ ಧರಣಿ ಮಾಡುತಿದ್ದ ಕಾರ್ಯಕರ್ತರ ಶೆಡ್ ಕಿತ್ತು, ನೆರಳಾಗಿದ್ದ ಮರವನ್ನು ಕಡಿಸಿ, ಚಾಪೆ, ಗಾಂಧಿ, ಅಂಭೆಡ್ಕರ್ ಫೋಟೋ ಕಿತ್ತುಕೊಂಡು ಹೋಗಿದ್ದಲ್ಲದೆ, ಪ್ರತಿಭಟನಾಕಾರರಾದ ಸಿ.ಎಸ್. ಜಗದೀಶ್ ಹಾಗೂ ದೊಡ್ಡಯ್ಯ ಅವರ ಮೇಲೆ ಖುದ್ದಾಗಿ ತಹಸೀಲ್ದಾರ್ ಅವರೇ ಪೊಲೀಸ್ ಠಾಣೆಗೆ ತೆರಳಿ ಸುಳ್ಳು ಕೇಸ್ ದಾಖಲಿಸಿರುತ್ತಾರೆ ಎಂದು ಜನಾಂದೋಲನಗಳ ಮಹಾ ಮೈತ್ರಿಯ ಉಗ್ರ ನರಸಿಂಹೆಗೌಡ ಆರೋಪಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಹೊಸಕೋಟೆ ಬಸವರಾಜು ಮಾತನಾಡಿ, ಸರ್ಕಾರ, ಆಡಳಿತ ವರ್ಗ ಸ್ವಾತಂತ್ರ್ಯ ಬಂದು 75ವರ್ಷ ಕಳೆದರೂ ದಲಿತರನ್ನ, ಕಾರ್ಮಿಕರನ್ನ, ರೈತರನ್ನ ಶೋಷಿಸುವುದನ್ನು ಬಿಟ್ಟಿಲ್ಲ. ಉಳುವವನಿಗೆ ಭೂಮಿ ಕೊಡಬೇಕು ಯಾವ ಸರ್ಕಾರ ಜನಪರವಾಗಿ ಕೆಲಸ ಮಾಡಿದೆ ಯಾವ ಸರ್ಕಾರ ಬಂದರು ಸಹ ಜನ ವಿರೋಧಿ, ರೈತ ವಿರೋಧಿಯೇ ಹೊರತು ಸಾಮಾಜಿಕ ನ್ಯಾಯ ಕೊಡುವಲ್ಲಿ ವಿಫಲವಾಗಿವೆ ಎಂದರು.
ಹಿರಿಯ ರೈತ ಮುಖಂಡರಾದ ಜೋಗನ ಹಳ್ಳಿ ಗುರುಮೂರ್ತಿ ಮಾತನಾಡಿ, ಪಿರಿಯಾಪಟ್ಟಣದಲ್ಲಿ ಇದೇನು ಹೊಸದಲ್ಲ ಪ್ರೊ. ನಂಜುಂಡಸ್ವಾಮಿ ಅವರ ಕಾಲದಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದೇವೆ. ರೈತರಿಗೆ ಹಕ್ಕು ಪತ್ರ ಕೊಡಿ ಅಂತ ಹೋರಾಟ ಮಾಡಿದರೆ ಹೋರಾಟಗಾರ ಮೇಲೆ ಕೇಸ್ ಹಾಕೋದು ಕೋರ್ಟು ಕೇಸು ಅಂತ ಅಲೆಯುವಂತೆ ಮಾಡ್ತಾರೆ. ಇಂತಹ ಜನಪ್ರತಿನಿಧಿಗಳು, ಆಡಳಿತ ವರ್ಗದ ಅಧಿಕಾರಿಗಳು, ಪೊಲೀಸರು ಸಾಮಾಜಿಕ ನ್ಯಾಯ ಕೊಡಲಾರರು. ಇಂದಿಗೂ ಹೋರಾಟ ಮಾಡುವುದೇ ಬದುಕಾಗಿದೆ. ಆದರೆ, ಹೋರಾಟಕ್ಕೆ ನ್ಯಾಯ ಸಿಕ್ಕಿದ್ದೆ ಇಲ್ಲ. ಎಲ್ಲ ಭ್ರಷ್ಟ ವ್ಯವಸ್ಥೆ ಜನರಿಗೆ ನ್ಯಾಯ ಸಿಗದಂತೆ ಮಾಡಿದೆ ಇನ್ನಾದರೂ ಶೋಷಿತರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ನಿರತರು ತಾಲೂಕು, ಜಿಲ್ಲಾಡಳಿತಕ್ಕೆ 15ದಿನಗಳ ಗಡುವು ನೀಡಿದ್ದು ದೊಡ್ಡಯ್ಯ ಅವರ ಮೇಲೆ ರೌಡಿ ಶೀಟರ್ ತೆರೆಯುವ ಹುನ್ನಾರವಿದ್ದು, ಅಂತಹ ಪ್ರಯತ್ನ ಮಾಡಿದ್ದೆ ಆದರೆ ರಾಜ್ಯಾದ್ಯಂತ ಎಲ್ಲ ಸಂಘಟನೆಗಳು ಸೇರಿ ದೊಡ್ಡ ಹೋರಾಟದ ಮೂಲಕ ಜನತಾ ನ್ಯಾಯಾಲಯ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಪಾಠ ಕಲಿಸಬೇಕಾಗುತ್ತದೆ ಎಂಬ ಎಚ್ಚರಿಕೆ ರವಾನಿಸಿದರು.
ಪ್ರತಿಭಟನೆಯಲ್ಲಿ ಅಭಿರುಚಿ ಗಣೇಶ್, ರಾಜಶೇಖರ್ ಕೋಟೆ, ನಂಜುಂಡ ಮೂರ್ತಿ, ರಾಜಣ್ಣ, ದೊಡ್ಡಣ್ಣ, ಅಕ್ರಂ ಪಾಷಾ, ಅನಗಟ್ಟಿ ದೇವರಾಜು, ಗೋಪಾಲ ಕೃಷ್ಣ, ಪ್ರದೀಪ್ ಮುಮ್ಮಡಿ ಮೊದಲಾದವರು ಭಾಗಿಯಾಗಿದ್ದರು.