ಕೇಂದ್ರ ಸರ್ಕಾರ ಅನುದಾನ, ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಎಸಗಿದೆ ಎಂದು ಆರೋಪಿಸಿ ಸೋಮವಾರ ಭಾರತ ಕಮ್ಯುನಿಸ್ಟ್ ಪಕ್ಷದ ಮುಖಂಡರು ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಂಸದರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ ಪ್ರತಿಭಟನಾಕಾರರು, “ಜಿಎಸ್ಟಿ, ತೆರಿಗೆ ಹಣ, ಬರ ಪರಿಹಾರ ಸೇರಿದಂತೆ ವಿವಿಧ ಅನುದಾನಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡುವಲ್ಲಿ ಕೇಂದ್ರ ಸರ್ಕಾರ ಎಸಗುತ್ತಿರುವ ಅನ್ಯಾಯ ಮತ್ತು ತಾರತಮ್ಯ ನೀತಿ ಖಂಡನೀಯ” ಎಂದು ಆಕ್ಷೇಪಿಸಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸಂವಿಧಾನದ ಆಶಯದಂತೆ ದೇಶದ ಜನತೆಯ ಪರವಾಗಿ ಆಡಳಿತ ನಡೆಸಬೇಕು. ದೇಶ ಮುನ್ನಡೆಸಲು ಹಾಗೂ ರಾಜ್ಯಗಳನ್ನು ಸರ್ವ ವ್ಯಾಪಿಯಾಗಿ ಸಬಲಗೊಳಿಸಲು ಭಾರತದ ಒಕ್ಕೂಟ ವ್ಯವಸ್ಥೆಯೊಳಗಿರುವ ರಾಜ್ಯಗಳ ಮೂಲಕ ಸಂಗ್ರಹವಾಗಿರುವ ಎಲ್ಲ ರೂಪದ ತೆರಿಗೆ ಹಣವನ್ನು ರಾಜ್ಯಗಳಿಗೆ ಹಂಚಿಕೆಯಾಗಬೇಕು ಎಂದು ಹಣಕಾಸು ಆಯೋಗವನ್ನು ರಚಿಸಲಾಗಿದೆ. ಅದರಂತೆ ತೆರಿಗೆ ಹಣವನ್ನು ನ್ಯಾಯ ಸಮ್ಮತವಾಗಿ ರಾಜ್ಯಗಳಿಗೆ ಹಂಚಿಕೆ ಮಾಡಿ ಅಗತ್ಯವಾದ ಅನುದಾನವನ್ನು ಕಾಲಕಾಲಕ್ಕೆ ಬಿಡುಗಡೆಗೊಳಿಸುವುದು ಭಾರತ ಸರ್ಕಾರದ ಹೊಣೆಯಾಗಿದೆ” ಎಂದು ಹೇಳಿದರು.
ಕಳೆದ ನಾಲ್ಕು ವರ್ಷಗಳಿಂದ ರಾಜ್ಯಗಳಿಗೆ ಲಭಿಸಬೇಕಾದ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಎಸಗಿದ್ದು, ಸುಮಾರು 45 ಸಾವಿರ ಕೋಟಿ ರೂ.ಗಳು ನಷ್ಟವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಇದರೊಂದಿಗೆ ಬರ ಪರಿಹಾರ ಅನುದಾನವನ್ನೂ ಸಹ ಬಿಡುಗಡೆಗೊಳಿಸದೇ ಇರುವುದು ರಾಜ್ಯಕ್ಕೆ ಮಾಡಿದ ಮಹಾ ಅನ್ಯಾಯವಾಗಿದೆ” ಎಂದು ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಪಾಲಿನ ಹಣ ಸೇರಿದಂತೆ ನೆಲ, ಜಲ, ಭಾಷೆಯಂತಹ ರಾಜ್ಯದ ಅಸ್ಮಿತೆಯ ಪ್ರಶ್ನೆಗಳು ಎದುರಾದಾಗ ರಾಜ್ಯದ ಪರ ಧ್ವನಿ ಎತ್ತದೇ ಮೌನ ತಾಳಿರುವುದು ಸರಿಯಲ್ಲ. ಕೂಡಲೇ ಕೇಂದ್ರ ಸರ್ಕಾರದಿಂದ ಬಿಡುಗಡೆಗೊಳಿಸಿರುವ ನಿಧಿ ಅಥವಾ ಅನುದಾನ ಎಷ್ಟು ಕ್ಷೇತ್ರಗಳಿಗೆ ಸಂಸದರ ನಿಧಿಯಿಂದ ಆಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಶ್ವೇತಪತ್ರ ಹೊರಡಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತು ತಪ್ಪಿದ ಮೋದಿ; ಮತ್ತೆ ಎದ್ದು ನಿಂತ ಅನ್ನದಾತರು
ಸಿಪಿಐ ರಾಜ್ಯ ಮಂಡಳಿ ಸದಸ್ಯ ಮೌಲಾ ಮುಲ್ಲಾ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ್ ರಾಠೋಡ್, ಸಹ ಕಾರ್ಯದರ್ಶಿ ಪದ್ಮಾವತಿ ಎನ್. ಮಾಲಿಪಾಟೀಲ್, ಭೀಮಾಶಂಕರ್ ಮಾಡಿಯಾಳ್, ಪ್ರಭುದೇವ್ ಯಳಸಂಗಿ, ಎಚ್.ಎಸ್. ಪತಕಿ, ಶಿವಲಿಂಗಮ್ಮಾ ಲೆಂಗಟಿಕರ್, ಶಾಣಮ್ಮಾ ಎ.ಪೂಜಾರಿ ಸೇರಿದಂತೆ ಇತರರಿದ್ದರು.