ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಜೆಪ್ಪುವಿನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯೊಬ್ಬರು(ಪ್ರಸಕ್ತ ಹುದ್ದೆಯಿಂದ ವಜಾಗೊಂಡಿರುವ) ಹಿಂದೂ ಧರ್ಮಕ್ಕೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂಬ ಪ್ರಕರಣಕ್ಕೆ ಸಂಬಂಧಿಸಿ ಸಂಪೂರ್ಣ ಘಟನೆ ಹಾಗೂ ಬಳಿಕ ನಡೆದ ವಿದ್ಯಮಾನಗಳ ಕುರಿತಂತೆ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಸತ್ಯಶೋಧನಾ ತನಿಖೆಯಾಗಬೇಕು ಎಂದು ಕಾಂಗ್ರೆಸ್ ನಿಯೋಗ ಒತ್ತಾಯಿಸಿದೆ.
ಮಾಜಿ ಸಚಿವ ಬಿ ರಮಾನಾಥ ರೈ ಹಾಗೂ ವಿನಯ ಕುಮಾರ್ ಸೊರಕೆ ನೇತೃತ್ವದ ಕಾಂಗ್ರೆಸ್ ನಿಯೋಗ ಮಂಗಳವಾರ ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿಯ ಜತೆ ಚರ್ಚಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ್ದಾರೆ.
“ಘಟನೆಯ ಸತ್ಯಾಸತ್ಯತೆಯ ತನಿಖೆ ಆಗಬೇಕಾಗಿದೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮತೀಯ ಸಾಮರಸ್ಯಕ್ಕೆ ತೊಡಕಾಗುವ ವಾತಾವರಣ ಸೃಷ್ಟಿಸಿದ ಕಳಂಕವಿದೆ. ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಉಳಿಸಬೇಕೆಂಬುದು ನಮ್ಮ ಆಶಯ. ಸಮಸ್ಯೆ ಆದಾಗ ಕೆಲವರು ಪ್ರಚೋದನೆ ನೀಡುವವರಿದ್ದಾರೆ, ಅಂತಹ ಮನಸ್ಥಿತಿ ನಮಗಿಲ್ಲ. ಸುಂದರ ಸಮಾಜ ನಿರ್ಮಾಣದ ಹೊಣೆಗಾರಿಕೆಯಲ್ಲಿ ಒಪ್ಪು ತಪ್ಪುಗಳ ವಿಮರ್ಶೆ ಆಗಬೇಕು. ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸತ್ಯಸೋಧನಾ ಸಮಿತಿ ಮೂಲಕ ತನಿಖೆ ನಡೆಸಲು ಒತ್ತಾಯಿಸಲಾಗುವುದು” ಎಂದು ರಮಾನಾಥ ರೈ ಹೇಳಿದರು.
“ಮಕ್ಕಳು ಹೇಳಿರುವ ಮಾತು, ಘಟನೆಗೆ ಸಂಬಂಧಿಸಿ ಮಕ್ಕಳನ್ನು ರಾಜಕೀಯವಾಗಿ ಬಳಕೆ ಮಾಡಿರುವ ಎಲ್ಲ ಅಂಶಗಳ ತನಿಖೆಯಾಗಬೇಕು. ಮುಂದೆ ಇಂತಹ ಘರ್ಷಣೆಗೆ ಕಾರಣವಾಗದ ರೀತಿಯಲ್ಲಿ ಕ್ರಮ ಆಗಬೇಕು” ಎಂದು ಒತ್ತಾಯಿಸಿದರು.
“ಮನುಷ್ಯರ ನಡುವೆ ಜಗಳ ಆಗಬಾರದು. ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಸಮಸ್ಯೆಗಳು ಉಂಟಾದಾಗ ಅದನ್ನು ಬಗೆಹರಿಸುವಲ್ಲಿ ಸಂಬಂಧಪಟ್ಟ ಸಂಸ್ಥೆಯ ಜತೆಗೆ ಶಿಕ್ಷಣ ಇಲಾಖೆಯ ಜವಾಬ್ದಾರಿ ಪ್ರಮುಖವಾಗಿದೆ. ಆದರೆ ಈ ಘಟನೆ ವಿಚಾರದಲ್ಲಿ ವಿಳಂಬವಾಗಿದೆ. ಮಕ್ಕಳ ಮನಸ್ಸು ಪರಿಶುದ್ಧ, ನಿಷ್ಕಲ್ಮಶ. ಏನಾದರೂ ಕೂಡ ಮಾತಿನ ಮೂಲಕ ಅವರನ್ನು ಪ್ರಚೋದನೆ ಮಾಡುವಂಥದ್ದು, ಮಕ್ಕಳನ್ನು ಧಾರ್ಮಿಕ ಕೃತ್ಯಗಳಿಗೆ ಬಳಸುವ ಕಾರ್ಯ ಆಗಬಾರದು. ಪೋಷಕರು, ಊರಿನವರು, ಸಮಾಜ ಮಾತನಾಡುವುದು ಸಹಜ. ಆದರೆ ಮಕ್ಕಳನ್ನು ರಾಜಕಾರಣಕ್ಕೆ ಬಳಸಬಾರದು. ಘಟನೆ ಉಲ್ಬಣ ಆಗದಂತೆ, ಸಾಮರಸ್ಯ, ಭಾವೈಕ್ಯದಿಂದ ಘಟನೆಯನ್ನು ಬಗೆಹರಿಸಬೇಕಾಗಿದೆ” ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, “ಘಟನೆಯ ಸತ್ಯಾಸತ್ಯತೆಯನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ನಿಯೋಗ ಭೇಟಿ ನೀಡಿದೆ. ಆ ದೃಷ್ಟಿಯಲ್ಲಿ ಸಂಬಂಧಪಟ್ಟ ಇಲಾಖೆ, ಸಚಿವರು, ಜಿಲ್ಲಾಡಳಿತ ಪ್ರತ್ಯೇಕ ವ್ಯವಸ್ಥೆಯ ಮೂಲಕ ಸಮಗ್ರ ತನಿಖೆ ಮಾಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ” ಎಂದು ಹೇಳಿದರು.
ಕೆಪಿಸಿಸಿ ವಕ್ತಾರೆ ಫರ್ಝಾನ ಮಾತನಾಡಿ, “ನಗರದ ಕ್ರೈಸ್ತ ಸಮುದಾಯದ ಶಾಲೆಯೊಂದರಲ್ಲಿ ಪಾಠದ ವೇಳೆ ಶಿಕ್ಷಕಿಯೊಬ್ಬರು ಹಿಂದೂ ಧರ್ಮದ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆಂಬ ಗುಮಾನಿ ಇದೆ. ಆದರೆ ಆ ಘಟನೆಯ ಬಗ್ಗೆ ನಿಖರವಾದ ಮಾಹಿತಿ ದೊರಕಿಲ್ಲ. ಶಿಕ್ಷಕಿ ಯಾವುದೇ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೂ ಅದನ್ನು ಖಂಡಿಸುತ್ತೇವೆ. ಆದರೆ ನಂತರ ನಡೆದ ಬೆಳವಣಿಗೆ ಸಮಾಜವಾಗಿ ತಲೆತಗ್ಗಿಸುವಂತದ್ದು” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ | ಬಗರ್ ಹುಕ್ಕುಂ ಭೂಮಿಗಾಗಿ ಕರ್ನಾಟಕ ಪ್ರಾಂತ ರೈತ ಸಂಘಟನೆಯಿಂದ ಪ್ರತಿಭಟನೆ
“ಘಟನೆಯಿಂದಾಗಿ ಶಾಲಾ ಆವರಣದ ಹೊರಗೆ ಪೊಲೀಸ್ ವಾಹನಗಳ ಮೂಲಕ ಭದ್ರತೆ ಒದಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆಯ ಬಗ್ಗೆ ತಿಳಿಯಲು ಕಾಂಗ್ರೆಸ್ ನಿಯೋಗ ಶಾಲೆಗೆ ಭೇಟಿ ನೀಡಿದ್ದ ವೇಳೆ, ಆರೋಪಕ್ಕೊಳಗಾಗಿರುವ ಶಾಲಾ ಶಿಕ್ಷಕಿ ರವೀಂದ್ರನಾಥ್ ಠಾಗೋರ್ ಅವರ ‘ವರ್ಕ್ ಈಸ್ ವರ್ಶಿಪ್’ ಎಂಬ ಪದ್ಯದ ಮೇಲೆ ಪಾಠ ಹೇಳುವ ಸಂದರ್ಭದಲ್ಲಿ ʼದೈವ, ದೇವರು ಹೃದಯಲ್ಲಿರಬೇಕು. ಗುಡಿ, ಮಸೀದಿ, ಮಂದಿರಗಳಲ್ಲಿ ಅಲ್ಲʼ ಎಂಬ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ. ಸೋಮವಾರ ಪ್ರತಿಭಟನೆಯ ಸಂದರ್ಭ ಸ್ಥಳೀಯ ಶಾಸಕರು ಮಕ್ಕಳು ಶಾಲೆ ಬಿಟ್ಟು ಹೊರಬಂದಾಗ ಅವರಿಂದ ‘ಜೈ ಶ್ರೀರಾಮ್’ ಎಂದು ಕೂಗಲು ಪ್ರಚೋದಿಸಿದ್ದಾರೆ. ಇಂತಹ ಕೃತ್ಯಗಳು ಆಗಬಾರದು” ಎಂದರು.
ನಿಯೋಗದಲ್ಲಿ ಮುಖಂಡರುಗಳಾದ ಜೆ ಆರ್ ಲೋಬೋ, ಮಮತಾ ಗಟ್ಟಿ, ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಶಾಲೆಟ್ ಪಿಂಟೋ, ಭಾಸ್ಕರ ಮೊಯ್ಲಿ, ವಿಶ್ವಾಸ್ ದಾಸ್ ಸೇರಿದಂತೆ ಇತರರು ಇದ್ದರು.