17 ವರ್ಷದ ಬಾಲಕನನ್ನು ಎಂಟು ಮಂದಿ ಕೂಲಿ ಕಾರ್ಮಿಕರು ಕಂಬಕ್ಕೆ ಕಟ್ಟಿ ಬೆಲ್ಟ್ ಮತ್ತು ದೊಣ್ಣೆಗಳಿಂದ ಥಳಿಸಿರುವ ಘಟನೆ ಬೆಂಗಳೂರಿನ ಉಪಕಾರ್ ಲೇಔಟ್ ಬಳಿ ನಡೆದಿದೆ. ಸಂತ್ರಸ್ತ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ನಸುಕಿನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಬಾಲಕ, ಬಾಲಕನ ಸ್ನೇಹಿತ ಹಾಗೂ ಕಾರ್ಮಿಕರ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಗಾಯಗೊಂಡ ಬಾಲಕ ಆರ್.ಜಿ ನಗರದ ಹೆಗ್ಗನಹಳ್ಳಿ 1ನೇ ಕ್ರಾಸ್ ನಿವಾಸಿ. ಈತ ತನ್ನ ಸ್ನೇಹಿತ ಪ್ರಜ್ವಲ್ ಜೊತೆಗೂಡಿ ಕೂಲಿ ಕಾರ್ಮಿಕರು ಮಲಗುತ್ತಿದ್ದ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ತಂಗಿದ್ದರು. ಮಲಗಿದ್ದ ಎಂಟು ಮಂದಿ ಕೂಲಿ ಕಾರ್ಮಿಕರ ಪೈಕಿ ಮೂವರ ಮೇಲೆ ಪ್ರಜ್ವಲ್ ಹಲ್ಲೆ ನಡೆಸಿ, ನಗದು, ಮೊಬೈಲ್ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಆದರೆ, ತಪ್ಪಿಸಿಕೊಳ್ಳುವ ಭರದಲ್ಲಿ ಕಾಲು ಜಾರಿ ಕೆಳಗೆ ಬಿದ್ದ ಅಪ್ರಾಪ್ತ ಬಾಲಕ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದುಬಂದಿದೆ.
ಕಾರ್ಮಿಕರು ಬಾಲಕನನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕ ಮತ್ತು ಪ್ರಜ್ವಲ್ ವಿರುದ್ಧ ಕಾರ್ಮಿಕರು ದೂರು ದಾಖಲಿಸಿದ್ದಾರೆ.
“ಮಚ್ಚನ್ನು ಹಿಡಿದುಕೊಂಡಿದ್ದ ಪ್ರಜ್ವಲ್, ಮೂವರು ಕಾರ್ಮಿಕರ ಮೇಲೆ ಹಲ್ಲೆ ನಡೆಸಿ ಅವರಿಂದ 29,000 ರೂಪಾಯಿ ನಗದು ಮತ್ತು ಮೂರು ಮೊಬೈಲ್ ಫೋನ್ಗಳನ್ನು ಕಿತ್ತುಕೊಂಡಿದ್ದಾನೆ. ಇತರ ಕಾರ್ಮಿಕರು ಆತನನ್ನು ಹಿಡಿಯಲು ಯತ್ನಿಸಿದಾಗ ಪ್ರಜ್ವಲ್ ಪರಾರಿಯಾಗಿದ್ದಾನೆ” ಎಂದು ದೂರಿನಲ್ಲಿ ವಿವರಿಸಿದ್ದಾರೆ.
ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕೆಳಗೆ ಬಿದ್ದ ಬಾಲಕನ ಮುಖಕ್ಕೆ ಗಾಯಗಳಾಗಿವೆ. ಕೂಲಿ ಕಾರ್ಮಿಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಾಲಕನ ತಂದೆ ಎಲ್ ನಾರಾಯಣ ಕೂಡ ದೂರು ದಾಖಲಿಸಿದ್ದಾರೆ. ನಾರಾಯಣ ಅವರ ದೂರಿನ ಆಧಾರದ ಮೇಲೆ, ಕಾರ್ಮಿಕರ ವಿರುದ್ಧ ಐಪಿಸಿ ಸೆಕ್ಷನ್ 324 ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
“ಪ್ರಜ್ವಲ್ ಹಲ್ಲೆಯಿಂದ ಗಾಯಗೊಂಡ ಮೂವರು ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ ಬಾಲಕನನ್ನು ಉಳ್ಳಾಲ ಮುಖ್ಯರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಜ್ವಲ್ ನನ್ನು ಹಿಡಿಯುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.