ನಾಟಕಗಳು ಸಂಸ್ಕೃತಿಯ ಕೊಂಡಿ. ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಗುಬ್ಬಿ ಕಂಪನಿಯ ಕೊಡುಗೆ ಅವಿಸ್ಮರಣೀಯ. ರಂಗ ದಿಗ್ಗಜರನ್ನು ತಯಾರು ಮಾಡುವ ವಿಶ್ವವಿದ್ಯಾಲಯ ಎಂದೆನಿಸಿದೆ. ಆದ್ದರಿಂದಲೇ ಇಂದಿಗೂ ಜನಮಾಸದಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿದೆ ಎಂದು ಸಾಹಿತಿ, ಹಿರಿಯ ರಂಗನಿರ್ದೇಶಕ ಹಾಗೂ ಪ್ರಾಧ್ಯಾಪಕ ರಾಜಪ್ಪದಳವಾಯಿ ತಿಳಿಸಿದರು.
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಗುಬ್ಬಿ ವೀರಣ್ಣ ಟ್ರಸ್ಟ್ನ ದಶಮಾನೋತ್ಸವ ಅಂಗವಾಗಿ ನಡೆದ ಜೀವಿತ ನಾಟಕೋತ್ಸವ ಹಾಗೂ ಹಿರಿಯ ರಂಗಕರ್ಮಿ ಈ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ, ಲೇಖಕ, ರಂಗ ನಿರ್ದೇಶಕ ಗುಬ್ಬಿ ಚನ್ನಬಸಯ್ಯ ಅವರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ವೀರಣ್ಣನವರಿಂದಾಗಿಯೇ ವಿಶ್ವ ರಂಗಭೂಮಿಯಲ್ಲಿ ಗುಬ್ಬಿಯು ಪ್ರಖ್ಯಾತಿಯನ್ನು ಗಳಿಸಲು ಸಾಧ್ಯವಾಗಿದೆ. ವೀರಣ್ಣನವರು ಕಂಪನಿಯನ್ನು ಕಟ್ಟಿ ಕೇವಲ ನಾಟಕ ಪ್ರದರ್ಶನಕ್ಕೆ ಸೀಮಿತರಾಗದೆ, ಶ್ರೇಷ್ಠ ಕಲಾವಿದರನ್ನು ಈ ನಾಡಿಗೆ ಪರಿಚಯಿಸಿದರು” ಎಂದರು.
“ಗುಬ್ಬಿ ಕಂಪನಿಯಲ್ಲಿ ಬಳಸುತ್ತಿದ್ದ ಪರಿಕರಗಳನ್ನು ಸಂಗ್ರಹಿಸಿ ವಸ್ತುಸಂಗ್ರಹಾಲಯವನ್ನಾಗಿಸಿದರೆ ಇಂದಿನ ಪೀಳಿಗೆಗೆ ಅನುಕೂಲವಾಗುವುದು. ರಂಗ ಚಟುವಟಿಕೆಗಳು ನಿರಂತರವಾಗಿದ್ದಾಗ ಮಾತ್ರ ಜನರಲ್ಲಿ ಆಸಕ್ತಿ ಮೂಡಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಟ್ರಸ್ಟ್ನವರು
ವಾರಕ್ಕೊಮ್ಮೆಯಾದರೂ ನಾಟಕ ಪ್ರದರ್ಶನ ಆಯೋಜಿಸುವುದು ಉತ್ತಮ” ಎಂದು ಸಲಹೆ ನೀಡಿದರು.
ಟ್ರಸ್ಟಿ ಲಕ್ಷ್ಮಣದಾಸ್ ಮಾತನಾಡಿ, “ಕೋವಿಡ್ ಕಾರಣದಿಂದ ಹಿಂದಿನ ವರ್ಷಗಳಲ್ಲಿ ರಂಗ
ಚಟುವಟಿಕೆಗಳು ಹಿನ್ನಡೆಗೊಂಡಿದ್ದವು. ಇನ್ಮುಂದೆ ಟ್ರಸ್ಟ್ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಅಯೋಜನೆ ಮಾಡುವ ಮೂಲಕ ರಂಗಭೂಮಿಗೆ ಹೊಸ ಚೈತನ್ಯವನ್ನು ನೀಡುವ ಕೆಲಸ ಮಾಡುತ್ತೇವೆ” ಎಂದು ಹೇಳಿದರು.
ರಂಗಕರ್ಮಿ ಚನ್ನಬಸಯ್ಯ ಅಭಿನಂದನೆ ಸ್ವೀಕರಿಸಿ ಮಾತನಾಡಿ, “ಆಧುನಿಕತೆ ಬೆಳೆದಂತೆ ನಾಟಕಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದು ದುರಾದೃಷ್ಟಕರ. ಈ ಹಿಂದೆ ನಾಟಕ ಕಂಪನಿಯವರೇ ಊರುಗಳಿಗೆ ತೆರಳಿ ಪ್ರದರ್ಶನ ನೀಡುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿತ್ತು. ಆದರೆ ಇಂದು ಅವೆಲ್ಲವೂ ಕೇವಲ ನೆನಪುಗಳಾಗಿವೆ. ಈ ನಿಟ್ಟಿನಲ್ಲಿ ರಂಗಕಲೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಎಲ್ಲರೂ ಒಗ್ಗೂಡಿ ಮಾಡಬೇಕಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಫೆ.26ರಿಂದ ಸಿದ್ಧಗಂಗಾ ಮಠದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ
ಕಾರ್ಯಕ್ರಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಚಕ್ರಪಾಣಿ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ರವಿಕುಮಾರ್, ಜೀವಿತ ನಾಟಕೋತ್ಸವದ ಸಂಚಾಲಕ ರಂಗಯ್ಯ, ಗುಬ್ಬಿ ವೀರಣ್ಣ ಟ್ರಸ್ಟ್ನ ಡಾ ರಾಜೇಶ್, ಗುಬ್ಬಿ ರಂಗಾಸಕ್ತರು ಭಾಗವಹಿಸಿದ್ದರು.
