ನಾಡಿನ ಸುಸ್ಥಿರ ಭವಿಷ್ಯಕ್ಕಾಗಿ ನಮ್ಮ ರೈತಾಪಿ ಮತ್ತು ಗ್ರಾಮೀಣ ಜನರನ್ನು ಬೆಂಬಲಿಸಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವದಲ್ಲಿ ಶಿವಮೊಗ್ಗದ ಮಲವಗೋಪ್ಪ ನಾಡ ಕಚೇರಿ ಎದರು ಪ್ರತಿಭಟನೆ ನಡೆಸಿದರು.
“ನಾಡಿನ ವಿವಿಧ ವ್ಯಾಪಾರ ವಹಿವಾಟುದಾರರು ಹಾಗೂ ಹಲವು ಸಂಘ-ಸಂಸ್ಥೆಗಳು, ಮಹಿಳಾ ಸಂಘಟನೆಗಳು, ದಲಿತ ಕಾರ್ಮಿಕ ಸಂಘಟನೆಗಳು ಮತ್ತು ಲಾರಿ, ಟ್ಯಾಕ್ಸಿ, ಆಟೋ ಮಾಲೀಕರು, ಚಾಲಕರ ಸಂಸ್ಥೆಗಳು ಮತ್ತು ವಾಣಿಜ್ಯ ಸಂಸ್ಥೆಗಳ ಎಲ್ಲ ಮುಖ್ಯಸ್ಥರು, ಸದಸ್ಯರು ಒಗ್ಗೂಡುವುದು ಅಗತ್ಯವಾಗಿದೆ. ಕೃಷಿ ಕಾಯಿದೆಗೆ ತಂದ ಇತ್ತೀಚಿನ ತಿದ್ದುಪಡಿಗಳು ರೈತಾಪಿ ಮತ್ತು ಗ್ರಾಮೀಣ ಜನರು, ಜಮೀನು, ಜಾನುವಾರುಗಳು ಮತ್ತು ವಿಶಾಲ ನಾಗರಿಕ ಸಮೂಹದ ಮೇಲೆ ಗಂಭೀರವಾದ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿದ್ದು, ಅವುಗಳ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ನಾವೆಲ್ಲರೂ ಒಗ್ಗೂಡುವುದು ಅನಿವಾರ್ಯವಾಗಿದೆ” ಎಂದು ಪ್ರತಿಭಟನಾಕಾರರು ಕರೆ ನೀಡಿದರು.
“ಪ್ರಸ್ತುತ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಅಹೋರಾತ್ರಿ ಹೋರಾಟದ ಪರಿಸ್ಥಿತಿ ಇದಕ್ಕೆ ಸಾಕ್ಷಿಯಾಗಿದ್ದು, ಕೆಲವು ಅಂಶಗಳನ್ನು ತಮ್ಮ ಪರಿಗಣಿಗೆ ತರಬೇಕಾಗಿದೆ. ತಾವುಗಳು ನಮ್ಮ ರೈತರ ಮತ್ತು ಗ್ರಾಮೀಣ ಜನರ ಹಕ್ಕುಗಳನ್ನು ಬೆಂಬಲಿಸುವ ಅಗತ್ಯ ಮತ್ತು ಪ್ರಾಮುಖ್ಯತೆಯನ್ನು ಇವುಗಳು ಒತ್ತಿ ಹೇಳುತ್ತಿವೆ” ಎಂದರು.
ಕನಿಷ್ಠ ಬೆಂಬಲ ಬೆಲೆಯನ್ನು ಎತ್ತಿ ಹಿಡಿಯುವುದು : ಕರ್ನಾಟಕದ ಘನ ಸರ್ಕಾರವು ಕಬ್ಬು ಅಭಿವೃದ್ಧಿಗೊಳಿಸಲು ಶಿವಮೊಗ್ಗ ತುಂಗಾಭದ್ರಾ ಸಕ್ಕರೆ ಕಾರ್ಖಾನೆಗೆ ಗುತ್ತಿಗೆ ಆಧಾರವಾಗಿ ನೀಡಿದ್ದ ಭೂಮಿಯನ್ನು, ಕಾನೂನು ರೀತಿ ಹಿಂಪಡೆಯಲು ಸರ್ಕಾರವು ಈ ಹಿಂದೆ ಆದೇಶ ಮಾಡಿದೆ. ಈ ಗ್ರಾಮಗಳಲ್ಲಿ ಅಂದರೆ, ಆರೋಚಿನವಲ್ಲ, ಆರೋಬೆನವಳ್ಳಿ, ಚಿಕ್ಕಮರಡಿ, ಹಸೂಡಿ, ಸದಾಶಿವಪುರ, ಬಿ-ಬೀರನಹಳ್ಳಿ, ಎರಗನಹಳ್ಳಿ, ಚಿಕ್ಕಮಟ್ಟಿ, ಮತ್ತಿಘಟ್ಟ, ಹಕ್ಕಿಪಿಕ್ಕಿ ಕ್ಯಾಂಪ್ ರೈತರು 1 ಈ ಭೂಮಿಯಲ್ಲಿ ಬಗರ್ ಹುಕ್ಕುಂ ಸಾಗುವಳಿಯನ್ನು ಮಾಡಿರುತ್ತಾರೆ. ಸಾಗುವಳಿಯನ್ನು ಮಾಡಿರುವ ರೈತರನ್ನು ಒಕ್ಕಲೆಬ್ಬಿಸುತ್ತಿರುವುದನ್ನು ರೈತ ಸಂಘವು ಖಂಡಿಸುತ್ತದೆ. ಸಾಗುವಳಿಯನ್ನು ಮಾಡಿರುವ ಭೂಮಿಯನ್ನು ಸಂಬಂಧಪಟ್ಟ ರೈತರ ಹೆಸರಿಗೆ ಹಕ್ಕು ಪತ್ರವನ್ನು ನೀಡಬೇಕು” ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.
“ಕೇಂದ್ರ ಸರ್ಕಾರದ ಮಟ್ಟದಲ್ಲಿ ಎಂಎಸ್ಪಿಯನ್ನು ಕಾನೂನಾತ್ಮಕವಾಗಿಸಬೇಕು. ಇದು ನಮ್ಮ ರೈತಾಪಿ ಜನರ ಆರ್ಥಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಮತ್ತು ಅವರುಗಳ ಶ್ರಮವನ್ನು ಶೋಷಿಸುವವರನ್ನು ಹೊಣೆಗಾರರನ್ನಾಗಿಸಲು ಬಹು ನಿರ್ಣಾಯಕವಾಗಿರುವಂತ ಅಂಶ. ಕನಿಷ್ಟ ಬೆಂಬಲ ಯೋಜನೆಯ ಅಧಿಕೃತ ಪಟ್ಟಿಯಿಂದ ಈಗಾಗಲೇ ಕೈ ಬಿಟ್ಟಿರುವ ಎಲ್ಲ ದವಸ-ಧಾನ್ಯಗಳು ಮತ್ತು ತೋಟಗಾರಿಕೆ ಬೆಳೆಗಳನ್ನು ಎಂಎಸ್ಪಿಗೆ ಸೇರಿಸಬೇಕು. ಕನಿಷ್ಟ ಬೆಂಬಲ ಬೆಲೆಯನ್ನು ಕಾನೂನು ಚೌಕಟ್ಟಿಗೆ ತರುವ ಮೂಲಕ ರೈತರ ಆರ್ಥಿಕ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಅವಕಾಶ ಇರುವಂತೆ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.
ಅಗತ್ಯ ವಸ್ತುಗಳ ಕಾಯಿದೆಯನ್ನು ತಿದ್ದುಪಡಿ ಮಾಡಬಾರದು : “ಕೇಂದ್ರ ಸರ್ಕಾರವು ಪ್ರಸ್ತಾಪಿಸಿರುವ ತಿದ್ದುಪಡಿಗಳು ಸದರಿ ಅಗತ್ಯ ವಸ್ತುಗಳ ಕಾಯಿದೆಯು ರೈತರು ಮತ್ತು ಗ್ರಾಹಕರ ರಕ್ಷಣೆ ಮಾಡುವಂತ ನಿಬಂಧನೆಗಳನ್ನು ಸಡಿಲಿಸುವ ಹುನ್ನಾರವಾಗಿದ್ದು, ಖಾಸಗಿ ಸಂಸ್ಥೆ/ಕಂಪನಿಗಳಿಂದ ಸುಗ್ಗಿ ಕಾಲದಲ್ಲಿ ಅಗತ್ಯ ದವಸ ಧಾನ್ಯಗಳನ್ನು ಯಾವುದೇ ಇತಿಮಿತಿಗಳಿಲ್ಲದೇ ಅತಿ ಕಡಿಮೆ ದರದಲ್ಲಿ ಕೊಂಡು ಮತ್ತು ಸಂಗ್ರಹಣೆ ಮಾಡಿ ಹಸಿದಿರುವ ಗ್ರಾಹಕರಿಗೆ ದುಬಾರಿ ವೆಚ್ಚದಲ್ಲಿ ಮಾರಲು ಅವಕಾಶ ನೀಡುವ ಮೂಲಕ ರೈತ ಮತ್ತು ಗ್ರಾಹಕ ವಿರೋಧಿಯಾಗಿದ್ದು, ಈ ಪ್ರಮುಖ ಈ ಕಾಯ್ದೆಗಳನ್ನು ಸುಧಾರಣೆಗೊಳಿಸಬೇಕೇ ಹೊರತು ಬದಲಾವಣೆ ಮಾಡಬಾರದು” ಎಂದು ಒತ್ತಾಯಿಸಿದರು.
“ಸದರಿ ಕಾಯ್ದೆಯ ತಿದ್ದುಪಡಿಗಳು ನಾಡಿನ ರೈತರ ಮತ್ತು ಗ್ರಾಮೀಣ ಜನ ಸಮುದಾಯಗಳ ಹಿತಾಸಕ್ತಿಗಳನ್ನು ಬದಿಗೊತ್ತಿ ದೇಶದೊಳಗೆ ಪ್ರವಾಹ ರೂಪದಲ್ಲಿ ಹರಿದು ಬರಲು ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡುವ ಮೂಲಕ ರೈತರು ಮತ್ತು ಗ್ರಾಮೀಣ ಜನ ಸಮುದಾಯಗಳ ಮತ್ತು ಗ್ರಾಹಕರ ವೆಚ್ಚದಲ್ಲಿ ಆಯ್ದ ಕೆಲವು ಗುಜುರಾತಿ ಮತ್ತು ವಿದೇಶಿ ಕಂಪನಿಗಳನ್ನು ಶ್ರೀಮಂತಗೊಳಿಸಲು ಮಾತ್ರ ಸಹಾಯ ಮಾಡುತ್ತವೆ. ಇಂತಹ ಕ್ರಮಗಳ ವಿರುದ್ಧ ನಾವು ಒಂದಾಗಬೇಕು ಮತ್ತು ನಮ್ಮ ಕೃಷಿ ಮಾರುಕಟ್ಟೆಯ ಸಮಗ್ರತೆಯನ್ನು ರಕ್ಷಿಸಬೇಕು” ಎಂದರು.
ರಾಜ್ಯ ಮಟ್ಟದಲ್ಲಿ ಭೂಸುಧಾರಣಾ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸುವುದು : “ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿಗಳು, ರಿಯಲ್ ಎಸ್ಟೇಟ್ ಸಂಸ್ಥೆಗಳು ಹೆಚ್ಚುಚ್ಚು ಕೃಷಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಇದರಿಂದ ದ ಕೃಷಿ ಸುಸ್ಥಿರತೆಗೆ ಅಪಾಯವನ್ನು ಉಂಟುಮಾಡಿ, ಆಹಾರದ ಅಭದ್ರತೆಯನ್ನು ಉಲ್ಬಣಗೊಳಿಸುತ್ತವೆ. ಇಂತಹ ವಿಕೃತ ದೂರದೃಷ್ಟಿಯ ನೀತಿಗಳು ಕೃಷಿ ಮತ್ತು ಆಹಾರ ಉತ್ಪಾದನೆಯ ಭವಿಷ್ಯವನ್ನು ಹಾಳು ಮಾಡಲು ನಾವು ಅನುಮತಿಸುವುದಿಲ್ಲ” ಎಂದು ಹೇಳಿದರು.
ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕಾಗಿ ಪ್ರತಿಪಾದಿಸುವುದು : “ಮೇಕೆದಾಟು ಅಣೆಕಟ್ಟಿನ ವಿಳಂಬವಾದ ನಿರ್ಮಾಣವು ಪ್ರಾದೇಶಿಕ ಅಭಿವೃದ್ಧಿಗೆ ಅಡ್ಡಿಯಾಗುವುದಲ್ಲದೆ ನೀರಿನ ಕೊರತೆಯ ಸಮಸ್ಯೆಗಳನ್ನು ಶಾಶ್ವತಗೊಳಿಸುತ್ತದೆ. ರಾಜ್ಯ ಸರ್ಕಾರವು ಮಹತ್ವದ ಮೂಲ ಸೌಕರ್ಯ ಯೋಜನೆಯ ನಿರ್ಮಾಣಕ್ಕೆ ಹೆಚ್ಚಿನ ವಿಳಂಬ ಮಾಡದೆ ಆದ್ಯತೆ ನೀಡುವುದು ಅನಿವಾರ್ಯವಾಗಿದೆ” ಎಂದರು.
ಜಿಲ್ಲಾ ಮಟ್ಟದಲ್ಲಿ ಕಬ್ಬು ಬೆಳೆಗೆ ನ್ಯಾಯಯುತ ಬೆಲೆ ನಿಗದಿ : “ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಉಪ ಉತ್ಪನ್ನಗಳನ್ನು ಮಾಡಿಕೊಂಡು ಸಕ್ಕರೆಗಿಂತ ಹೆಚ್ಚು ಲಾಭದಾಯಕ ವ್ಯವಹಾರದಲ್ಲಿ ತೊಡಗಿಕೊಂಡಿರುವುದು ಈಗಾಗಲೇ ಸರ್ಕಾರದ ಗಮನಕ್ಕೆ ಬಂದಿದೆ. ಆದರೂ ಕೂಡ ಆದಾವುದನ್ನೂ ಪರಿಗಣಿಸದೇ ಕಬ್ಬಿಗೆ ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡದಿರುವುದರಿಂದ ಕಬ್ಬು ಬೆಳೆಗಾರರು ಇಂತಹ ಲಾಭ ಚಾಲಿತ ಕೈಗಾರಿಕೆಗಳ ಶೋಷಣೆಗೆ ಗುರಿಯಾಗಿರುತ್ತಾರೆ. ರೈತರ ಶ್ರಮ ಮತ್ತು ಕೊಡುಗೆಗಳ ನಿಜವಾದ ಮೌಲ್ಯವನ್ನು ಪ್ರತಿಬಿಂಬಿಸುವ ಕಬ್ಬು ಬೆಳೆಗೆ ನ್ಯಾಯಯುತ ಮತ್ತು ಸಮಂಜಸವಾದ ಬೆಲೆಯನ್ನು ಸ್ಥಾಪಿಸುವುದು ಸರ್ಕಾರದ ಜವಬ್ದಾರಿಯಾಗಿದೆ” ಎಂದು ಮನವಿ ಮಾಡಿದರು.
“ರೈತ ಸಂಘಟನೆಯು ಯಾವುದೇ ರಾಜಕೀಯ ಪಕ್ಷ, ಧರ್ಮ ಹಾಗೂ ಜಾತಿಗಾಗಿ ಕೆಲಸ ಮಾಡುವುದಿಲ್ಲ. ಇದನ್ನು ಅರಿತುಕೊಂಡು ದಯವಿಟ್ಟು ತಾವೂ ಕೂಡ ಪಕ್ಷ ಭೇದ ಧರ್ಮ ಭೇದ ಎಲ್ಲವನ್ನು ಬದಿಗಿಟ್ಟು ನಮ್ಮ ನಿಮ್ಮ ಹಾಗೂ ಮುಂದಿನ ಪೀಳಿಗೆಯ ಆರೋಗ್ಯಕರ ಭವಿಷ್ಯ ಹಾಗೂ ತಾಲೂಕಿನ ಆರ್ಥಿಕ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸ್ವಯಂ ಪ್ರೇರಿತವಾಗಿ ತಮ್ಮ ವಹಿವಾಟನ್ನು ಒಂದು ದಿನಕ್ಕೋಸ್ಕರ ಸ್ಥಗಿತ ಮಾಡಬೇಕು” ಎಂದು ಸವಿನಯ ಪ್ರಾರ್ಥನೆ.
“ಕಳೆದ ಎರಡು ವರ್ಷಗಳಲ್ಲಿ ನಮ್ಮ ರೈತರು ಪ್ರದರ್ಶಿಸಿದ ಶೌರ್ಯ ಧೈರ್ಯಗಳನ್ನು ಅನ್ನ ತಿನ್ನುವ ಯಾವುದೇ ಜೀವಿಗಳು ತಳ್ಳಿ ಹಾಕಬಾರದು. ನ್ಯಾಯಪಡೆಯುವ ಮಾರ್ಗದಲ್ಲಿ ಈಗಾಗಲೇ 500ಕ್ಕೂ ಹೆಚ್ಚು ಜೀವಗಳನ್ನು ಕಳೆದುಕೊಂಡಿದ್ದಾರೆ. ಆದರೂ ಅವರ ತ್ಯಾಗ ಬಲಿದಾನಗಳ ಹೊರತಾಗಿಯೂ ಕೇಂದ್ರ ಸರ್ಕಾರ ಅವರ ಸಂಕಷ್ಟದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುತ್ತಿದೆ. ಈ ಅನ್ಯಾಯದ ಕಾನೂನುಗಳನ್ನು ನಿಸ್ಸಂಧಿಗ್ಧವಾಗಿ ರದ್ದುಪಡಿಸುವವರೆಗೆ ನಮ್ಮ ಒಗ್ಗಟ್ಟು ಉಳಿಯಬೇಕು” ಎಂದು ಹೇಳಿದರು.
“ನಿಮ್ಮ ಬೆಂಬಲ, ಕೇವಲ ಒಂದು ದಿನದವರೆಗೆ, ಅಸಂಖ್ಯಾತ ರೈತರು ಮತ್ತು ಗ್ರಾಮೀಣ ಜನ, ಜಮೀನು, ಜಾನುವಾರುಗಳ ಜೀವನದಲ್ಲಿ ಮತ್ತು ನಮ್ಮ ಕೃಷಿ ಪರಿಸರ ವ್ಯವಸ್ಥೆಯ ಸುಸ್ಥಿರತೆಯಲ್ಲಿ ಆಳವಾದ ಬದಲಾವಣೆಯನ್ನು ಮಾಡಬಹುದು. ಈ ಉದಾತ್ತ ಪ್ರಯತ್ನದಲ್ಲಿ ನಾವು ಕೈಜೋಡಿಸೋಣ ಮತ್ತು ಕೃಷಿಯು ಅಭಿವೃದ್ಧಿ ಹೊಂದುವಂತೆ ಮತ್ತು ಸಮುದಾಯಗಳು ಪ್ರವರ್ಧಮಾನಕ್ಕೆ ಬರುವ ಭವಿಷ್ಯವನ್ನು ಖಚಿತಪಡಿಸಿಕೊಳ್ಳೋಣ” ಎಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವರಿಷ್ಠರು ಕೆ ಟಿ ಗಂಗಾಧರ್, ಕೃಷಿಕ ಸಂಘ ಅಧ್ಯಕ್ಷ ವೆಂಕಟೇಶ್ ನಾಯ್ಕ್, ಸಾಮಾಜಿಕ ಕಾರ್ಯಕರ್ತ ಭೋಜ ನಾಯ್ಕ್, ಸಾಮಾಜಿಕ ಮುಖಂಡ ಗಂಗಾಧರ್, ರೈತ ಮುಖಂಡ ಜಗದೀಶ್ ನಾಯ್ಕ್, ಜಿಲ್ಲಾ ಹಸಿರು ಸೇನೆ ಅಧ್ಯಕ್ಷ ಮೋಹನ ಕುಮಾರ್ ಕೂಡ್ಲಿಗೆರೆ, ಕಾರ್ಯದರ್ಶಿ ಬಸವರಾಜ ಡಿ ಬಿ ಹಳ್ಳಿ, ಯೋಗೀಶ್ ಸೇರಿದಂತೆ ಬಹುತೇಕರು ಇದ್ದರು.
