- ಕಲಾವಿದ ಮೌನವಾದರೆ ಸಮಾಜವೇ ಮೌನವಾಗುತ್ತದೆ: ಪ್ರಕಾಶ್ ರೈ
- ಮಂಗಳೂರಿನ ತೊಕ್ಕೊಟ್ಟಿನ ಯುನಿಟಿ ಹಾಲ್ ಮೈದಾನದಲ್ಲಿ ನಡೆದ ಡಿವೈಎಫ್ಐ ರಾಜ್ಯ ಸಮ್ಮೇಳನ
“ನಮ್ಮ ದೇಶದಲ್ಲೊಬ್ಬ ನಟನಿದ್ದಾನೆ. 2019ರಲ್ಲಿ ಗುಹೆಗೆ ಹೋಗಿದ್ದರು. ಈ ಬಾರಿ ನೀರಿಗೆ ಹೋದರು. ಮುಂದಿನ ಬಾರಿ ಚಂದ್ರನ ಮೇಲೆ ನಿಲ್ಲುತ್ತಾರೆ. ಇನ್ನಷ್ಟು ಆಳಕ್ಕೆ ಇಳಿದರೆ ಭಾರತದ ಸಮಸ್ಯೆಗಳು ಕಾಣುತ್ತಿದ್ದವು” ಎಂದು ಬಹುಭಾಷಾ ನಟ ಪ್ರಕಾಶ್ ರೈ ಮೋದಿ ಹೆಸರೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಮಂಗಳೂರಿನ ತೊಕ್ಕೊಟ್ಟಿನ ಯುನಿಟಿ ಹಾಲ್ನ ಮೈದಾನದಲ್ಲಿ ಇಂದು ನಡೆದ ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ)ನ 12ನೇ ರಾಜ್ಯ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಪ್ರಕಾಶ್ ರೈ ಮಾತನಾಡಿದರು.
“ನಾನು ಜನರ ಪಕ್ಷ, ಯಾಕೆಂದರೆ ನಾನು ಕಲಾವಿದ. ಕಲಾವಿದನಾಗಿ ನಾನು ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಗೊತ್ತಿದೆ. ಕಲಾವಿದ ಮಾತನಾಡಬೇಕು, ಕಲಾವಿದ ಮೌನವದರೆ ಸಮಾಜವೇ ಮೌನವಾದಂತೆ ಹಾಗಾಗಿ ನಾನು ಮಾತನಾಡುತ್ತೇನೆ. ಜನರ ಸಹೃದಯ ಸಿಕ್ಕಿದೆ ಎಂದರು.
ಆರ್ಎಸ್ಎಸ್, ಬಿಜೆಪಿ ಕಿಡ್ನಾಪ್ ಪಕ್ಷಗಳು. ಭಗತ್ ಸಿಂಗ್ನನ್ನು ಕಿಡ್ನಾಪ್ ಮಾಡಲು ಪ್ರಯತ್ನಿಸಿದರು. ವಲ್ಲಭ ಬಾಯಿ ಪಟೇಲ್ರನ್ನು ಕಿಡ್ನಾಪ್ ಮಾಡಿ ಮೂರ್ತಿಯನ್ನಾಗಿಸಿದ್ದಾರೆ. ಕೋಟಿ ಚೆನ್ನಯರನ್ನು ರಾಮ ಲಕ್ಷ್ಮಣ ಎಂದು ಕಿಡ್ನ್ಯಾಪ್ ಮಾಡಲು ಪ್ರಯತ್ನಿಸಿದರು. ಕರಾವಳಿಯ ಜನ ಅವರಿಗೆ ಒದ್ದು ಕಲಿಸಿದರು” ಎಂದರು.
“ದೇಹಕ್ಕಾದ ಗಾಯ ಗುಣವಾಗುತ್ತದೆ. ಆದರೆ ಸಮಾಜಕ್ಕಾದ ಗಾಯ ಗುಣವಾಗದು. ನಾವು ಸುಮ್ಮನಿದ್ದಷ್ಟು ಸಮಾಜದ ಗಾಯ ಹೆಚ್ಚಾಗುತ್ತೆ. ಅದರಲ್ಲೂ ದನಿ ಇಲ್ಲದವರಿಗೆ, ಅಲ್ಪಸಂಖ್ಯಾತರಿಗೆ ಆಗುವ ಗಾಯಗಳು ಅಧಿಕವಾಗುತ್ತದೆ. ಯಾಕೆಂದರೆ ನಮ್ಮ ಬೆರಳು ಕಡಿದರೆ ಅದು ನಮ್ಮ ದೇಹಕ್ಕಾಗುವ ನೋವು. ಆದರೆ ಏಕಲವ್ಯನ ಬೆರಳು ಕಡಿದರೆ ಅದು ಸಮಾಜಕ್ಕಾಗುವ ನೋವು” ಎಂದು ಪ್ರಕಾಶ್ ರೈ ಹೇಳಿದರು.
“ಮೋದಿ ತಿನ್ನುವ ಅಣಬೆ, ಹಾಕುವ ಬಟ್ಟೆ, ತಿರುಗಾಟ ಎಲ್ಲವೂ ನಾವು ಕಟ್ಟುತ್ತಿರುವ ತೆರಿಗೆಯಿಂದ. ಯುವ ಜನರಿಗೆ ಕೆಲಸ ಇಲ್ಲ, ಹಾಗಾಗಿ ಪ್ರಧಾನಿಯವರ ವಿರುದ್ದ ಯುವಜನತೆ ಪ್ರತಿಭಟಿಸುತ್ತಿದೆ” ಎಂದು ತಿಳಿಸಿದರು.
“ಪ್ರಜಾಪ್ರಭುತ್ವ ಎಂದರೆ ಹೊಸ ನಾಯಕನ ಹುಟ್ಟಿಗೆ ಕಾರಣ ಆಗಬೇಕು. ನಾವು ಪ್ರಶ್ನಿಸದಿದ್ದರೆ, ಬದಲಾಗದಿದ್ದರೆ, ಅವರು ಮಂಗಗಳಂತೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಿಗಿಯುತ್ತಿದ್ದಾರೆ. ಹಾಗಾಗಿ ಯುವಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಬದಲಾವಣೆ ಆರಂಭಿಸಿ, ಇವರು ನನ್ನ ಜನ, ಇವರಿಗಾಗಿ ದುಡಿಯೋಣ ಎಂಬ ಪಣತೊಡಿ, ನಂಬಿಕೆಯಿಂದ ಜನರಿಗಾಗಿ ಹೋರಾಡಿ” ಎಂದು ಬಹುಭಾಷಾ ನಟ ಸಲಹೆ ನೀಡಿದರು.
“ದೇಶದ ಸ್ವಾತಂತ್ರ್ಯಕ್ಕಾಗಿ ಈ ಹಿಂದೆ ನಾಯಕರು ಉಪವಾಸ ಮಾಡಿದ್ದರು. ಆದರೆ ಈಗ ದೇವಸ್ಥಾನ ಉದ್ಘಾಟನೆಗಾಗಿ ಉಪವಾಸ ಮಾಡುವ ನಾಯಕರಿದ್ದಾರೆ. ಒಂದು ದೇಶದಲ್ಲಿ ಅಲ್ಪಸಂಖ್ಯಾತರನ್ನು ನೋಡಿಕೊಳ್ಳುವುದು, ಕಾಪಾಡುವುದೇ ಬಹುಸಂಖ್ಯಾತರ ಹೊಣೆ. ಪ್ರಜಾಪ್ರಭುತ್ವದಲ್ಲಿ ಸೂಕ್ಷ್ಮತೆ ಇರಬೇಕು” ಎಂದರು.
ರಾಜ್ಯಸಭಾ ಸದಸ್ಯ, ಡಿವೈಎಫ್ಐ ರಾಷ್ಟ್ರೀಯ ಅಧ್ಯಕ್ಷ ಎಎ ರಹೀಮ್ ಮಾತನಾಡಿ, “ಆರ್ಎಸ್ಎಸ್ನ ಅಜೆಂಡಾವಾದ ‘ಒಂದು ರಾಷ್ಟ್ರ, ಒಂದು ಭಾಷೆ, ಒಂದು ಸಂಸ್ಕೃತಿ’ ಎಂಬ ಅಜೆಂಡಾವನ್ನು ಪ್ರಶ್ನಿಸಬೇಕಾಗಿದೆ. ಇದು ಬಹುತ್ವವನ್ನು ಸಾರುವ, ವಿವಿಧತೆಯಲ್ಲಿ ಏಕತೆಯನ್ನು ಎತ್ತಿ ಹಿಡಿಯುವ ನಮ್ಮ ಸಂವಿಧಾನಕ್ಕೆ ವಿರುದ್ಧವಾದದ್ದು” ಎಂದರು.
“ಈ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತನ್ನ ಸಾಧನೆ ಎಂದು ಹೇಳಿಕೊಳ್ಳುವಂತದ್ದು ಏನೂ ಇಲ್ಲ. ಅಪನಗದೀಕರಣ ಅವರ ದೊಡ್ಡ ಸಾಧನೆಯೇ ಅಥವಾ ಕೋವಿಡ್ನಿಂದಾದ ದೊಡ್ಡ ಪ್ರಮಾಣದ ಸಾವು ಅವರ ಸಾಧನೆಯೇ? ಅಥವಾ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ನಮ್ಮ ನೆರೆಹೊರೆಯ ದೇಶಗಳು ನಮಗಿಂತ ಉತ್ತಮ ಸ್ಥಿತಿಯಲ್ಲಿರುವಾಗ ನಾವು 111 ಸ್ಥಾನದಲ್ಲಿರುವುದು ನಮ್ಮ ಸಾಧನೆಯೇ?” ಎಂದು ಕೇಳಿದರು.
“ದೇಶದಲ್ಲಿ ನಿವೇಶನ ರಹಿತರ ಸಂಖ್ಯೆಯು ಅಧಿಕವಾಗುತ್ತಿದೆ. ಅದರೊಂದಿಗೆ ಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗಿದ್ದಾರೆ. ಈ ನಡುವೆಯೇ ನಮ್ಮ ದೇಶದಲ್ಲಿ ಜಾತ್ಯಾತೀತೆಯು ಈ ಜಿಲ್ಲೆಯಲ್ಲಿ ಅಪಾಯದಲ್ಲಿದೆ. ಬಿಜೆಪಿಯು ಶ್ರೀರಾಮನನ್ನು ತನ್ನ ರಾಜಕೀಯ ಆಯುಧವಾಗಿ ಬಳಸಿಕೊಳ್ಳುತ್ತಿದೆ. ಭಾರತದಲ್ಲಿ ನಡೆದ ಮೊದಲ ಹೇಯ ಅಪರಾಧ ಮಹಾತ್ಮ ಗಾಂಧಿಯ ಹತ್ಯೆ ಮತ್ತು ಎರಡನೆಯದು ಬಾಬ್ರಿ ಮಸೀದಿಯ ಧ್ವಂಸ. ದುರದೃಷ್ಟವಶಾತ್ ಶ್ರೀರಾಮ್ ಎರಡರಲ್ಲೂ ಸಾಕ್ಷಿಯಾಗಿದ್ದರು. ಅವರೀಗ ಇತಿಹಾಸದಿಂದ ಗಾಂಧಿಯ ಹೆಸರನ್ನು ಅಳಿಸುವ, ಸಂವಿಧಾನವನ್ನು ನಾಶ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ನಾವು ಅವಕಾಶ ನೀಡಲಾರೆವು” ಎಂದರು.
ಅಧ್ಯಕ್ಷೀಯ ಭಾಷಣ ನಡೆಸಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, “ಎಂಆರ್ ಪಿಎಲ್ನಲ್ಲಿ ಉದ್ಯೋಗಿಗಳು ವೇತನಕ್ಕಾಗಿ ಧರಣಿ ಕೂತು ಎಂಎಸ್ಇಝೆಡ್ನಲ್ಲಿ ಉದ್ಯೋಗಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಅಲ್ಲಿಗೆ ನಮ್ಮ ಶಾಸಕರು, ಸಂಸದರು ಬಂದಿಲ್ಲ. ಆದರೆ ಅಮಾಯಕ ಶಿಕ್ಷಕರನ್ನು ಅಮಾನತು ಮಾಡಿ ಎಂದು ಈ ಶಾಸಕರು ಧರಣಿ ಕೂರುತ್ತಾರೆ” ಎಂದು ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟಿ ವಿರುದ್ಧ ವಾಗ್ದಾಳಿ ನಡೆಸಿದರು.
“ಹಿಂದೂಗಳು ಕ್ರೈಸ್ತ ಶಾಲೆಯನ್ನು ತೊರೆಯಿರಿ ಎಂದು ಕರೆ ನೀಡುತ್ತಾರೆ. ಹಾಗಾದರೆ ಇವರು ಪ್ರಭಾಕರ್ ಭಟ್ರ ಶಾಲೆಯಲ್ಲಿ ಹಿಂದೂಗಳಿಗೆ ಸೀಟು ನೀಡುತ್ತಾರಾ? ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಮಾಡುತ್ತಾರಾ?” ಎಂದು ಪ್ರಶ್ನಿಸಿದ ಮುನೀರ್ ಕಾಟಿಪಳ್ಳ, “ತುಳುನಾಡಿನ ಪರಂಪರೆಯಲ್ಲಿ ಹಿಂದೂ ಮುಸ್ಲಿಂ ಎಂಬ ಭೇದ ಕಾಯ ಮರೆತು ಮಾಯವಾದ ನಮ್ಮ ಕಾರ್ಣಿಕ ಪುರುಷರಿಗೆ ಇರಲಿಲ್ಲ. ಹಾಗಿರುವಾಗ ನಮಗೆ ಯಾಕೆ ಕೋಮುವಾದ ಇರಬೇಕು” ಎಂದರು.
ವೇದಿಕೆಯಲ್ಲಿ ಕೇಂದ್ರ ಸಮಿತಿ ಸದಸ್ಯ ಜಾಕ್ ಸಿ ಥಾಮಸ್, ಸ್ವಾಗತ ಸಮಿತಿ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್, ರಾಜ್ಯ ಸಮಿತಿ ನಾಯಕರಾದ ಲವಿತ್ರ ಕಲ್ಬುರ್ಗಿ, ರೇಣುಕಾ ಕಹಾರ್, ಸ್ವಾಗತಿ ಸಮಿತಿ ಸದಸ್ಯರಾದ ರಾಮಚಂದ್ರ ಬಬ್ಬುಕಟ್ಟೆ, ಡಾ. ಜೀವನ್ ರಾಜ್ ಕುತ್ತಾರ್, ಡಾ, ಕೃಷ್ಣಪ್ಪ ಕೊಂಚಾಡಿ, ಡಿವೈಎಫ್ಐ ಜಿಲ್ಲಾಧ್ಯಕ್ಷ ಸಂತೋಷ್ ಬಜಾಲ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಬಿಕೆ ಇಮ್ತಿಯಾಜ್ ಉಪಸ್ಥಿತರಿದ್ದರು.
