ಇತ್ತೀಚಿಗೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿರುವುದಾಗಿ ಬೆದರಿಸಿ ಮಹಿಳೆಯೊಬ್ಬರಿಂದ ₹8,000 ಹಣ ಸುಲಿಗೆ ಮಾಡಿದ ಆರೋಪದ ಮೇರೆಗೆ ಜೀವನ್ ಭೀಮಾ (ಜೆಬಿ) ನಗರ ಸಂಚಾರ ಠಾಣೆಯ ಇನ್ಸ್ಪೆಕ್ಟರ್ ಸೇರಿದಂತೆ ನಾಲ್ವರನ್ನು ಅಮಾನತು ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಜೀವನ್ ಭೀಮಾ ನಗರ ಸಂಚಾರ ಠಾಣೆ ಇನ್ಸ್ಪೆಕ್ಟರ್ ವೆಂಕಟಾಚಲಪತಿ, ಹೆಡ್ ಕಾನ್ಸ್ಟೇಬಲ್ಗಳಾದ ಗಿರೀಶ್, ಹುಚ್ಚು ಸಾಬ್ ಮತ್ತು ಕಾನ್ಸ್ ಟೇಬಲ್ ಬಸಪ್ಪ ಇವರನ್ನು ಅಮಾನತುಗೊಳಿಸಲಾಗಿದೆ.
ಕಳೆದ ಶನಿವಾರ ಇಸ್ರೋ ಜಂಕ್ಷನ್ ಬಳಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಈ ಕೃತ್ಯ ನಡೆದಿತ್ತು. ಈ ಬಗ್ಗೆ ಆಯುಕ್ತ ದಯಾನಂದ್ ಅವರಿಗೆ ‘ಎಕ್ಸ್’ ತಾಣದಲ್ಲಿ ಸಂತ್ರಸ್ತೆ ತಂದೆ ದೂರು ನೀಡಿದ್ದರು.
ಈ ಬಗ್ಗೆ ಇಲಾಖಾ ಮಟ್ಟದ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಪೂರ್ವ ವಿಭಾಗ (ಸಂಚಾರ)ದ ಡಿಸಿಪಿ ಕುಲದೀಪ್ ಆರ್.ಜೈನ್ ರವರಿಗೆ ಆಯುಕ್ತರು ಸೂಚನೆ ನೀಡಿದ್ದರು. ಡಿಸಿಪಿ ನೀಡಿದ ವರದಿ ಮೇರೆಗೆ ಕರ್ತವ್ಯಲೋಪವೆಸಗಿದ ಕಾರಣ ಇನ್ಸ್ಪೆಕ್ಟರ್ ಹಾಗೂ ಮೂವರು ಸಿಬ್ಬಂದಿಯನ್ನು ಪೊಲೀಸ್ ಆಯುಕ್ತ ದಯಾನಂದ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಏನಿದು ಘಟನೆ?
ಇಸ್ರೋ ಜಂಕ್ಷನ್ನಲ್ಲಿ ಕಳೆದ ಶನಿವಾರ ರಾತ್ರಿಯ ಸಮಯದಲ್ಲಿ ಜೆ.ಬಿ.ನಗರ ಸಂಚಾರ ಠಾಣೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಮಣಿಪಾಲ್ ಆಸ್ಪತ್ರೆ ಕಡೆಯಿಂದ ಬಂದ ಮಹಿಳೆಯೊಬ್ಬರನ್ನು ಅಡ್ಡಗಟ್ಟಿದ ಜೆ.ಬಿ.ನಗರ ಸಂಚಾರ ಠಾಣೆ ಪೊಲೀಸರು ತಪಾಸಣೆ ನಡೆಸಿದ್ದರು.
ಈ ವೇಳೆ, ಆಲ್ಕೋಮೀಟರ್ ಮೂಲಕ ಡ್ರಂಕ್ ಅಂಡ್ ಡ್ರೈವ್ ತಪಾಸಣೆಗೊಳಪಡಿಸಿದಾಗ ಮಹಿಳೆ ಮದ್ಯ ಸೇವಿಸದೆ ಇದ್ದರೂ ₹15 ಸಾವಿರ ನೀಡುವಂತೆ ಪೊಲೀಸರು ಬೇಡಿಕೆ ಇಟ್ಟಿದ್ದರು. ಕೊನೆಗೆ ಮಹಿಳೆಯನ್ನು ಬೆದರಿಸಿ ಈ ನಾಲ್ವರು ಸಂಚಾರ ಪೊಲೀಸರು ಮಹಿಳೆಯಿಂದ ₹8,000 ಹಣವನ್ನು ಗೂಗಲ್ ಪೇ ಮೂಲಕ ಪಡೆದು ಆಕೆಯನ್ನು ಪೊಲೀಸರು ಕಳುಹಿಸಿದ್ದರು ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ಮಹಿಳೆಯ ತಂದೆ ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ, “ಸಂಚಾರ ಪೊಲೀಸರು ನನ್ನ ಮಗಳಿಂದ ಹಣ ಸುಲಿಗೆ ಮಾಡಿದ್ದಾರೆ” ಎಂದು ಪೋಸ್ಟ್ ಮಾಡಿದ್ದರು. ಎಕ್ಸ್ನಲ್ಲಿ ಪೊಲೀಸ್ ಆಯುಕ್ತರನ್ನು ಟ್ಯಾಗ್ ಮಾಡಿ ದೂರು ನೀಡಿದ್ದರು. ಈ ಹಿನ್ನೆಲೆ, ತನಿಖೆಗೆ ಆದೇಶಿಸಲಾಗಿತ್ತು. ಆನಂತರ ಈ ಕುರಿತು ತನಿಖೆ ನಡೆಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಚಿನ್ನಾಭರಣಕ್ಕಾಗಿ ಮಹಿಳೆಯ ಬರ್ಬರ ಕೊಲೆ; ಆರೋಪಿಯ ಬಂಧನ
ಪೂರ್ವ ಸಂಚಾರ ಡಿಸಿಪಿ ಕುಲದೀಪ ಕುಮಾರ್ ಜೈನ್ ಇಲಾಖೆ ಮಟ್ಟದ ತನಿಖೆ ನಡೆಸಿ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಸದ್ಯ ಪೊಲೀಸರು ತಪ್ಪಿತಸ್ಥರು ಎಂದು ಸಾಬೀತಾಗಿದ್ದು, ನಾಲ್ವರನ್ನು ಅಮಾನತು ಮಾಡಲಾಗಿದೆ.