ಪಶ್ಚಿಮ ಬಂಗಾಳದ ಸಂದೇಶ್ಖಾಲಿಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆ ಪ್ರಕರಣದಲ್ಲಿ ಆರೋಪಿ, ಟಿಎಂಸಿ ನಾಯಕ ಶಹಜಹಾನ್ ಶೇಖ್ ಅವರನ್ನು ಗುರುವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದ ಶೇಖ್ ಅವರನ್ನ ಪತ್ತೆ ಹಚ್ಚಿ, ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೇಖ್ ಅವರನ್ನು ಬಸಿರ್ಹತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
“ಕಾನೂನು ಗೋಜಲಿನ ಕಾರಣದಿಂದಾಗಿ ಆತನನ್ನು ಆರಂಭದಲ್ಲಿ ಬಂಧಿಸಲಾಗಲಿಲ್ಲ. ಆದರೆ, ಆತನ ಬಂಧನಕ್ಕೆ ಯಾವುದೇ ತಡೆಯಾಜ್ಞೆ ಇಲ್ಲವೆಂದು ನ್ಯಾಯಾಲಯ ಸ್ಪಷ್ಟಪಡಿಸಿದ ನಂತರ, ಆತನನ್ನು ಬಂಧಿಸಲಾಗಿದೆ. ಆತನ ಬಂಧನದ ಮೇಲಿನ ನಿರ್ಬಂಧವನ್ನು ಪ್ರತಿಪಕ್ಷಗಳು ರಾಜಕೀಯಕ್ಕೆ ಬಳಸಿಕೊಂಡಿವೆ” ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ತಿಳಿಸಿದ್ದಾರೆ.
“ರಾಜ್ಯ ಪೊಲೀಸರ ಸಾಮರ್ಥ್ಯದ ಬಗ್ಗೆ ನಮಗೆ ವಿಶ್ವಾಸವಿದೆ. ಈ ಹಿಂದೆ, ಆರೋಪಿಯನ್ನು ಏಳು ದಿನಗಳಲ್ಲಿ ಬಂಧಿಸುವುದಾಗಿ ಹೇಳಿದ್ದೆವು. ಈಗ ಆತನ ಬಂಧನವಾಗಿದೆ” ಎಂದು ಅವರು ಹೇಳಿದ್ದಾರೆ.
ಆಹಾರಧಾನ್ಯ ಹಗರಣ ಪ್ರಕರಣದಲ್ಲಿ ಆಹಾರ ಮತ್ತು ಸರಬರಾಜು ಖಾತೆಯ ಮಾಜಿ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ಅವರನ್ನು ಬಂಧಿಸಲಾಗಿದೆ. ಅದೇ ಪ್ರಕರಣದಲ್ಲಿ ಶಹಜಹಾನ್ ಶೇಖ್ ಅವರ ಮನೆಯ ಮೇಲೆ ದಾಳಿ ನಡೆಸಲು ಜಾರಿ ನಿರ್ದೇಶನಾಲಯ ತೆರಳಿದ್ದಾಗ, ಶೇಖ್ ಅವರು ತಲೆ ಮರೆಸಿಕೊಂಡಿದ್ದರು. 55 ದಿನಗಳಾದರೂ ಅವರು ಪತ್ತೆಯಾಗಿರಲಿಲ್ಲ. ಇದೀಗ, ಪೊಲೀಸರು ಬಂಧಿಸಿ ಕರೆತಂದಿದ್ದಾರೆ.
ಆತನ ಬಂಧನಕ್ಕೆ ಆಗ್ರಹಿಸಿ ಸಂದೇಶ್ಖಾಲಿ ಪ್ರದೇಶದ ಆದಿವಾಸಿ, ಬುಡಕಟ್ಟು ಜನರು ತೀವ್ರ ಪ್ರತಿಭಟನೆ ನಡೆಸಿದ್ದರು. ಶೇಖ್ ಬಂಧನದ ವಿಚಾರವನ್ನು ಬಿಜೆಪಿ ತನ್ನ ರಾಜಕೀಯಕ್ಕೆ ಬಳಸಿಕೊಳ್ಳಲು ಆರಂಭಿಸಿದೆ.
“ಅಪರಾಧಿಯನ್ನು ಟಿಎಂಸಿ ಮತ್ತು ಪೊಲೀಸರು ರಕ್ಷಿಸುತ್ತಿದ್ದಾರೆ. ಉತ್ತಮವಾದ ಕಥೆ ಹೆಣೆದು, ಈಗ ಶೇಖ್ ಅವರನ್ನು ಬಂಧಿಸಲಾಗಿದೆ. ಬಿಜೆಪಿ ನೇತೃತ್ವದ ನಿರಂತರ ಆಂದೋಲನವು ಶೇಖ್ ಅವರನ್ನು ಬಂಧಿಸಲು ಸರ್ಕಾರದ ಮೇಲೆ ಒತ್ತಡ ತಂದಿತ್ತು” ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಸುಕಾಂತ ಮಜುಮದಾರ ಹೇಳಿಕೊಂಡಿದ್ದಾರೆ.
ಶೇಖ್ ಅವರ ಮೊಬೈಲ್ ಫೋನ್ನ ಟವರ್ ಲೊಕೇಶನ್ ಸಹಾಯದಿಂದ ಅವರನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಶೇಖ್ ಕಾಲಕಾಲಕ್ಕೆ ತನ್ನ ಸ್ಥಳವನ್ನು ಬದಲಾಯಿಸುತ್ತಿದ್ದರು. ಅವರ ಮೊಬೈಲ್ ಫೋನ್ನ ಟವರ್ ಲೊಕೇಶನ್ ಸಹಾಯದಿಂದ ಅವನನ್ನು ಗುರುತಿಸಲಾಗಿದೆ” ಎಂದು ಹೇಳಿದ್ದಾರೆ.
ಶೇಖ್ ಕಳೆದ 20 ವರ್ಷಗಳಲ್ಲಿ ಸಂದೇಶ್ಖಾಲಿ ಪ್ರದೇಶದಲ್ಲಿ ಉಗ್ರ ಸ್ವರೂಪಿ ಶೋಷಕನಾಗಿ ಮಾರ್ಪಟ್ಟಿದ್ದಾರೆ. ಆತನನ್ನು ಬಸಿರ್ಹತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕಾನೂನು-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನ್ಯಾಯಾಲಯದ ಬಳಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಂದೇಶ್ಖಾಲಿ ಪ್ರದೇಶದಲ್ಲಿಯೂ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ಸಂದೇಶ್ಖಾಲಿ ಪ್ರಕರಣ | ಟಿಎಂಸಿ ವಿರುದ್ಧ ಮತ ಚಲಾಯಿಸಿದ್ದಕ್ಕೆ ಆದಿವಾಸಿಗಳಿಗೆ ಚಿತ್ರಹಿಂಸೆ; ಎನ್ಸಿಎಸ್ಟಿ ವಿವರ
ಕಳೆದ ಕೆಲವು ವಾರಗಳಿಂದ ಶೇಖ್ ವಿರುದ್ಧ 100ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಆತನ ಬಂಧನಕ್ಕೆ ಒತ್ತಾಯಿಸಿ ಮಹಿಳೆಯರ ನೇತೃತ್ವದಲ್ಲಿ ಭಾರೀ ಪ್ರತಿಭಟನೆಗಳು ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೇಖ್ ವಿರುದ್ಧ ಐಪಿಸಿ ಸೆಕ್ಷನ್ 376ಡಿ (ಗ್ಯಾಂಗ್ ರೇಪ್) ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶೇಖ್ ಅವರ ಆಪ್ತ ಸಹಾಯಕ ಶಿಬಾಪ್ರಸಾದ್ ಹಜ್ರಾ ಮತ್ತು ಉತ್ತಮ್ ಸರ್ದಾರ್ ಅವರನ್ನೂ ಇದೇ ಪ್ರಕರಣದಲ್ಲಿ ಬಂಧಿಸಲಾಗಿದೆ. ಮತ್ತೊಬ್ಬ ಸಹಚರ ಅಜಿತ್ ಮೈತಿಯನ್ನು ಭೂಕಬಳಿಕೆ ಆರೋಪದ ಮೇಲೆ ಬಂಧಿಸಲಾಗಿದೆ.
ಸಂದೇಶ್ಖಾಲಿ ಪ್ರದೇಶದ ಹೆಚ್ಚಿನ ದೂರುದಾರರು ತಮ್ಮ ಭೂಮಿಯಲ್ಲಿ ಶೇಖ್ ಮತ್ತು ಸಹಚರರು ಬಲವಂತವಾಗಿ ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಪ್ರದೇಶದ ಮಹಿಳೆಯರನ್ನು ಲೈಂಗಿಕವಾಗಿ ಹಿಂಸಿಸಿದ್ದಾರೆ ಎಂದು ಆರೋಪಿಸಿದ್ದಾರೆ.