ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುವ ರಾಜ್ಯಸಭಾ ಸದಸ್ಯರಿರುವ ಕಾಂಗ್ರೆಸ್ ಪಕ್ಷದವರನ್ನು ರಾಜ್ಯದ ಜನತೆ ಬೆಂಬಲಿಸುವುದಿಲ್ಲ. ನಮ್ಮ ಸರಕಾರ ಇದ್ದಾಗ ಶಾಂತ ಪರಿಸ್ಥಿತಿ ನೆಲೆಸಿತ್ತು. ಈಗ ಬಾಂಬ್ ಸ್ಫೋಟಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಕಿಡಿಕಾರಿದರು.
ಚಿಕ್ಕೋಡಿಯಲ್ಲಿ ಮಂಗಳವಾರ ನಡೆದ ಬಿಜೆಪಿ ಬೂತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಪಾಕಿಸ್ತಾನದ ಪರ ಇರುವವರನ್ನು ಭಾರತಮಾತೆ ಎಂದೂ ಕ್ಷಮಿಸುವುದಿಲ್ಲ” ಎಂದರು.
“ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ, ಜಮ್ಮು- ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿ ರದ್ದು ಸೇರಿದಂತೆ ವಿವಿಧ ಭರವಸೆಗಳನ್ನು ಈಡೇರಿಸಿ ಬಿಜೆಪಿ ನುಡಿದಂತೆ ನಡೆದಿದೆ. ದೂರದೃಷ್ಟಿಯಿರುವ ಬಿಜೆಪಿಯನ್ನು ಜನತೆ ಬೆಂಬಲಿಸುವ ವಿಶ್ವಾಸವಿದೆ” ಎಂದು ಹೇಳಿದರು.
“ಬಡವರು, ಮಹಿಳೆಯರು (ನಾರಿಶಕ್ತಿ), ರೈತರು, ಯುವಜನತೆಯ ಆಶಯಗಳನ್ನು ಈಡೇರಿಸಿದ ಪಕ್ಷವಾಗಿ ಬಿಜೆಪಿ ಬೆಳೆದಿದೆ. ಬಿಜೆಪಿ ಸಿದ್ಧಾಂತ ಆಧರಿಸಿದ ಪಕ್ಷ. ಮುಸ್ಲಿಮ್ ಮಹಿಳೆಯರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ನಾವು ಹೇಳಿದ್ದೆವು. ತ್ರಿವಳಿ ತಲಾಖ್ ಪದ್ಧತಿಯನ್ನು ನಾವು ರದ್ದು ಮಾಡಿದ್ದೇವೆ” ಎಂದು ತಿಳಿಸಿದರು.
“ಕಾಂಗ್ರೆಸ್ ಭ್ರಷ್ಟಾಚಾರ, ಕಮಿಷನ್, ಕೌಟುಂಬಿಕವಾದದ ಪಕ್ಷ. 10 ವರ್ಷಗಳ ಹಿಂದೆ ಭಾರತವನ್ನು ಅಸಮರ್ಪಕ ನೀತಿಯುಳ್ಳ ದೇಶವಾಗಿ ನೋಡಲಾಗುತ್ತಿತ್ತು. ಸಮರ್ಥ ನಿರ್ಧಾರ ತೆಗೆದುಕೊಳ್ಳಲಾಗದ ದೇಶ ಎಂದೇ ಭಾರತವನ್ನು ಬಿಂಬಿಸುವ ಸ್ಥಿತಿ ಹಿಂದೆ ಇತ್ತು. 2014ರ ಬಳಿಕ ಮೋದಿಯವರ ನೇತೃತ್ವದಲ್ಲಿ ಭಾರತವು ಬೆಳೆದುನಿಂತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೊಬ್ಬರಿ ಖರೀದಿ, ಅಧಿಕಾರಿಗಳ ಅಸಡ್ಡೆ, ಅನ್ನದಾತ ಅನಾಥ
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ, “ಲೋಕಸಭಾ ಚುನಾವಣೆಗೆ ಕೇವಲ 50-60 ದಿನಗಳು ಮಾತ್ರ ಬಾಕಿ ಇದೆ. ಬಿಜೆಪಿ- ಜೆಡಿಎಸ್ ಒಂದಾಗಿ ರಾಜ್ಯದ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲಲು ಶಪಥ ಮಾಡಿ ಹೊರಟಿದ್ದೇನೆ” ಎಂದರು.
“ಹಿಂದೂಗಳು ದಾನವಾಗಿ ಕೊಟ್ಟ 2 ಎಕರೆ ಜಾಗದಲ್ಲಿ ಆರಂಭಿಸಿದ್ದ ಪಶು ಆಸ್ಪತ್ರೆಯನ್ನು ಜಮೀರ್ ಅಹ್ಮದ್ ಅವರು ಕಿತ್ತುಕೊಂಡು ಅಲ್ಪಸಂಖ್ಯಾತರಿಗೆ ಕೊಡುತ್ತಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ರಾಜಕೀಯಕ್ಕೆ ತಕ್ಕ ಉತ್ತರವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಕೊಡಬೇಕಿದೆ” ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
