ಕಳೆದ ಐದು ತಿಂಗಳಿಂದ ಗಾಜಾ ದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯಲ್ಲಿ ಮಾತನಾಡಿರುವ ಭಾರತದ ರಾಯಭಾರಿ, ನಾಗರಿಕರ ಸಾವಿನ ನಷ್ಟ ಹಾಗೂ ಮಾನವೀಯ ಬಿಕ್ಕಟ್ಟನ್ನು ಸ್ಪಷ್ಟವಾಗಿ ಸ್ವೀಕಾರ್ಹವಲ್ಲ ಎಂದು ಪ್ರತಿಪಾದಿಸಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಶಾಶ್ವತ ಪ್ರತಿನಿಧಿಯಾಗಿರುವ ಭಾರತದ ರಾಯಭಾರಿ ರುಚಿಕಾ ಕಾಂಬೋಜ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಗಾಜಾದ ಪರಿಸ್ಥಿತಿ ಬಗ್ಗೆ ವಿಟೋ ಅಧಿಕಾರ ಬಳಸುವಂತೆ ತಿಳಿಸಿದರು.
“ಇಸ್ರೇಲ್ ಹಾಗೂ ಹಮಸ್ ಹೋರಾಟಗಾರರ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ದೊಡ್ಡ ಸಂಖ್ಯೆಯಲ್ಲಿ ನಾಗರಿಕರು ಮೃತಪಟ್ಟಿದ್ದಾರೆ. ಮುಖ್ಯವಾಗಿ ಮಹಿಳೆಯರು ಹಾಗೂ ಮಕ್ಕಳು ಸಾವೀಗಿಡಾಗಿದ್ದಾರೆ. ಇದು ಮಾನವೀಯ ಬಿಕ್ಕಟ್ಟಿನ ಎಚ್ಚರಿಕೆ ಗಂಟೆಯಾಗಿದೆ. ಇದು ಸ್ಪಷ್ಟವಾಗಿ ಸ್ವೀಕಾರ್ಹವಲ್ಲ” ಎಂದು ಹೇಳಿದರು.
“ಕಳೆದ ಐದು ತಿಂಗಳಿನಿಂದ ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷವು ಭಾರತದ ತೀವ್ರ ಕಳವಳಕ್ಕೆ ಕಾರಣವಾಗಿದೆ. ಗಾಜಾ ಹಾಗೂ ಅದರಿಂದಾಚೆ ನಾವು ನೋಡುತ್ತಿರುವ ಅಸ್ಥಿರತೆಯ ಮಾನವೀಯ ಬಿಕ್ಕಟ್ಟು ತೀವ್ರವಾಗಿದೆ” ಎಂದು ಭಾರತದ ಶಾಶ್ವತ ಪ್ರತಿನಿಧಿ ಆತಂಕ ವ್ಯಕ್ತಪಡಿಸಿದರು.
ಕಳೆದ ತಿಂಗಳು ಅಮೆರಿಕವು ವಿಟೊ ಅಧಿಕಾರ ಬಳಸಿದ ನಂತರ ಗಾಜಾ ಯುದ್ಧದಲ್ಲಿ ಮಾನವೀಯ ಬಿಕ್ಕಟ್ಟಿನಡಿ ಕದನ ವಿರಾಮ ಘೋಷಿಸುವುದಕ್ಕೆ ನಿರ್ಣಯ ಕೈಗೊಳ್ಳಲು ಮಂಡಳಿ ವಿಫಲವಾಗಿತ್ತು. ನಂತರ ಸಾಮಾನ್ಯಸಭೆಯು ವಿಟೋ ಅಧಿಕಾರ ಬಳಸುವ ಬಗ್ಗೆ ಸಮಗ್ರ ಚರ್ಚೆ ಹಮ್ಮಿಕೊಂಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಳ್ಳು ಸೃಷ್ಟಿಸಿ, ಬೆಂಕಿ ಹಚ್ಚಿ, ಭಯ ಬಿತ್ತುವವರು ಯಾರು?
ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಮಾತನಾಡಿದ ರುಚಿಕಾ ಕಾಂಬೋಜ್, ಸಂಘರ್ಷದ ಬಗ್ಗೆ ಭಾರತದ ನಿಲುವು ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರವು ಸಂಘರ್ಷದಲ್ಲಿನ ನಾಗರಿಕರ ಸಾವನ್ನು ತೀವ್ರವಾಗಿ ಖಂಡಿಸುತ್ತದೆ. ಗಲಭೆ ಹಾಗೂ ದ್ವೇಷಗಳ ಹೆಚ್ಚಳವನ್ನು ತಡೆಯುವುದು ತುರ್ತು ಅಗತ್ಯವಾಗಿದೆ. ಯಾವುದೇ ಸಂಘರ್ಷದ ಸನ್ನಿವೇಷದಲ್ಲಿ ನಾಗರಿಕರ ಸಾವಿನ ನಷ್ಟವನ್ನು ಕಡಿಮೆಗೊಳಿಸುವುದು ಪ್ರಾಮುಖ್ಯವಾಗಿದೆ ಎಂದು ಹೇಳಿದರು.
ಪ್ರಸ್ತುತ ಸಂಘರ್ಷದ ಸನ್ನಿವೇಷದಲ್ಲಿ ಗಾಜಾದ ಜನರಿಗೆ ತತ್ಕ್ಷಣದಲ್ಲಿ ಹೆಚ್ಚಿನ ರೀತಿಯ ಮಾನವೀಯ ನೆರವನ್ನು ಒದಗಿಸುವುದು ಅತ್ಯವಶ್ಯಕವಾಗಿದೆ ಎಂದು ಕಾಂಬೋಜ್ ಅವರು ಒತ್ತಿ ಹೇಳಿದರು.
ಈ ತುರ್ತು ಸನ್ನಿವೇಷದಲ್ಲಿ ಎಲ್ಲ ದೇಶಗಳು ಒಟ್ಟಾಗಬೇಕೆಂದು ಆಗ್ರಹಿಸಿದ ಅವರು ಅಂತಾರಾಷ್ಟ್ರೀಯ ಸಮುದಾಯದಲ್ಲಿ ವಿಶ್ವಸಂಸ್ಥೆ ಪ್ರಯತ್ನಸುತ್ತಿರುವುದನ್ನು ಸ್ವಾಗತಿಸಿದರು.
“ಭಾರತ ಪ್ಯಾಲಿಸ್ತೀನ್ ಜನರಿಗೂ ಮಾನವೀಯ ನೆರವನ್ನು ಒದಗಿಸುತ್ತಿದೆ ಹಾಗೂ ಇದು ಮುಂದುವರೆಯುತ್ತದೆ. ಭಾರತವು ಎಲ್ಲ ರೀತಿಯ ಭಯೋತ್ಪಾದನಾ ವಿರುದ್ಧದ ತನ್ನ ದೀರ್ಘಕಾಲೀನ ನಿಲುವಿಗೆ ಬದ್ಧವಾಗಿದೆ. ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ನಾವು ಎಲ್ಲ ಒತ್ತೆಯಾಳುಗಳನ್ನು ತಕ್ಷಣ ಹಾಗೂ ಯಾವುದೇ ಷರತ್ತಿಲ್ಲದೆ ಬಿಡುಗಡೆ ಮಾಡುವಂತೆ ಆಗ್ರಹಿಸುತ್ತೇವೆ. ಎರಡು ಕಡೆಯವರು ಅರ್ಥಪೂರ್ಣವಾದ ಒಪ್ಪಂದಕ್ಕೆ ಬಂದು ಸಮಸ್ಯೆ ಪರಿಹರಿಸಿಕೊಂಡು ಶಾಂತಿ ಸಂದೇಶ ಸಾರಬೇಕೆಂದು ಕಾಂಬೋಜ್ ಹೇಳಿದರು.
