ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟದ ಪ್ರಕಣಕ್ಕೆ ಸಂಬಂಧಿಸಿದಂತೆ ಎನ್ಐಎ ಹಾಗೂ ಸಿಸಿಬಿ ಅಧಿಕಾರಿಗಳು ಬಾಂಬರ್ ಪತ್ತೆಗಾಗಿ ವ್ಯಾಪಕ ಶೋಧ ನಡೆಸಿದ್ದಾರೆ. ಅಲ್ಲದೇ, ಬಾಂಬರ್ನನ್ನು ಹುಡುಕಿಕೊಟ್ಟವರಿಗೆ ₹10 ಲಕ್ಷ ನೀಡುವುದಾಗಿ ಎನ್ಐಎ ಘೋಷಿಸಿದೆ. ಈ ಮಧ್ಯೆ, ಸ್ಪೋಟದ ಸಂಚಿನಲ್ಲಿ ಬಾಂಬರ್ ಜತೆಗೆ ಭಾಗಿಯಾಗಿದ್ದಾನೆ ಎಂಬ ಅನುಮಾನದ ಮೇರೆಗೆ ಶಂಕಿತ ಮಿನಾಜ್ ಅಲಿಯಾಸ್ ಸುಲೇಮಾನ್ನನ್ನು (26) ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಾಂಬ್ ಇಟ್ಟವನ ಪತ್ತೆಗೆ ಶೋಧ ತೀವ್ರಗೊಳಿಸಿದ್ದಾರೆ.
ಯಾರಿದು ಶಂಕಿತ ಮಿನಾಜ್ ಅಲಿಯಾಸ್ ಸುಲೇಮಾನ್?
ಶಂಕಿತ ಮಿನಾಜ್ ಅಲಿಯಾಸ್ ಸುಲೇಮಾನ್ (26) ಈತ ಬಳ್ಳಾರಿ ಕೌಲ್ಬಜಾರ್ನಲ್ಲಿ ಬಟ್ಟೆ ಮಾರಾಟ ಮಳಿಗೆ ಇಟ್ಟುಕೊಂಡಿದ್ದನು. ಈತ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತನೆಂದು ಹೇಳಲಾಗಿದೆ. ಅಲ್ಲದೇ, ಇಸ್ಲಾಮಿಕ್ ಸ್ಟೇಟ್ (ಐಎಸ್) ಜತೆಗೆ ಒಡನಾಟವಿದ್ದು, ದೇಶದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದನು ಎಂದು ಆರೋಪಿಸಲಾಗಿದೆ.
ಮಿನಾಜ್ ಕೆಲ ವಿದೇಶಿಯರಿಂದ ಹಣ ಪಡೆಯುತ್ತಿದ್ದನು. ದೇಶದ ಮುಸ್ಲಿಂ ಸಮುದಾಯದ ಯುವಕರನ್ನು ಮೊಬೈಲ್ ಆ್ಯಪ್ ಮೂಲಕ ಸಂಪರ್ಕಿಸಿ, ಧರ್ಮದ ಹೆಸರಿನಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಪ್ರಚೋದನೆ ನೀಡುತ್ತಿದ್ದನು ಎಂದು ಹೇಳಲಾಗಿದೆ.
“ಎನ್ಐಎ ಅಧಿಕಾರಿಗಳು ಮಿನಾಜ್ ಹಾಗೂ ಆತನ ಸಹಚರರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಕರ್ನಾಟಕ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ದೆಹಲಿಯ 19 ಸ್ಥಳಗಳ ಮೇಲೆ 2023ರ ಡಿಸೆಂಬರ್ 18ರಂದು ದಾಳಿ ನಡೆಸಿದ್ದಾಗ ಮಿನಾಜ್ ಸೇರಿದಂತೆ ಬಳ್ಳಾರಿಯ ಸೈಯದ್ ಸಮೀರ್, ಬೆಂಗಳೂರಿನ ಮೊಹಮ್ಮದ್ ಮುನಿರುದ್ದೀನ್, ಸೈಯದ್ ಸಮೀವುಲ್ಲಾ, ಮೊಹಮ್ಮದ್ ಮುಜಮಿಲ್, ಮುಂಬೈನ ಅನಸ್ ಇಕ್ಬಾಲ್ ಶೇಖ್, ದೆಹಲಿಯ ಶಿಯಾನ್ ರಹಮಾನ್ ಅಲಿಯಾಸ್ ಹುಸೇನ್, ಜಾರ್ಖಂಡ್ನ ಮೊಹಮ್ಮದ್ ಶಹಬಾಜ್ ಅಲಿಯಾಸ್ ಜುಲ್ಫಿಕರ್ ಅಲಿಯಾಸ್ ಗುಡ್ಡುನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಅಂದಿನಿಂದಲೂ ಮಿನಾಜ್ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದನು” ಎಂದು ತನಿಖಾ ಸಂಸ್ಥೆ ಮೂಲಗಳು ತಿಳಿಸಿವೆ.
ಮಿನಾಜ್ ಮೇಲೆ ಶಂಕೆ ವ್ಯಕ್ತಪಡಿಸಿದ ಎನ್ಐಎ ಅಧಿಕಾರಿಗಳು
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟದ ಬಗ್ಗೆ ಎನ್ಐಎ ಹಾಗೂ ಸಿಸಿಬಿ ಅಧಿಕಾರಿಗಳು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಹಲವಾರು ಮಾಹಿತಿ ಕಲೆಹಾಕಿರುವ ಎನ್ಐಎ ಅಧಿಕಾರಿಗಳು ಬಳ್ಳಾರಿ ಜೈಲಿನಲ್ಲಿರುವ ಮಿಯಾಜ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.
ಮಿನಾಜ್ ಸೇರಿದಂತೆ ಆತನ ಇತರ ಸಹಚರರನ್ನು ಬಂಧನ ಮಾಡಿದಾಗ ಎನ್ಐಎ ಅಧಿಕಾರಿಗಳು ಕಚ್ಚಾ ಬಾಂಬ್ (ಐಇಡಿ) ತಯಾರಿಸಲು ಅವರು ಸಂಗ್ರಹಿಸಿದ್ದ ಸಲ್ಫರ್, ಪೊಟ್ಯಾಶಿಯಂ ನೈಟ್ರೇಟ್, ಗನ್ ಪೌಡರ್, ಇದ್ದಿಲು, ಎಥೆನಾಲ್, ಚೂಪಾದ ಆಯುಧಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಸ್ಮಾರ್ಟ್ ವಾಚ್ಗಳು, ನಗದು ಹಾಗೂ ಕೆಲ ದಾಖಲೆಗಳನ್ನೂ ಜಪ್ತಿ ಮಾಡಿದ್ದರು. ಇದೀಗ, ಇದೇ ಮಾದರಿಯ ವಸ್ತುಗಳನ್ನು ಬಳಕೆ ಮಾಡಿ ಬಾಂಬ್ ತಯಾರಿಸಿ, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಇರಿಸಿರುವ ಶಂಕೆ ಇದೆ. ಈ ಹಿನ್ನೆಲೆ, ಎನ್ಐಎ ಅಧಿಕಾರಿಗಳು ಮಿನಾಜ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದರೆ ದಂಡ : ಜಲಮಂಡಳಿ ಎಚ್ಚರಿಕೆ
ಮಿನಾಜ್ ಹಾಗೂ ಇತರರು ಕಚ್ಚಾ ಬಾಂಬ್ (ಐಇಡಿ) ತಯಾರಿಸುವ ಬಗ್ಗೆ ತರಬೇತಿ ಪಡೆದಿದ್ದರು. ಜತೆಗೆ ಭಯೋತ್ಪಾದನಾ ಕೃತ್ಯ ಎಸಗಲು ಪ್ರಚೋದನೆಗೊಂಡ ಯುವಕರಿಗೂ ತರಬೇತಿ ಕೊಡಿಸುತ್ತಿದ್ದನು ಎನ್ನಲಾಗಿದೆ.
”ಎನ್ಐಎ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ದೊರೆತ ಹಲವು ಮಾಹಿತಿ ಆಧಾರದಲ್ಲಿ, ಮಿನಾಜ್ನನ್ನು ಬಾಡಿ ವಾರಂಟ್ ಮೂಲಕ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು” ಎಂದು ಮೂಲಗಳು ತಿಳಿಸಿವೆ.
ಮನವಿಗೆ ಸಮ್ಮತಿಸಿದ ನ್ಯಾಯಾಲಯ, ಮಿನಾಜ್ನನ್ನು ಮಾರ್ಚ್ 9 ರವೆರೆಗೆ ಕಸ್ಟಡಿಗೆ ಒಪ್ಪಿಸಿದೆ. ಎನ್ಐಎ ಅಧಿಕಾರಿಗಳು ಮಾರ್ಚ್ 6ರಂದು ಮಿನಾಜ್ನನ್ನು ಕಸ್ಟಡಿಗೆ ಪಡೆದು ಮಾಹಿತಿ ಕಲೆಹಾಕುತ್ತಿದ್ದಾರೆ.
ಬಾಂಬರ್ ಪತ್ತೆಗೆ ತೀವ್ರ ಶೋಧ ಕಾರ್ಯ
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ನಾಪತ್ತೆಯಾಗಿರುವ ಬಾಂಬರ್ ಪತ್ತೆಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಸಿಸಿಟಿವಿ ಮೂಲಕ ಮಾಹಿತಿ ಆರೋಪಿಯ ಜಾಡು ಹಿಡಿದಿರುವ ಪೊಲೀಸರು ಈತ ಎಲ್ಲೆಲ್ಲಿ ಓಡಾಡಿದ್ದಾನೆ. ಏನೇನು ಮಾಡಿದ್ದಾನೆ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಮಾಹಿತಿ ಪ್ರಕಾರ, ಕೆಫೆಯಲ್ಲಿ ಬಾಂಬ್ ಇಟ್ಟು ನಂತರ ಬಾಂಬರ್ ಬಸ್ ಹತ್ತಿ ತುಮಕೂರು, ಬಳ್ಳಾರಿ ಸೇರಿದಂತೆ ಹಲವಾರು ನಗರಗಳಿಗೆ ಸುತ್ತಾಟ ನಡೆಸಿದ್ದಾನೆ.
”ಪೊಲೀಸರ ದಿಕ್ಕು ತಪ್ಪಿಸಲು ಆರೋಪಿ ಹಲವಾರು ಯೋಜನೆ ರೂಪಿಸಿಕೊಂಡಿದ್ದಾನೆ. ತನಿಖಾ ಸಂಸ್ಥೆಗಳಲ್ಲಿ ಗೊಂದಲ ಮೂಡಿಸಲು ಸುತ್ತಾಟ ಮಾಡಿರುವ ಸಾಧ್ಯತೆ ಇದೆ. ಸದ್ಯ ಶಂಕಿತನ ಸುಳಿವು ಆಧರಿಸಿ ಎಲ್ಲ ಆಯಾಮದಲ್ಲೂ ವಿಶೇಷ ತಂಡ ತನಿಖೆ ಮುಂದುವರಿಸಿದೆ” ಎಂದು ಮೂಲಗಳು ತಿಳಿಸಿವೆ.
10 ಸಂಖ್ಯೆ ಬರೆದಿದ್ದ ಕ್ಯಾಪ್ ಅನ್ನು ಶಂಕಿತ ಆರೋಪಿ ಧರಿಸಿದ್ದನು. 10 ಸಂಖ್ಯೆ ಏನನ್ನು ಸೂಚಿಸುತ್ತದೆ ಎಂಬುದನ್ನು ತನಿಖಾ ಸಂಸ್ಥೆಗಳು ಪತ್ತೆ ಮಾಡುತ್ತಿವೆ.