“ಬೆಂಗಳೂರಿನ ಪೂರ್ವ ವಲಯ ವಸಂತನಗರ ವ್ಯಾಪ್ತಿಗೆ ಬರುವ ಸ್ಯಾಂಕಿ ರಸ್ತೆಯ, ರೇನ್ ಟ್ರಿ ಬೊಲೆವಾರ್ಡ್ ಕಟ್ಟಡದ ಹತ್ತಿರ ಅಳವಡಿಸಿದ್ದ ಬ್ಯಾನರ್ ಅನ್ನು ತೆರವುಗೊಳಿಸಿ, ಬ್ಯಾನರ್ ಅಳವಡಿಸಿದ್ದವರಿಗೆ ₹50,000 ದಂಡ ವಿಧಿಸಲಾಗಿದೆ” ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೇಳಿದೆ.
“ವಸಂತನಗರ ವ್ಯಾಪ್ತಿಗೆ ಬರುವ ಸ್ಯಾಂಕಿ ರಸ್ತೆಯ, ರೇನ್ ಟ್ರಿ ಬೊಲೆ ವಾರ್ಡ್ ಕಟ್ಟಡ ಹತ್ತಿರ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ 2023ರ ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿ ಕೋ-ಅರ್ಡಿನೇಟರ್ ಹಾಗೂ ಎಬಿಡಿ ಗ್ರೂಪ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ರಾಜೀವ್ ಗೌಡ ಅವರು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರ ಜನ್ಮ ದಿನಾಚರಣೆಯ ಅಂಗವಾಗಿ ಅನಧಿಕೃತವಾಗಿ ಬ್ಯಾನರ್ ಅನ್ನು ಅಳವಡಿಸಿರುವುದು ಕಂಡುಬಂದಿದೆ” ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವ್ಹೀಲಿಂಗ್ ಮಾಡುತ್ತಿದ್ದ 6 ಜನರ ಬಂಧನ; 13 ಬೈಕ್ ಜಪ್ತಿ
“ಅನಧಿಕೃತವಾಗಿ ಬ್ಯಾನರ್ ಅಳವಡಿಸಿರುವ ಬಗ್ಗೆ ಪಾಲಿಕೆ ವತಿಯಿಂದ ಅಧಿಕೃತವಾಗಿ ಪರವಾನಿಗೆ ಅಥವಾ ಅನುಮತಿಯನ್ನು ಪಡೆದಿಲ್ಲ. ಈ ಹಿನ್ನೆಲೆ, ಅನಧಿಕೃತವಾಗಿ ಫ್ಲೇಕ್ಸ್ ಅಳವಡಿಸಿರುವವರಿಗೆ ₹50,000 ದಂಡ ವಿಧಿಸಲಾಗಿದೆ. ಹಾಗೇಯೇ, ಪಾಲಿಕೆ ಮುಖ್ಯ ಆಯುಕ್ತ ಅವರ ಖಾತೆಗೆ ದಂಡದ ಹಣವನ್ನು ಪಾವತಿಸುವಂತೆ ವಸಂತನಗರದ ಸಹಾಯಕ ಕಂದಾಯ ಅಧಿಕಾರಿ ರವರು ಪತ್ರದ ಮೂಲಕ ಸೂಚಿಸಿದ್ದಾರೆ” ಎಂದು ಹೇಳಿದೆ.