ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ದೇವಸ್ಥಾನವೊದರಲ್ಲಿ ಡ್ಯಾನ್ಸ್ ಮಾಡುವಾಗ ಮೈ ತಾಗಿದಕ್ಕೆ ಯುವಕನೊಬ್ಬನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಂಕಿತ ಮೂವರನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
ಯೋಗೇಶ್ (23) ಕೊಲೆಯಾದ ಯುವಕ. ಹನುಮಂತನಗರದ ಗ್ಯಾರೇಜ್ನಲ್ಲಿ ಉದ್ಯೋಗಿಯಾಗಿದ್ದ 23 ವರ್ಷದ ಯೋಗೇಶ್ನ ಕೊಲೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ. ಚೇತನ್, ರಂಗ ಮತ್ತು ಪವನ್ ಬಂಧಿತರು. ಇವರೆಲ್ಲರೂ 25 ರಿಂದ 30 ವರ್ಷ ವಯಸ್ಸಿನವರು.
“ಬಂಧಿತರು ಶಿವರಾತ್ರಿ ಆಚರಣೆಯ ಸಮಯದಲ್ಲಿ ಯೋಗೇಶ್ ಅವರೊಂದಿಗೆ ಜಗಳ ಆರಂಭಿಸಿದ್ದಾರೆ. ಡ್ಯಾನ್ಸ್ ಮಾಡುವಾಗ ತಮ್ಮ ಕಾಲಿನ ಮೇಲೆ ಯೋಗೇಶ್ ಹೆಜ್ಜೆ ಹಾಕಿದ ಎಂದು ಆತನನ್ನು ಬಂಧಿತರು ನಿಂದಿಸಿದ್ದಾರೆ. ಅಲ್ಲಿದ್ದ ಇತರರು ಮಧ್ಯ ಪ್ರವೇಶಿಸಿ ಜಗಳವನ್ನು ಅಂತ್ಯಗೊಳಿಸಿದರು” ಎಂದು ಪೊಲೀಸರು ತಿಳಿಸಿದ್ದಾರೆ.
“ಈ ಘಟನೆ ಬಳಿಕ, ಡ್ಯಾನ್ಸ್ ಮುಗಿಸಿ ಯೋಗೇಶ್ ಶ್ರೀನಗರದಲ್ಲಿರುವ ತನ್ನ ಮನೆಗೆ ಬೈಕ್ನಲ್ಲಿ ವಾಪಸ್ ಆಗುವಾಗ ನಾಲ್ವರು ಯುವಕರು ಹಿಂಬಾಲಿಸಿ, ಆತನ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ, ಯೋಗೇಶ್ ಕಾಂಪೌಂಡ್ ಗೋಡೆ ಹಾರಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೇ, ತನಿಖೆ ವೇಳೆ, ಯೋಗೇಶ್ಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ” ಎಂದು ತಿಳಿದುಬಂದಿದೆ.
“ಕಾಂಪೌಂಡ್ ಗೋಡೆಯ ಮೇಲೆ ಅಳವಡಿಸಲಾದ ಗಾಜಿನ ಚೂರುಗಳಿಂದ ಸುತ್ತುವರಿದ ಇಟ್ಟಿಗೆ ಗೋಡೆಯ ಬಳಿ ಯೋಗೇಶ್ ಅವರ ಶವ ಪತ್ತೆಯಾಗಿದೆ” ಎಂದು ತನಿಖಾಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಡ್ಯಾನ್ಸ್ ಮಾಡುವಾಗ ಮೈ ತಾಗಿದಕ್ಕೆ ಯುವಕನ ಕೊಲೆ: ಬಂಧನ
“ಆರಂಭದಲ್ಲಿ, ಗೋಡೆಯನ್ನು ಹಾರುವ ಪ್ರಯತ್ನದಲ್ಲಿದ್ದಾಗ ಯೋಗೇಶ್ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಭಾವಿಸಿದ್ದರು. ಆದರೆ, ತನಿಖೆ ಬಳಿಕ ಯೋಗೇಶ್ ಮೈಮೇಲೆ ಇರಿತದ ಗಾಯಗಳು ಕಂಡುಬಂದಿವೆ” ಎಂದಿದ್ದಾರೆ.
“ಅಪರಾಧ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಶಂಕಿತರನ್ನು ಪತ್ತೆಹಚ್ಚಲಾಗಿದೆ” ಎಂದು ಅಧಿಕಾರಿ ತಿಳಿಸಿದ್ದಾರೆ.