ದೇಶದ ಜನ ಸಂದಿಗ್ಧ ಪರಿಸ್ಥಿತಿಯಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜನರ ಬದುಕು ಬವಣೆಯ ಬಗ್ಗೆ ಚರ್ಚೆಯಾಗಬೇಕಾಗದಲ್ಲಿ ಜನರ ದಿಕ್ಕು ತಪ್ಪಿಸುವ ಅಜೆಂಡಾದ ಸಲುವಾಗಿ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಜಾರಿಗೆ ತರಲಾಗಿದೆ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ
ಬಿ ಕೆ ಇಮ್ತಿಯಾಜ್ ಆರೋಪಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಡಿವೈಎಫ್ಐನಿಂದ ಆಯೋಜಿಸಿದ್ದ ʼಪೌರತ್ವ ತಿದ್ದುಪಡಿ ಕಾಯಿದೆʼ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
“ಸಂಸತ್ ಚುನಾವಣೆಯ ಹೊಸ್ತಿಲಲ್ಲಿರುವ ಸಂದರ್ಭದಲ್ಲೇ ಭಾರತದ ಬಹುತ್ವಕ್ಕೆ ಅಪಾಯ ಒಡ್ಡುವ, ಆರ್ಎಸ್ಎಸ್ನ ಅಜೆಂಡಾ ಜಾರಿಗೊಳಿಸುವ ಮೋದಿ ಸರ್ಕಾರದ ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಜಾರಿಗೊಳಿಸಿರುವ ತೀರ್ಮಾನವು ಜನರನ್ನು ದಿಕ್ಕು ತಪ್ಪಿಸುವ ಹುನ್ನಾರ ಇದರ ಹಿಂದೆ ಅಡಗಿದೆ” ಎಂದು ಹೇಳಿದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, “ಧರ್ಮ ನಿರಪೇಕ್ಷತೆಯ ನಾಡಿನಲ್ಲಿ ಪೌರತ್ವ ಪಡೆಯಲು ಮತಧರ್ಮ ಮಾನದಂಡವಾಗಿಸಿರುವುದು ಸಂವಿಧಾನ ವಿರೋಧಿ ನಡೆ. ಈ ಹಿಂದೆ ಸಿಎಎ ಜಾರಿಗೊಳಿಸುವ ಸಂದರ್ಭದಲ್ಲಿ ದೇಶದಲ್ಲಿ ನಡೆದ ಹಿಂಸಾಚಾರಕ್ಕೆ ನೂರಾರು ಅಮಾಯಕರು ಪ್ರಾಣವನ್ನು ತೆತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪೊಲೀಸರ ಗೋಲಿಬಾರ್ಗೆ ಇಬ್ಬರು ಅಮಾಯಕ ಮುಸಲ್ಮಾನರನ್ನು ಬಲಿ ಪಡೆದಿದ್ದನ್ನು ಈ ಜಿಲ್ಲೆಯ ಜನ ಇನ್ನೂ ಮರೆತಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ನಡೆಸಿರುವ ಕುತಂತ್ರ ಇದು. ಮುಂಬರುವ ಚುನಾವಣೆಯಲ್ಲಿ ಯುವಜನರ ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ಬದುಕುವ ಪ್ರಶ್ನೆಯ ಕುರಿತು, ಹಸಿವಿನ ಸೂಚ್ಯಂಕದಲ್ಲಿ ಹಿಂದೆ ಸರಿದ ವಿಚಾರಗಳ ಕುರಿತು ಚರ್ಚೆಯಾಗಬೇಕಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಶಿಕ್ಷಣದಿಂದ ಮಾತ್ರ ಸರ್ವತೋಮುಖ ಅಭಿವೃದ್ಧಿ ಸಾಧ್ಯ: ಬಿ ನಂಜುಂಡಪ್ಪ
ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡರುಗಳಾದ ನವೀನ್ ಕೊಂಚಾಡಿ, ಅಡ್ವಕೇಟ್ ನಿತಿನ್ ಕುತ್ತಾರ್, ತಯ್ಯೂಬ್ ಬೆಂಗರೆ, ಜಗದೀಶ್ ಬಜಾಲ್, ರಿಜ್ವಾನ್ ಹರೇಕಳ, ಅಶ್ರಫ್ ಹರೇಕಳ, ಯೋಗೀಶ್ ಜಪ್ಪಿನಮೊಗರು, ಅಸುಂತಾ ಡಿಸೋಜ, ಹನೀಫ್ ಬೆಂಗರೆ, ನೌಶದ್ ಬೆಂಗರೆ, ಮನೋಜ್ ಉರ್ವಸ್ಟೋರ್, ಶ್ರೀನಾಥ್ ಕಾಟಿಪಳ್ಳ, ಸೈಫರ್ ಆಲಿ, ಯೋಗಿತಾ ಉಳ್ಳಾಲ, ಭಾರತಿ ಬೋಳಾರ ಸೇರಿದಂತೆ ಬಹುತೇಕರು ಇದ್ದರು.
