ತುಮಕೂರು ಲೋಕಸಭಾ ಕ್ಷೇತ್ರವನ್ನು ನಾನು ಬಯಸಿರಲಿಲ್ಲ. ವಿಧಿ ಲಿಖಿತ ಹಾಗಾಗಿ ಹೈಕಮಾಂಡ್ ನನಗೆ ಇಲ್ಲಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಬಿಜೆಪಿ ಪಕ್ಷದ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ.ಸೋಮಣ್ಣ ತಿಳಿಸಿದರು.
ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ದೊಡ್ಡ ಪಕ್ಷದಲ್ಲಿ ಭಿನ್ನಮತ ಸಹಜ. ಅದನ್ನು ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ. ನಮ್ಮದೇನಿದ್ದರೂ ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಬೇಕು. ಆ ನಿಟ್ಟಿನಲ್ಲಿ ತುಮಕೂರಿನ ಕೊಡುಗೆ ಇರಬೇಕು ಎಂಬುದಾಗಿದೆ. ಇದನ್ನು ಬಿಟ್ಟು ಬೇರೇನಿಲ್ಲ ಎಂದರು.
ತುಮಕೂರು ಜಿಲ್ಲೆ ಅತಿವೇಗವಾಗಿ ಬೆಳೆಯತ್ತಿರುವ ಜಿಲ್ಲೆ. ಇಲ್ಲಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳು ದೊರೆಯಬೇಕು ಎಂಬುದು ನಮ್ಮ ದೂರದೃಷ್ಟಿ. ಬೆಂಗಳೂರಿನಿಂದ ತುಮಕೂರಿನವರೆಗೆ ಪ್ಲೇಓವರ್ ಹಾಗೆಯೇ ಮೆಟ್ರೋ ರೈಲು ಬರಬೇಕೆಂಬ ಕನಸಿನ ಜೊತೆಗೆ, ತುಮಕೂರನ್ನು ಮತ್ತೊಂದು ವಾರಣಾಸಿ ಮಾಡಬೇಕೆಂಬ ಕನಸಿದೆ. ಅವಕಾಶ ಸಿಕ್ಕರೆ ಈ ಕನಸನ್ನು ನನಸು ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ ಎಂದರು.
ತುಮಕೂರಿಗೂ ನನಗೂ ಸುಮಾರು 50 ವರ್ಷಗಳ ಅವಿನಾಭಾವ ಸಂಬಂಧ ಇದೆ. ಈ ಭಾಗದ ಜನ ಎಲ್ಲವನ್ನು ತೀರ್ಮಾನ ಮಾಡುತ್ತಾರೆ. ಸಿದ್ದಗಂಗಾ ಶ್ರೀಗಳು ಮತ್ತು ಬಾಲ ಗಂಗಾಧರನಾಥ ಶ್ರೀಗಳ ಆಶೀರ್ವಾದ ನನ್ನ ಮೇಲಿದೆ. ಮತದಾರರು ನನ್ನ ಪರವಾಗಿ ನಿಲ್ಲಲಿದ್ದಾರೆ ಎಂಬ ವಿಶ್ವಾಸವಿದೆ. ಇಂದು ಮಾಜಿ ಸಚಿವರಾದ ಬಿ.ಸಿ.ನಾಗೇಶ್ ಮನೆಗೆ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿ, ತಿಪಟೂರಿನ ಕರೆಗೋಡಿ ರಂಗಾಪುರ ಮಠಕ್ಕೂ ಭೇಟಿ ನೀಡಿ ಮಾತುಕತೆ ನಡೆಸಲಿದ್ದೇನೆ ಎಂದು ವಿ.ಸೋಮಣ್ಣ ಮಾಹಿತಿ ನೀಡಿದರು.
ಮಾಜಿ ಸಚಿವ ಮಾಧುಸ್ವಾಮಿ ಅವರನ್ನು ಭೇಟಿ ಮಾಡಲು ನಿನ್ನೆ ದೂರವಾಣಿ ಕರೆ ಮಾಡಿದ್ದೆ. ಆದರೆ, ಅವರು ಈಗ ಬರುವುದು ಬೇಡ ಎಂದು ಸ್ವಲ್ಪ ಬೇಸರದಿಂದಲೇ ಮಾತನಾಡಿದರು. ಇನ್ನು 3-4 ದಿನ ಕಳೆದ ಬಳಿಕ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಎಲ್ಲವೂ ಸರಿ ಹೋಗಲಿದೆ. ಪಕ್ಷದ ನಾಯಕರು ಎಲ್ಲವನ್ನೂ ಸರಿ ಮಾಡಲಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಕಾರ್ಯಕರ್ತರು, ಮುಖಂಡರುಗಳು ಎಲ್ಲರೂ ಒಟ್ಟಾಗಿ ಸೇರಿ ಚುನಾವಣೆ ಎದುರಿಸುತ್ತೇವೆ. ಮತ್ತೇ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವ ಸಂಕಲ್ಪ ನಮ್ಮೆಲ್ಲರದ್ದಾಗಿದೆ ಎಂದರು.
ಶಾಸಕ ಬಿ.ಸುರೇಶಗೌಡ ಮಾತನಾಡಿ, ಲೋಕಸಭೆಯಲ್ಲಿ ಎರಡು ಸೀಟು ಇದ್ದಾಗಲೂ ತುಮಕೂರಿನಿಂದ ಬಿಜೆಪಿ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ. ಮಲ್ಲಿಕಾರ್ಜುನಯ್ಯ, ಜಿ.ಎಸ್. ಬಸವರಾಜು ಅವರುಗಳು ನಿರಂತರವಾಗಿ ಪಕ್ಷದಿಂದ ಗೆದ್ದಿದ್ದಾರೆ. ಹಾಗಾಗಿ ಈ ಬಾರಿಯೂ ಗೆಲುವು ನಮ್ಮದೆ ಜೆ.ಸಿ. ಮಾಧುಸ್ವಾಮಿ ಅವರಿಗೆ ಪಕ್ಷ ಎಲ್ಲವನ್ನು ನೀಡಿದೆ. ಶಾಸಕರನ್ನಾಗಿಮಾಡಿ, ಸಚಿವರನ್ನಾಗಿಯೂ ಮಾಡಿದೆ. ಅವರು ಪಕ್ಷಕ್ಕೆ ಕೃತಜ್ಞರಾಗಿರಬೇಕು ಎಂದರು.
ಇದೇ ಸಂದರ್ಭದಲ್ಲಿ ಜ್ಯೋತಿಗಣೇಶ್, ರವಿಶಂಕರ್ ಹೆಬ್ಬಾಕ, ಎಂ.ಡಿ. ಲಕ್ಷ್ಮೀನಾರಯಣ್, ಶಿವಪ್ರಸಾದ್, ಮಧುಗಿರಿ ಮಾಜಿ ಶಾಸಕ ವೀರಭದ್ರಯ್ಯ, ಗುಬ್ಬಿ ಹೊನ್ನಗಿರಿಗೌಡ, ರೈತಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಬಾವಿಕಟ್ಟೆ ನಾಗಣ್ಣ, ರಾಜಪ್ಪ, ಡಾ. ಪರಮೇಶ್, ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.