ಪದೇ ಪದೇ ಆರೋಪಪಟ್ಟಿ ಸಲ್ಲಿಸುತ್ತಿದ್ದ ಜಾರಿ ನಿರ್ದೇಶನಾಲಯವನ್ನು (ಇಡಿ) ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಆರೋಪಿಗೆ ಜಾಮೀನು ನಿರಾಕರಿಸಲು ಮತ್ತು ಆ ವ್ಯಕ್ತಿಯನ್ನು ಅನಿರ್ದಿಷ್ಟ ಅವಧಿಗೆ ಜೈಲಿನಲ್ಲಿ ಇರಿಸಿಕೊಳ್ಳಲೆಂದೇ ಅದಕ್ಕೆ ಪೂರಕ ಚಾರ್ಜ್ ಶೀಟ್ಗಳನ್ನು ಸಲ್ಲಿಸುವ ಕುರಿತು ಇಡಿಯನ್ನು ಪ್ರಶ್ನಿಸಿದೆ.
ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವು ಕೇಂದ್ರದ ಈ ಏಜೆನ್ಸಿಯ ಈ ಅಭ್ಯಾಸವನ್ನು ಪ್ರಶ್ನಿಸಿದ್ದು, “ವಿಚಾರಣೆಯಿಲ್ಲದೆ ಆರೋಪಿಗಳನ್ನು ಜೈಲಿನಲ್ಲಿ ಇಡುವುದು ಉನ್ನತ ನ್ಯಾಯಾಲಯಕ್ಕೆ ತೊಂದರೆ ಉಂಟು ಮಾಡುತ್ತದೆ” ಎಂದು ಇಡಿ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ವಿ ರಾಜುಗೆ ಪೀಠ ಹೇಳಿದೆ.
“ಜಾಮೀನಿನ ಸಂಪೂರ್ಣ ಉದ್ದೇಶವೆಂದರೆ ನೀವು ತನಿಖೆ ಪೂರ್ಣಗೊಳ್ಳುವವರೆಗೆ (ಆರೋಪಿಯನ್ನು) ಬಂಧಿಸಲು ಸಾಧ್ಯವಾಗುವುದಿಲ್ಲ ಎಂಬುವುದಾಗಿದೆ. ನೀವು ಆರೋಪಿಯನ್ನು ಬಂಧಿಸಿ ತನಿಖೆ ಪೂರ್ಣಗೊಳ್ಳುವವರೆಗೆ ವಿಚಾರಣೆಯನ್ನು ಪ್ರಾರಂಭಿಸದೆ ಇರಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾದ ಚಾರ್ಜ್ ಶೀಟ್ಗಳನ್ನು ಸಲ್ಲಿಸುತ್ತಿರಲು ಸಾಧ್ಯವಿಲ್ಲ. ವಿಚಾರಣೆ ಇಲ್ಲದೆಯೇ ಜೈಲಿನಲ್ಲಿರಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಖನ್ನಾ ತಿಳಿಸಿದರು.
ಇದನ್ನು ಓದಿದ್ದೀರಾ? ಸಿಎಎ ಜಾರಿ | ಉತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
“ಈ ಪ್ರಕರಣದಲ್ಲಿ, ವ್ಯಕ್ತಿಯು 18 ತಿಂಗಳ ಕಾಲ ಜೈಲಿನಲ್ಲಿದ್ದಾನೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ. ಕೆಲವು ಪ್ರಕರಣಗಳನ್ನು ನಾವು ಕೈಗೆತ್ತಿಕೊಳ್ಳುತ್ತೇವೆ ಮತ್ತು ನಿಮ್ಮ ಗಮನಕ್ಕೆ ತರುತ್ತೇವೆ. ನೀವು ಆರೋಪಿಯನ್ನು ಬಂಧಿಸಿದಾಗ ವಿಚಾರಣೆಯನ್ನು ಪ್ರಾರಂಭಿಸಬೇಕು” ಎಂದು ನ್ಯಾಯಾಲಯ ಹೇಳಿದೆ.
ಕಾನೂನು ಪ್ರಕಾರ ಬಂಧಿತ ವ್ಯಕ್ತಿಯ ಪ್ರಕರಣಕ್ಕೆ ಸಂಬಂಧಿಸಿ ನಿಗದಿಪಡಿಸಿದ ಸಮಯದೊಳಗೆ ತನಿಖೆಯನ್ನು ಪೂರ್ಣಗೊಳಿಸಲು ಅಥವಾ ಅಂತಿಮ ಆರೋಪ ಪಟ್ಟಿಯನ್ನು ಸಲ್ಲಿಸಲು ಸಾಧ್ಯವಾಗದಿದ್ದರೆ ಆ ವ್ಯಕ್ತಿ ಜಾಮೀನಿಗೆ ಅರ್ಹನಾಗಿರುತ್ತಾನೆ. ಈ ಅವಧಿಯು ಪ್ರಕರಣ ಯಾವುದು ಎಂಬುವುದರ ಆಧಾರದಲ್ಲಿ 60 ಅಥವಾ 90 ದಿನಗಳವರೆಗೆ ಇರುತ್ತದೆ.
ಕಳೆದ ವರ್ಷ ಏಪ್ರಿಲ್ನಲ್ಲಿ ನ್ಯಾಯಾಲಯವು ಇದೇ ರೀತಿ ಇಡಿಯನ್ನು ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿ ಕೃಷ್ಣ ಮುರಾರಿ ಮತ್ತು ನ್ಯಾಯಮೂರ್ತಿ ಸಿ.ಟಿ.ರವಿಕುಮಾರ್ ಅವರಿದ್ದ ಪೀಠವು, “ತನಿಖೆಯನ್ನು ಪೂರ್ಣಗೊಳಿಸದೆ, ಬಂಧಿತ ಆರೋಪಿಯ ಜಾಮೀನಿನ ಹಕ್ಕನ್ನು ಕಸಿದುಕೊಳ್ಳಲು ತನಿಖಾ ಸಂಸ್ಥೆಯಿಂದ ಚಾರ್ಜ್ ಶೀಟ್ ಸಲ್ಲಿಸಲು ಸಾಧ್ಯವಿಲ್ಲ” ಎಂದು ಹೇಳಿದೆ.
ಈ ನಡುವೆ ಇಡಿ ವಿರೋಧ ಪಕ್ಷಗಳ ನಾಯಕರುಗಳನ್ನು ಬೇರೆ ಬೇರೆ ಪ್ರಕರಣದಲ್ಲಿ ಬಂಧಿಸಿ, ಅವರನ್ನು ಜೈಲಿನಲ್ಲಿರಿಸಿಕೊಳ್ಳಲೆಂದೇ ಆರೋಪಪಟ್ಟಿ ಸಲ್ಲಿಸುತ್ತಿರುವ ಆರೋಪವಿದೆ. ಫೆಬ್ರವರಿ 2023 ರಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಇಡಿಯಿಂದ ಬಂಧಿಸಲ್ಪಟ್ಟ ಹಿರಿಯ ಎಎಪಿ ನಾಯಕ ಮತ್ತು ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜೈಲುವಾಸವನ್ನು ನ್ಯಾಯಾಲಯ ಉಲ್ಲೇಖಿಸಿದೆ.
“ಮನೀಷ್ ಸಿಸೋಡಿಯಾ ಪ್ರಕರಣದಲ್ಲಿಯೂ ಸಹ, ಜಾಮೀನು ಪ್ರತ್ಯೇಕವಾಗಿದೆ ಎಂದು ನಾನು ಹೇಳಿದ್ದೇನೆ. ವಿಚಾರಣೆಯಲ್ಲಿ ವಿಳಂಬವಾದರೆ, ಜಾಮೀನು ನೀಡುವ ನ್ಯಾಯಾಲಯದ ಅಧಿಕಾರವನ್ನು ಕಸಿದುಕೊಳ್ಳುವುದಿಲ್ಲ” ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು.