25-30 ವರ್ಷ ಪಕ್ಷದಲ್ಲಿ ದುಡಿದವರಿಗೆ ಕಾಂಗ್ರೆಸ್ನಲ್ಲಿ ಟಿಕೇಟ್ ನೀಡಿಲ್ಲ, ಯಾಕೆ ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಎದುರಿಸಲು ಯಾರು ಮುಖಂಡರು ಇರಲಿಲ್ವಾ? ಅಥವಾ ಬೇರೆಯವರು ಬೆಳೆಯಬಾರದು ಎನ್ನುವ ಕಾರಣಕ್ಕೆ ಸಚಿವ ಈಶ್ವರ ಖಂಡ್ರೆ ತನ್ನ ಮಗನಿಗೆ ಟಿಕೆಟ್ ಕೊಡಿಸಿದ್ರಾ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಪ್ರಶ್ನಿಸಿದರು.
ಬಸವಕಲ್ಯಾಣದಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, “ನಮ್ಮದು ಕಾರ್ಯಕರ್ತರ ಪಕ್ಷ, ಆದರೆ ಕಾಂಗ್ರೆಸ್ ಕುಟುಂಬದವರ ಪಕ್ಷವಾಗಿದೆ. ನಮ್ಮಲ್ಲಿ ಕಾರ್ಯಕರ್ತರು ನಾಯಕರಾಗುತ್ತಾರೆ, ಕಾಂಗ್ರೆಸ್ನಲ್ಲಿ ನಾಯಕರ ಮಕ್ಕಳು ಮಾತ್ರ ಬೆಳೆಯುತ್ತಾರೆ. ಕಾಂಗ್ರೆಸ್ ಕಾರ್ಯಕರ್ತರು ಕೇವಲ ಕೆಲಸಗಾರರಾಗಿ ದುಡಿಯುಬೇಕು” ಎಂದು ಹೇಳಿದರು.
“ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಸ್ವತಃ ಕಾಂಗ್ರೆಸ್ ಶಾಸಕರೇ ಬೇಸತ್ತಿದ್ದಾರೆ. ಕಳೆದ 9 ತಿಂಗಳಲ್ಲಿ ಬೀದರ್ ಜಿಲ್ಲೆಗೆ ರಾಜ್ಯದಿಂದ ನಯಾ ಪೈಸೆ ಅನುದಾನ ಬಂದಿಲ್ಲಾ, ಕಾಂಗ್ರೆಸ್ ಅಭಿವೃದ್ದಿ ಶೂನ್ಯವಾಗಿದೆ. ಕಳೆದ 10 ವರ್ಷಗಳಲ್ಲಿ ನಾನು ಮಾಡಿರುವ ಅಭಿವೃದ್ದಿ ಕಾರ್ಯಗಳು ಜನತೆಗೆ ತಿಳಿಸಬೇಕು. 3ನೇ ಬಾರಿಗೆ ನನಗೆ ಮತ್ತೊಮ್ಮೆ ಆಶೀರ್ವದಿಸಿ, ಮೋದಿ ಸರ್ಕಾರದಲ್ಲಿ ಸೇವೆ ಮಾಡಲು ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ತಾವೇಲ್ಲರೂ ಕಾರ್ಯಪ್ರವರ್ತರಾಗಬೇಕು” ಎಂದು ಮನವಿ ಮಾಡಿದರು.
ಬಸವಕಲ್ಯಾಣ ಶಾಸಕ ಶರಣು ಸಲಗರ ಮಾತನಾಡಿ, “ಕಳೆದ ಸಲದಂತೆ ಈ ಬಾರಿಯೂ ನಮ್ಮ ಪಕ್ಷಕ್ಕೆ ಬಸವಕಲ್ಯಾಣದಿಂದ ಅತೀ ಹೆಚ್ಚಿನ ಬಹುಮತ ಕೊಡುತ್ತೇವೆ. ಬಸವಕಲ್ಯಾಣ ಕ್ಷೇತ್ರದ ಜನರು ಎಂದಿಗೂ ಪ್ರಬುದ್ಧರು, ಅಭಿವೃದ್ದಿಪರ, ದೇಶದ ರಕ್ಷಣೆ ಮಾಡುವವರ ಪರ ನಿಲ್ಲುತ್ತಾರೆ. ಮೋದಿ ಸರ್ಕಾರ ಹಾಗೂ
ಕೇಂದ್ರ ಸಚಿವ ಖೂಬಾರವರ ಸಾಧನೆಗಳು ಹಳ್ಳಿ ಹಳ್ಳಿಗೂ ತೆರಳಿ ಜನರಿಗೆ ತಿಳಿಸಬೇಕು” ಎಂದರು.
ಸಂಸದ ಭಗವಂತ ಖೂಬಾರವರನ್ನು ಮತ್ತೊಮ್ಮೆ ಗೆಲ್ಲಿಸಿಕೊಂಡು ಬರುವ ಜವಬ್ದಾರಿ ನಮ್ಮೆಲ್ಲರದ್ದಾಗಿದೆ. ಇದನ್ನು ನಾವೆಲ್ಲರೂ ಸೇರಿ ಮಾಡೋಣ, ದೇಶಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ನಮ್ಮ ಜವಬ್ದಾರಿ ನಿಭಾಯಿಸೋಣ” ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಇದಕ್ಕೂ ಮುನ್ನ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಬಿಜೆಪಿ ಪಕ್ಷದ ಮುಖಂಡರು ಸೇರಿ, ಬಸವಕಲ್ಯಾಣ ನಗರದಲ್ಲಿ ವಿವಿಧ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದು, ತ್ರಿಪೂರಾಂತ ಗ್ರಾಮದ ಗುರು ಘನಲಿಂಗ ರುದ್ರಮುನಿ ಗವಿಮಠಕ್ಕೆ ಭೇಟಿ ನೀಡಿ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಆಶೀರ್ವಾದ ಪಡೆದುಕೊಂಡರು. .
ಬಳಿಕ ಪುರುಷಕಟ್ಟೆಗೆ ತೆರಳಿ ದರ್ಶನವನ್ನು ಪಡೆದು ಮಾತನಾಡಿ, “ನ್ಯಾಯ ನೀತಿಗೆ ಹೆಸರಾಗಿದ್ದ ಪುರುಷಕಟ್ಟೆಯನ್ನು ಮುಂದಿನ ದಿನದಲ್ಲಿ ಹೆಚ್ಚಿನ ಅಭಿವೃದ್ದಿಗೊಳಿಸಿ, ಇದರ ಇತಿಹಾಸವನ್ನು ಜಗತ್ತಿಗೆ ತಿಳಿಸುವ ಕೆಲಸ ಮಾಡುತ್ತೇನೆ” ಎಂದು ಎಲ್ಲರಿಗೂ ವಿಶ್ವಾಸ ನೀಡಿದರು.
ಇದೇ ಸಂದರ್ಭದಲ್ಲಿ ಗಣ್ಯರಾದ ಬಸವೇಶ್ವರ ದೇವಸ್ಥಾನದ ಪಂಚಕಮೀಟಿ ಅಧ್ಯಕ್ಷರಾದ ಬಸವರಾಜ ಕೊರಕೆ, ಸೋಮಶೇಖರ ವಸ್ತ್ರದ, ಅಶೋಕ ಶಿಂಧೆ, ಸುಭಾಷ ಹೊಳ್ಕುಂಡೆ ಮುಂತಾದವರ ಮನೆಗೆ ಭೇಟಿ ನೀಡಿ, ತನ್ನ ಹತ್ತು ವರ್ಷಗಳ ಸಾಧನೆಗಳು ತಿಳಿಸಿ ಮತ್ತೊಮ್ಮೆ ಬೆಂಬಲಿಸುವಂತೆ ಕೋರಿದರು.
ಈ ಸುದ್ದಿ ಓದಿದ್ದೀರಾ? ಬ್ರಹ್ಮ ಬಂದರೂ ನಾಮಪತ್ರ ವಾಪಸ್ ಪಡೆಯಲ್ಲ, ಸ್ಪರ್ಧಿಸುವುದು ಖಚಿತ: ಕೆ ಎಸ್ ಈಶ್ವರಪ್ಪ
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಮರಾಠಾ ನಿಗಮದ ಮಾಜಿ ಅಧ್ಯಕ್ಷ ಎಮ್.ಜಿ. ಮುಳೆ, ಮಂಡಲ ಅಧ್ಯಕ್ಷ ಅಶೋಕ ವಕಾರೆ, ಅರವಿಂದ ಮುತ್ಯಾ ಸೇರಿದಂತೆ ಪ್ರಮುಖರಾದ ಕುಶಾಲ ಪಾಟೀಲ್ ಗಾದಗಿ, ಜ್ಞಾನೇಶ್ವರ ಪಾಟೀಲ್, ಪ್ರದೀಪ ಗಡವಂತಿ, ಅನಿಲ ಭೂಸಾರೆ, ಸುಧೀರ ಕಾಡಾದಿ, ಮಲ್ಲಿಕಾರ್ಜುನ ಕುಂಬಾರ, ರಾಜು ಮಂಠಾಳೆ, ಸೂರ್ಯಕಾಂತ ಚಿಲ್ಲಾಬಟ್ಟೆ, ಲುಂಬಿಣಿ ಗೌತಮ, ಮಹೇಶ್ವರ ಸ್ವಾಮಿ, ಜಗನ್ನಾಥ ಖೂಬಾ ಮುಂತಾದವರು ಉಪಸ್ಥಿತರಿದ್ದರು.